Shrirasthu Shubhamasthu: ಮಗನ ಬಳಿ ಮನಸಾರೆ ಕ್ಷಮೆ ಕೇಳಿದ ಮಾಧವ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಮನೆಯ ಪರಿಸ್ಥಿತಿ ಒಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಅಭಿ ಒಂದು ದಿಕ್ಕಿನಲ್ಲಿದ್ದರೆ, ಮಾಧವ್ದು ಬೇರೊಂದು ದಿಕ್ಕು. ಇದರ ನಡುವೆ ಶಾರ್ವರಿ ತನ್ನ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳುತ್ತಿದ್ದಾಳೆ.
ಮಾಧವ್ ಕುಟುಂಬವನ್ನು ದೂರ ಮಾಡಲು ತುಳಸಿಯ ಆಗಮನ ಸುಲಭವಾಗಿಸಿದೆ. ಅಭಿ ಹಾಗೂ ದೀಪಿಕಾ ಮದುವೆ ನಿಂತಿದೆ. ಈ ತಲೆನೋವಿನಲ್ಲಿ ಅಭಿ ಹಾಗೂ ಪೂರ್ಣಿಮಾ ಮುನಿಸಿಕೊಂಡಿದ್ದರು. ಆದರೆ, ಇಬ್ಬರಿಗೂ ಹೆಚ್ಚುದಿನ ಮುನಿಸಿಕೊಂಡಿರಲು ಸಾಧ್ಯವಾಗುವುದಿಲ್ಲ.

ಈ ಬಾರಿ ಅಭಿ, ಪೂರ್ಣಿಮಾಳಿಗೆ ರೋಸ್ ಕೊಟ್ಟು ಮಾತನಾಡಿಸಿದ್ದಾನೆ. ಇವರಿಬ್ಬರ ನಡುವೆ ಸದಾ ಮಾಧವ್ ವಿಚಾರದಿಂದಲೇ ಮುನಿಸಿಕೊಳ್ಳುವಂತಾಗುತ್ತಿರುತ್ತದೆ. ಇನ್ನು ಮಾಧವ್ ತುಳಸಿ ಹೇಳದೇ ಕೇಳದೇ ತವರು ಮನೆಗೆ ಹೋಗಿದ್ದಕ್ಕೆ, ಅವರನ್ನು ಭೇಟಿಯಾಗಲೆಂದು ಮನೆಗೆ ಹೋಗುತ್ತಾನೆ.
ಮನೆಗೆ ಬಂದರೂ ಸತ್ಯ ತಿಳಿಯದ ಮಾಧವ
ತುಳಸಿ ಮನೆಯಲ್ಲೂ ಸತ್ಯ ಗೊತ್ತಿಲ್ಲ ಎಂಬುದನ್ನು ಅರಿತ ಮಾಧವ್ ಏನೂ ಹೇಳದೇ, ತಿಂಡಿ ತಿಂದು ತುಳಸಿಯನ್ನು ಮನೆಗೂ ಕರೆಯದೇ ಬಂದು ಬಿಡುತ್ತಾನೆ. ತುಳಸಿ ಯಾವ ವಿಚಾರವನ್ನು ಮಾಧವ್ ಬಳಿ ಮುಕ್ತವಾಗಿ ಮಾತನಾಡುವುದಿಲ್ಲ. ಹೀಗಾಗಿ ಮಾಧವ್ ತನ್ನ ಪ್ರಕಾರ, ತುಳಸಿ ಒಂದೆರಡು ದಿನದ ಮಟ್ಟಿಗೆ ಅಲ್ಲಿಗೆ ಹೋಗಿರಬೇಕು. ಮತ್ತೆ ಬರಬಹುದು ಎಂದು ಅಂದುಕೊಂಡಿದ್ದಾನೆ. ಆದರೆ, ಶಾರ್ವರಿ ಮನೆಯಿಂದ ಹೊರಗೆ ಕಳಿಸಿದ್ದು ಎಂಬ ಸತ್ಯ ಇನ್ನೂ ಗೊತ್ತಾಗಿಲ್ಲ.
ನಿಧಿ ಪಾರ್ಟಿಗೆ ಹೋಗಲು ಅಮ್ಮನೇ ಅಡ್ಡಿ
ಇನ್ನು ನಿಧಿಗೆ ಪಾರ್ಟಿಗೆ ಹೋಗಲು ಸದಾ ಹಣ ಸಿಗುತ್ತಿತ್ತು. ಅಭಿ, ಅವಿ ಅಥವಾ ಶಾರ್ವರಿ ಹಣ ಕೊಡುತ್ತಿದ್ದರು. ಆದರೆ, ಈಗ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು, ನಿಧಿ ಯಾರ ಬಳಿಯೂ ಹಣ ಕೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಮ್ಮನ ಹಿಂದೆ ಬಿದ್ದಿದ್ದಾಳೆ. ಮನೆಯ ಟೆನ್ಷನ್ನಲ್ಲಿರುವ ಶಾರ್ವರಿ ಸದಾ ನಿಧಿ ಮೇಲೆ ಕೋಪ ತೀರಿಸಿಕೊಳ್ಳುತ್ತಿದ್ದಾಳೆ. ನೀನು ಪಾರ್ಟಿಗೂ ಹೋಗಬೇಡ ನಾನು ಹಣವನ್ನೂ ಕೊಡುವುದಿಲ್ಲ. ಪರೀಕ್ಷೆಗೆ ಓದಿಕೋ ಸಾಕು ಎಂದು ಬೈಯುತ್ತಿರುತ್ತಾಳೆ. ಇದನ್ನು ಕೇಳಿಸಿಕೊಂಡ ಅವಿ, ನಿಧಿ ಅಕೌಂಟ್ಗೆ ಹಣವನ್ನು ಹಾಕುತ್ತಾನೆ. ನಿಧಿಗೆ ಪಾರ್ಟಿಗೆ ಹೋಗಬೇಡ. ಅಮ್ಮ ಬೈಯುತ್ತಾರೆ. ಮನೆಗೆ ಫ್ರೆಂಡ್ಸ್ ಅನ್ನು ಕರೆದು ಲಂಚ್ ಪಾರ್ಟಿ ಮಾಡು ಸಾಕು ಎಂದು ಸಮಾಧಾನ ಮಾಡುತ್ತಾನೆ.

