Silli Lalli Serial: ಸಿಲ್ಲಿ ಲಲ್ಲಿ ಖ್ಯಾತಿಯ 'ಜ್ಯೋತಿ ಕಿರಣ್' ಫಿಟ್ ನೆಸ್ ಗುಟ್ಟೇನು ಗೊತ್ತಾ..?
'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಮೀರಾ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಜ್ಯೋತಿ ಕಿರಣ್ ಅವರು ಸಣ್ಣಗಾಗಿದ್ದಾರೆ. ಇದಕ್ಕೆ ಜ್ಯೋತಿ ಎಷ್ಟು ಕಷ್ಟ ಪಟ್ಟಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಮಗಳು ಜನಿಸಿದ ಮೇಲೆ ತುಂಬಾ ದಪ್ಪಗಾಗಿದ್ದ ಜ್ಯೋತಿ ಕಿರಣ್, ಸಣ್ಣಗಾಗಲು ವರ್ಷಗಟ್ಟಲೆ ಸಮಯ ಬೇಕಾಯಿತಂತೆ.
'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಎರಡು ಜುಟ್ಟು ಹಾಕಿಕೊಂಡು ಸೂಜಿ ಪಾತ್ರದ ಮೂಲಕ ನಿತ್ಯ ಎಲ್ಲರನ್ನೂ ನಗಿಸುತ್ತಿದ್ದ ಜ್ಯೋತಿ ಕಿರಣ್ ಈಗ 'ನಮ್ಮನೆ ಯುವರಾಣಿ'ಯಲ್ಲಿ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೂಜಿ ಪಾತ್ರ ತುಂಬಾ ಪಾಪ್ಯುಲರ್ ಆಗಿದ್ದು, ಈಗಲೂ ಜ್ಯೋತಿ ಕಿರಣ್ರನ್ನು ಸೂಜಿ ಎಂದೇ ಗುರುತಿಸುತ್ತಾರೆ. ಆದರೆ ಈಗ ಸಂತೂರ್ ಮಮ್ಮಿ ಎಂದು ಕರೆಯಲು ಅಭಿಮಾನಿಗಳು ಮುಂದಾಗಿದ್ದಾರೆ.
ಮದುವೆಯಾದ ಮೇಲೆ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಜ್ಯೋತಿ ಕಿರಣ್ ನಂತರ 'ರಾಜಾ-ರಾಣಿ' ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಇದರ ಜೊತೆಗೆ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಶಾಂಭವಿ ಎಂಬ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದರು. ವಯಸ್ಸಿಗೆ ಮೀರಿದ ಪಾತ್ರ ಮಾಡಿ ಪ್ರೇಕ್ಷಕರ ಮನಗೆದ್ದರು.
Recommended Video

ಫಿಟ್ನೆಸ್ಗಾಗಿ 5 ವರ್ಷ ಡಯಟ್ ಮಾಡಿದ ಸೂಜಿ!
ಮಗಳು ಹುಟ್ಟಿದ ಮೇಲೆ ತೀರಾ ದಪ್ಪಗಾದ ಜ್ಯೋತಿ ಕಿರಣ್ ತಮ್ಮ ಮಗಳಿಗೆ ಎರಡು ವರ್ಷವಾದ ಮೇಲೆ ಮೊದಲು ವಾಕಿಂಗ್ ಶುರು ಮಾಡಿದರಂತೆ. ಸತತವಾಗಿ 6 ತಿಂಗಳ ಕಾಲ ವಾಕಿಂಗ್ ಮಾಡಿದ ಜ್ಯೋತಿ, ನಂತರ ಜಿಮ್ಗೆ ಸೇರಿಕೊಂಡರು. ಆಹಾರ ಹಾಗೂ ವರ್ಕೌಟ್ ವಿಚಾರದಲ್ಲಿ ಜ್ಯೋತಿ ಎಂದಿಗೂ ಕಾಂಪ್ರಮೈಸ್ ಆಗಲಿಲ್ಲವಂತೆ. ಸತತವಾಗಿ 5 ವರ್ಷಗಳ ಕಾಲ ವಾಕಿಂಗ್, ವರ್ಕೌಟ್, ಜಿಮ್, ಡಯಟ್ ಮಾಡಿ ಹಂತ ಹಂತವಾಗಿ ತೂಕ ಇಳಿಸಿಕೊಂಡಿದ್ದಾರೆ.
