ಕಥೆಯೊಂದು ಶುರುವಾಗಿದೆ ಎನ್ನುತ್ತಿದ್ದಾರೆ ಸೌಮ್ಯ ಭಟ್
ಬಣ್ಣದ ಲೋಕದ ಆಕರ್ಷಣೆ ಹೇಗಿದೆ ಎಂದರೆ ಅದು ಇಂದು ಅದೆಷ್ಟೋ ಜನರನ್ನು ಕಲಾವಿದರನ್ನಾಗಿಸಿದೆ. ನಟನಾ ಜಗತ್ತಿನಲ್ಲಿ ಬದುಕು ರೂಪಿಸಿಕೊಟ್ಟಿದೆ. ಆದರೆ ಇದರ ಜೊತೆಗೆ ಆಚಾನಕ್ ಆಗಿಯೂ ಈ ಲೋಕಕ್ಕೆ ಬಂದು, ನಂತರ ಇಲ್ಲಿಯೇ ಬದುಕು ರೂಪಿಸಿಕೊಂಡವರಿಗೇನೂ ಇಲ್ಲಿ ಕಡಿಮೆಯಿಲ್ಲ. ನಾವಿಂದು ಪರಿಚಯಿಸುತ್ತಿರುವ ನಟಿಯೂ ಅಷ್ಟೇ! ಆಕಸ್ಮಿಕವಾಗಿ ದೊರೆತ ಸಣ್ಣ ಅವಕಾಶ ಆಕೆಯನ್ನು ಇಂದು ನಾಯಕಿಯನ್ನಾಗಿ ಮೋಡಿ ಮಾಡುವಂತೆ ಮಾಡಿದೆ. ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಛಾಪು ಮೂಡಿಸುತ್ತಿರುವ ಈಕೆಯ ಹೆಸರು ಸೌಮ್ಯ ಭಟ್.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ "ಕಥೆಯೊಂದು ಶುರುವಾಗಿದೆ"ಯಲ್ಲಿ ನಾಯಕಿ ವರ್ಣಿಕಾ ಆಗಿ ಅಭಿನಯಿಸುತ್ತಿರುವ ಸೌಮ್ಯ ಭಟ್ ಹಂತಹಂತವಾಗಿ ಬಣ್ಣದ ಲೋಕದಲ್ಲಿ ಬೆಳೆದ ಬೆಡಗಿ. ಪೋಷಕ ಪಾತ್ರಗಳ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಇಂದು ನಟಿಯಾಗಿ ಭಡ್ತಿ ಪಡೆದಿದ್ದಾರೆ. ಅಂದ ಹಾಗೇ ಸೌಮ್ಯ ಭಟ್ ಅವರಿಗೆ ನಟಿಯಾಗಬೇಕು ಎಂಬ ಕನಸಿರಲಿಲ್ಲ. ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಮಹಾದಾಸೆಯೂ ಕೂಡಾ ಇರಲಿಲ್ಲ. ತಿರುಪತಿಯ ಆರ್ ಎಸ್ ವಿ ಪಿ ಯಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಸೌಮ್ಯ ಭಟ್ ವೃತ್ತಿ ಜೀವನ ಆರಂಭಿಸಿದ್ದು ಸಂಸ್ಕೃತ ಅಧ್ಯಾಪಕಿಯಾಗಿ.
ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸೌಮ್ಯ ಭಟ್ ಇಂದು ನಟಿಯಾಗಿ ರಂಜಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಫೇಸ್ ಬುಕ್. ಫೇಸ್ ಬುಕ್ ನಲ್ಲಿ ಆ್ಯಕ್ಟೀವ್ ಆಗಿದ್ದ ಈಕೆ ತಮ್ಮ ಫೋಟೋಗಳನ್ನು ಹಾಕುತ್ತಿದ್ದರು. ಸೌಮ್ಯ ಅವರ ಪೋಟೋ ನೋಡಿದ ನಟ, ನಿರ್ದೇಶಕ ಜಗದೀಶ್ ಮಲ್ನಾಡು ಈಕೆಯನ್ನು ಸಂಪರ್ಕಿಸಿ "ನಿಮಗೆ ನಟನೆಯಲ್ಲಿ ಇಷ್ಟ ಇದೆಯಾ? ಒಂದು ವೇಳೆ ಇದ್ದರೆ ಮಿಲನ ಧಾರಾವಾಹಿಯ ಆಡಿಶನ್ ನಲ್ಲಿ ಭಾಗವಹಿಸಿ" ಎಂದು ಹೇಳಿದರು. ಆ ಒಂದು ಮಾತು ಸೌಮ್ಯರನ್ನು ನಟಿಯನ್ನಾಗಿ ಮಾಡಿತು.