ಮಗನನ್ನು ಕ್ಷಮೆ ಕೇಳಿದ ಮಾಧವ್
ಮನದಲ್ಲೇ ಬಯಸಿ, ಕೊನೆಗೆ ತುಳಸಿಯನ್ನು ಮದುವೆಯಾದ ಮಾಧವ್ಗೆ ಈಗ ಅವಳಿಲ್ಲದ ನೋವು ಕಾಡುತ್ತಿದೆ. ಜೊತೆಗೆ ಮಗನ ಪರಿಸ್ಥಿತಿಗೂ ಮರುಗುವಂತಾಗಿದೆ. ಹೀಗಾಗಿ ಮಾಧವ್ ಪದೇ ಪದೇ ಅಭಿ ಜೊತೆಗೆ ಮಾತನಾಡಲು ಯತ್ನಿಸುತ್ತಲೇ ಇದ್ದಾನೆ. ಈಗಲೂ ಅಭಿ ರೂಮಿಗೆ ಹೋಗಿ ನಿನ್ನ ಪರಿಸ್ಥಿತಿ ನನಗೆ ಅರ್ಥವಾಗುತ್ತೆ. ಪ್ರೀತಿಸಿದವರು ಜೊತೆಗಿಲ್ಲ ಎಂದಾಗ ಆಗುವ ನೋವು ಎಂಥಹದ್ದು ಎಂದು ನನಗೂ ಗೊತ್ತಿದೆ. ನನ್ನನ್ನು ಕ್ಷಮಿಸು ಅಭಿ ಎಂದು ಮಾಧವ್ ಕ್ಷಮೆ ಕೇಳುತ್ತಾನೆ.
ದುಃಖ ಹೇಳಿಕೊಳ್ಳಲಾಗದೇ ನರಳುತ್ತಿರುವ ತುಳಸಿ
ಇತ್ತ ತುಳಸಿ ಕೂಡ ಮನದೊಳಗೆ ನರಳುತ್ತಿದ್ದಾಳೆ. ತುಳಸಿಯ ಸ್ನೇಹಿತರು ಕೆಲವರು ಮನೆಗೆ ಬಂದು ಮಾತನಾಡಿಸುತ್ತಾರೆ. ಆಗ ಮಾಧವ್ ಮನೆಯಲ್ಲಿ ಕೆಲಸದಾಳುಗಳು ಇದ್ದಾರಾ..? ಯಾವಾಗ ಮತ್ತೆ ಹೋಗುವುದು ಎಂದೆಲ್ಲಾ ಕೇಳುತ್ತಾರೆ. ಆಗ ತುಳಸಿ, ಶಾರ್ವರಿ ಆಡಿದ ಮಾತುಗಳನ್ನು ನೆನಪಿಸಿಕೊಂಡು. ನಾನು ಮತ್ತೆ ಆ ಮನೆಗೆ ಹೋಗುವುದು ಸಾಧ್ಯಾನಾ..? ಇಲ್ಲಿ ಮಾವನಿಗೆ ಸತ್ಯ ಹೇಳುವುದು ಹೇಗೆ? ಎಂದು ಯೋಚಿಸುತ್ತಿರುತ್ತಾಳೆ.


Click it and Unblock the Notifications











