'ಕಾಟೇರ' ಸಿನಿಮಾದಲ್ಲಿರೋ ಈ ಕಾನ್ಸ್ಟೇಬಲ್ ಯಾರು ಗೊತ್ತಾ? ಈ ಕಿರುತೆರೆ ನಟನ ಹಿನ್ನೆಲೆ ಏನು?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕನ್ಯಾದಾನ'. ಅದರಲ್ಲಿ ಮುರಳಿ ಆಗಿ ಅಭಿನಯಿಸುತ್ತಿದ್ದಾರೆ ಶ್ರೀರಾಮ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ನಾಯಕನ ಅಣ್ಣನಾಗಿ ಶ್ರೀರಾಮ್ ಅಭಿನಯಿಸಿದ್ದರು. ಇದೀಗ ಮುರಳಿ ಪಾತ್ರಧಾರಿ ಪಾತ್ರದಿಂದ ಹೊರಬಂದಾಗ ಅದಕ್ಕೆ ಶ್ರೀರಾಮ್ ಅವರು ಆಯ್ಕೆಯಾದರು. ಮುರಳಿ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಶ್ರೀರಾಮ್ ಅವರ ಬಗ್ಗೆ ಸಂತಸದ ವಿಚಾರವೊಂದು ಹೊರಬಿದ್ದಿದೆ.
ಕಳೆದ ವಾರ ತೆರೆ ಕಂಡಿರುವ ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾದಲ್ಲಿ ಶ್ರೀರಾಮ್ ಮಿಂಚಿದ್ದಾರೆ. ಚಾಲೆಂಜಿಗ್ ಸ್ಟಾರ್ ದರ್ಶನ್ ಹಾಗೂ ಆರಾಧನಾ ರಾಮ್ ಜೋಡಿಯಾಗಿರುವ 'ಕಾಟೇರ' ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಶ್ರೀರಾಮ್ ಕಾಣಿಸಿಕೊಂಡಿದ್ದಾರೆ. ಪಾತ್ರ ಸಣ್ಣದಿದ್ದರೂ ಸಿನಿಮಾದ ಕಥೆಗೆ ಶ್ರೀರಾಮ್ ಅವರ ಪಾತ್ರ ಟ್ವಿಸ್ಟ್ ನೀಡಲಿದೆ.

"ಪೊಲೀಸ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿರುವ ನಾನು ಕಾನ್ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪೊಲೀಸ್ ಜೀಪ್ ಡ್ರೈವರ್ ಆಗಿರುವ ನನಗೆ ನಾಯಕ ಕಾಟೇರನ ಮೇಲೆ ಅಗಾಧವಾದ ಪ್ರೀತಿ ಇರುತ್ತದೆ. ಅದಕ್ಕೆ ಒಂದು ಕಾರಣವಿದ್ದು, ಅದನ್ನು ನೀವು ಸಿನಿಮಾದಲ್ಲಿಯೇ ನೋಡಬೇಕಷ್ಟೇ. ಕಾಟೇರನ ಮೇಲಿರುವ ಪ್ರೀತಿಯಿಂದ ಅವನಿಗೆ ಒಳ್ಳೆಯದು ಆಗಬೇಕು ಎಂದು ಏನೋ ಒಂದು ಮಾಡುವುದಕ್ಕೆ ಹೋಗುತ್ತೇನೆ. ಕೊನೆಯಲ್ಲಿ ಸಿಕ್ಕಿಬೀಳುತ್ತೇನೆ" ಎಂದು ತಮ್ಮ ಪಾತ್ರದ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ ಶ್ರೀರಾಮ್.
"ಕೊನೆಯಲ್ಲಿ ನಾನು ಸಿಕ್ಕಿಕೊಂಡಾಗ ನಾನು ಯಾಕೆ ಕಾಟೇರನನ್ನು ಕಾಪಾಡುತ್ತೇನೆ ಎಂಬ ವಿಚಾರ ಹೊರಬರುತ್ತದೆ. ಶಾರ್ಟ್ ಆಗಿ ಹೇಳಬೇಕೆಂದರೆ ನಾನು ಸಣ್ಣವನಿರುವಾಗ ಒಂದು ಸಂದರ್ಭದಲ್ಲಿ ಕಾಟೇರನೇ ನನ್ನನ್ನು ಕಾಪಾಡಿರುತ್ತಾನೆ. ಮಾತ್ರವಲ್ಲ ನಾನು ಕಾನ್ಸ್ಟೇಬಲ್ ಆಗಿ ಭಡ್ತಿ ಪಡೆದಿದ್ದೇನೆ ಎಂದರೆ ಅದಕ್ಕೂ ಕಾರಣ ಕಾಟೇರ" ಎಂದು ಪಾತ್ರವನ್ನು ರಿವೀಲ್ ಮಾಡುತ್ತಾರೆ ಶ್ರೀರಾಮ್.