ಬಂದ ಅವಕಾಶ ಬೇಡ ಎನ್ನಲಿಲ್ಲ
ಬಯಸದೇ ಬಂದ ಅವಕಾಶವನ್ನು ಒಲ್ಲೆ ಎನ್ನಲು ಮನಸ್ಸಾಗದೇ ನೋಡೋಣ ಎಂದು ಲುಕ್ ಟೆಸ್ಟ್ ಗೆ ಹೋಗಲು ನಿರ್ಧಾರ ಮಾಡಿದರು ಸೌಮ್ಯ. ಅದೃಷ್ಟ ಎಂಬಂತೆ ಲುಕ್ ಟೆಸ್ಟ್ ಮೊದಲೇ ಅವರು ಆ ಪಾತ್ರಕ್ಕೆ ಆಯ್ಕೆಯೂ ಆಗಿದ್ದರು. ಮಿಲನ ಧಾರಾವಾಹಿಯಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಸೌಮ್ಯ ಭಟ್ ಮುಂದೆ ಜೀ ಕನ್ನಡದ "ಒಂದೂರಲ್ಲಿ ರಾಜ ರಾಣಿ", ಕಸ್ತೂರಿ ವಾಹಿನಿಯ "ಅಸಾಧ್ಯ ಅಳಿಯಂದಿರು" ಧಾರಾವಾಹಿಯ ಶಾಲಿನಿಯಾಗಿ ಮೋಡಿ ಮಾಡಿದರು.

ಹೆಸರು ತಂದುಕೊಟ್ಟಿದ್ದು ಮೇಧಾ ಪಾತ್ರ
ಕಲರ್ಸ್ ಕನ್ನಡ ವಾಹಿನಿಯ "ಲಕ್ಷ್ಮಿ ಬಾರಮ್ಮ" ಧಾರಾವಾಹಿಯಲ್ಲಿ ಮೇಧಾ ಆಗಿ ಕಾಣಿಸಿಕೊಂಡಿದ್ದ ಈಕೆ ಆ ಪಾತ್ರದ ಮೂಲಕ ಕರುನಾಡಿನಾದ್ಯಂತ ಮನೆ ಮಾತಾದರು. ಮುಂದೆ ಕಲರ್ಸ್ ಕನ್ನಡದಲ್ಲಿ ಸದ್ಯ ಪ್ರಸಾರವಾಗುತ್ತಿರುವ "ಕನ್ನಡತಿ"ಯಲ್ಲಿ ನಾಯಕ ಹರ್ಷನ ಅಸಿಸ್ಟೆಂಟ್ ಆಶಿತ ಪಾತ್ರಕ್ಕೆ ಜೀವ ತುಂಬಿದರು. ಅದು ಕೂಡಾ ಸಣ್ಣ ಪಾತ್ರವಾದರೂ ತಮ್ಮ ನಟನೆ, ಲುಕ್ ಮೂಲಕ ವೀಕ್ಷಕರ ಮನ ಸೆಳೆದಿದ್ದರು.

ತಮಿಳಿನ ತಾಳಂಪುವಿನಲ್ಲೂ ನಟನೆ
ಕನ್ನಡತಿ ಧಾರಾವಾಹಿಯ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಪವಿತ್ರಾ ಆಗಿ ಕಾಣಿಸಿಕೊಂಡ ಸೌಮ್ಯ ಭಟ್ ಅಪ್ಪಟ ಗೃಹಿಣಿಯಾಗಿ ಕಿರುತೆರೆಯಲ್ಲಿ ಮಿಂಚಿದ್ದರು. ಇದರ ನಡುವೆ ಪರಭಾಷೆಯ ಕಿರುತೆರೆಯಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಈಕೆ ತಮಿಳಿನ "ತಾಳಂಪು" ಧಾರಾವಾಹಿಯಲ್ಲಿ ನಾಯಕಿಯಾಗಿ ಕಮಾಲ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಭಡ್ತಿ ಪಡೆದಿರುವ ಸೌಮ್ಯ ಭಟ್ ವರ್ಣಿಕಾ ಆಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ಕಿರುತೆರೆ ಜೊತೆಗೆ ಹಿರಿತೆರೆಗೂ ಸೈ ಸೌಮ್ಯ ಭಟ್
ರಾಜು ಎದೆಗೆ ಬಿದ್ದ ಅಕ್ಷರ ಎನ್ನುವ ಸಿನಿಮಾದಲ್ಲಿ ನಾಯಕನ ಅಕ್ಕ ಆಗಿ ಕಾಣಿಸಿಕೊಳ್ಳುವ ಮೂಲಕ ಹಿರಿತೆರೆಗೆ ಕಾಲಿಟ್ಟ ಸೌಮ್ಯ ಭಟ್ ಮುಂದೆ ನಿನ್ನ ಸನಿಹಕೆ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ ಬೆಡಗಿ. ಇದರ ಜೊತೆಗೆ ವೆಬ್ ಸಿರೀಸ್ ಒಂದರಲ್ಲಿಯೂ ಈಕೆ ಅಭಿನಯಿಸಿದ್ದು ಅದಕ್ಕೆ ಇನ್ನೂ ಹೆಸರಿಡಬೇಕಿದೆ. ಒಟ್ಟಿನಲ್ಲಿ ಆಕಸ್ಮಿಕವಾಗಿ ನಟನೆಗೆ ಕಾಲಿಟ್ಟು, ಪೋಷಕ ಪಾತ್ರಗಳ ಮೂಲಕ ವೀಕ್ಷಕರನ್ನು ರಂಜಿಸಿ ಸದ್ಯ ನಾಯಕಿಯಾಗಿ ಮಿಂಚುತ್ತಿರುವ ಸೌಮ್ಯ ಭಟ್ ಅವರ ಬಣ್ಣದ ಪಯಣ ಇನ್ನಷ್ಟು ಕಲರ್ ಫುಲ್ ಆಗಿ ಸಾಗಲಿ.


Click it and Unblock the Notifications