ಜೇನುಗೂಡಿನ ವಿಲನ್ ನಿಶಿತಾ ಗೌಡ ಕಣ್ಣುಗಳನ್ನು ನೋಡಿ ಆ ನಟ ಒಂದು ಮಾತು ಹೇಳಿದ್ರು!
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ 'ಜೇನುಗೂಡು' ಧಾರಾವಾಹಿ ಸದ್ಯ ಸಂಬಂಧಗಳ ಮೌಲ್ಯಗಳನ್ನು ಸಾರುತ್ತಿದೆ. ದಿಯಾ ಮತ್ತು ಶಶಾಂಕ್ ಮದುವೆಗೆ ಸಾಕಷ್ಟು ವಿಘ್ನಗಳು ಬರುತ್ತಿವೆ. ಇದೆಲ್ಲವನ್ನೂ ಮೀರಿ ಮನೆಯವರ ಹಾರೈಕೆಯಿಂದ ಈ ಮದುವೆ ನಡೆದೇ ನಡೆಯುತ್ತದೆ. ನಡುಕೋಟೆ ಮನೆಯವರೆಲ್ಲ ಮಗನನ್ನು ನೆಗ್ಲೆಕ್ಟ್ ಮಾಡಿದರೂ ದಿಯಾಳನ್ನು ಬಿಡುವ ಮಾತೇ ಇಲ್ಲ. ಆ ನಿರ್ಧಾರವನ್ನು ಈಗಾಗಲೇ ಮನೆ ಮಂದಿಯೆಲ್ಲಾ ಶಶಾಂಕ್ಗೆ ಸ್ಪಷ್ಟಪಡಿಸಿದ್ದಾರೆ.
ದಿಯಾಳಿಗೆ ಸಂಬಂಧಗಳ ಬೆಲೆ ತಿಳಿಸಲು ಹೊರಟ ಡಾ.ಶ್ರೀಧರ್ ದಿಯಾಳನ್ನು ನಡುಕೋಟೆ ಮನೆಗೆ ಕೊಡಲು ಹೊರಟಿದ್ದಾರೆ. ಈಗಾಗಲೇ ಎಲ್ಲಾ ತಯಾರಿ ನಡೆದಿದ್ದು, ಬೇಡವೆಂದರೂ ಧಾರೆ ಎರೆದು ಕೊಡಲು ದಿಯಾಳ ತಾಯಿ ಶುಭಾಂಗಿಯನ್ನು ಕರೆಸಿದ್ದಾರೆ. ಆದರೆ ಶುಭಾಂಗಿಯ ಅವತಾರಕ್ಕೆ ಡಾಕ್ಟರ್ ಮನೆಯವರಷ್ಟೇ ಅಲ್ಲ. ನಡುಕೋಡೆ ಮನೆಯವರು ಸುಸ್ತಾಗಿ ಹೋಗಿದ್ದಾರೆ. ಸಾಲು ಸಾಲು ಅವಮಾನಗಳನ್ನು ಮಾಡುತ್ತಾ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ ಶುಭಾಂಗಿ.

ತೆರೆ ಮೇಲೆ ಶುಭಾಂಗಿಯಾದ ನಿಶಿತಾ ಗೌಡ!
'ಜೇನುಗೂಡು' ಧಾರಾವಾಹಿಯಲ್ಲಿ ಸದ್ಯ ದಿಯಾಳ ತಾಯಿ ಪಾತ್ರ ಮಾಡುತ್ತಿರುವ ಶುಭಾಂಗಿಯ ಹೆಸರು ನಿಶಿತಾ ಗೌಡ. ಮೂಲತಃ ಬೆಂಗಳೂರಿನವರೇ ಆದ ನಿಶಿತಾ ಸಾಗರದ ಪ್ರಸನ್ನ ಎಂಬುವವರನ್ನು ಮದುವೆಯಾಗಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿ ಇಂದಿಗೂ ತನ್ನ ಸೌಂದರ್ಯವನ್ನು ದುಪ್ಪಟ್ಟು ಮಾಡಿಕೊಂಡೆ ಬಂದಿದ್ದಾರೆ. ದಿಯಾಳ ಪಾತ್ರ ತುಂಬಾ ಮಾಡರ್ನ್ ಆಗಿದೆ. ಆಕೆಯ ತಾಯಿ ಮೊದಲೇ ಅಮೆರಿಕದಲ್ಲಿರುವವರು. ಹೀಗಾಗಿ ಆ ಪಾತ್ರಕ್ಕೆ ತಕ್ಕನಾಗಿದ್ದಾರೆಂಬ ಕಾರಣಕ್ಕೆ ನಿಶಿತಾ ಅವರನ್ನೇ ಟೀಂ ಆಯ್ಕೆ ಮಾಡಿದೆ. ಅಮೆರಿಕದಿಂದ ಬಂದ ಶುಭಾಂಗಿ ನಾನಾ ಅವತಾರಗಳನ್ನು ತಾಳುತ್ತಿದ್ದಾರೆ.