"ಕಾಟೇರ ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಸಣ್ಣದು. ಆದರೆ, ಇಡೀ ಸಿನಿಮಾದ ಕಥೆಗೆ ಟ್ವಿಸ್ಟ್ ನೀಡುವಂತಹ ಪಾತ್ರದಲ್ಲಿ ನಾನು ನಟಿಸುತ್ತಿರುವುದು ಖುಷಿ ತಂದಿದೆ. ಬಹುಶಃ ಈ ಒಂದು ಪಾತ್ರ ನನ್ನ ಸಿನಿ ಕೆರಿಯರ್ನಲ್ಲಿ ಬದಲಾವಣೆ ತಂದರೆ ಆಶ್ಚರ್ಯವೇನಿಲ್ಲ" ಎಂದು ಫಿಲ್ಮಿಬೀಟ್ ಜೊತೆಗೆ ಹೇಳುವ ಶ್ರೀರಾಮ್ ಕಾಸ್ಟಿಂಗ್ ನೋಡಿಕೊಳ್ಳುತ್ತಿದ್ದ, ಡೈರೆಕ್ಷನ್ ಡಿಪಾರ್ಟ್ಮೆಂಟ್ನಲ್ಲಿ ಇದ್ದ ಪ್ರಶಾಂತ್, ಕ್ಯಾಮೆರಾಮ್ಯಾನ್ ಸುಧಾಕರ್ ಅವರು ನನ್ನ ಪ್ರೊಫೈಲ್ ಅನ್ನು ತರುಣ್ ಅವರಿಗೆ ನೀಡಿದರು"ಎಂದು ಸಂದರ್ಶನದ ವೇಳೆ ಶ್ರೀರಾಮ್ ತಿಳಿಸಿದ್ದಾರೆ.
"ಪ್ರೋಫೈಲ್ ನೋಡಿದ ತರುಣ್ ಸುಧೀರ್ ಅವರು ನನ್ನನ್ನು ಮುಖತಃ ಭೇಟಿ ಮಾಡಲು ಕೇಳಿಕೊಂಡರು. ಭೇಟಿಯಾದಾಗ ಪಾತ್ರದ ಬಗ್ಗೆ ಸವಿವರವಾಗಿ ಹೇಳಿದರು. ಪಾತ್ರ ಇಷ್ಟವಾಗಿ ಒಪ್ಪಿಕೊಂಡ ಬಳಿಕ ಲುಕ್ ಟೆಸ್ಟ್ ಕೂಡಾ ನಡೆಯಿತು. ಅದರಲ್ಲಿಯೂ ನಾನು ಆಯ್ಕೆಯಾದೆ. ಆಮೇಲೆ ಶೂಟಿಂಗ್ ಶುರುವಾಯಿತು" ಎನ್ನುತ್ತಾರೆ. ಹಾಗಂತ ಇದು ಶ್ರೀರಾಮ್ ಅವರಿಗೆ ಇದು ಮೊದಲ ಸಿನಿಮಾವೇನಲ್ಲ.
ಈಗಾಗಲೇ 'ದಿ ಪ್ಲಾನ್', 'ದರ್ಪಣ', 'ಗಿಮಿಕ್' ಹಾಗೂ ತುಳುವಿನ 'ಪೆಟ್ಕಮ್ಮಿ' ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಶ್ರೀರಾಮ್ ಇದೀಗ 'ಕಾಟೇರ'ದ ಮೂಲಕ ಹಿರಿತೆರೆಯಲ್ಲಿ ಕಮಾಲ್ ಮಾಡಿದ್ದಾರೆ. 'ಕಾಟೇರ' ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಶ್ರೀರಾಮ್ ಅವರು ಕಾಣಿಸಿಕೊಂಡಿದ್ದಾರೆ ನಿಜ. ಆದರೆ, ಈ ಪಾತ್ರ ಅವರ ಸಿನಿ ವೃತ್ತಿ ಜೀವನಕ್ಕೆ ಒಂದು ಬ್ರೇಕ್ ನೀಡುವುದರಲ್ಲಿ ಸಂಶಯವಿಲ್ಲ.


Click it and Unblock the Notifications











