ಬೆಟ್ಟದ ಹೂ : ಮಾನಗೆಟ್ಟ ಹೆಣ್ಣು ಎಂದ ಗಂಡನ ವಿರುದ್ಧ ತಿರುಗಿ ಬಿದ್ದ ಹೂವಿ..!
ಒಬ್ಬ ಮನುಷ್ಯನಿಗೆ ತಾಳ್ಮೆ ಎಲ್ಲಿಯ ತನಕ ಇರುವುದಕ್ಕೆ ಸಾಧ್ಯ. ಒಂದಲ್ಲ ಒಂದು ದಿನ ಎಲ್ಲಾ ತಾಳ್ಮೆಯ ಕಟ್ಟೆ ಒಡೆಯಲೇಬೇಕು ಅಲ್ಲವಾ..? ಇವತ್ತು ಹೂವಿಯ ಬದುಕಲ್ಲೂ ನಡೆದಿದ್ದು ಅದೆ ನೋಡಿ. ಇಷ್ಟು ದಿನ ಮನೆಯವರಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಇದ್ದ ಹೂವಿ, ಇಂದು ತನ್ನ ಸ್ವಾಭಿಮಾನಕ್ಕಾಗಿ ಧ್ವನಿ ಎತ್ತಿದ್ದಾಳೆ. ಬಾಯಿಗೆ ಬಂದದ್ದನ್ನು ಹೇಳುತ್ತಿದ್ದ ರಾಹುಲ್ ಬಾಯಿ ಮುಚ್ಚಿಕೊಂಡಿದ್ದಾನೆ.
ಹೂವಿಗೆ ಯಾವುದೇ ಆಸೆಗಳಿರಲಿಲ್ಲ. ಅಮ್ಮನ ಮರ್ಯಾದೆಗೆ ಕಟ್ಟು ಬಿದ್ದು, ಊರಿನವರ ಮಾತಿಗೆ ಜೋತು ಬಿದ್ದು ರಾಹುಲ್ನನ್ನು ಗಂಡನೆಂದು ಒಪ್ಪಿಕೊಂಡಳು. ರಾಹುಲ್ ಕಡೆಯಿಂದ ಐದು ಪೈಸೆ ಮರ್ಯಾದೆ ಸಿಗದೆ ಹೋದರೂ ಯಾವುದನ್ನೂ ಲೆಕ್ಕಿಸದೆ, ಮನೆಯ ಕೆಲಸದಾಳಾಗಿಯೂ ದುಡಿದಳು. ಆಗಲು ಅವಳ ಮನಸ್ಸಿಗೆ ಘಾಸಿಯಾಗಲಿಲ್ಲ, ಬೇಸರ ಮಾಡಿಕೊಳ್ಳಲಿಲ್ಲ. ಆದರೆ ತನ್ನ ಮರ್ಯಾದೆ ಹೋಗುವ ಸಮಯ ಬಂದರೆ, ತನ್ನ ಸ್ವಾಭಿಮಾನಕ್ಕೆ ಕಳಂಕ ಬಂದರೆ ಸುಮ್ಮನೆ ಇರುವುದಕ್ಕೆ ಆಗುತ್ತಾ?

ರಾಹುಲ್ ಮಾತು ಕೇಳಿ ರೊಚ್ಚಿಗೆದ್ದ ಹೂವಿ
ಈ ಬಾರಿ ಚನವಲ್ಸೆಗೆ ಬಂದರೆ ಮತ್ತೆ ವಾಪಾಸ್ ಹೋಗುವುದಕ್ಕೆ ಸಾಧ್ಯವೇ ಇಲ್ಲ. ಈ ನಿರ್ಧಾರವನ್ನು ಹೂವಿ ಅಂದೆ ಮಾಡಿಕೊಂಡು ಬಂದಿದ್ದಳು. ಅದಕ್ಕಾಗಿಯೇ ಲಗೇಜ್ ಸಮೇತ ಬಂದಿದ್ದಳು. ವಿಧಿಯಾಟ ಸುಮ್ಮನೆ ಬಿಡುತ್ತದೆಯೇ ತಾಳಿಯನ್ನು ಅಲ್ಲಿಯೇ ಬಿಟ್ಟು ಬರುವಂತೆ ಮಾಡಿತ್ತು. ಯಾವುದನ್ನು ಲೆಕ್ಕಿಸದೆ ಒಂಟಿ ಹೆಜ್ಜೆ ಇಟ್ಟು ನಡೆದೆ ಬಿಟ್ಟಳು. ಆದರೆ ಮತ್ತೆ ಅನಿವಾರ್ಯತೆಗೆ ಕಟ್ಟು ಬಿದ್ದು ರಾಹುಲ್ ಚನವಲ್ಸೆ ಮಂದಿ ಬಳಿ ಸಿಕ್ಕಿಬಿದ್ದ. ಮತ್ತೆ ಮದುವೆಯೂ ಆಯಿತು. ಆದರೆ ರಾಹುಲ್ ಇದಕ್ಕೆಲ್ಲಾ ಕಾರಣ ಹೂವಿಯೇ ಎಂಬ ಅಪಾದನೆ ಮಾಡಿದ್ದಾನೆ. ನೀನು ಹೆಣ್ಣು ಕುಲಕ್ಕೆ ಅವಮಾನವೆಂದೆಲ್ಲಾ ಬಾಯಿಗೆ ಬಂದ ಪದಗಳನ್ನೆಲ್ಲಾ ಉಪಯೋಗಿಸಿದ್ದಾನೆ. ಇದು ಹೂವಿಯ ತಾಳ್ಮೆಯನ್ನು ಕೆದಕಿದೆ.

