Shrirastu Shubhamasthu: ಅಪ್ಪನನ್ನು ಮನೆಗೆ ಕರೆಸಿಕೊಂಡು ಎಸ್ಕೇಪ್ ಆದ ಸಂಧ್ಯಾ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತ, ಸಂಧ್ಯಾ ಮಾಡಿರುವ ಕೆಲಸದಿಂದ ಕೋಪಗೊಂಡಿದ್ದು, ಅವಳನ್ನು ಮನೆಯಿಂದ ಹೊರಗೆ ಕಳಿಸಿದ್ದಾನೆ.
ಸಂಧ್ಯಾ ಬಾಗಿಲಲ್ಲೇ ಕಾದು ಕುಳಿತಿದ್ದು, ಪ್ರಸಾದ್ ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು ಎಷ್ಟು ಪ್ರಯತ್ನಿಸಿದರೂ ಸಂಧ್ಯಾ ಜಾಗ ಬಿಟ್ಟು ಕದಲುತ್ತಿಲ್ಲ.

ಸಿರಿ ತನ್ನ ಒಡವೆಗಳನ್ನು ಕಳೆದುಕೊಂಡಿದ್ದರೂ ಕೂಡ ಅವಳಿಗೆ ಸಂಧ್ಯಾ ಗರ್ಭಿಣಿ ಈ ಸಂದರ್ಭದಲ್ಲಿ ಅವಳನ್ನು ರಾತ್ರಿಯೆಲ್ಲಾ ಮನೆಯಿಂದ ಹೊರಗಡೆ ಇರುವುದು ಸರಿಯಲ್ಲ ಎನಿಸಿದೆ.
ಸಂಧ್ಯಾಳನ್ನು ಹೊರಗಟ್ಟಿದ ತಾತ
ಸಿರಿ, ದತ್ತ ತಾತ ಮಲಗಿದ ಬಳಿಕ ಸಂಧ್ಯಾ ಮತ್ತು ಪ್ರಸಾದ್ ಅನ್ನು ಮನೆಯ ಒಳಗಡೆ ಬಿಟ್ಟುಕೊಳ್ಳುತ್ತಾಳೆ. ದತ್ತ ತಾತ ಬೆಳಗ್ಗೆ ವಾಕಿಂಗ್ ಮುಗಿಸಿಕೊಂಡು ಬರುವ ಮುನ್ನ ಸಂಧ್ಯಾಳಿಗೆ ಕಾಫಿ ತಿಂಡಿ ಅನ್ನು ಸಿರಿಯೇ ನೀಡಿರುತ್ತಾಳೆ. ದತ್ತ ತಾತ ವಾಕಿಂಗ್ ಮುಗಿಸಿಕೊಂಡು ಬಂದ ಕೂಡಲೇ ಸಂಧ್ಯಾಳನ್ನು ಮನೆಯೊಳಗೆ ನೋಡಿ ಫುಲ್ ಶಾಕ್ ಆಗುತ್ತಾನೆ. ಸಿರಿಗೆ ಬೈಯುತ್ತಾನೆ. ನಿನಗೆ ಬುದ್ಧಿ ಇಲ್ಲ. ಅವಳನ್ನು ಮನೆಯಿಂದ ಹೊರಗೆ ಕಳಿಸು ಎನ್ನುತ್ತಾನೆ. ಸಂಧ್ಯಾ ಮಾತ್ರ ಮನೆಯಿಂದ ಹೊರಗಡೆ ಹೋಗುವುದಕ್ಕೆ ತಯಾರಿರುವುದಿಲ್ಲ. ಆದರೆ, ಪ್ರಸಾದ್ ಅವಳನ್ನು ಕರೆದುಕೊಂಡು ಹೊರಡುತ್ತಾನೆ. ಆದರೆ, ಸಂಧ್ಯಾ ಮನೆಯ ಬಾಗಿಲ್ಲಲ್ಲೇ ನಿಲ್ಲುತ್ತಾಳೆ.
ಮನೆಗೆ ಬಂದ ಮಾಧವ್-ತುಳಸಿ
ತಕ್ಷಣವೇ ಸಂಧ್ಯಾ, ಮಾಧವ್ಗೆ ಫೋನ್ ಮಾಡುತ್ತಾಳೆ. ಅಪ್ಪ ನನ್ನ ಪರಿಸ್ಥಿತಿ ಬಹಳ ಹೀನಾಯವಾಗಿದೆ. ದತ್ತ ತಾತ ನನ್ನನ್ನು ಮನೆಯಿಂದ ಆಚೆ ಕಳಿಸಿದ್ದಾರೆ. ನನಗೆ ಇಲ್ಲಿ ತುಂಬಾ ಕಷ್ಟವಾಗುತ್ತಿದೆ. ಬೇಗ ಮನೆಗೆ ಬನ್ನಿ ಎಂದು ಕರೆಯುತ್ತಾಳೆ. ತುಳಸಿ ಮತ್ತು ಮಾಧವ್ ಮನೆಗೆ ಬರುತ್ತಾರೆ. ಬೀದಿಯಲ್ಲೇ ನಿಂತು ಮಾತನಾಡುತ್ತಿರುವಾಗ ದತ್ತ ತಾತ ವಿಧಿ ಇಲ್ಲದೇ, ಮನೆಯೊಳಗೆ ಕರೆದುಕೊಂಡು ಹೋಗುತ್ತಾನೆ. ಏನಾಯ್ತು ಎಂದು ವಿಚಾರಿಸಿದಾಗ ಸಿರಿ ಸುಳ್ಳು ಹೇಳುತ್ತಾಳೆ. ಸಂಧ್ಯಾ ಡ್ರೈಫ್ರೂಟ್ಸ್ ಹೆಚ್ಚಾಗಿ ಸೇವಿಸಿ ಹೊಟ್ಟೆ ನೋವು ತರಿಸಿಕೊಂಡಿದ್ದಾಳೆ. ಇದರಿಂದ ತಾತನಿಗೆ ಕೋಪ ಬಂದು ಮನೆಯಿಂದ ಆಚೆ ಕಳಿಸಿದರು ಅಷ್ಟೇ ಎಂದು ಹೇಳುತ್ತಾಳೆ. ಮಾಧವ್ ಮತ್ತು ತುಳಸಿ ಇದೇ ಸತ್ಯ ಎಂದು ತಿಳಿಯುತ್ತಾರೆ. ಇನ್ನು ಇವರಿಬ್ಬರೂ ಈಗ ನಂದಗಿರಿಗೆ ಹೋಗುತ್ತಿರುವ ವಿಚಾರವನ್ನು ಹೇಳುತ್ತಾರೆ.

