ಸಿದ್ದು ಮೂಲಿಮನಿ ಬಗ್ಗೆ ನಿಮಗೆಷ್ಟು ಗೊತ್ತು?
ಕಳೆದ ಹಲವು ವರ್ಷದಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಸಿದ್ದು ಮೂಲಿಮನಿ ಕನ್ನಡ ಚಿತ್ರರಂಗದ ಯುವನಟ. ಹಲವು ಸಿನಿಮಾಗಳಲ್ಲಿ ನಟಿಸಿರುವ ಸಿದ್ದು ಮೂಲಿಮನಿ ಕೈಯಲ್ಲಿ ಸದ್ಯ ಸಾಕಷ್ಟು ಸಿನಿಮಾಗಳಿವೆ. ಸಿನಿಮಾಗಳಲ್ಲಿ ಬ್ಯುಸಿ ಇರುವ ಸಿದ್ದು ಅವರು, ಕಿರುತೆರೆಯಲ್ಲೂ ಬ್ಯುಸಿ.
ಸಿದ್ದು ಮೂಲಿಮನಿಗೆ ಹೆಸರು ತಂದುಕೊಟ್ಟಿದ್ದು ಕಿರುತೆರೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವ 'ಪಾರು' ಧಾರಾವಾಹಿ ಮೂಲಕ ಸಿದ್ದು ಮೂಲಿಮನಿ ಮನೆ ಮಾತಾಗಿದ್ದಾರೆ. ಕಿರುತೆರೆ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಾರೆ.
ಸಿದ್ದು ಮೂಲಿಮನಿಗೆ ನಟಿಸುವ ಆಸೆ ನಿನ್ನೆ ಮೊನ್ನೆಯದಲ್ಲವಂತೆ. ಚಿಕ್ಕವಯಸ್ಸಿನಿಂದಲೂ ತಾನೊಬ್ಬ ನಟನಾಗಬೇಕು ಎಂದು ಕನಸು ಕಂಡವರು. ಕನಸಿನ ಬೆನ್ನತ್ತಿ ಬಂದವರು ಇಂದು ಉತ್ತಮ ನಟನಾಗಿ ಹೊರಹೊಮ್ಮಿದ್ದಾರೆ.

ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಸಿದ್ದು!
ಸಿದ್ದು ಮೂಲಿಮನಿ ಮೊದಲ ಸಿನಿಮಾ ರಂಗಿತರಂಗ. ನಂತರ 'ಕೃಷ್ಣ ರುಕ್ಕು', 'ಒನ್ಸ್ ಮೋರ್ ಕೌರವ' ಸಿನಿಮಾಗಳಲ್ಲಿ ನಟಿಸಿದ್ದಾರೆ. 2017 ರಲ್ಲಿ ತೆರೆಕಂಡ 'ಟೋರ ಟೋರ' ಚಿತ್ರದಲ್ಲಿ ಅಭಿನಯಿಸಿದ್ದರು. ಇದಾದ ಬಳಿಕ 2018ರಲ್ಲಿ ತೆರೆಕಂಡ 'ಲಂಬೋದರ' ಚಿತ್ರದಲ್ಲಿ ನಟಿಸಿದ್ದಾರೆ. ಇದಕ್ಕೂ ಮುನ್ನ ಅನುಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಸಿನಿಮಾಗೆ ಸಿದ್ದು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಮತ್ತೆ ಅನುಪ್ ಭಂಡಾರಿ ಅವರ 'ರಾಜರಥ' ಸಿನಿಮಾದಲ್ಲೂ ಸಹಾಯಕ ನಿರ್ದೇಶಕರಾಗಿದ್ದರು. ಬಳಿಕ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಮುನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಒಟ್ಟು ಮೂರು ಬಾರಿ ಸಿದ್ದು ಅನುಪ್ ಭಂಡಾರಿ ಜೊತೆಗೆ ಕೆಲಸ ಮಾಡಿದ್ದಾರೆ. ಇನ್ನು ಕಿಚ್ಚ ಸುದೀಪ್ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಸಹ ಹೇಳಿದ್ದಾರೆ. ಇನ್ನು ಇವರ ನಟನೆಯ 'ಲಂಬೋದರ' ಹಾಗೂ 'ಬಸವನಗುಡಿ ಬೆಂಗಳೂರು', 'ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

