ಕನ್ನಡ ಕಿರುತೆರೆಯಲ್ಲಿ 'ಮೀನಾಕ್ಷಮ್ಮನಾಗಿ' ಪವಿತ್ರಾ ಲೋಕೇಶ್!
ಸ್ವಚ್ಛಂದವಾಗಿ ಹಾರಾಡುವ ಮುದ್ದು ಗಿಳಿಯ ಕಥೆ ಹೇಳಲು ಹೊರಟಿದೆ ಸ್ಟಾರ್ ಸುವರ್ಣ ವಾಹಿನಿ. ಬಹಳ ವರ್ಷಗಳ ಬಳಿಕ ಕನ್ನಡ ಕಿರುತೆರೆಗೆ ನಟಿ ಪವಿತ್ರಾ ಲೋಕೇಶ್ ಮರಳಿದ್ದಾರೆ. ಊರಿಗೆ ಊರೇ ಗೌರವ ಕೊಡುವ, ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡುವ ಮೀನಾಕ್ಷಿಯಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೀನಾಕ್ಷಿಯಮ್ಮನ ಪಾತ್ರಕ್ಕೆ ಪವಿತ್ರಾ ಲೋಕೇಶ್ ಅವರೇ ಹೇಳಿ ಮಾಡಿಸಿದ ನಟಿ ಎನ್ನುವ ವಾಹಿನಿಯ ನಂಬಿಕೆಯಂತೆ ಅವರ ಪಾತ್ರಕ್ಕೆ ಈಗಾಗಲೇ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಪಘಾತವೊಂದರಲ್ಲಿ ಕಾಲುಗಳ ಚಲನ ಕಳೆದುಕೊಂಡು ವೀಲ್ ಚೇರ್ ನಲ್ಲಿ ಬದುಕು ಸಾಗಿಸುತ್ತಿರುವ ಅರ್ಜುನ್ ಪಾತ್ರ ಮಾಡುತ್ತಿದ್ದಾರೆ ನಟ ಯೋಗೇಶ್.
ಅರ್ಜುನ್ ಗೆ, ತಾಯಿ ಮಾತೇ ವೇದವಾಕ್ಯ, ಮೀನಾಕ್ಷಮ್ಮನಿಗೆ ಪ್ರೀತಿಯ ಮಗನ ಬಗ್ಗೆ ಅಪಾರ ಹೆಮ್ಮೆ. ಮೇಲ್ನೋಟಕ್ಕೆ ಮೀನಾಕ್ಷಮ್ಮನ ಮನೆಯಲ್ಲಿ ಎಲ್ಲರೂ ಆನಂದವಾಗಿ ನೆಮ್ಮದಿಯಿಂದಿದ್ದರೂ, ಅವರಿಗೆ ಮನೆಯ ಒಳಗೂ ಹೊರಗೂ ಶತ್ರುಗಳಿಗೆ ಬರವಿಲ್ಲ.

ಮುದ್ದು ಗಿಳಿ ಮೀರಾ ಪಾತ್ರದಲ್ಲಿ ವರ್ಷಿಕ ನಟಿಸುತ್ತಿದ್ದಾಳೆ. ನಿಷ್ಕಲ್ಮಷ ಮನಸಿನ ಈ ಹುಡುಗಿ ಇದ್ದ ಕಡೆ ಕಣ್ಣೀರಿಗೆ ಜಾಗವಿಲ್ಲ, ಎಲ್ಲರೂ ಸಂತೋಷದಿಂದಿರಬೇಕು ಎಂದು ಬಯಸುವ ಮೀರಾ, ಮನೆಯವರು ಮತ್ತು ತಾನು ದೇವರು ಎಂದು ಭಾವಿಸುವ ಮೀನಾಕ್ಷಮ್ಮನ ಗೌರವಕ್ಕೆ ಧಕ್ಕೆಯಾಗುವ ಸಂದರ್ಭ ಬಂದಾಗ ತನ್ನ ಕನಸುಗಳು ಮತ್ತು ಜೀವನವನ್ನೇ ತ್ಯಾಗ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ಬೇಡಿ ಬಂದವರ ಕಷ್ಟ ನೀಗಿಸುವ ಮೀನಾಕ್ಷಿಯಮ್ಮನ ಬದುಕಲ್ಲಿ ನಗು ಅರಳಿಸೋಕೆ ಬರುತ್ತಿದ್ದಾಳೆ ಮುದ್ದು ಗಿಳಿ ಮೀರಾ.
ಅರೆಮನೆ ಗಿಳಿ ಧಾರಾವಾಹಿಯಲ್ಲಿ ಸಿಂಧು ಕಲ್ಯಾಣ್, ಮಧುಸಾಗರ್, ಪ್ರಕಾಶ್ ಅರಸ್, ಗಿರೀಶ್ ಜತ್ತಿ, ಪಲ್ಲವಿ ಶೆಟ್ಟಿ, ರೂಪ ಶಂಕರ್ ಮುಖ್ಯಭೂಮಿಕೆಯಲ್ಲಿದ್ದಾರೆ. ನಾಗೇಶ್ ಕೃಷ್ಣ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದು, ಗಂಗಾದರ್ ಅವರ ನಿರ್ಮಾಣವಿದೆ. ಮೇ.20ರಿಂದ ಸೋಮವಾರದಿಂದ ಶನಿವಾರದವೆರೆಗೆ ಪ್ರತಿ ರಾತ್ರಿ 9ಗಂಟೆಗೆ ಅರಮನೆ ಗಿಳಿ ಧಾರಾವಾಹಿ ಪ್ರಸಾರವಾಗಲಿದೆ.


Click it and Unblock the Notifications











