ಸಮರ್ಥ್-ಸಿರಿ ಮದುವೆಯನ್ನು ಒಪ್ಪಿಕೊಂಡರಾ ದತ್ತ ತಾತ?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಮತ್ತು ಸಿರಿ ಇಬ್ಬರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಈ ವಿಚಾರ ತಿಳಿದ ದತ್ತ ತಾತ ಸಾಯುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ರೂಮ್ ಬಾಗಿಲನ್ನು ಕ್ಲೋಸ್ ಮಾಡಿಕೊಂಡಿದ್ದಾರೆ.
ಎಲ್ಲರೂ ತಾತನ ಬಗ್ಗೆ ಹೆದರಿಕೊಂಡಿದ್ದರೆ, ತುಳಸಿಗೆ ಭಯವಿಲ್ಲ. ಅವಳಿಗೆ ಅವರ ತಾತನ ಬಗ್ಗೆ ಚೆನ್ನಾಗಿ ಗೊತ್ತಿದ್ದು, ಕೋಪ ತಣ್ಣಗಾದ ಮೇಲೆ ಬರುತ್ತಾರೆ ಎಂದು ನಂಬಿದ್ದಾಳೆ. ಹಾಗಾಗಿ ಸಿರಿ ಮತ್ತು ಸಮರ್ಥ್ ಗೆ ಆರತಿ ಮಾಡಿ ಮನೆ ತುಂಬಿಸಿಕೊಂಡಿದ್ದಾಳೆ.
ತಾತನಿಗೆ ಮೊಮ್ಮಗನಿಗಿಂತಲೂ ತುಳಸಿ ಮೇಲೆ ಹೆಚ್ಚು ಕೋಪವಿದೆ. ತುಳಸಿ ನನ್ನ ಮಾತನ್ನು ಮೀರಿ ಮೊಮ್ಮೊಗನ ಮದುವೆ ಮಾಡಿದಳು ಎಂದು ಸಿಟ್ಟಾಗಿದ್ದಾನೆ. ಸಿರಿ ಹಾಗೂ ಸಮರ್ಥ್ ಮನೆಯೊಳಗೆ ಬಂದರೂ ತಾತ ರೂಮಿನಿಂದ ಆಚೆ ಬರುವುದಿಲ್ಲ.

ತಾತನಿಗೆ ಬೇಸರ
ತುಳಸಿ ದೇವರ ಮನೆಯಲ್ಲಿ ದೀಪ ಹಚ್ಚುವಂತೆ ಸಿರಿಗೆ ಹೇಳುತ್ತಾಳೆ. ಸಿರಿ ದೀಪ ಹಚ್ಚಿದ ಮೇಲೆ ತುಳಸಿ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಾಳೆ. ನಂತರ ಇತರರ ಕಾಲಿಗೂ ಬಿದ್ದು ಆಶೀರ್ವಾದ ಪಡೆಯುತ್ತಾಳೆ. ಇದನ್ನು ತಿಳಿದ ತಾತ ರೂಮಿನಲ್ಲೇ ಕೂತು ದೇವರ ಆಶೀರ್ವಾದ ಸಿಗಲಿಲ್ಲ ಅಂದ್ರೂ ಪೂಜಾರಿಗಳೆಲ್ಲಾ ಆಶೀರ್ವಾದ ಮಾಡಾಯ್ತು ಎಂದು ವ್ಯಂಗ್ಯವಾಡುತ್ತಿರುತ್ತಾರೆ. ಸಿರಿ ತಂದೆ ಸಮರ್ಥ್ ತಾತ ಇನ್ನೂ ರೂಮಿನಿಂದ ಹೊರಗೆ ಬರಲಿಲ್ಲ ಎಂದು ಆತಂಕವನ್ನು ವ್ಯಕ್ತಪಡಿಸುತ್ತಾರೆ. ಆಗ ತುಳಸಿ ತಮ್ಮ ಮಾವನ ಬಗ್ಗ ಗುಣಗಾನ ಮಾಡುತ್ತಾಳೆ.