ರಿಯಲ್ ಲೈಫ್ನಲ್ಲಿಯೂ ನಿಶಿತಾ ಸ್ವಭಾವ ಹೇಗೆ?
'ಜೇನುಗೂಡು' ಧಾರಾವಾಹಿಯಲ್ಲಿ ತನ್ನ ಕರಿಯರ್ ಮುಖ್ಯ. ಹಣ ಮುಖ್ಯ. ಪ್ರೈವಸಿ ಲೈಫ್ ಮುಖ್ಯ ಎಂದುಕೊಂಡಿದ್ದ ಶುಭಾಂಗಿ ಮಗು ಎಂಬುದನ್ನು ಲೆಕ್ಕಕಿಡದೆ ದಿಯಾಳನ್ನು ಬಿಟ್ಟು ತನ್ನ ಜೀವನ ನೋಡಿಕೊಳ್ಳುತ್ತಿದ್ದರು. ಅದೇ ಕಾರಣಕ್ಕಾಗಿಯೇ ಶ್ರೀಧರ್ ದಿಯಾಳನ್ನು ಅಮೆರಿಕದಿಂದ ಕರೆದುಕೊಂಡು ಬಂದಿದ್ದರು. ಆದರೆ ಶುಭಾಂಗಿಗೂ ಮತ್ತು ನಿಶಿತಾಗೂ ಕೆಲವು ವಿಚಾರದಲ್ಲಿ ಹೋಲಿಕೆ ಇದೆ. ಈ ಹಿಂದೆ ನೀಡಿರುವ ಸಂದರ್ಶನದಲ್ಲಿ, ನಿಶಿತಾ ಗೌಡಗೆ ಒಬ್ಬರೆ ಇರುವುದು ಎಂದರೆ ತುಂಬಾ ಇಷ್ಟವಂತೆ. ಮನೆ, ಸಂಸಾರ, ಮಕ್ಕಳನ್ನು ನೋಡಿಕೊಳ್ಳುತ್ತಾ, ವೆರೈಟಿ ಅಡುಗೆ ಮಾಡುತ್ತಾ, ಗಾರ್ಡೆನಿಂಗ್ ಮಾಡುತ್ತಾ ಇರುತ್ತಾರಂತೆ. ಅಷ್ಟೆ ಅಲ್ಲ ಒಬ್ಬಳೆ ಕುಳಿತಾಗ ನಾನಾ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತೆ ಎಂಬ ಕಾರಣಕ್ಕೆ ಒಂಟಿಯಾಗಿರುವುದನ್ನೇ ಇಷ್ಟಪಡುತ್ತಾರಂತೆ.

ನಿಶಿತಾ ಗೌಡ ಸಿನಿಮಾದಲ್ಲೂ ಫೇಮಸ್!
ನಿಶಿತಾಗೆ ತುಂಬಾ ಇಷ್ಟವಿದ್ದದ್ದು ಕಾಸ್ಟ್ಯೂಮ್ ಡಿಸೈನಿಂಗ್. ಮೇಕಪ್ ಎಂದರೆ ಇಷ್ಟಪಡದೆ, ಸಾಂಪ್ರದಾಯಿಕ ಉಡುಗೆಯಲ್ಲಿರುವುದನ್ನು ತುಂಬಾ ಇಷ್ಟಪಡುವ ನಿಶಿತಾ ಸಿನಿಮಾ, ಧಾರಾವಾಹಿಗಳಲ್ಲಿ ನೆಗೆಟಿವ್ ರೋಲ್ನಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದಾರೆ. ಪಾಸಿಟಿವ್ ರೋಲ್ನಲ್ಲಿ ಕೂಡ ಗಮನ ಸೆಳೆದಿದ್ದರು. ಅಕಸ್ಮಾತ್ ಆಗಿ ನಟನೆ ನಿಶಿತಾಗೆ ಕೈಹಿಡಿದಿತ್ತು. ಕನ್ನಡ ಮಾತ್ರವಲ್ಲ ಬೇರೆ ಭಾಷೆಯ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ವಿಪರೀತ ಸಂಕೋಚ ಸ್ವಭಾವದ ನಿಶಿತಾ, ಮಾಡೆಲಿಂಗ್ನಲ್ಲೂ ಸಕ್ರಿಯವಾಗಿದ್ದವರು. ಅಷ್ಟೇ ಅಲ್ಲ ಮಿಸ್ ಬೆಂಗಳೂರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

'ಆಕಾಶ್' ಸಿನಿಮಾದಲ್ಲಿ ನಟನೆ
'ಕಾದಂಬರಿ', 'ಸುಕನ್ಯಾ', 'ಅಮ್ನೋರು', 'ನಾನು ಮತ್ತು ನನ್ನ ಕನಸು' ಸೇರಿದಂತೆ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಿಶಿತಾ ನಟಿಸಿದ್ದಾರೆ. ಅವರು ನಟನಾ ಕ್ಷೇತ್ರಕ್ಕೆ ಎಂಟ್ರಿಯಾಗಿ ಸುಮಾರು ಹದಿನೇಳು ವರ್ಷಗಳಾಗಿವೆ. ಇಷ್ಟು ವರ್ಷದ ಜರ್ನಿಯಲ್ಲಿ ಡಾ. ರಾಜ್ಕುಮಾರ್ ಹೊಗಳಿರುವ ಆ ಮಾತು ಸದಾ ಜೀವಂತವಾಗಿರುತ್ತದೆ. ಆಕಾಶ್ ಸಿನಿಮಾದಲ್ಲಿ ನಟಿ ನಿಶಿತಾ ಕೂಡ ನಟಿಸಿದ್ದರು. ರಮ್ಯಾರಿಗೆ ಎರಡನೇ ಅತ್ತಿಗೆ ಪಾತ್ರಯಾಗಿ ಅಭಿನಯಿಸಿದ್ದರು. ಈ ಸಿನಿಮಾದ ಸಂದರ್ಭದಲ್ಲಿ ಡಾ. ರಾಜ್ಕುಮಾರ್, ನಿನ್ನ ಕಣ್ಣು ಚೆನ್ನಾಗಿದೆಯಮ್ಮ, ಇದನ್ನು ಬಳಸಿಕೋ, ದೊಡ್ಡ ಕಲಾವಿದೆಯಾಗ್ತೀಯಾ ಅಂತ ಹೇಳಿದ್ದರಂತೆ.


Click it and Unblock the Notifications











