Srirasthu Shubhamasthu ; ಪೂರ್ಣಿಮಾಳನ್ನು ಅನಾಥಾಶ್ರಮದಿಂದ ಬಂದವಳು ಎಂದು ವ್ಯಂಗ್ಯವಾಡಿದ ದೀಪಿಕಾ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಹೇಳಿದ ಮಾತುಗಳನ್ನು ತುಳಸಿ ಮನಸಿಗೆ ಹಚ್ಚಿಕೊಂಡಿದ್ದಾರೆ. ಹೀಗಾಗಿ ಡ್ಯಾನ್ಸ್, ಡ್ರೈವಿಂಗ್ ಎಲ್ಲವನ್ನೂ ಕಲಿಯಲು ಮುಂದಾಗಿದ್ದಾಳೆ. ಡ್ರೈವಿಂಗ್ ಕ್ಲಾಸ್ ಗೆ ಸೇರಿಕೊಂಡಿರುವ ತುಳಸಿ, ಮನೆಯವರ ಬಳಿ ಸತ್ಯ ಹೇಳಿಲ್ಲ. ಬದಲಿಗೆ ಹೊರಗೆ ಹೋಗಿ ಬರುತ್ತೇನೆ ಎಂದು ನಿತ್ಯ ಸುಳ್ಳು ಹೇಳಿ ಹೋಗುತ್ತಿದ್ದಾಳೆ. ತುಳಸಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ದೀಪಿಕಾ ಕಂಡು ಆಶ್ಚರ್ಯಗೊಂಡಿದ್ದಾಳೆ. ಆದರೆ, ತುಳಸಿಯಲ್ಲಿನ ಖುಷಿಗೆ ಕಾರಣವೇನು ಎಂಬ ಸತ್ಯ ಗೊತ್ತಾಗದೇ ಪರದಾಡುತ್ತಿದ್ದಾಳೆ.
ಸಂಧ್ಯಾಳಿಗೆ ಸಂಪಾದಿಸಲು ಹೇಳಿದ ಜುಗ್ಗ ಮಾವ..!
ಇತ್ತ ಸಿರಿ ಕೆಲಸಕ್ಕಾಗಿ ಹುಡುಕಾಡುತ್ತಿದ್ದಳು. ಈಗ ಶಾಲೆಯಲ್ಲಿ ಕೆಲಸ ಸಿಕ್ಕಿದೆ. ಈ ವಿಚಾರವನ್ನು ಮನೆಯಲ್ಲಿ ಹೇಳಿಕೊಂಡು ಸಂತಸವನ್ನು ಹಂಚಿಕೊಂಡಿದ್ದಾಳೆ. ಸಿರಿಗೆ ಕೆಲಸ ಸಿಕ್ಕಿದ ಖುಷಿಯಿದ್ದು, ಜುಗ್ಗ ಮಾವನಿಗೆ ಹಣದ ಯೋಚನೆಯಾಗಿದೆ. ಹೀಗಾಗಿ ಸಂಧ್ಯಾಳಿಗೂ ಕೆಲಸಕ್ಕೆ ಹೋಗಿ ಹತ್ತು ಸಾವಿರ ಸಂಬಳ ಕೊಡಬೇಕು ಎಂದು ಕೇಳುತ್ತಾನೆ. ಸಂಧ್ಯಾಳಿಗೆ ಪೀಕಲಾಟ ಶುರುವಾಗಿದೆ. ಗಾರ್ಮೆಂಟ್ಸ್ ಗಾದರೂ ಹೋಗಿ ಹಣ ಸಂಪಾದಿಸು ಎಂದು ಜುಗ್ಗ ಮಾವ ಆರ್ಡರ್ ಮಾಡಿದ್ದಾರೆ. ಆದರೆ, ಸಂಧ್ಯಾ ಕೆಲಸಕ್ಕೆ ಹೋಗುತ್ತಾಳಾ..? ಇಲ್ಲವೇ ಅಣ್ಣನ ಜೇಬಿಗೆ ಕತ್ತರಿ ಹಾಕುತ್ತಾಳಾ ಎಂಬುದು ಗೊತ್ತಿಲ್ಲ.

ತುಳಸಿಗೆ ಗುರುವಾದ ಪೂರ್ಣಿಮಾ
ತುಳಸಿ ಕಾರು ಕಲಿಯುತ್ತಿದ್ದು, ಮನೆಗೆ ಬಂದು ಅದನ್ನೇ ಪ್ರ್ಯಾಕ್ಟೀಸ್ ಮಾಡುತ್ತಿದ್ದಾಳೆ. ಇದನ್ನು ತಿಳಿಯದ ಪೂರ್ಣಿಮಾ ಏನೂ ಕೇಳದೇ ಸುಮ್ಮನಾಗಿದ್ದಾಳೆ. ಇನ್ನು ರೂಮಿನಲ್ಲಿ ತುಳಸಿ ಭರತನಾಟ್ಯವನ್ನು ಕಲಿಯುತ್ತಿರುವುದನ್ನು ಕಂಡು ಆಶ್ಚರ್ಯ ಪಟ್ಟಿದ್ದಾಳೆ. ಪೂರ್ಣಿಮಾ ಏನು ಮಾಡುತ್ತಿದ್ದೀರಾ ಎಂದು ವಿಚಾರಿಸಿದ್ದಕ್ಕೆ, ಸತ್ಯ ಹೇಳುತ್ತಾಳೆ. ಅಭಿ ಹೇಳಿದಾಗಿನಿಂದ ನನಗೂ ಇದನ್ನೆಲ್ಲಾ ಕಲಿಯಬೇಕು ಎನಿಸುತ್ತಿದೆ. ಅದಕ್ಕೆ ಮೊಬೈಲ್ ನಲ್ಲಿ ನೋಡಿಕೊಂಡು ಡ್ಯಾನ್ಸ್ ಕಲಿಯುತ್ತಿದ್ದೇನೆ ಎಂದು ಹೇಳುತ್ತಾಳೆ. ಬಳಿಕ ಪೂರ್ಣಿಮಾಳನ್ನು ಡ್ಯಾನ್ಸ್ ಹೇಳಿಕೊಡು ಎಂದು ಕೇಳುತ್ತಾಳೆ. ಪೂರ್ಣಿಮಾ ಅಮ್ಮನ ಖುಷಿಯನ್ನು ನೋಡಿ, ಡ್ಯಾನ್ಸ್ ಹೇಳಿಕೊಡಲು ಒಪ್ಪುತ್ತಾಳೆ.

