ಹೊಸ ಸಾಹಸಕ್ಕೆ ಕೈ ಹಾಕಿದ 'ಎದೆ ತುಂಬಿ ಹಾಡುವೆನು' ವಿನ್ನರ್, ಕಿರುತೆರೆ ನಟಿ ರಕ್ಷಿತಾ ಭಾಸ್ಕರ್; ಏನದು?
ಕನ್ನಡ ಕಿರುತೆರೆಯಲ್ಲಿ ಬೆಡಗಿಯರೇನೂ ಕಡಿಮೆಯಿಲ್ಲ ಅಲ್ಲವೇ? ಅಂತಹ ಸ್ವೀಟ್ ಆಂಡ್ ಕ್ಯೂಟ್ ನಟಿಯರಲ್ಲಿ ರಕ್ಷಿತಾ ಭಾಸ್ಕರ್ ಕೂಡ ಒಬ್ಬರು. ನಟನೆ, ಹಾಡು ಸೇರಿದಂತೆ ಹಲವು ಪ್ರತಿಭೆಯನ್ನು ಹೊಂದಿರುವ ಈ ನಟಿಯ ಕುರಿತು ಒಂದಷ್ಟು ಸುದ್ದಿಯಿಲ್ಲಿದೆ ನೋಡಿ.
ನಟಿ ರಕ್ಷಿತಾ ಭಾಸ್ಕರ್ ಅಭಿನಯದ ಜೊತೆಗೆ ಬೇರೆ ಕ್ಷೇತ್ರಗಳಲ್ಲೂ ಸಾಧನೆಗೈದಿರುವ ಚೆಲುವೆ. ಸದ್ಯ ಮುಕ್ತಾಯಗೊಂಡಿರುವ 'ಸತ್ಯ' ಸೀರಿಯಲ್ನಲ್ಲಿ ರೀತು ಪಾತ್ರದ ಮೂಲಕ ಈಕೆ ವೀಕ್ಷಕರನ್ನು ರಂಜಿಸುತ್ತಿದ್ದರು. ರೀತು ಪಾತ್ರದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿರುವ ಈಕೆಗೆ ಬೇರೆ ರಂಗಗಳ ಮುಖಾಂತರವೂ ಸಾಕಷ್ಟು ಅಭಿಮಾನಿಗಳಿದ್ದಾರೆ.