ನಂದಗಿರಿಗೆ ಹೊರಟಿರುವ ಮಾಧವ್ ಮನೆಯವರು
ದತ್ತ ತಾತ ಮತ್ತು ಮನೆಯವರನ್ನೂ ಕೂಡ ಮಾಧವ್ ಕರೆಯುತ್ತಾರೆ. ಒನ್ ಡೇ ಟ್ರಿಪ್ ಆದಹಾಗೆ ಆಗುತ್ತದೆ ಎಲ್ಲರೂ ಬನ್ನಿ ಎನ್ನುತ್ತಾರೆ. ಆದರೆ, ಮನೆಯವರು ಯಾರು ಬರುವುದಕ್ಕೆ ಒಪ್ಪುವುದಿಲ್ಲ. ನೀವೆಲ್ಲಾ ಹೋಗಿ ಬನ್ನಿ ಎನ್ನುತ್ತಾರೆ. ದತ್ತ ತಾತನಿಗೆ ಸಿರಿ ಸುಳ್ಳು ಹೇಳಿದ್ದಕ್ಕೆ ಅವಳ ಮೇಲೆ ಕೋಪ ಬಂದಿರುತ್ತದೆ. ಇನ್ನು ಇತ್ತ ಮನೆಯಲ್ಲಿ ಎಲ್ಲರೂ ನಂದಗಿರಿಗೆ ಹೋಗಲು ತಯಾರಿಸಿ ನಡೆಸುತ್ತಿರುತ್ತಾರೆ. ಅವಿನಾಶ್ಗೆ ತನ್ನ ತಾಯಿಯ ನೆನಪಾಗಿ ಬೇಸರ ಮಾಡಿಕೊಂಡಿರುತ್ತಾನೆ. ಪೂರ್ಣಿಮಾ, ಅವಿಗೆ ಸಮಾಧಾನ ಹೇಳಿ ಹೊರಡಿಸುತ್ತಾಳೆ.
ನಾಟಕ ಮಾಡಿದ ಶಾರ್ವರಿ
ಇನ್ನು ಶಾರ್ವರಿ ಈಗ ನಂದಗಿರಿ ಹೋದರೆ ತನ್ನ ಎರಡನೇ ಮುಖದ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ. ಮಹೇಶನಿಗೆ ಎಲ್ಲಾ ನೆನಪಾಗುತ್ತದೆ. ತನ್ನ ಎಲ್ಲಾ ಶ್ರಮವೂ ನಷ್ಟವಾಗಿ ಬಿಡುತ್ತದೆ ಎಂದು ಗಾಬರಿಯಾಗಿರುತ್ತಾಳೆ. ಹೀಗಾಗಿ ಶಾರ್ವರಿ ತನಗೆ ತಲೆನೋವು ಇದ್ದು, ರೆಸ್ಟ್ ಮಾಡಬೇಕು ಎನ್ನುತ್ತಾಳೆ. ಆಗ ಅವಿ ಮತ್ತು ಅಭಿ ಟ್ರಿಪ್ ಕ್ಯಾನ್ಸಲ್ ಮಾಡೋಣ ಎಂದಾಗ ನಿಧಿ ಬೇಡ ಅಮ್ಮ ಇಲ್ಲೇ ಇರಲಿ. ನಾವೆಲ್ಲಾ ಹೋಗಿ ಬರೋಣ ಎನ್ನುತ್ತಾಳೆ. ಶಾರ್ವರಿ ಇದಕ್ಕಿಂತಲೂ ತಾನೂ ಜೊತೆಗೆ ಹೋಗುವುದೇ ಸರಿ ಎಂದು ಭಾವಿಸಿ, ನಾನು ಅಲ್ಲೇ ರೆಸ್ಟ್ ಮಾಡುತ್ತೇನೆ ಎಂದು ಸಂದರ್ಭವನ್ನು ನಿಭಾಯಿಸುತ್ತಾಳೆ.


Click it and Unblock the Notifications