ಮಾತಿನಲ್ಲೇ ಹಂಗಿಸಿದ ದೀಪಿಕಾ
ಇತ್ತ ದೀಪಿಕಾ ಅವಕಾಶ ಸಿಕ್ಕಾಗಲೆಲ್ಲಾ ಪೂರ್ಣಿಮಾಳನ್ನು ಹಂಗಿಸುತ್ತಿರುತ್ತಾಳೆ. ನೀನು ಅನಾಥಾಶ್ರಮದಿಂದ ಬಂದವಳು. ನಿನ್ನ ಹೆತ್ತವರು ಯಾರೋ..? ನಿನ್ನ ರಕ್ತ ಯಾರದೋ..? ನಿನ್ನಿಂದ ನಿನ್ನ ತಂದೆ ತಾಯಿಗೆ ಎಷ್ಟೆಲ್ಲಾ ಸಮಸ್ಯೆ ಆಯಿತೋ. ನಿನಗೋಸ್ಕರ ನಿಮ್ಮ ಮನೆಯಲ್ಲಿ ಎಷ್ಟು ಕಷ್ಟ ಪಟ್ಟರೋ. ನೀನು ಅನಾಥೆ. ನಿನ್ನಂತಹ ಅನಾಥೆಗೆ ಇಷ್ಟು ದೊಡ್ಡ ಮನೆಯಲ್ಲಿ ಸೊಸೆಯ ಸ್ಥಾನ ಸಿಗಬಾರದಿತ್ತು ಎಂದೆಲ್ಲಾ ಹೀಯಾಳಿಸುತ್ತಾಳೆ. ಪದೇ ಪದೇ ಪೂರ್ಣಿಮಾಳಿಗೆ ಚುಚ್ಚಿ ಮಾತನಾಡಿಸುತ್ತಿರುತ್ತಾಳೆ. ಪೂರ್ಣಿಮಾಳಿಗೆ ಬೇಸರವಾಗುತ್ತದೆ. ಸೀದಾ ತುಳಸಿ ಬಳಿ ಹೋಗಿ, ನನಗೂ ಒಂದು ತವರು ಮನೆ ಇರಬೇಕಿತ್ತು. ನನ್ನವರು ಅಂತ ನನಗೆ ಯಾರೂ ಇಲ್ಲ. ನಾನು ಅನಾಥೆಯಾಗಬಾರದಿತ್ತು ಎಂದು ಅಳುತ್ತಾಳೆ. ಪೂರ್ಣಿಮಾ ಸಂಕಟವನ್ನು ಕಂಡು ತುಳಸಿ ಬೇಸರ ಮಾಡಿಕೊಳ್ಳುತ್ತಾಳೆ.

ಶಾರ್ವರಿಯನ್ನು ಆಡಿಸುತ್ತಿರುವ ಮಹೇಶ
ಮಹೇಶ್ ಗೆ ಎಲ್ಲಾ ನೆನಪಿದ್ದರೂ ಕೂಡ ಬೇಕಂತಲೇ ನಾಟಕ ಮಾಡುತ್ತಿದ್ದಾನೆ. ಶಾರ್ವರಿ ಜೊತೆಗೆ ಮಾತನಾಡುತ್ತಾ, ಮನೆಯನ್ನು ಒಡೆಯುವ ಯೋಚನೆ ಮಾಡಿದ್ದೀಯಾ. ನಿನಗೆ ತುಳಸಿ ಅತ್ತಿಗೆ ಮತ್ತು ಪೂರ್ಣಿಮಾ ಎಂದರೆ ಇಷ್ಟವಿಲ್ಲ ಎಂದು ಪ್ರಶ್ನಿಸುತ್ತಾನೆ. ಶಾರ್ವರಿಗೆ ಮಹೇಶನ ಮಾತುಗಳು ಕೇಳಿ ಶಾಕ್ ಆಗುತ್ತದೆ. ಮಹೇಶ ಶಾರ್ವರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ಆದರೆ, ತನಗೆ ಎಲ್ಲಾ ಸತ್ಯವೂ ಗೊತ್ತಿದೆ ಎಂಬ ಸತ್ಯವನ್ನು ಮಾತ್ರ ಹೇಳಿಲ್ಲ. ಮಹೇಶ್ ಗೆ ಎಲ್ಲಾ ನೆನಪಿರುವುದು ಗೊತ್ತಾಗದಿದ್ದರೂ, ಮುಂದೆ ಶಾರ್ವರಿ ಮಾಡಿದ ತಪ್ಪುಗಳನ್ನು ಮಹೇಶನೇ ಬಯಲಿಗೆಳೆಯುವುದು ಪಕ್ಕಾ ಆಗಿದೆ.


Click it and Unblock the Notifications