ಸ್ವರ ಮಾಂತ್ರಿಕ, ಸಂಗೀತದ ಮೇಧಾವಿ ಎಸ್. ಪಿ ಬಾಲಸುಬ್ರಮಣ್ಯಂ ಅವರನ್ನು ಅರಿಯದ ಭಾರತೀಯರಿಲ್ಲ. ಅಂತಹ ಗಾನ ಗಂಧರ್ವ ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮವಾದ 'ಎದೆ ತುಂಬಿ ಹಾಡುವೆನು' 2006ರ ವಿನ್ನರ್ ಆಗಿ ಹೊರಹೊಮ್ಮಿದ್ದರು ಇದೇ ರಕ್ಷಿತಾ. ಆ ನಂತರ ನಟನಾರಂಗದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದು ಇಂದು ತಮ್ಮ ಪ್ರತಿಭೆಯಿಂದ ಗೆದ್ದು ನಿಂತಿದ್ದಾರೆ.
ಆ ಸಮಯದಲ್ಲಿ ಬಾಲ ಕಲಾವಿದೆಯಾಗಿ ಗಮನ ಸೆಳೆದಿದ್ದ ಕಲಾವಿದೆ ನಂತರ ಹಲವು ಕಾರ್ಯಕ್ರಮಗಳಲ್ಲಿ ಬೇರೆ ಬೇರೆ ಮೇರು ಕಲಾವಿದರೊಂದಿಗೆ ಕಾಣಿಸಿಕೊಂಡಿದ್ದಾರೆ. ಗಾಯಕ ವಾಸುಕಿ ವೈಭವ್ ಅವರ ಪತ್ನಿ ಬೃಂದಾ ಅವರ ತಂಡದಲ್ಲಿ, ಸರಿಗಮಪ ವಿಜೇತ ದರ್ಶನ್ ನಾರಾಯಣ ಜೊತೆ ರಂಗಭೂಮಿಯಲ್ಲೂ ರಕ್ಷಿತಾ ಸಕ್ರಿಯರಾಗಿದ್ದರು.
ಒಂದು ಕಡೆ ಅಭಿನಯ, ಇನ್ನೊಂದು ಕಡೆ ಹಾಡುಗಾರಿಕೆ ಹೀಗೆ ಹಲವು ಕಲೆಯನ್ನು ಮೈಗೂಡಿಸಿಕೊಂಡಿರುವ ರಕ್ಷಿತಾ ಬಗ್ಗೆ ಎಲ್ಲರಿಗೂ ಮೆಚ್ಚುಗೆ ಇದೆ. ಸುಮಧುರ ಕಂಠದ, ಅದ್ಭುತ ಅಭಿನಯದ ಈ ನಟಿ ಪ್ರೇಕ್ಷಕರನ್ನು ಆಗಾಗ ಮೋಡಿ ಗೊಳಿಸುತ್ತಲೇ ಇರುತ್ತಾರೆ. ಇದರ ಜೊತೆಗೆ ಪ್ರಾಣಿ ಪ್ರಿಯರಾಗಿರುವ ಇವರು ಸಮಾಜ ಸೇವೆಯಲ್ಲಿಯೂ ಮುಂದೆ ಇದ್ದಾರೆ.

ಈಗ ವಿಶೇಷ ಏನಪ್ಪಾ ಅಂದ್ರೆ ನಟಿ ರಕ್ಷಿತಾ 'ತ್ರಿಧಾ ಮ್ಯೂಸಿಕ್ ಅಕಾಡೆಮಿ' ಎಂಬ ಅಕಾಡೆಮಿಯೊಂದನ್ನು ಶುರು ಮಾಡಿದ್ದಾರೆ. ಜೊತೆಗೆ ತ್ರಿಧಾ ಮ್ಯೂಸಿಕ್ ಅಕಾಡೆಮಿ ಎಂಬ ಹೊಸ ಪೇಜ್ವೊಂದನ್ನು ಕ್ರಿಯೇಟ್ ಮಾಡಿದ್ದಾರೆ. ಇದೇ ಗುರುಪೂರ್ಣಿಮೆಯಂದು ಆಕೆ ಈ ವಿಚಾರವನ್ನು ಹಂಚಿಕೊಂಡಿದ್ದರು.
ಸರ್ವಶಕ್ತ ಮತ್ತು ನನ್ನ ಹೆತ್ತವರ ಆಶೀರ್ವಾದದೊಂದಿಗೆ, ನನ್ನ ಕನಸಿನ ಯೋಜನೆಯಾದ 'ತ್ರಿಧಾ ಮ್ಯೂಸಿಕ್ ಅಕಾಡೆಮಿ' ಯನ್ನು ಪರಿಚಯಿಸಲು ರೋಮಾಂಚನಗೊಂಡಿದ್ದೇನೆ. ನಿಮ್ಮ ಬೆಂಬಲ, ಪ್ರೋತ್ಸಾಹ, ಪ್ರೀತಿ ಸದಾ ನನ್ನ ಮೇಲಿರಲಿ ಎಂದು ಆಕೆ ಬರೆದುಕೊಂಡಿದ್ದರು. ಒಟ್ಟಿನಲ್ಲಿ ಒಂದಾದ ಮೇಲೆ ಒಂದು ಕಲಾಪ್ರಕಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಈ ಕಲಾವಿದೆ ಇನ್ನಷ್ಟು ಬೆಳೆಯಲಿ.


Click it and Unblock the Notifications











