Srirasthu Shubhamasthu ; ಮನೆ ಭಾಗ ಮಾಡಲು ಲಾಯರ್ ಬಂದಾಯ್ತು: ಇಬ್ಬಾಗವಾಗುತ್ತಾ ಕುಟುಂಬ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಮನೆ ಭಾಗ ಕೇಳುವ ವಿಚಾರವನ್ನು ಸುಮ್ಮನಾಗಿಸಿ ಬಿಟ್ಟಿದ್ದಾನೆ. ಹೀಗೆ ಬಿಟ್ಟರೆ, ಈ ಮನೆ ಭಾಗ ಆಗುವುದಿಲ್ಲ ಎಂದು ದೀಪಿಕಾ ಆತಂಕಕ್ಕೆ ಒಳಗಾಗಿದ್ದಾಳೆ. ಅಭಿಯನ್ನು ನಂಬಿದರೆ ಯಾವ ಕೆಲಸವೂ ಆಗುವುದಿಲ್ಲ. ಅಭಿಯೇ ಮನೆ ಭಾಗ ಮಾಡುತ್ತಿದ್ದಾನೆ ಎಂಬಂತೆ ನಾವು ಬಿಂಬಿಸಿ, ಎಲ್ಲಾ ಕೆಲಸವನ್ನು ನಾವೇ ಮಾಡಬೇಕು ಎಂದು ಶಾರ್ವರಿ ಹೇಳುತ್ತಾಳೆ. ಶಾರ್ವರಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದು, ದೀಪಿಕಾಳ ಬಳಿ ಅದನ್ನು ಜಾರಿಗೆ ತರುವಂತೆ ಬಿಡಿಸಿ ಹೇಳುತ್ತಾಳೆ. ದೀಪಿಕಾ ಕೂಡ ಮನೆಯ ಭಾಗ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾಳೆ.
ತುಳಸಿಯನ್ನು ಹೊಗಳಿದ ಮಾಧವ್
ಚೌಧರಿ ಮುಂದೆ ತುಳಸಿ ಇಂಗ್ಲೀಷ್ ಮಾತನಾಡಿದ್ದು, ಮಾಧವ್ ಗೆ ಖುಷಿ ತಂದಿದೆ. ಅಲ್ಲದೇ, ತುಳಸಿ ಅಭಿಗೋಸ್ಕರ ಡ್ಯಾನ್ಸ್ ಕಲಿತಿದ್ದು, ಕಾರ್ ಡ್ರೈವಿಂಗ್ ಕಲಿತಿದ್ದು, ಈಗ ಇಂಗ್ಲೀಷ್ ಮಾತನಾಡುತ್ತಿರುವುದಕ್ಕೆ ತುಳಸಿಯನ್ನು ಹೊಗಳಿದ್ದಾನೆ. ಈ ವಯಸ್ಸಲ್ಲಿ ಕಲಿಕೆಗೆ ಕೊನೆಯಿಲ್ಲ ಎಂಬಂತೆ ಸಾಧಿಸಿರುವ ತುಳಸಿಯನ್ನು ಕಂಡು ಬೆರಗಾಗಿದ್ದಾನೆ. ಮೊದಲಿಗಿಂತಲೂ ತುಳಸಿ ಮೇಲಿನ ಪ್ರೀತಿ ಗೌರವವನ್ನು ಹೆಚ್ಚಿಸಿಕೊಂಡಿದ್ದಾನೆ. ತುಳಸಿಗೂ ಕೂಡ ತಾನು ಮಾಡಿರುವ ಸಾಧನೆಯ ಬಗ್ಗೆ ಹೆಮ್ಮೆಯಿದ್ದು, ಕೊಂಚವೂ ಅಹಂಕಾರ ತೋರದೇ ನಾನು ಕಲಿಯುವುದು ಇನ್ನೂ ಬಹಳಷ್ಟಿದೆ ಎಂದು ಭಾವಿಸಿದ್ದಾಳೆ.

ಅಭಿ ಬಳಿ ರಿಕ್ವೆಸ್ಟ್ ಮಾಡಿಕೊಂಡ ತುಳಸಿ
ತುಳಸಿ ಅಭಿ ಒಬ್ಬನೇ ಇರುವಾಗ ಬರುತ್ತಾಳೆ. ನನ್ನಿಂದ ನಿನ್ನ ನೆಮ್ಮದಿ ಹಾಳಾಗಿದೆ. ಇನ್ಮುಂದೆ ಅದಕ್ಕೆ ನಾನು ಅವಕಾಶ ಮಾಡಿಕೊಡುವುದಿಲ್ಲ. ಇವತ್ತು ರಾತ್ರಿಯೇ ನಾನು ಮನೆ ಬಿಟ್ಟು ಹೋಗುತ್ತೇನೆ. ನಿನ್ನಿಂದ ಈ ಮನೆ ಭಾಗವಾಗುವುದು ಬೇಡ. ನೀನು ಮತ್ತು ಈ ಮನೆಯವರೆಲ್ಲರೂ ಸದಾಕಾಲ ಒಟ್ಟಿಗೆ ಇರಬೇಕು. ಈ ಕುಟುಂಬ ಖುಷಿ ಖುಷಿಯಾಗಿ ಇರಬೇಕು. ನಾನು ಹೋಗುತ್ತಿರುವ ಬಗ್ಗೆ ಯಾರಿಗೂ ಹೇಳುವುದಿಲ್ಲ. ಮನೆಯನ್ನು ಯಾವುದೇ ಕಾರಣಕ್ಕೂ ಭಾಗ ಮಾಡಬೇಡ ಎಂದು ತುಳಸಿ ಹೇಳುತ್ತಾಳೆ. ಈ ಮಾತನ್ನು ಕೇಳಿದ ಅಭಿ ಮನಸ್ಸು ಚಂಚಲಗೊಳ್ಳುತ್ತದೆ.
