Shrirasthu Shubhamasthu: ತುಳಸಿಗೆ ಆಪತ್ತು ತಂದ ಔಷಧಿ: ಅಮ್ಮನ ಪರ ನಿಂತ ಮಗ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಿರಿ ಮನೆ ಖರ್ಚಿನ ಹಣದಲ್ಲಿ ಸಮರ್ಥ್ ಗೆ ವ್ಯಾಲೆಂಟೈನ್ ಉಡುಗೊರೆ ತಂದುಕೊಟ್ಟಿದ್ದು, ಈಗ ಅಡುಗೆ ಮನೆಯ ರೇಷನ್ ಗೆ ದತ್ತ ತಾತನ ಬಳಿ ಸಾಲ ತೆಗೆದುಕೊಳ್ಳುವಂತಾಗಿದೆ. ಕಷ್ಟವಿದ್ದರೂ ಕೂಡ ಸಮರ್ಥ್ ಮತ್ತು ಸಿರಿ ಅರ್ಥ ಮಾಡಿಕೊಂಡು ಖುಷಿ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಇವರಿಬ್ಬರಿಗೆ ದತ್ತ ತಾತ ಕೂಡ ಜೊತೆಯಾಗಿ ನೆಮ್ಮದಿಯಾಗಿದ್ದಾರೆ. ಆದರೆ, ಮಾಧವ ಮನೆಯಲ್ಲಿ ಮಾತ್ರ ಒಂದೊಂದು ಮನಸುಗಳು ಒಂದೊಂದು ರೀತಿಯಲ್ಲಿ ಆಲೋಚಿಸುತ್ತಿವೆ. ಈಗ ದೀಪಿಕಾ ಪೂರ್ಣಿಮಾ ಮೇಲಿನ ಕೋಪವನ್ನು ತೋರಿಸುತ್ತಿದ್ದಾಳೆ.
ಪೂರ್ಣಿ ಔಷಧಿಗೆ ವಿಷ ಬೆರೆಕೆ
ದೀಪಿಕಾ ಮನೆಯ ಕೆಲಸದವಳು ಲಕ್ಷ್ಮೀಗೆ ಹೇಳಿ ಪೂರ್ಣಿಮಾ ಮಕ್ಕಳಾಗಲೆಂದು ತೆಗೆದುಕೊಳ್ಳುತ್ತಿರುವ ಔಷಧಿಯಲ್ಲಿ ವಿಷವನ್ನು ಬೆರೆಸಿದ್ದಾಳೆ. ಶಾರ್ವರಿ ಕೂಡ ಇವರಿಬ್ಬರ ಜೊತೆಗೆ ಕೈ ಜೋಡಿಸಿದ್ದಾಳೆ. ಪೂರ್ಣಿಮಾಳಿಗೆ ಮಕ್ಕಳಾಗಬಾರದು. ಮಗುವಾದರೆ, ಮಾಧವ ಮೊಗದಲ್ಲಿ ಸಂತಸ ಮೂಡುತ್ತದೆ ಎಂಬುದು ಶಾರ್ವರಿ ಆಲೋಚನೆಯಾದರೆ, ತುಳಸಿ ಮೇಲೆ ಆರೋಪ ಮಾಡಬಹುದು ಎಂಬುದು ದೀಪಿಕಾ ಆಲೋಚನೆ. ಒಟ್ನಲ್ಲಿ ಮನೆಯಲ್ಲಿ ಶಾರ್ವರಿ, ದೀಪಿಕಾ ಇಬ್ಬರೂ ಮಾಧವ ಮತ್ತು ತುಳಸಿ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ಅವಿ ಮತ್ತು ಅಭಿ ಇವರಿಬ್ಬರನ್ನು ತಂದೆ ತಾಯಿ ಎಂದು ಒಪ್ಪಿಕೊಳ್ಳದೇ ಇರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.

ಔಷಧಿ ಕುಡಿದು ಒದ್ದಾಡಿದ ಪೂರ್ಣಿಮಾ
ಇನ್ನು ತುಳಸಿ ಮತ್ತು ಪೂರ್ಣಿ , ಅಭಿ ಮದುವೆಯ ಫೋಟೋಗಳನ್ನು ನೋಡುತ್ತಾ ಕುಳಿತಿರುತ್ತಾರೆ. ಆಗ ತುಳಸಿ ಪೂರ್ಣಿಗೆ ಪಂಡಿತರು ನೀಡಿರುವ ಔಷಧಿಯನ್ನು ನೀಡುತ್ತಾಳೆ. ಇದನ್ನು ಕುಡಿದ ಸ್ವಲ್ಪ ಹೊತ್ತಿಗೆ ಪೂರ್ಣಿಮಾಳಿಗೆ ಹೊಟ್ಟೆ ನೋವು ಶುರುವಾಗುತ್ತದೆ. ತಕ್ಷಣವೇ ಅಭಿಯನ್ನು ಕರೆದು ವೈದ್ಯರಿಗೆ ಬರಲು ಹೇಳುತ್ತಾರೆ. ವೈದ್ಯರು ವಿಚಾರಿಸಿದಾಗ ತುಳಸಿ ,ಪಂಡಿತರು ನೀಡಿದ ಔಷಧಿ ಬಗ್ಗೆ ಹೇಳುತ್ತಾಳೆ. ಅದನ್ನು ಲ್ಯಾಬ್ ಗೆ ಕಳುಹಿಸಲಾಗುತ್ತದೆ. ಪೂರ್ಣಿಮಾ ಹೊಟ್ಟೆ ನೋವಿನಿಂದ ಒದ್ದಾಡುತ್ತಿರುತ್ತಾಳೆ. ಆ ಔಷಧಿಯಲ್ಲಿ ವಿಷವಿತ್ತು ಎಂಬ ವಿಚಾರ ಖಚಿತಪಡಿಸಿಕೊಂಡ ವೈದ್ಯರು ಮನೆಯಲ್ಲಿ ತಿಳಿಸುತ್ತಾರೆ.

