Ankita Kundu: "ಏ ತಂಗಿ.. ಮಕೇಬಾ ಗಿಕೇಬಾ ಎಲ್ಲಾ ಬೇಡ.. ಹುಚ್ಚುಚ್ಚಾಗಿ ಕುಣಿಬೇಡ": ಗಾಯಕಿ ಅಂಕಿತಾಗೆ ಎಚ್ಚರಿಕೆ ಪತ್ರ
ಟಿಕ್ ಟಾಕ್, ಇನ್ಸ್ಟಾಗ್ರಾಮ್, ರೀಲ್ ಸೋಶಿಯಲ್ ಮೀಡಿಯಾದ ಕಾಲದಲ್ಲಿ ಸಾವಿರಾರು ವಿಡಿಯೋಗಳು ಅತ್ತಲಿಂದಿತ್ತ ಹಾರಾಡುವ ಪೋಸ್ಟ್ ಆಗುವ ಈ ಜಮಾನದಲ್ಲಿ ಇಂಥ ವಿಡಿಯೋಗಳನ್ನು ಹಾಕಿದರೆ ಎಚ್ಚರ ಎಂದು ಬೆಂಗಾಲಿ ಮೂಲದ ಕನ್ನಡದ ಖ್ಯಾತ ಗಾಯಕಿ ಅಂಕಿತಾ ಅವರ ಮೇಲೆ ಅಭಿಮಾನಿಗಳ ಸಂಘ ಒಂದು ಪತ್ರ ಬರೆದಿದ್ದು ಇದೀಗ ಬಹಳ ವೈರಲಾಗಿದೆ!!
ಹಾಗಾದರೆ ಆಗಿದ್ದಾದರೂ ಏನು? ಇತ್ತೀಚೆಗಷ್ಟೇ ಅಂಕಿತ ಕುಂಡು ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತರೊಂದಿಗೆ ಒಂದು ಇಂಗ್ಲೀಷ್ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋವನ್ನು ಪೋಸ್ಟ್ ಮಾಡುತ್ತಿದ್ದಂತೆ ಆಕ್ರೋಶಗೊಂಡಿರುವ ಕೆಲವು ಅಭಿಮಾನಿಗಳು ಯುವ ಗಾಯಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರ ಸಾರಾಂಶ ಹೀಗಿದೆ.

"ಜಾನಕಮ್ಮನ ನೋಡು.. ಸುಶೀಲಮ್ಮನ ನೋಡು.."
"ಏ ತಂಗಿ.. ಲತಮ್ಮನ ನೋಡು.. ಜಾನಕಮ್ಮನ ನೋಡು.. ಚೈತ್ರ ಅಮ್ಮನ ನೋಡು.. ಸುಶೀಲಮ್ಮನ ನೋಡು... ಯಾಕೆ ಹೀಗೆ ಅರೆ ಬರೆ ಬಟ್ಟೆ ಹಾಕಿಕೊಂಡು ಕುಣಿತಿಯ ನಿನ್ನನ್ನು ಸರಸ್ವತಿ ಎಂದು ಅಂದ್ಕೊಂಡಿದ್ದೀವಿ" ಎಂಬ ಸಾಲುಗಳಲ್ಲಿ ಶುರುವಾದ ದೀರ್ಘ ಪತ್ರದಲ್ಲಿ ಗಾಯಕಿ ಅಂಕಿತ ಕುಂಡುರವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
"ಪ್ರೀತಿಯ ಅಂಕಿತ ಕುಂಡು ಅವರೇ, ನಿಮ್ಮ ರೀಲ್ ಅಭಿಮಾನಿಗಳು ಬರೆದಿರುವ ಪತ್ರ ಇದಾಗಿದ್ದು ಇನ್ನು ಮೇಲೆ ನೀವು ಈ ರೀತಿ ಅರೆಬರೆ ಬಟ್ಟೆ ಹಾಕಿಕೊಂಡು ನೃತ್ಯ ಮಾಡುವ ಅವಶ್ಯಕತೆ ಇಲ್ಲ. ನಿಮ್ಮನ್ನು ನಾವು ಸರಸ್ವತಿ ಎಂದೇ ಕಾಣುತ್ತೇವೆ ಹೀಗಿರುವಾಗ ಹಳೆಯ ಕಾಲದಲ್ಲಿ ಗಾಯಕಿಯರೆಲ್ಲ ಹೇಗೆ ಬಟ್ಟೆ ಹಾಕಿಕೊಂಡು ಚೆನ್ನಾಗಿ ಹಾಡುತ್ತಿದ್ದರೋ ಹಾಗೆಯೇ ನೀವು ಹಾಡಬೇಕು ಹಾಗೂ ಗಾಯನವನ್ನು ನಿಮ್ಮ ಕಲೆಯನ್ನು ಉನ್ನತ ಮಟ್ಟದಲ್ಲಿ ಇಟ್ಟುಕೊಳ್ಳಬೇಕೆಂಬುದು ನಮ್ಮ ಆಶಯ."ಎಂದು ಬರೆದಿದ್ದಾರೆ.