ಹೊಸ ಜೋಡಿಗೆ ಮೊದಲ ರಾತ್ರಿಯ ಶಾಸ್ತ್ರ
ಶಾಸ್ತ್ರೋಕ್ತವಾಗಿ ಹೂವಿ ಮತ್ತು ರಾಹುಲ್ಗೆ ಮದುವೆಯನ್ನು ಎರಡನೇ ಬಾರಿ ಊರಿನ ಮಂದಿಯೆಲ್ಲಾ ಸೇರಿ ಮಾಡಿ ಮುಗಿಸಿದ್ದಾರೆ. ಅದರಂತೆ ಮದುವೆಯ ನಂತರದ ಶಾಸ್ತ್ರಗಳನ್ನು ಮಾಡಲೇಬೇಕಲ್ಲವಾ? ಅದಕ್ಕಾಗಿ ಮುಂದಿನ ಶಾಸ್ತ್ರ ಮೊದಲ ರಾತ್ರಿಯ ಅರೆಂಜ್ಮೆಂಟ್ ಕೂಡ ಮಾಡಿದ್ದಾರೆ. ಇದು ರಾಹುಲ್ಗೆ ಕಿರಿಕಿರಿಯನ್ನುಂಟು ಮಾಡಿದೆ. ಹುಡುಗ ಚೆನ್ನಾಗಿ ಓದಿದ್ದಾನೆ. ನೋಡುವುದಕ್ಕೆ ಸುಮಾರಾಗಿದ್ದಾನೆ. ಒಳ್ಳೆ ಹಣ ಸಂಪಾದನೆ ಮಾಡುತ್ತಿದ್ದಾನೆ. ಲೈಫ್ ಸೆಟಲ್ ಮಾಡಿಕೊಂಡು ಬಿಡಬಹುದು ಎಂಬ ಯೋಜನೆ ಅಲ್ವಾ ನಿಂದು ಅಂತ ಹೂವಿಗೆ ತರಾಟೆ ತೆಗೆದುಕೊಂಡಿದ್ದಾನೆ. ಆದರೆ ಇದರಲ್ಲಿ ನನ್ನದೇನು ಸ್ವಾರ್ಥ ಇಲ್ಲ ಅಂತ ಹೂವಿ ಎಷ್ಟೇ ಹೇಳಿದರು ನಂಬಲ್ಲ ರಾಹುಲ್. ಮಾನ ಮರ್ಯಾದೆ ಅಂತೆಲ್ಲಾ ಮನಸ್ಸಿಗೆ ಬೇಸರವಾಗುವಂತಹ ಪದಗಳನ್ನು ಬಳಸಿದ್ದಾನೆ. ಇದಕ್ಕೆ ಕೈನಲ್ಲಿದ್ದ ಹಾಲಿನ ಗ್ಲಾಸ್ ಕೆಳಗೆ ಎಸೆದು ಇನ್ನೊಂದು ಮಾತನಾಡಿದರು ಸರಿ ಇರುವುದಿಲ್ಲ ಎಂದು ಗಂಡನನ್ನು ಬಾಯಿ ಮುಚ್ಚುವಂತೆ ಮಾಡಿದ್ದಾಳೆ.