ನಟನೆ ಎಂದರೆ ಹುಚ್ಚು!
ಸಿದ್ದು ಮೂಲಿಮನಿ ಅವರಿಗೆ ನಟನೆ ಎಂದರೆ ಹುಚ್ಚು ಪ್ರೀತಿ. ಚಿಕ್ಕ ವಯಸ್ಸಿನಲ್ಲಿದ್ದಾಗಿನಿಂದಲೂ ಸಿದ್ದು ಮೂಲಿಮನಿಗೆ ನಟನಾಗುವ ಆಸೆ ಇತ್ತಂತೆ. ಸಿದ್ದುಗೆ ನಟನೆ ಎಂದರೆ ಕನಸು ಹಾಗೂ ಜೀವವಂತೆ. ನಟನೆ ಎಂದರೆ ಅಷ್ಟು ಇಷ್ಟ ಪಡುತ್ತಾರೆ. ಪಾತ್ರಕ್ಕೆ ಹೆಚ್ಚು ಒತ್ತು ಕೊಡುವ ಸಿದ್ದು ಜಗತ್ತಿನ ಯಾವುದೇ ವೇದಿಕೆಯಾದರೂ ಸರಿಯಂತೆ. ಕಿರುತೆರೆಗಿಂತಲೂ ಸಿನಿಮಾ ಎಂದರೆ ಹೆಚ್ಚು ಇಷ್ಟ. ಅದರ ಜೊತೆಗೆ ಸಿದ್ದುಗೆ ಸಿನಿಮಾಗಳಿಗೆ ಸಂಬಂಧಿಸಿದ ತಾಂತ್ರಿಕ ವಿಷಯಗಳನ್ನು ಕಲಿಯುವ ಆಸಕ್ತಿ ಇದೆಯಂತೆ.

ಪಾರು ಸೀರಿಯಲ್ನಲ್ಲಿ ಪ್ರೀತು!
ಸಿದ್ದು ಮೂಲಿಮನಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ಪಾರು ಧಾರಾವಾಹಿ. ಇದರಲ್ಲಿ ಸಿದ್ದು ನಾಯಕ ನಟ ಆದಿಯ ಸಹೋದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾರು ಧಾರಾವಾಹಿ ಮೂಲಕ ಪ್ರೀತು ಆಗಿ ಜನಪ್ರಿಯತೆಯನ್ನೂ ಗಳಿಸಿದ್ದಾರೆ. ಇನ್ನು ಸಿದ್ದು ಮೊದಲ ಧಾರಾವಾಹಿ 'ಬಣ್ಣದ ಬುಗುರಿ', ನಂತರ 'ಅನುರಾಗ ಸಂಗಮ', 'ಒಂದೂರಲ್ಲಿ ರಾಜರಾಣಿ', 'ಕೃಷ್ಣ ತುಳಸಿ' ಸೀರಿಯಲ್ಗಳಲ್ಲಿ ಸಿದ್ದು ನಟಿಸಿದ್ದಾರೆ.

ಸಾಲು, ಸಾಲು ಚಿತ್ರಗಳಲ್ಲಿ ಬ್ಯುಸಿ!
ಸಿದ್ದು ಮೂಲಿಮನಿ ಅವರ ಫೇವರಿಟ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರಂತೆ. ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದ ಸಿದ್ದು, ಅವರಿಗೆ ಉಪ್ಪಿ ಅವರ ಮಾತುಗಳು ಸ್ಪೂರ್ತಿಯಂತೆ. ಇನ್ನು ನಟ ಯಶ್ ಅವರ ಮೇಲೂ ಸಿದ್ದುಗೆ ಅಭಿಮಾನವಿದೆಯಂತೆ. ಸದ್ಯ ಸಿದ್ದು ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. 'ಧರಣಿ ಮಂಡಳ ಮಧ್ಯದೊಳಗೆ', 'ಅಭಿರಾಮ ಚಂದ್ರ', 'ಓಮಿನಿ', 'ಧಮಾಕಾ', 'ಹ್ಯಾಪಿ ಬರ್ತ್ಡೇ ಟು ಮಿ' ಚಿತ್ರಗಳ ಶೂಟಿಂಗ್ ಮುಗಿದಿದ್ದು ರಿಲೀಸ್ಗೆ ಸಜ್ಜಾಗಿವೆ. ಇನ್ನು 'ಅಜ್ಞಾತ ವಾಸಿ', 'ಗೊಂಬೆ ರಾಮ' ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ.


Click it and Unblock the Notifications











