ಕೌನ್ ಬನೇಗಾ ಕರೋಡ್ಪತಿಯಲ್ಲಿ ಜಾಕ್ಪಾಟ್ ಹೊಡೆದ ಬಾಗಲಕೋಟೆಯ ಚಾಯ್ವಾಲಾ..!
ತಮ್ಮ 81ನೇ ವಯಸ್ಸಿನಲ್ಲಿಯೂ ಸಾಲು ಸಾಲು ಸಿನಿಮಾಗಳ ಜೊತೆಯಲ್ಲಿ ಹಲವಾರು ಜಾಹೀರಾತು ಮತ್ತು ಕಿರುತೆರೆಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಫುಲ್ ಬ್ಯುಸಿಯಾಗಿರುವವರು ಅಮಿತಾಬ್ ಬಚ್ಚನ್. ಇಂಥಾ ದಣವರಿಯದ ಮಹಾನಾಯಕ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ನಮ್ಮ ಕರುನಾಡಿನ ಬಾಗಲಕೋಟೆಯಯ ವ್ಯಕ್ತಿಯೊಬ್ಬರ ಬದುಕನ್ನು ಬದಲಿಸಿದೆ. ಈ ಕಾರ್ಯಕ್ರಮದಿಂದ ಒಂದಲ್ಲ, ಎರಡಲ್ಲ ಹತ್ ಹತ್ತಿರ ಐವತ್ತು ಲಕ್ಷ ಹಣ ಬಡ ಯುವಕನ ಖಾತೆಗೆ ಜಮೆಯಾಗಿದೆ.
ಹೌದು, ರಮ್ಜಾನ್ ಮಲ್ಲಿಕ್ ಸಾಬ್ ಫೀರಜಾದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಯುವಕ. ಬದುಕಿನಲ್ಲಿ ಹತ್ತಾರು ಕನಸುಗಳನ್ನು ಕಂಡಿರುವ ಸಾಧನೆಯ ಶಿಖರಕ್ಕೇರಬೇಕೆಂಬ ಕನಸನ್ನು ಕಂಡಿರುವ ರಮ್ಜಾನ್ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸುತ್ತಿದ್ದಾರೆ.

ಆದರೆ, ಇವರದ್ದು ಬಡ ಕುಟುಂಬ. ಈ ಹಿನ್ನೆಲೆ ಮಹಾಲಿಂಗಪುರದಲ್ಲಿ ವೆಲ್ಡಿಂಗ್ ಕೆಲಸ ಮಾಡುವ ತಂದೆಗೆ ಕೆಲಸದಲ್ಲಿ ಸಹಾಯವನ್ನು ಮಾಡುವ ರಮ್ಜಾನ್ ಟೀ ಅಂಗಡಿಯಲ್ಲಿ ಗ್ಲಾಸ್ ಕೂಡ ತೊಳೆಯುವ ಕೆಲಸ ಮಾಡಿದ್ದಾರೆ. ಅದಕ್ಕೂ ಮುನ್ನ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ವಾಚ್ಮನ್ ಕೆಲಸವನ್ನು ಕೂಡ ಮಾಡಿದ್ದಾರೆ. ಹೀಗೆ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡುತ್ತಾ ಬಿಡುವು ಸಿಕ್ಕಾಗ ಓದುತ್ತಾ ಕೆಎಲ್ಇ ಕಾಲೇಜ್ನಲ್ಲಿ ಬಿಎ ಪದವಿಯನ್ನು ಕೂಡ ಪೂರೈಸಿದ್ದಾರೆ.
ಇಂಥಾ ರಮ್ಜಾನ್ ಮಲಿಕ್ ಬಾಬ್ ಫೀರಜಾದೆ ಕೌನ್ ಬನೇಗಾ ಕರೋಡ್ಪತಿಯ ಹದಿನಾರನೇ ಸೀಸನ್ಗೆ ಅರ್ಜಿಯನ್ನು ಸಲ್ಲಿಸಿದ್ದರು. ಇವರ ಅದೃಷ್ಟ ಭಾಗವಹಿಸುವ ಅವಕಾಶ ಕೂಡ ಇವರಿಗೆ ದೊರೆಯಿತು. ಸಿಕ್ಕ ಈ ಸುವರ್ಣಾವಕಾಶವನ್ನು ಸದುಪಯೋಗ ಮಾಡಿಕೊಂಡ ರಮ್ಜಾನ್ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಕೇಳಿದ ಪ್ರಶ್ನೆಗಳಿಗೆಲ್ಲ ಪಟಪಟ ಎಂದು ಉತ್ತರ ನೀಡಿದ್ದಾರೆ. ಐವತ್ತು ಲಕ್ಷ ರೂಪಾಯಿಯನ್ನು ಗೆದ್ದಿದ್ದಾರೆ.