ರಾಹುಲ್ ಪ್ರಾಣಕ್ಕೆ ಕುತ್ತು ಬಂದಾಗ ಸಹಾಯ ಮಾಡಿದ್ದು ಹೂವಿ
ರಾಹುಲ್ ಮತ್ತೆ ಚನವಲ್ಸೆಗೆ ಬಂದಿದ್ದು, ತನ್ನ ಪ್ರಾಜೆಕ್ಟ್ ಮೇಲೆ. ಇಲ್ಲವಾದಲ್ಲಿ ಮತ್ತೆ ಬರುತ್ತಿರಲಿಲ್ಲ. ಆದರೆ ಈ ಪ್ರಾಜೆಕ್ಟ್ ಕಂಪ್ಲೀಟ್ ಮಾಡುವುದಕ್ಕೂ ಮುನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ಪ್ರಾಜೆಕ್ಟ್ ವಿಚಾರಕ್ಕೆ ಹೊರಗೆ ಹೋದಾಗ ಫೈರಿಂಗ್ ಸ್ಥಳದಲ್ಲಿ ಸಿಲುಕಿದ್ದಾನೆ. ಈ ವೇಳೆ ಇನ್ನೇನು ಬೆಂಕಿಯ ಉಂಡೆಯೊಂದು ರಾಹುಲ್ ಮೇಲೆ ಬೀಳಬೇಕಾಗಿತ್ತು, ಅಷ್ಟರಲ್ಲಿ ಗಂಡನನ್ನು ಕಾಪಾಡಿದ್ದು ಇದೇ ಹೂವಿ. ಅದೊಂದು ಕಷ್ಟದ ಸಮಯದಲ್ಲೂ ಗಂಡನ ಸಹಾಯಕ್ಕೆ ನಿಂತಿದ್ದಾಳೆ.

ಹೂವಿಯನ್ನು ಮತ್ತೆ ಕರೆದುಕೊಂಡು ಹೋಗುತ್ತಾನಾ?
ಮಾಲಿನಿ ಜೊತೆ ನೆಮ್ಮದಿಯಾಗಿ, ಖುಷಿಯಾಗಿ ಇರಬೇಕು ಎಂಬ ಸ್ವಾರ್ಥಿ ರಾಹುಲ್. ಹೂವಿಯ ಮನೆಯವರಿಗೆ ಸತ್ಯ ಹೇಳಲು ಪ್ರಯತ್ನಿಸುತ್ತಿರುವ ರಾಹುಲ್ ಅಂದು ಮಾಲಿನಿ ಮನೆಯವರಿಗೆ ಸತ್ಯವನ್ನು ಹೇಳಬಹುದಿತ್ತು. ಆದರೆ ಆ ರೀತಿ ಮಾಡಲಿಲ್ಲ. ಇದೀಗ ಹೂವಿಯನ್ನು ಮಾತಿಗೆ ಮುಂಚೆ ಇನ್ನು ಹೆಚ್ಚಿಗೇನೆ ಬೈಯ್ಯಲು ಶುರು ಮಾಡಿದ್ದಾನೆ. ಆದರೆ ಹೂವಿ ತನ್ನ ಪ್ರಾಣ ಕಾಪಾಡಿದ್ದಾಳೆ ಎಂಬ ಮಾನವೀಯತೆ ಆತನಲ್ಲಿ ಹುಟ್ಟಿಕೊಂಡರೆ ಒಳ್ಳೆಯದು ಎಂಬ ಭಾವನೆ ಪ್ರೇಕ್ಷಕರಲ್ಲಿ ಬಂದಿದೆ. ಹೂವಿ ಏನು ಎಂಬುದು ಇಷ್ಟೊತ್ತಿಗೆ ರಾಹುಲ್ಗೆ ಅರ್ಥವಾಗಬೇಕಿತ್ತು. ಆದರೆ ಇಂದಿಗೂ ಆಕೆಯನ್ನು ಅರ್ಥ ಮಾಡಿಕೊಳ್ಳದೆ ಮನಸ್ಸನ್ನು ನೋಯಿಸುವುದರಲ್ಲೇ ನಿಸ್ಸೀಮನಾಗಿದ್ದಾನೆ. ಈಗಲಾದರೂ ಆಕೆಯನ್ನು ಮನಸಾರೆ ಒಪ್ಪುತ್ತಾನಾ ನೋಡಬೇಕು. ರಾಹುಲ್ ಎಷ್ಟೇ ಮನಸ್ಸು ನೋಯಿಸಿದರು ಹೂವಿ ತನ್ನ ಮಾನವೀಯತೆಯನ್ನು ಮರೆತಿಲ್ಲ.


Click it and Unblock the Notifications