ತಮ್ಮನನ್ನು ಉಳಿಸಿಕೊಳ್ಳಲು ಅವಿ ಪ್ಲಾನ್
ಇನ್ನು ಅಭಿ ಒಬ್ಬನೇ ಇದ್ದಾಗ ಅವಿನಾಶ್ ಬಂದು ಮಾತನಾಡುತ್ತಾನೆ. ಈ ಮನೆಯನ್ನು ಯಾವುದೇ ಕಾರಣಕ್ಕೂ ಭಾಗ ಮಾಡಬೇಡ. ಈ ಮನೆಯಲ್ಲಿ ಇನ್ಮುಂದೆ ನೀನು ಹೇಳಿದಂತೆಯೇ ಎಲ್ಲವೂ ನಡೆಯಲಿ. ನನ್ನ ಭಾಗ ಏನಿದೆಯೋ ಅದನ್ನೂ ನಾನು ನಿನಗೇ ಬರೆದು ಕೊಡುತ್ತೇನೆ. ಆದರೆ, ದಯವಿಟ್ಟು ಭಾಗ ಮಾಡಬೇಡ. ನಿನ್ನ ಕಂಪನಿಯಲ್ಲೇ ನಾನು ಕೆಲಸ ಮಾಡುತ್ತೇನೆ. ನನಗೆ ಅದರಲ್ಲಿ ಖುಷಿಯಿದೆ. ಆದರೆ, ನಿನ್ನಿಂದ ದೂರ ಇರುವ ಶಕ್ತಿ ಈ ಮನೆಯಲ್ಲಿ ಯಾರಿಗೂ ಇಲ್ಲ. ನಿನ್ನ ಜೊತೆಗೆ ಇರಲು ಅವಕಾಶ ಮಾಡಿಕೊಡು ಅಭಿ ಎಂದು ತಬ್ಬಿಕೊಂಡು ಭಾವುಕ ಆಗುತ್ತಾನೆ ಅವಿ. ಅಣ್ಣನ ಮಾತುಗಳನ್ನು ಕೇಳಿದ ಅಭಿ ಮೂಕವಿಸ್ಮಿತನಾಗುತ್ತಾನೆ.

ಮನೆ ಭಾಗ ಮಾಡಲು ಬಂದ ಲಾಯರ್
ದೀಪಿಕಾ ತನ್ನ ತಂದೆಯ ಸಹಾಯದಿಂದ ಲಾಯರ್ ಕರೆಸಿದ್ದಾಳೆ. ಇಡೀ ಮನೆಯ ಆಸ್ತಿ, ಚರಾಸ್ತಿ, ಬ್ಯಾಂಕ್ ಬ್ಯಾಲೆನ್ಸ್ , ಒಡವೆ ಎಲ್ಲವನ್ನೂ ಲೆಕ್ಕ ಮಾಡಿರುವ ಲಾಯರ್ ಅಭಿ ಪಾಲಿಗೆ ಎಷ್ಟು ಭಾಗ ಸಿಗುತ್ತದೆ ಎಂಬುದನ್ನೂ ಹಾಳೆಗಳಲ್ಲಿ ಸಿದ್ಧಪಡಿಸಿಕೊಂಡು ಬಂದಿದ್ದಾನೆ. ಲಾಯರ್ ಬಂದಿದ್ದನ್ನು ನೋಡಿದ ಮನೆಯವರೆಲ್ಲಾ ಕಂಗಾಲಾಗಿದ್ದಾರೆ. ಮಾಧವ್ ಈ ಮನೆ ಭಾಗ ಆಗಲೇಬೇಕ ಎಂದು ಕೊರಗಿದ್ದಾನೆ. ಅಭಿ ಏನೆಲ್ಲಾ ಕೇಳುತ್ತಾನೋ ಅದೆಲ್ಲವನ್ನೂ ಅವನಿಗೆ ಕೊಡಿ ನನಗೇನು ಬೇಡ ಎಂದು ಮಾಧವ್ ಹೇಳುತ್ತಾನೆ. ಅವಿಯೂ ಕೂಡ ಇದೇ ಮಾತನ್ನು ಹೇಳುತ್ತಾನೆ, ಈಗ ಅಭಿ ಏನು ಮಾಡುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











