ಕಿರುತೆರೆಗಾಗಿ ಕಾರ್ಪೊರೇಟ್ ಕೆಲಸವನ್ನೇ ಬಿಟ್ಟು ಬಂದ ಶ್ರೀರಸ್ತು ಶುಭಮಸ್ತು ಲಾವಣ್ಯ!
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಪಾತ್ರ ನಿರ್ವಹಿಸಿದ ಲಾವಣ್ಯ ಅವರು ಯಾರಿಗೆ ಗೊತ್ತಿಲ್ಲ ಹೇಳಿ?! ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಶ್ರೀ ರಸ್ತು ಶುಭಮಸ್ತು'ವಿನಲ್ಲಿ ಮಾಧವನ ಸೊಸೆ ಪೂರ್ವಿಯಾಗಿ ಅಭಿನಯಿಸುತ್ತಿದ್ದಾರೆ ಲಾವಣ್ಯ.
ಹಾಗೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ 'ದಾಸ ಪುರಂದರ'. ಈ ಧಾರಾವಾಹಿಯಲ್ಲೂ ನಾಯಕ ಶ್ರೀನಿವಾಸನ ಚಿಕ್ಕಮ್ಮ ಪದ್ಮ ಆಗಿ ಕಾಣಿಸಿಕೊಂಡಿದ್ದ ಲಾವಣ್ಯ ಆ ಧಾರಾವಾಹಿಯಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಎರಡು ಪಾತ್ರಗಳನ್ನು ಕೂಡಾ ಏಕಕಾಲಕ್ಕೆ ನಿಭಾಯಿಸಿದ ಚೆಂದುಳ್ಳಿ ಚೆಲುವೆ.

ಲಾವಣ್ಯ ನಟನಾ ಪಯಣ ಆರಂಭ ಆಗಿದ್ದೇಗೆ?
ಚಿಕ್ಕಂದಿನಿಂದಲೂ ನೃತ್ಯದತ್ತ ಒಲವು ಹೊಂದಿದ್ದ ಲಾವಣ್ಯ ಹಲವು ವೇದಿಕೆಗಳಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಿದ್ದಾರೆ. ನಟಿಯಾಗಬೇಕು ಎಂಬ ಮಹಾದಾಸೆ ಹೊಂದಿದ್ದ ಲಾವಣ್ಯ ಇದೀಗ ಕನಸು ನನಸು ಮಾಡಿಕೊಂಡ ಸಂತಸದಲ್ಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಲಾವಣ್ಯ ಮುಂದೆ ನಟಿಸಿದ್ದು 'ರಾಜ ರಾಣಿ'ಯಲ್ಲಿ.

ವಿವಿಧ ಪಾತ್ರಗಳಲ್ಲಿ ಲಾವಣ್ಯ ಮಿಂಚಿಂಗ್
'ರಾಜ ರಾಣಿ' ಧಾರಾವಾಹಿಯ ನಂತರ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಸಂಘರ್ಷ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಅಭಿನಯಿಸಿದ್ದರು. ಮತ್ತೆ 'ದಾಸ ಪುರಂದರ'ದಲ್ಲಿ ನಟಿಸಿ ಮೋಡಿ ಮಾಡಿದ ಲಾವಣ್ಯ ಸದ್ಯ ಪೂರ್ವಿ ಪಾತ್ರದ ಮೂಲಕ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.

ಸವಾಲೊಡ್ಡುವ ಪಾತ್ರದಲ್ಲಿ ನಟಿಸಲು ಬ್ಯುಸಿ
"ಅಭಿನಯ ಅಥವಾ ನಟನರಂಗ ಒಂದು ಕ್ರಿಯೇಟಿವ್ ಪ್ಲಾಟ್ ಫಾರ್ಮ್. ಇಲ್ಲಿ ನಮಗೆ ಬೇರೆ ಬೇರೆ ರೀತಿಯ ಜನರು ಬೇರೆ ಬೇರೆ ಅವಕಾಶಗಳು ಜೊತೆಗೆ ಹಲವಾರು ಸ್ಕಿಲ್ ಗಳನ್ನು ಕಲಿಯುವ ಅವಕಾಶ ಸಿಗುತ್ತದೆ. ನಮ್ಮ ನಿಜವಾದ ಪೊಟೆನ್ಶಿಯಲ್ ಏನು ಎಂದು ತಿಳಿದುಕೊಳ್ಳಲು ಈ ವೇದಿಕೆ ಬಹಳ ಸಹಕಾರಿ. ಎಂಥ ಪಾತ್ರವಾದರೂ ಸರಿ ಸ್ಟ್ರಾಂಗ್ ಆ್ಯಂಡ್ ಕ್ರಿಯೇಟಿವ್ ಆಗಿರಬೇಕು. ನಟಿಸಲು ಏನಾದರೂ ಚಾಲೆಂಜಿಂಗ್ ಆಗಿದ್ದಾಗ ನಮಗೂ ಖುಷಿ" ಎಂದರು.

ನಟನೆಗಾಗಿ ಕಾರ್ಪೋರೆಟ್ ಕೆಲಸ ಬಿಟ್ಟ ನಟಿ
ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಇವರು ಮಧ್ಯದಲ್ಲಿ ಸಣ್ಣ ಬ್ರೇಕ್ ತೆಗೆದುಕೊಂಡು ಕಾರ್ಪೊರೇಟ್ ಕಂಪನಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅದಾದ ಮೇಲೆ ಮತ್ತೆ 'ರಾಜ ರಾಣಿ' ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಕ್ಕಾಗ ಮನಸ್ಸಿಲ್ಲದಿದ್ದರೂ ಗಟ್ಟಿ ಮನಸ್ಸು ಮಾಡಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ನಟನ ಕ್ಷೇತ್ರಕ್ಕೆ ತಮ್ಮನ್ನು ಪೂರ್ತಿಯಾಗಿ ಮೀಸಲಿಡಲು ನಿರ್ಧರಿಸಿದರು.

ಸಿನಿಮಾದಲ್ಲಿ ನಟಿಸೋ ಆಸೆ
"ನಾವು ನಟನೆಯಿಂದ ಕಲಿಯುವುದು ಬಹಳಷ್ಟು ಇದೆ. ಜೀವನಕ್ಕೂ ಇದು ಬಹಳಷ್ಟು ವಿಚಾರಗಳನ್ನು ಹೇಳಿಕೊಡುತ್ತದೆ. ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವುದರಿಂದ ಈ ರೀತಿಯ ಥ್ರಿಲ್ ಗಳು ಸಿಗುವುದಿಲ್ಲ." ಎಂದು ಹೇಳುತ್ತಾರೆ ಲಾವಣ್ಯ. ಪದವಿ ಮುಗಿಯುತ್ತಿದ್ದಂತೆ ನಟನೆಗೆ ಕಾಲಿಟ್ಟ ಈಕೆ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಪ್ರತಿಭೆ. ಅವಕಾಶ ಸಿಕ್ಕಿದರೆ ಸಿನಿಮಾದಲ್ಲಿಯೂ ನಟಿಸಬೇಕೆಂಬ ಕನಸು ಇಟ್ಟುಕೊಂಡಿದ್ದಾರೆ ಲಾವಣ್ಯ.


Click it and Unblock the Notifications











