Shrirastu Shubhamasthu: ಪೂರ್ಣಿಮಾಳಿಗೆ ನೋವು ಮಾಡಿದ ಸಂಧ್ಯಾ ಸಿಕ್ಕಿ ಬೀಳುತ್ತಾಳಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ತಾನು ಗರ್ಭಿಣಿ ಎಂದು ಹೇಳಿ ತವರು ಮನೆಗೆ ಬಂದಿದ್ದಾಳೆ. ಸಮರ್ಥ್, ತುಳಸಿ ಹಾಗೂ ಸಿರಿ ಎಲ್ಲರೂ ಸಂಧ್ಯಾ ಮಾತನ್ನು ನಂಬಿದ್ದಾರೆ. ಒಂದು ಸಲ ನಂಬಿಕೆ ಕಳೆದುಕೊಂಡರೆ ಮತ್ತೆ ಬರುವುದು ಕಷ್ಟ. ಹಾಗಾಗಿ ದತ್ತ ತಾತನಿಗೆ ಸ್ವಲ್ಪವೂ ನಂಬಿಕೆ ಇಲ್ಲ. ಹೀಗಾಗಿ ಸಂಧ್ಯಾಳನ್ನು ಹೆಚ್ಚು ಗಮನಿಸುವುದಿಲ್ಲ.
ಬೇರೆ ಎಲ್ಲರೂ ಬಹಳ ಸೂಕ್ಷ್ಮವಾಗಿ ಕಾಳಜಿಯಿಂದ ಸಂಧ್ಯಾಳನ್ನು ನೋಡಿಕೊಳ್ಳುತ್ತಿದ್ದಾರೆ. ಸಂಧ್ಯಾ ಕೂಡ ಈ ಸಂದರ್ಭವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾಳೆ.

ಸಂಧ್ಯಾ ಚೆಕಪ್ಗಾಗಿ ಅಣ್ಣ ಸಮರ್ಥ್ ಬಳಿ ಹಣ ಕೇಳಿರುತ್ತಾಳೆ. ಸಮರ್ಥ್ ತನ್ನ ಬಳಿ ಹಣ ಇಲ್ಲದ ಕಾರಣ ಸ್ನೇಹಿತನ ಬಳಿ ಸಾಲ ಮಾಡಿಕೊಟ್ಟಿರುತ್ತಾನೆ.
ಹಣದ ಬಗ್ಗೆ ವಿಚಾರಿಸಿದ ಸಿರಿ
ಹಣ ಇಲ್ಲದಿದ್ದರೂ ಹೇಗೆ ಕೊಟ್ಟೆ ಎಂದು ಸಿರಿ, ಸಮರ್ಥ್ ಬಳಿ ಪ್ರಶ್ನೆ ಮಾಡುತ್ತಾಳೆ. ಆಗ ಸಮರ್ಥ್ ಸಾಲ ಮಾಡಿದೆ, ಬೇರೆ ದಾರಿ ಇರಲಿಲ್ಲ ಎನ್ನುತ್ತಾನೆ. ಇದಕ್ಕೆ ಸಿರಿ ಬೇಸರ ಮಾಡಿಕೊಂಡು ನನ್ನ ಬಳಿಯೇ ಹಣ ಕೇಳಬಹುದಿತ್ತು. ನಾನು ಅಷ್ಟೊಂದು ದೂರ ಆಗಿ ಹೋದೆನಾ? ಎಂದು ಬೇಸರದಲ್ಲಿ ಮಾತನಾಡುತ್ತಾಳೆ. ಸಮರ್ಥ್ಗೂ ತನ್ನ ತಪ್ಪಿನ ಅರಿವಾಗುತ್ತದೆ.
ಹಠ ಮಾಡಿ ಅಮ್ಮನ ಮನೆಗೆ ಬಂದ ಸಂಧ್ಯಾ
ಸಂಧ್ಯಾ ಆಸ್ಪತ್ರೆಗೆ ಹೋಗಬೇಕಿರುತ್ತದೆ. ಸಿರಿ ತಾನೂ ಕೂಡ ಜೊತೆಗೆ ಬರುವುದಾಗಿ ಹೇಳಿದ್ದಕ್ಕೆ, ಇಲ್ಲ ಪ್ರಸಾದ್ ಬರುತ್ತಾರೆ. ಬಳಿಕ ಅಮ್ಮನ ಜೊತೆಗೆ ಹೋಗಿ ಬರುತ್ತೀನಿ ಎಂದು ಹೇಳುತ್ತಾಳೆ. ಸಂಧ್ಯಾಳ ಮನಸ್ಸಿಗೆ ನೋವು ಮಾಡಬಾರದು ಎಂದು ಎಲ್ಲರೂ ಒಪ್ಪುತ್ತಾರೆ.