ಭಯವಲ್ಲ, ಅದು ಭಕ್ತಿ..
ನನಗೆ ನನ್ನ ಮಾವ ಎಂದರೆ ಭಯವಿಲ್ಲ, ಅವರು ಎಂದರೆ ಭಕ್ತಿ. ನನ್ನ ಗಂಡ ಹೋದಾಗ ನನ್ನ ಕೈಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದರು. ದಿಕ್ಕು ಕಾಣದೇ ಕಂಗಾಲಾಗಿದ್ದಾಗ ನನ್ನ ಮಾವನೇ ನೀನು ನನ್ನ ಸೊಸೆಯಲ್ಲ. ಇನ್ಮುಂದೆ ನೀನು ನನ್ನ ಮಗಳು ಎಂದು ಹೇಳಿ, ಅವರು ದುಡಿದಿದ್ದೆಲ್ಲವನ್ನು ನನಗೆ ನನ್ನ ಮಕ್ಕಳಿಗಾಗಿ ನೀಡಿದರು. ಈ ಮನೆಯನ್ನ ಕಟ್ಟಿಸಿ ಕೊಟ್ಟರು. ಅವರಿಗಾಗಿ ಒಂದು ರೂಪಾಯಿಯನ್ನೂ ಇಟ್ಟುಕೊಳ್ಳದೇ ಎಲ್ಲಾ ಈ ಮನೆಗಾಗಿ ಮಾಡಿದರು ಎಂದು ಹೇಳುತ್ತಾಳೆ. ಅವರು ಮಗು ಥರ, ಅವರ ಕೋಪ ಕೂಡ ಕ್ಷಣಮಾತ್ರವಷ್ಟೇ ಎಂದು ಹೇಳುತ್ತಾಳೆ. ತುಳಸಿ ಮಾತನ್ನು ಕೇಳಿದ ಸಿರಿ ಅವರ ತಂದೆ, ನೀವು ಇಷ್ಡು ವರ್ಷ ನಿಮ್ಮ ಮಾವನನ್ನು ನೋಡಿಕೊಂಡಂತೆಯೇ, ಇನ್ಮುಂದೆ ನನ್ನ ಮಗಳೂ ನೋಡಿಕೊಳ್ಳಿ ಎಂದು ಹೇಳುತ್ತಾನೆ.

ಮಾಧವನಿಗೆ ಕೆಫೆಯಲ್ಲಿ ಏನಾಯ್ತು?
ಇನ್ನು ಪೂರ್ಣಿಮಾ ಮಾವ ಕೊಟ್ಟ ಅತ್ತೆಯ ನೆಕ್ಲೆಸ್ ಅನ್ನು ಹಾಕಿಕೊಂಡು ಪಾಪಮ್ಮನ ಎದುರಿಗೆ ಬರುತ್ತಾಳೆ. ಪಾಪಮ್ಮ ಥೇಟ್ ನಿಮ್ಮ ಅತ್ತೆಯಂತೆಯೇ ಕಾಣುತ್ತೀಯಾ ಎಂದು ಹೇಳುತ್ತಾರೆ. ಪೂರ್ಣಿಮಾ ಖುಷಿ ಪಡುತ್ತಾಳೆ. ಇತ್ತ ಮಾಧವ್ ಕೆಫೆಯಲ್ಲಿ ಅಡುಗೆ ಮಾಡುವಾಗ ಇದ್ದಕ್ಕಿದ್ದ ಹಾಗೆ ತಲೆ ಸುತ್ತಿ ಬೀಳುತ್ತಾರೆ. ಕೆಫೆಯಲ್ಲಿ ಕೆಲಸ ಮಾಡುತ್ತಿದ್ದವರೆಲ್ಲಾ ಮಾಧವನ ಆರೋಗ್ಯ ವಿಚಾರಿಸುತ್ತಾರೆ. ಇದರಿಂದ ಮಾಧವ ಮನೆ ಮಕ್ಕಳಿಲ್ಲದಿದ್ದರೂ ನೀವಿದ್ದೀರಲ್ಲ ಎಂದು ಖುಷಿ ಪಡುತ್ತಾರೆ.

ಆಸ್ತಿಗಾಗಿ ಕಿರಿಕ್ ಮಾಡುತ್ತಾಳಾ?
ಇತ್ತ ಸಂಧ್ಯಾ ಮನೆಯಲ್ಲಿ ಎಲ್ಲರೂ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಾರೆ. ಸಂಧ್ಯಾ ಅತ್ತೆ ಬೈಯ್ಯಲು ಶುರು ಮಾಡುತ್ತಾರೆ. ನನ್ನ ಸೊಸೆಯನ್ನು ನಂಬಿ ಮೋಸ ಹೋದೆವು. ಸಮರ್ಥ್ ನನ್ನ ಮಗಳನ್ನ ಮದುವೆಯಾಗಿದ್ದರೆ ಬರುತ್ತಿದ್ದ ಆಸ್ತಿ ಎಲ್ಲಾ ಕೈತಪ್ಪಿ ಹೋಯ್ತು ಎನ್ನುತ್ತಾಳೆ. ಜಿಗ್ಗ ಕೂಡ ಸಂಧ್ಯಾ ಬ್ರೈನ್ ವಾಶ್ ಮಾಡುತ್ತಾನೆ. ಆಗ ಸಂಧ್ಯಾ ಅರ್ಧ ಆಸ್ತಿ ಅಲ್ಲ ಪೂರ್ತಿ ಆಸ್ತಿ ನನಗೇ ಸೇರಬೇಕು. ಅಲ್ಲಿಯವರೆಗೂ ನಾನು ಸುಮ್ಮನಿರೋದಿಲ್ಲ. ಅಣ್ಣ ಯಾರನ್ನ ಮದುವೆಯಾದರೆ ಏನು, ನನಗೆ ಮೋಸವಾಗುವುದಕ್ಕೆ ನಾನು ಬಿಡುವುದಿಲ್ಲ ಎಂದು ಪಣ ತೊಡುತ್ತಾಳೆ. ಹಾಗಾದರೆ ಸಂಧ್ಯಾ ಪ್ಲಾನ್ ಏನು?


Click it and Unblock the Notifications