"ಮಕೇಬಾ ಗಿಕೇಬಾ ಅದೆಲ್ಲ ಬೇಡ"
"ನೀವು ಪ್ರದರ್ಶನ ಕಲೆಗಳಲ್ಲಿ ಡಿಗ್ರಿ ಕಲೆಯುತ್ತಿರಬಹುದು, ಅಲ್ಲಿ ಬೇರೆ ಬೇರೆ ರೀತಿಯ ನೃತ್ಯಗಳನ್ನು ಹೇಳಿಕೊಡಬಹುದು, ಹಾಗಂತ ನೀವು ಅದನ್ನು ಮಾಡಿ ಪ್ರದರ್ಶಿಸುವ ಅವಶ್ಯಕತೆ ಇಲ್ಲ. ನಾವು ಹೇಳಿದ ಹಾಗೆ ಕೇಳದಿದ್ದರೆ ನಿಮ್ಮೊಳಗಿನ ಸರಸ್ವತಿ ಓಡಿ ಹೋಗುತ್ತಾಳೆ" ಎಂದು ಬೆದರಿಕೆ ಹಾಕಿದ್ದಾರೆ.
"ಇತ್ತೀಚೆಗೆ ಹರೇ ರಾಮ ಹರೇ ಕೃಷ್ಣ ಎಂದೆಲ್ಲ ಆಗಾಗ ಜಪಿಸುವ ನೀವು, ಬೀದಿಯಲ್ಲಿ ಹೋಗುವ ನಾಯಿ ಬೆಕ್ಕುಗಳನ್ನೆಲ್ಲ ಮುದ್ದಿಸುತ್ತೀರಿ. ಬೇಕಾದರೆ ನಿಮಗಾಗಿ ಸಾವಿರಾರು ನವಿಲುಗಳನ್ನೇ ಕೊಡೋಣ ಆದರೆ ಇಂಥ ಕೆಲಸಗಳನ್ನು ಮಾಡಬೇಡಿ. ಮಕೇಬಾ ಗಿಕೇಬಾ ಅಂತೆಲ್ಲ ಹುಚ್ಚು ಹಿಡಿಸಿಕೊಂಡರೆ ನಿಮ್ಮನ್ನು ನಿಮ್ಮ ರಾಜ್ಯಕ್ಕೆ ಕಳಿಸಲಾಗುವುದು. ಹಾಗೆಯೇ ನಿಮ್ಮ ಗಿಟಾರ್ ಹಿಡಿದುಕೊಂಡು ಇನ್ಮೇಲೆ ಟೋಯ್ ಟೋಯ್ ಎಂದು ಹಾಡು ಹೇಳಬೇಕಾಗಿಲ್ಲ.. ನೀವು ಹ್ಞೂ ಎಂದರೆ ಸಾಕು ದೊಡ್ಡಬಳ್ಳಾಪುರದಿಂದ ಅಥವಾ ಸಿಂಪಡಿಪುರದಿಂದ ವೀಣೆಯ ಅಪ್ಪನಂತ ವೀಣೆಯನ್ನು ನಿಮಗೆ ತರಿಸಿ ಕೊಡುತ್ತೇವೆ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇವೆ." ಎಂದು ಆಕ್ರೋಶಗೊಂಡ ಅಭಿಮಾನಿಗಳು ಬರೆದ ಪತ್ರದಲ್ಲಿ ಈ ವಿಚಾರಗಳಿಗೆ ಸಂಬಂಧಿಸಿ ಬಹಳಷ್ಟು ಜನರ ಸಮ್ಮತಿಯ ಸಹಿಯು ಇದೆ ಎಂದು ಹೇಳಿಕೊಳ್ಳಲಾಗಿದೆ.
