Srirastu Shubhamastu ; ಪೂರ್ಣಿಮಾ ತಂದೆ ತಾಯಿ ಬಗ್ಗೆ ಮಾಧವ ಗೆ ಗೊತ್ತಿರುವ ರಹಸ್ಯ ಏನು.?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾ ಆಗಾಗ ಪೂರ್ಣಿಮಾಳನ್ನು ನೀನು ಅನಾಥೆ ಎಂದು ಛೇಡಿಸುತ್ತಿರುತ್ತಾಳೆ. ಇದರಿಂದ ಪೂರ್ಣಿಮಾಗೆ ಬೇಸರವಾಗಿದೆ. ಆದರೆ, ಪೂರ್ಣಿಮಾ ತನಗೆ ದೀಪಿಕಾ ಮಾಡುತ್ತಿರುವ ನೋವನ್ನು ಹೇಳಿಕೊಳ್ಳದೇ, ತುಳಸಿ ಬಳಿ ತನಗೂ ತವರು ಮನೆ ಇರಬೇಕಿತ್ತು. ಅಲ್ಲಿ, ಅಪ್ಪ, ಅಮ್ಮ, ಅಣ್ಣ, ತಂಗಿ ಎಲ್ಲರೂ ಇರಬೇಕಿತ್ತು ಎಂದು ಕಣ್ಣಿರು ಹಾಕಿದ್ದಾಳೆ.
ಒಳ್ಳೆ ಮನಸ್ಸಿರುವ ಪೂರ್ಣಿಮಾ ಕಣ್ಣಿರು ಹಾಕಿದ್ದಕ್ಕೆ ಬೇಸರ ಮಾಡಿಕೊಳ್ಳುವ ತುಳಸಿ, ಅವಳಿಗೆ ತವರು ಮನೆ ಇದೆ ಎಂಬುದನ್ನು ತೋರಿಸಬೇಕು. ಪೂರ್ಣಿಮಾ ನೋವನ್ನು ಕಡಿಮೆ ಮಾಡಬೇಕು ಎಂದು ಭಾವಿಸುತ್ತಾಳೆ.
ಪೂರ್ಣಿ ತವರು ಮನೆಗೆ ಹೊರಟ ತುಳಸಿ
ಹೀಗಾಗಿ ಬೆಳಗ್ಗೆ ಬೆಳಗ್ಗೆಯೇ ಎದ್ದು ತುಳಸಿ ರೆಡಿಯಾಗಿ ಪೂರ್ಣಿಮಾಳನ್ನು ತವರು ಮನೆಗೆ ಹೋಗೋಣ ಬಾ ಎಂದು ಕರೆಯುತ್ತಾರೆ. ಆಗ ಪೂರ್ಣಿಮಾಳಿಗೆ ಶಾಕ್ ಆಗುತ್ತದೆ. ಪೂರ್ಣಿಮಾ ಜೊತೆಗೆ ಅವಿನಾಶ್ ಕೂಡ ಹೊರಡುತ್ತಾನೆ. ಪೂರ್ಣಿಮಾ ಮತ್ತು ಅವಿ ಇಬ್ಬರನ್ನೂ ಅನಾಥಾಶ್ರಮಕ್ಕೆ ಕರೆದುಕೊಂಡು ತುಳಸಿ ಬರುತ್ತಾಳೆ. ನೀನು ಓದಿ ಬೆಳೆದ ಈ ಅನಾಥಾಶ್ರಮವೇ ನಿನ್ನ ತವರು ಮನೆ ಎಂದು ಹೇಳುತ್ತಾಳೆ. ಅನಾಥಾಶ್ರಮದವರು ಕೂಡ ಪೂರ್ಣಿಮಾಳಿಗೆ ಸಮಾಧಾನ ಮಾಡುತ್ತಾರೆ. ಪೂರ್ಣಿಮಾ ಕೂಡ ಹಲವು ವರ್ಷಗಳ ಬಳಿಕ ಅನಾಥಾಶ್ರಮಕ್ಕೆ ಹೋಗಿದ್ದರಿಂದ ಅಲ್ಲಿಯ ವಾತಾವರಣ ಕಂಡು ಖುಷಿಯಾಗುತ್ತಾಳೆ.

