Shrirastu Shubhamasthu: ಅಮ್ಮನಿಗೆ ಸುಳ್ಳು ಹೇಳಿ ಮನೆಯಿಂದ ಹೊರಟ ಸಂಧ್ಯಾ: ತಾತನ ಹಣ ಮಾಯ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾ, ಸಿರಿ ಮೇಲಿನ ಕೋಪಕ್ಕೆ, ಒಡವೆ ಅಂಗಡಿಯಲ್ಲಿ ಓಲೆಗಳನ್ನು ಕದ್ದು, ಸಿರಿ ಬ್ಯಾಗ್ನಲ್ಲಿ ಹಾಕಿರುತ್ತಾಳೆ. ಇದನ್ನು ನಿಧಿ ನೋಡಿರುತ್ತಾಳೆ. ಹೊರಗೆ ಬರುವಾಗ ಸಿರಿ ಬಳಿ ಶಬ್ಧ ಬರುತ್ತದೆ. ಆಗ ಸೆಕ್ಯೂರಿಟಿ ಸಿರಿ ಬ್ಯಾಗ್ ಚೆಕ್ ಮಾಡಿದಾಗ ಓಲೆ ಸಿಗುತ್ತದೆ. ಇದು ಸಿರಿ ಬ್ಯಾಗ್ನಲ್ಲಿ ಹೇಗೆ ಬಂತು ಎಂಬ ಪ್ರಶ್ನೆ ಏಳುತ್ತದೆ.
ಆಗ ಅಂಗಡಿಯವರು ನಮ್ಮಲ್ಲಿ ಸಿಸಿಟಿವಿ ಇದೆ. ಚೆಕ್ ಮಾಡಿದರೆ ಗೊತ್ತಾಗುತ್ತದೆ ಎಂದು ಹೇಳುತ್ತಾರೆ. ಸಿರಿ ಕೊಂಚವೂ ಧೈರ್ಯಗೆಡದೇ, ಸಿಸಿ ಟಿವಿ ಚೆಕ್ ಮಾಡೋಣ ಎಂದು ಹೇಳುತ್ತಾಳೆ. ಅಷ್ಟರಲ್ಲಿ ದೀಪಿಕಾಳಿಗೆ ಗಾಬರಿಯಾಗುತ್ತದೆ. ಎಲ್ಲರನ್ನೂ ಯಾಮಾರಿಸಲು ಸಿರಿಗೆ ಬೈಯುತ್ತಾಳೆ. ಅಷ್ಟು ಬೇಕು ಎಂದಿದ್ದರೆ, ನಾನೇ ಕೊಡಿಸುತ್ತಿದ್ದೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂದು ಹೇಳುತ್ತಾಳೆ. ಸಿರಿ ಕೂಡ ಎದುರುತ್ತರ ಕೊಡುತ್ತಾಳೆ. ಬಳಿಕ ದೀಪಿಕಾ ನನಗೆ ಟೈಮ್ ಆಗುತ್ತಿದೆ ಹೊರಡೋಣ ಎಂದು ಆತುರ ಮಾಡುತ್ತಾಳೆ.