ತುಳಸಿಗೆ ಮುಜುಗರ
ಸಂಧ್ಯಾ ಅಮ್ಮನ ಬಳಿ ಹೋಗಿ ಡಾಕ್ಟರ್ ಅಪಾಯಿಂಟ್ಮೆಂಟ್ ಇನ್ನೂ ಲೇಟ್. ಅಲ್ಲಿಯವರೆಗೂ ನಿಮ್ಮ ಮನೆಯಲ್ಲಿ ಇರೋಣ ಎಂದು ಹಠ ಮಾಡಿ ಮಾಧವ್ ಮನೆಗೆ ಹೋಗುತ್ತಾಳೆ. ತಲೆ ಸುತ್ತು, ಹೊಟ್ಟೆ ಹಸಿವು ಎಂದೆಲ್ಲಾ ಒಂದಾದ ಮೇಲೆ ಒಂದು ನಾಟಕ ಮಾಡುತ್ತಿರುತ್ತಾಳೆ. ಸಂಧ್ಯಾ ಮನೆಗೆ ಬಂದಿದ್ದಕ್ಕೆ ಶಾರ್ವರಿ ಇದೊಂದು ಛತ್ರ ಆಗೋಗಿದೆ ಎಂದು ಗೊಣಗಾಡುತ್ತಾಳೆ. ತುಳಸಿಗೆ ಮುಜುಗರವಾಗುತ್ತಿದ್ದರೂ ಸಂಧ್ಯಾ ಸ್ವಲ್ಪವೂ ಕೇರ್ ಮಾಡುವುದಿಲ್ಲ.
ಸಂಧ್ಯಾಳನ್ನು ನೋಡಲು ಬಂದ ಪ್ರಸಾದ್
ದತ್ತ ತಾತನ ಬಳಿ ಸುಳ್ಳು ಹೇಳಿ ಬಂದ ಸಂಧ್ಯಾ ಅಮ್ಮನ ಮನೆಯಲ್ಲಿ ಜಾಲಿ ಮಾಡುತ್ತಿರುತ್ತಾಳೆ. ಸಂಧ್ಯಾಳನ್ನು ಹುಡುಕಿಕೊಂಡು ಪ್ರಸಾದ್ ಮನೆಗೆ ಬರುತ್ತಾನೆ. ದತ್ತ ತಾತನಿಗೆ ಪ್ರಸಾದ್ ಮಾತುಗಳು ಅನುಮಾನ ತರುತ್ತದೆ. ಹೀಗಾಗಿ ಸಂಧ್ಯಾ ನಿಜವಾಗಿಯೂ ಗರ್ಭಿಣಿ ಹೌದಾ, ಇಲ್ಲ ಸುಳ್ಳು ಹೇಳುತ್ತಿದ್ದಾಳಾ? ಎಂದು ತಿಳಿದುಕೊಳ್ಳಲು ಪ್ಲಾನ್ ಮಾಡಿದ್ದಾರೆ. ಪ್ರಸಾದ್ ಹೇಳುವ ಸತ್ಯದಿಂದ ಸಂಧ್ಯಾ ಸಿಕ್ಕಿ ಬೀಳುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.
ಪೂರ್ಣಿಮಾಳಿಗೆ ಸಮಾಧಾನ ಮಾಡಿದ ಮಾಧವ್
ಇತ್ತ ಸಂಧ್ಯಾಳ ಜೊತೆಗೆ ಮಾತನಾಡುವಾಗ ಮಾಧವ್ ಬಾಯಲ್ಲಿ ಅಕಸ್ಮಾತ್ ಆಗಿ ಪೂರ್ಣಿಮಾ ಗರ್ಭಿಣಿಯಾಗಿದ್ದ ವಿಚಾರ ಬರುತ್ತದೆ. ಆಗ ಪೂರ್ಣಿಮಾಳ ಮನಸ್ಸಿಗೆ ನೋವಾಗುತ್ತದೆ. ಸಂಧ್ಯಾ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ, ಬೇಕಂತಲೇ ಪದೇ ಪದೇ ನಿಮ್ಮ ಮಗುಗೆ ಏನಾಗಿತ್ತು. ಯಾಕೆ ಕಳೆದುಕೊಂಡಿದ್ದು, ಯಾವ ಮಗು ಎಂದೆಲ್ಲಾ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾಳೆ. ಪೂರ್ಣಿಮಾಳಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗುವುದಿಲ್ಲ. ಪೂರ್ಣಿಮಾ ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಆಗ ಮಾಧವ್ ಬಂದು ಸಮಾಧಾನ ಮಾಡುತ್ತಾನೆ.


Click it and Unblock the Notifications