ತುಳಸಿ ಮೇಲೆ ಆರೋಪಿಸಿದ ಅಭಿ, ಅವಿ
ಆಗ ಮನೆಯವರಿಗೆಲ್ಲಾ ಶಾಕ್ ಆಗುತ್ತದೆ. ತುಳಸಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಅಭಿ ಬೇಕಂತಲೇ ತುಳಸಿಯನ್ನು ಬೈಯಲು ಪ್ರಾರಂಭಿಸುತ್ತಾನೆ. ಅತ್ತಿಗೆ ತುಂಬಾ ಒಳ್ಳೆಯವರು. ಅವರಿಗೆ ಹೀಗೆಲ್ಲಾ ಆಗಲು ನೀವೇ ಕಾರಣ ಎಂದು ಆರೋಪ ಮಾಡುತ್ತಾನೆ. ತುಳಸಿ ತಾನು ಮಾಡಿದ್ದೆಲ್ಲವೂ ಒಳ್ಳೆಯದಕ್ಕೆ. ಪೂರ್ಣಿಮಾ ಚೆನ್ನಾಗಿ ಇರಬೇಕೆಂಬುದು ತನ್ನ ಆಸೆ ಎಂದು ಸಮರ್ಥಿಸಿಕೊಳ್ಳಲು ಯತ್ನಿಸುತ್ತಾಳೆ. ಆದರೆ, ಅಭಿ ಕೇಳುವುದಿಲ್ಲ. ಅವಿ ಕೂಡ ಆಫೀಸಿನಿಂದ ಮನೆಗೆ ಬಂದ ಕೂಡಲೇ ಗಾಬರಿಯಾಗುತ್ತಾನೆ. ಪೂರ್ಣಿಮಾಳಿಗೆ ಯಾಕೆ ಹೀಗೆಲ್ಲಾ ಆಗುತ್ತಿದೆ ಎಂದು ಆತಂಕ ಪಡುತ್ತಾನೆ. ಅಭಿ ಮಾತು ಕೇಳಿದ ಅವಿಗೂ ತುಳಸಿ ಮೇಲೆ ಕೋಪ ಬರುತ್ತದೆ.

ತುಳಸಿ ಪರ ಸಮರ್ಥ್ ಮಾತು
ಪೂರ್ಣಿಮಾಳಿಂದ ದೂರ ಇರುವಂತೆ ಅವಿ ಹಾಗೂ ಅಭಿ ಹೇಳುತ್ತಾರೆ. ಮಾಧವ ತುಳಸಿಯನ್ನು ವಹಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಇನ್ನು ಅಭಿ ತುಳಸಿಗೆ ಬೈಯುತ್ತಿರುವುದನ್ನು ಕೇಳಿಸಿಕೊಂಡ ಸಮರ್ಥ್ ಜಗಳ ಮಾಡುತ್ತಾನೆ. ಅವರ ಬಗ್ಗೆ ಹಾಗೆಲ್ಲಾ ಮಾತನಾಡಬೇಡ. ಒಬ್ಬರಿಗೆ ಒಳ್ಳೆಯದನ್ನು ಮಾಡುವಂತವರೇ ಹೊರತು ಯಾರಿಗೂ ಕೇಡು ಬಯಸುವುದಿಲ್ಲ ಎಂದು ಸಮರ್ಥ್ ಹೇಳುತ್ತಾನೆ. ಅಭಿ ಮತ್ತು ಸಮರ್ಥ್ ಮತ್ತೆ ಜಗಳ ಮಾಡಲು ಶುರು ಮಾಡುತ್ತಾರೆ. ಅಷ್ಟರಲ್ಲಿ ಮಹೇಶ್ ಮಧ್ಯ ಪ್ರವೇಶಿಸುತ್ತಾರೆ. ಸಮರ್ಥ್ ತನ್ನ ಪರ ಮಾತನಾಡುತ್ತಿರುವುದಕ್ಕೆ ತುಳಸಿಗೆ ಖುಷಿಯಾಗುತ್ತದೆ. ಆದರೆ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬುದು ಅರ್ಥವಾಗದೇ ಸುಮ್ಮನಾಗಿದ್ದಾಳೆ.


Click it and Unblock the Notifications