ಇದನ್ನೆಲ್ಲಾ ನೋಡುವ ನಿಧಿಗೆ ಮನದೊಳಗೆ ನಗು ಬರುತ್ತಿರುತ್ತದೆ. ಆಗ ಪೂರ್ಣಿಮಾ ಆ ಓಲೆಗೆ ಹಣ ಕಟ್ಟಿ ಬರುತ್ತಾಳೆ. ಪೂರ್ಣಿಮಾಗೆ ಬೇಸರವಾಗುತ್ತದೆ. ಸಿರಿಗೆ ಫೋನ್ ಮಾಡಿ ಸಮಾಧಾನದ ಮಾತುಗಳನ್ನು ಆಡುತ್ತಾಳೆ. ಇನ್ನು ಮಾಧವ್ ಬಳಿ ಈ ವಿಚಾರವನ್ನು ಹೇಳದೇ ಪೂರ್ಣಿಮಾ ಮುಚ್ಚಿಡುತ್ತಾಳೆ.
ಸಮಾಧಾನ ಹೇಳಿದ ದತ್ತ ತಾತ
ಇತ್ತ ಶೇಷು ಮನೆಗೆ ದತ್ತ ತಾತ ಹೋಗಿ ನಂದಿನಿಗೆ ಬುದ್ಧಿವಾದ ಹೇಳಲು ಪ್ರಯತ್ನಿಸುತ್ತಾರೆ. ಆದರೆ, ನಂದಿನಿ ಯಾರ ಮಾತನ್ನು ಕೇಳಲು ತಯಾರಿಲ್ಲ. ಈ ಮಾತನ್ನು ಮನೆಗೆ ಬಂದು ಹೇಳಿದಾಗ ಗೋದಾವರಿ ಇನ್ನಷ್ಟು ಬೇಸರ ಮಾಡಿಕೊಳ್ಳುತ್ತಾಳೆ. ಅಲ್ಲದೇ, ಗೋದಾವರಿಗೆ ತನ್ನ ಮೊಮ್ಮಗನದ್ದೇ ಯೋಚನೆಯಾಗಿರುತ್ತದೆ. ತುಳಸಿ, ದತ್ತ ತಾತ ಹಾಗೂ ಸಮರ್ಥ್ ಎಲ್ಲರೂ ಶೇಷು ಮತ್ತು ಗೋದಾವರಿಗೆ ಸಮಾಧಾನ ಮಾಡುತ್ತಾರೆ. ಈ ಸಮಸ್ಯೆ ಬಗೆ ಹರಿಯುವವರೆಗೂ ನೀವು ಇಲ್ಲೇ ಇರಿ. ಇದಕ್ಕೆಲ್ಲಾ ಏನಾದರೂ ಒಂದು ವ್ಯವಸ್ಥೆಯನ್ನು ಮಾಡೋಣ ಎಂದು ಹೇಳುತ್ತಾರೆ.
ಮನೆಯಿಂದ ಕದ್ದು ಹೊರಟ ಸಂಧ್ಯಾ
ಇನ್ನು ಸಂಧ್ಯಾ, ಗೋದಾವರಿ ಹಾಗೂ ಶೇಷು ಮನೆಗೆ ಬಂದ ಕಾರಣ ಹಣ ಕದ್ದು ಎಸ್ಕೇಪ್ ಆಗಲು ಅವಕಾಶ ಸಿಕ್ಕಿದೆ. ದತ್ತ ತಾತ ಹಣದ ವಿಚಾರವನ್ನು ಮರೆತಿರುವುದರಿಂದ ಸಂಧ್ಯಾ ಬಚಾವ್ ಆಗಿದ್ದಾಳೆ. ಎಲ್ಲರೂ ಮಲಗಿರುವಾಗಲೇ ಮನೆಯಿಂದ ಹೊರಡಲು ಸಂಧ್ಯಾ ಎದ್ದೇಳುತ್ತಾಳೆ. ಆದರೆ, ಇದೇ ವೇಳೆಗೆ ತುಳಸಿ ಎದ್ದು ಪ್ರಶ್ನೆ ಮಾಡುತ್ತಾಳೆ.

ಸಂಧ್ಯಾ ಕಣ್ಣಿರು ಹಾಕುತ್ತಾ ನಿಮಗೆಲ್ಲಾ ಭಾರವಾಗಿದ್ದೀನಿ. ನಾನು ಪ್ರಸಾದ್ ಹೊರಗಡೆ ಹೋಗುತ್ತಿದ್ದೇವೆ ಎಂದು ಸಬೂಬು ಹೇಳುತ್ತಾಳೆ. ತುಳಸಿ ಕೂಡ ಸಂಧ್ಯಾ ಮಾತನ್ನು ನಂಬುತ್ತಾಳೆ. ಮಗಳು ತುಂಬಾ ಒಳ್ಳೆಯವಳು ಎಂದು ತುಳಸಿ ಭಾವಿಸಿದ್ದಾಳೆ. ಆದರೆ, ಸಂಧ್ಯಾ ಹಣ ತೆಗೆದುಕೊಂಡು ಹೋಗಿರುವುದು ಗೊತ್ತಾದರೆ, ಏನು ಮಾಡುತ್ತಾರೋ ಕಾದು ನೋಡಬೇಕಿದೆ.
ಮಾಧವ್ ನಗುವಿಗೆ ಶಾರ್ವರಿ ಒದ್ದಾಟ
ಇತ್ತ ಮಾಧವ್, ತುಳಸಿಗೆ ಮೆಸೇಜ್ ಮಾಡುತ್ತಾ ನಗುತ್ತಿರುತ್ತಾನೆ. ಇದನ್ನು ನೋಡುವ ಶಾರ್ವರಿಗೆ ಹೊಟ್ಟೆ ಉರಿಯುತ್ತದೆ. ಭಾವನ ಮುಖದಲ್ಲಿನ ನಗುವನ್ನು ಹೇಗೆ ನಾಶ ಮಾಡುವುದು ಎಂದು ಯೋಚಿಸುತ್ತಿರುತ್ತಾಳೆ. ಹೇಗಾದರೂ ಮಾಡಿ ತುಳಸಿಗೆ ಮಟ್ಟ ಹಾಕಲೇಬೇಕು. ಇಲ್ಲದಿದ್ದರೆ ನಾನು ಅಂದುಕೊಂಡಿದ್ದೆಲ್ಲವೂ ಹಾಳಾಗುತ್ತದೆ ಎಂದು ರೂಮಿನಲ್ಲಿ ತಲೆಕಡಿಸಿಕೊಂಡಿರುತ್ತಾಳೆ. ಶಾರ್ವರಿಯನ್ನು ನೋಡಿ ಮಹೇಶ್ ನಗುತ್ತಾರೆ. ಇದು ಶಾರ್ವರಿಗೆ ಮತ್ತಷ್ಟು ಕೋಪವನ್ನು ತರುತ್ತದೆ.


Click it and Unblock the Notifications