ಪೂರ್ಣಿಮಾ ಹಿನ್ನೆಲೆ ರಹಸ್ಯ
ಅನಾಥಾಶ್ರಮದವರು ಪೂರ್ಣಿಮಾಳಿಗೆ ಮಡಿಲು ತುಂಬುತ್ತಾರೆ. ಇದೇ ನಿನ್ನ ತವರು ಮನೆ, ಯಾವಾಗ ಬೇಕಿದ್ದರೂ ಬಾ ಎಂದು ಹೇಳುತ್ತಾರೆ. ಅಷ್ಟರಲ್ಲಿ ತುಳಸಿಗೆ ಫೋನ್ ಮಾಡಿ ಮಾಧವ ಎಲ್ಲಿದ್ದೀರಾ ಎಂದು ಕೇಳಿದಾಗ ಅನಾಥಾಶ್ರಮದಲ್ಲಿರುವ ವಿಚಾರವನ್ನು ಹೇಳುತ್ತಾಳೆ. ಗಾಬರಿಯಾಗುವ ಮಾಧವ ಅಲ್ಲಿಗೆ ಓಡಿ ಬರುತ್ತಾನೆ. ತುಳಸಿ ಆಶ್ರಮದವರ ಬಳಿ ಪೂರ್ಣಿಮಾ ತಂದೆ ತಾಯಿ ಹಾಗೂ ಅವಳನ್ನು ಆಶ್ರಮಕ್ಕೆ ಸೇರಿಸಿದವರು ಯಾರು ಎಂದು ಕೇಳುತ್ತಾಳೆ. ತುಳಸಿ ಕೇಳಿದ ಪ್ರಶ್ನೆಗೆ ಏನು ಉತ್ತರ ಹೇಳಬೇಕು ಎಂದು ಯೋಚಿಸುವ ವೇಳೆಗೆ ಬರುವ ಮಾಧವ ಏನನ್ನೂ ಹೇಳಬಾರದು ಎಂದು ಸನ್ನೆ ಮಾಡುತ್ತಾರೆ. ಮಾಧವ ಸನ್ನೆ ಮಾಡಿದ್ದನ್ನು ತುಳಸಿ ಗಮನಿಸುತ್ತಾಳೆ. ಆಶ್ರಮದವರು ಕೂಡ ಪೂರ್ಣಿ ಹಿನ್ನೆಲೆ ನಮಗೆ ಗೊತ್ತಿಲ್ಲ ಎಂದು ಹೇಳುತ್ತಾರೆ. ಅಲ್ಲಿಗೆ ಪೂರ್ಣಿಮಾ ಅನಾಥಾಶ್ರಮದಲ್ಲಿ ಬೆಳೆಯುವ ಮುನ್ನವೇ ಮಾಧವಗೆ ಗೊತ್ತಿದ್ದಳು ಎಂಬ ಸತ್ಯ ರಿವೀಲ್ ಆಗಿದ್ದು, ಪೂರ್ಣಿಮಾ ಯಾರು ಎಂಬುದು ಗೊತ್ತಾಗಬೇಕಿದೆ.
ಕೆಲಸ ಹುಡುಕಿಕೊಂಡು ಹೊರಟ ಸಂಧ್ಯಾ
ಜುಗ್ಗ ಮಾವನ ಆರ್ಡರ್ ಮೇಲೆ ಸಂಧ್ಯಾ ಕೆಲಸ ಹುಡುಕಿಕೊಂಡು ಗಾರ್ಮೆಂಟ್ಸ್ ಗೆ ಬಂದಿದ್ದಾಳೆ. ಮ್ಯಾನೇಜರ್ ಎದುರು ಕುಳಿತು, ರೆಸ್ಯೂಮ್ ಇಲ್ಲ. ಒಳ್ಳೆಯ ಸಂಬಳ ಬರುವ ಕೆಲಸದ ಮಾಹಿತಿ ಕೊಡಿ ಎಂದು ಧಿಮಾಕಿನಿಂದ ಕೇಳುತ್ತಾಳೆ. ಮ್ಯಾನೇಜರ್ ಪೋಸ್ಟ್ ಗೆ ಅತಿ ಹೆಚ್ಚು ಸಂಬಳ ಎಂಬುದನ್ನು ತಿಳಿದು ಹುಚ್ಚಿಯಂತೆ ಮಾತನಾಡುತ್ತಾಳೆ. ಮ್ಯಾನೇಜರ್ ಅವಳನ್ನು ಆಫೀಸ್ ನಿಂದ ಹೊರಗೆ ಕಳಿಸುತ್ತಾನೆ.

ಕಷ್ಟ ಪಡದೇ ಹಣ ಮಾಡುತ್ತಾಳಾ ಸಂಧ್ಯಾ
ಸಿರಿ ಸ್ಕೂಲ್ ಕೆಲಸ ಮುಗಿಸಿ ಮನೆಗೆ ಬಂದು ಟ್ಯೂಷನ್ ಕೂಡ ಮಾಡುತ್ತಿರುತ್ತಾಳೆ. ಇದೇ ಸಮಯಕ್ಕೆ ಸಂಧ್ಯಾ ಬರುತ್ತಾಳೆ. ಮುದ್ದು ಸೊಸೆಗೆ ಕೆಲಸ ಸಿಕ್ಕಿದೆ ಎಂದು ಖುಷಿಯಿಂದ ಜುಗ್ಗ ಮಾವ ಮಾತನಾಡಿದಾಗ ಸಂಧ್ಯಾ ನನಗೆ ಕಷ್ಟ ಪಡದೇ ಹಣ ಮಾಡುವುದು ಹೇಗೆ ಎಂಬ ಯೋಚನೆ ಬಂದಿದೆ. ಯಾರಾದರೂ ಎರಡು ಕೋಟಿ ಹಣವನ್ನು ಬೀಳಿಸಿಕೊಂಡು ಹೋದರೆ, ಅದು ನನಗೆ ಸಿಕ್ಕರೆ ಚೆನ್ನಾಗಿರುತ್ತಲ್ವಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ದತ್ತ ತಾತನಿಗೆ ನಗು ಬರುತ್ತದೆ.


Click it and Unblock the Notifications