ಅಂದ್ಹಾಗೇ ರಮ್ಜಾನ್ ಮಲ್ಲಿಕ್ ಸಾಬ್ ಫೀರಜಾದೆ ಅವರಿಗೆ ಈ ಕಾರ್ಯಕ್ರಮದಲ್ಲಿ ಒಂದು ಕೋಟಿ ಗೆಲ್ಲುವ ಅವಕಾಶ ಇತ್ತು. ಆದರೆ, ಕೊನೆಯ ಪ್ರಶ್ನೆಗೆ ರಮ್ಜಾನ್ ಬಳಿ ಖಚಿತ ಉತ್ತರ ಇರಲಿಲ್ಲ. ಹೀಗಾಗಿ ಗೇಮ್ದಿಂದ ಹಿಂದೆ ಸರಿಯುವ ನಿರ್ಧಾರವನ್ನು ಮಾಡಿದ ರಮ್ಜಾನ್ ಸದ್ಯ ರೀಲ್ನಲ್ಲಿ ನೋಡಿದ್ದ ಸ್ಲಂ ಡಾಗ್ ಮಿಲೇನಿಯರ್ ಕಥೆಯನ್ನು ರಿಯಲ್ ಲೈಫ್ನಲ್ಲಿ ನಿಜಾ ಮಾಡಿದ್ದಾರೆ. ಯಾವುದು ಅಸಾಧ್ಯವಲ್ಲ ಎನ್ನುವುದನ್ನು ಕೂಡ ಸಾಬೀತು ಮಾಡಿದ್ದಾರೆ. ಇನ್ನು ರಮ್ಜಾನ್ ಅವರಿಗೆ ಕಬ್ಬಿಣದ ಕಡಲೆಯಾದ ಆ ಪ್ರಶ್ನೆ ಯಾವುದು ಎನ್ನುವುದಕ್ಕೆ ಉತ್ತರ ಮುಂದಿನ ವಾರ ಕಾರ್ಯಕ್ರಮ ಪ್ರಸಾರವಾದಾಗ ಸಿಗಲಿದೆ.
ಸದ್ಯ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಗೆದ್ದು ಬಂದ ರಮ್ಜಾನ್ ಅವರನ್ನು ಊರಿನ ಜನ ಅದ್ಧೂರಿಯಾಗಿ ಸ್ವಾಗತಿಸಿದ್ಧಾರೆ. ಊರಿನಲ್ಲಿ ಮೆರವಣಿಗೆಯನ್ನು ಮಾಡಿದ್ದಾರೆ. ಜನವರಿ 13ರಂದು ರಾತ್ರಿ 09 ಗಂಟೆಗೆ ರಮ್ಜಾನ್ ಮಲ್ಲಿಕ್ ಸಾಬ್ ಫೀರಜಾದೆ ಅವರ ಕಾರ್ಯಕ್ರಮ ಪ್ರಸಾರವಾಗಲಿದೆ.ಇನ್ನುಳಿದಂತೆ ತಮ್ಮ ಬದುಕಿನ ಪ್ರಯಾಣವನ್ನು ಹಾಟ್ ಸೀಟ್ನಲ್ಲಿ ಕುಳಿತು ಅಮಿತಾಬ್ ಅವರ ಎದುರು ರಮ್ಜಾನ್ ಮಲ್ಲಿಕ್ ಸಾಬ್ ಮೆಲುಕು ಹಾಕಿದ್ದು ಅಮಿತಾಬ್ ಬಚ್ಚನ್ ಬಾಗಲಕೋಟೆಯ ಹುಡುಗನ ಕಥೆಯನ್ನು ಕೇಳಿ ನಿಬ್ಬೇರಗಾಗಿದ್ದಾರೆ. ಎಷ್ಟೇ ಅಡ್ಡಿ ಆತಂಕ ಬಂದರೂ ಛಲ ಬಿಡದ ತ್ರಿವಿಕ್ರಮನಂತೆ ಓದಿನ ಕಡೆ ಗಮನ ವಹಿಸಿದ ರಮ್ಜಾನ್ ಮಲ್ಲಿಕ್ ಸಾಬ್ ಫೀರಜಾದೆ ಅವರನ್ನು ಮೆಚ್ಚಿಕೊಂಡಿದ್ದಾರೆ. ಹೊಗಳಿದ್ದಾರೆ.


Click it and Unblock the Notifications