ಸಂತೂರ್ ಮಮ್ಮಿ ಆದ ಜ್ಯೋತಿ!
ಈಗ ತಮ್ಮ ತೂಕವನ್ನು ಇಳಿಸಿಕೊಂಡು, ಬಿಫೋರ್ ಆಂಡ್ ಆಫ್ಟರ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಜ್ಯೋತಿ ತಾಯಿ ಪಾತ್ರ ಮಾಡಿದ್ದಾರೆ. ಚಿಕ್ಕ ವಯಸ್ಸಿನ ಜ್ಯೋತಿ ತಾಯಿ ಪಾತ್ರ ಮಾಡುವುದರ ಜೊತೆಗೆ ಈಗ ಸ್ಲಿಮ್ ಆಗಿದ್ದಾರೆ. ಹೀಗಾಗಿ ಅಭಿಮಾನಿಗಳು ಸಂತೂರ್ ಮಮ್ಮಿ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ, ಕೆಲವರು ನೀವು ಸಿನಿಮಾಗಳಲ್ಲಿ ಯಾಕೆ ನಟಿಸಬಾರದು ಎಂದೂ ಪ್ರಶ್ನಿಸಿದ್ದಾರೆ. ಕಮ್ ಬ್ಯಾಕ್ ಮಾಡಿದಾಗ ಸೀರಿಯಲ್ಗಳಲ್ಲಿ ನಾಯಕಿ ಪಾತ್ರ ಮಾಡಬೇಕಿತ್ತು ಎಂದೂ ಹೇಳಿದ್ದಾರೆ. ಆದರೆ ಇದಕ್ಕೆಲ್ಲಾ ಪ್ರತಿಕ್ರಿಯಿಸಿರುವ ಜ್ಯೋತಿ, ನನಗೆ ಅಜ್ಜಿ ಪಾತ್ರ ಕೊಟ್ಟರೂ ಮಾಡುತ್ತೀನಿ ಎಂದು ಹೇಳಿದ್ದಾರೆ.
ಮೈಸೂರು ಮೂಲಕ ಜ್ಯೋತಿ ಕಿರಣ್!
ಮೈಸೂರು ಮೂಲದ ಜ್ಯೋತಿ ಕಿರಣ್, ಈ ಟಿವಿ ವಾಹಿನಿಯಲ್ಲಿ 'ಪಂಚರಂಗಿ' ಕಾರ್ಯಕ್ರಮಕ್ಕಾಗಿ ಟ್ಯಾಲೆಂಟ್ ಹಂಟ್ ಮಾಡುವಾಗ ಆಡಿಷನ್ನಲ್ಲಿ ಸೆಲೆಕ್ಟ್ ಆಗಿ ಆಯ್ಕೆಯಾದವರು. ನಂತರ 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಕಾಮಿಡಿ ಮಾಡಿ ಎಲ್ಲರ ಮನ ಗೆದ್ದಿದ್ದರು. ನಂತರ 'ಪಾಪ ಪಾಂಡು' ಸೀರಿಯಲ್ ಮೂಲಕವೂ ಎಲ್ಲರನ್ನೂ ನಗಿಸುತ್ತಿದ್ದರು. ಬಳಿಕ ಮದುವೆ, ಮಗು, ಸಂಸಾರ ಎಂದು ಜ್ಯೋತಿ ಕಿರಣ್ ಬ್ಯುಸಿಯಾದರು. ಈಗ ನಾಲ್ಕು ವರ್ಷಗಳ ನಂತರ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದರು.
ತೆಲುಗು ಕಿರುತೆರೆಗೆ ಜ್ಯೋತಿ ಕಿರಣ್ ಎಂಟ್ರಿ!
ಇದೇ ಮೊದಲ ಬಾರಿಗೆ ಜ್ಯೋತಿ ಕಿರಣ್ ಅವರು ತೆಲುಗು ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಜೆಮಿನಿ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಪ್ರಾರಂಭವಾಗಲಿದ್ದು, ಈ ಸೀರಿಯಲ್ಗೆ ಜ್ಯೋತಿ ಬಣ್ಣ ಹಚ್ಚಿದ್ದಾರೆ. 'ಉಪ್ಪೆನ' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.


Click it and Unblock the Notifications











