ವರ್ಷಗಳ ನಂತರ ಮತ್ತೆ ಕಿರುತೆರೆಗೆ ಬಂದ ಶ್ರೀನಗರ ಕಿಟ್ಟಿ
ಬಾಲನಟನಾಗಿ ಕಿರುತೆರೆಯಲ್ಲಿ ನಟನೆಯ ಜರ್ನಿ ಆರಂಭಿಸಿದ್ದ ನಟ ಶ್ರೀನಗರ ಕಿಟ್ಟಿ ಮತ್ತೆ ಕಿರುತೆರೆಗೆ ಆಗಮಿಸುತ್ತಿದ್ದಾರೆ. ಕನ್ನಡದ ಪ್ರತಿಷ್ಠಿತ ಮನರಂಜನಾ ವಾಹಿನಿ ಉದಯ ಟಿವಿಯಲ್ಲಿ ಪ್ರಸಾರವಾಗುವ ಜೀವನದಿ ಧಾರಾವಾಹಿಯಲ್ಲಿ ಅತಿಥಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಸೋಮವಾರದಿಂದ ಶುಕ್ರವಾರ ರಾತ್ರಿ 9 ಗಂಟೆಗೆ ಕಿಟ್ಟಿ ಅಭಿನಯದ ಸಂಚಿಕೆ ಪ್ರಸಾರವಾಗಲಿದೆ. ಸರಸ್ವತಿ ನಟರಾಜನ್ ಅವರ ಕಾದಂಬರಿ ಆಧರಿಸಿ ಜೀವನದಿ ಧಾರಾವಾಹಿ ನಿರ್ಮಿಸಲಾಗುತ್ತಿದ್ದು ಈಗಾಗಲೇ 560 ಸಂಚಿಕೆಗಳು ಪ್ರಸಾರವಾಗಿ ಕನ್ನಡದ ಕಿರುತೆರೆ ವೀಕ್ಷಕರನ್ನು ಸೆಳೆದಿದೆ. ಈಗ ವಿಶೇಷ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟ ಶ್ರೀನಗರ ಕಿಟ್ಟಿಯವರನ್ನು ಕರೆಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಲು ಹೊರಟಿದೆ ಧಾರಾವಾಹಿ ತಂಡ.
2003ನೇ ಸಾಲಿನಲ್ಲಿ ಚಂದ್ರಚಕೋರಿ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಶ್ರೀನಗರ ಕಿಟ್ಟಿ ಗೌಡ್ರು, ಲವ್ಸ್ಟೋರಿ, ಆದಿ, ಅಯ್ಯ ಮತ್ತು ವಿಷ್ಣು ಸೇನೆ ಚಿತ್ರಗಳಲ್ಲಿ ನಟಿಸಿ ಹೆಸರು ಸಂಪಾದಿಸಿದ್ದರು. ಬಳಿಕ ಗಿರಿ ಮತ್ತು ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ನಾಯಕನಾಗಿ ಭಡ್ತಿ ಪಡೆದರು. ಬಳಿಕ ಒಲವೇ ಜೀವನ ಲೆಕ್ಕಾಚಾರ, ಜನುಮದ ಗೆಳತಿ, ಮತ್ತೆ ಮುಂಗಾರು, ಸವಾರಿ, ಮಳೆ ಬರಲಿ ಮಂಜೂ ಇರಲಿ, ಸ್ವಯಂವರ, ಸಂಜು ವೆಡ್ಸ್ ಗೀತಾ ಮತ್ತು ಹುಡುಗರು ಚಿತ್ರದಲ್ಲಿ ನಟಿಸುವ ಮೂಲಕ ಯಶಸ್ಸಿನ ಉತ್ತುಂಗವೇರಿದವರು ಶ್ರೀನಗರ ಕಿಟ್ಟಿ.

ಬಹುಪರಾಕ್ ಚಿತ್ರದಲ್ಲಿ ತ್ರಿಪಾತ್ರದಲ್ಲಿ ನಟಿಸಿ ವೀಕ್ಷಕರ ಮನಸೆಳೆದದ್ದು ಇವರ ಹೆಚ್ಚುಗಾರಿಕೆ. ಈ ಸಾಧಕ ನಟ ನಮ್ಮ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ ಜೀವನದಿ ಧಾರಾವಾಹಿಯ ನಿರ್ದೇಶಕ ಸೈಯದ್ ಆಶ್ರಪ್. ಹೆಣ್ಣೊಬ್ಬಳು ಮನಸು ಮಾಡಿದರೆ ತನಗೆ ಎದುರಾಗುವ ಕಷ್ಟಗಳನ್ನು ಹೇಗೆಲ್ಲ ಹಿಮ್ಮೆಟ್ಟಿಸಬಹುದು? ಕುಗ್ಗದೇ ಜಗ್ಗದೇ ಮುನ್ನುಗ್ಗಬಹುದು ಎಂಬುದನ್ನು ವಕೀಲೆ ಜ್ಯೋತಿ ಪಾತ್ರದ ಮೂಲಕ ನವಿರಾಗಿ ಜೀವನದಿ ಧಾರಾವಾಹಿ ನಿರೂಪಿಸುತ್ತಿದೆ.
ವಿನಯ್, ಅರ್ಚನಾ, ನದಾಪ್ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಮೀಡಿಯಾಹೌಸ್ ಮತ್ತು ಸಂಗಮ ಫಿಲ್ಮ್ಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ವೀಕ್ಷಕರ ನೆಚ್ಚಿನ ಧಾರಾವಾಹಿ ಜುಲೈ 29 ರಿಂದ ಆ. 2 ರ ವರೆಗೆ ಒಂದು ತಾಸಿನ ಅವಧಿಯ ವಿಶೇಷ ಸಂಚಿಕೆ ಪ್ರಸಾರವಾಗಿದೆ. ಜೀವನದಿ ಯ ಕಥೆ ಮಹತ್ವದ ತಿರುವಿನ ಹಂತ ತಲುಪಿದ್ದು ವೀಕ್ಷಕರಿಗೆ ಹೆಚ್ಚಿನ ರಂಜನೆ ನೀಡುವ ಉದ್ದೇಶದಿಂದ ವಾರವಿಡೀ ಮಹಾಸಂಚಿಕೆ ಪ್ರಸಾರ ಮಾಡಲಾಗುತ್ತಿದೆ. "ಜೀವನದಿ" ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.


Click it and Unblock the Notifications