ತಲೆಗೆ ಎಣ್ಣೆ ಹಚ್ಚಿ ಜಡೆ ಹಾಕಬೇಕು.. ಹೂ ಮುಡಿಬೇಕು"
ಇದಿಷ್ಟೇ ಅಲ್ಲದೆ ಪತ್ರದಲ್ಲಿ "ತಲೆಗೆ ಎಣ್ಣೆ ಹಚ್ಚಿ ಜಡೆ ಹಾಕಬೇಕು. ತಲೆ ತುಂಬ ಮಲ್ಲಿಗೆ ಹೂವು ಮುಡಿಯಬೇಕು. ಹಣೆಯ ಮೇಲೆ ಕಾಸಗಲ ಕುಂಕುಮ ಹಚ್ಚಿಕೊಳ್ಳಬೇಕು. ಮೈತುಂಬಾ ಸೆರಗು ಹೊದ್ದಿರಬೇಕು. ಅಪ್ಪಿತಪ್ಪಿಯೂ ನೀವು ನಿಮ್ಮ ಮೈ ಕುಣಿಸುವಂತಿಲ್ಲ. ಜೋರಾಗಿ ನಗುವಂತಿಲ್ಲ. ನೀವು ಹೀಗೆಲ್ಲಾ ನಿಮ್ಮಿಷ್ಟ ಬಂದಂತೆ ರಸ್ತೆಯಲ್ಲಿ, ಟೆರೇಸಿನಲ್ಲಿ ಪಾಶ್ಚಾತ್ಯ ಹಾಡುಗಳಿಗೆ ಮನಬಂದಂತೆ ಕುಣಿಯುವಂತಿಲ್ಲ. ನಿಮ್ಮ ಗೆಳೆಯ ಗೆಳತಿಯರೊಂದಿಗೆ ನೀವು ಸಲಿಗೆಯಿಂದ ಇರುವಂತಿಲ್ಲ. ಇದು ನಮ್ಮ ರಾಜ್ಯದ ಘನತೆಯ ಪ್ರಶ್ನೆ. ಇನ್ನು ಮುಂದೆ ನೀವು ರಾತ್ರಿ ತುಂಡುಬಟ್ಟೆ ಹಾಕಿಕೊಂಡು ಲೈವ್ ಬಂದರೆ ನಾವು ಸಿಡಿದೇಳಬೇಕಾಗುತ್ತದೆ" ಎಂದು ಬರೆದಿದ್ದೂ ಅಲ್ಲದೆ, ನೀವು ನಮ್ಮ ನಾಡಿನ ಅಮೂಲ್ಯ ಆಸ್ತಿ, ನಾವಿದ್ದರೆ ನೀವು ಹಾಗಾಗಿ ನಾವು ಹೇಳಿದ ಹಾಗೆ ನೀವು ಕೇಳಬೇಕೆಂಬ ಬೆದರಿಕೆಯನ್ನೂ ಸೇರಿಸಿದ್ದಾರೆ.
ಮೊದಲಿಗೆ ಸರಿಗಮಪ ಸೀಸನ್ ನಲ್ಲಿ ಕಾಣಿಸಿಕೊಂಡ ಅಂಕಿತ ಕುಂಡು ಅವರು ಆಗಿನಿಂದ ಈಗಿನವರೆಗೂ ಬೇರೆ ಬೇರೆ ಕನ್ನಡ ಹಾಗೂ ಹಲವು ಭಾಷೆಗಳ ಹಾಡುಗಳ ಮೂಲಕ ಬಹಳಷ್ಟು ಪ್ರಚಲಿತದಲ್ಲಿದ್ದಾರೆ. ಆಕೆಯ ಕಂಠಸಿರಿಗೆ ಸಾವಿರಾರು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವ ವಿಡಿಯೋ ಒಂದಕ್ಕೆ ಈ ರೀತಿ ಪ್ರತಿಕ್ರಿಯೆ ಬಂದಿದ್ದು ಒಬ್ಬ ಗಾಯಕಿಯಾಗಿ ತನ್ನನ್ನು ತಾನು ಈ ರೀತಿ ಪ್ರಸ್ತುತಪಡಿಸಿಕೊಳ್ಳಬಾರದು ಎಂಬ ಸಂದೇಶದೊಂದಿಗೆ ಈ ಪತ್ರ ಖಡಕ್ ಆಗಿಯೇ ಅಭಿಮಾನಿಗಳಿಂದ ಗಾಯಕಿಗೆ ತಲುಪಿದೆ. ಇದೀಗ ಈ ಪತ್ರ ಸಖತ್ ವೈರಲ್ ಆಗಿದ್ದು ಎಲ್ಲೆಡೆ ಭಾರಿ ಪರ ವಿರೋಧ ಚರ್ಚೆಗಳಿಗೆ ಗ್ರಾಸವಾಗಿದೆ!


Click it and Unblock the Notifications











