ಜೇನುಗೂಡು: ಶುಭಾಂಗಿ ಕಿರಿಕ್ ಆಯ್ತು.. ಈಗ ನಡುಕೋಟೆ ಕುಟುಂಬಕ್ಕೆ ಭಾಸ್ಕರನ ಹಾವಳಿ!
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ 'ಜೇನುಗೂಡು' ಧಾರಾವಾಹಿಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ಗಳು ತಲೆ ಎತ್ತುತ್ತಿವೆ. ದಿಯಾ ಶಶಾಂಕ್ ಮದುವೆ ಮಾಡಬೇಕೆಂದಾಗಿನಿಂದ ಅವರಿಬ್ಬರ ಕಿತ್ತಾಟ, ಜಗಳ, ಕಣ್ಣಿನ ಮರೆಯಲ್ಲಿಯೇ ಚಿಗುರಿದ ಪ್ರೀತಿ ಹೀಗೆ ಹಲವು ವಿಚಾರಗಳು ಪ್ರೇಕ್ಷಕರ ಮನಸ್ಸನ್ನು ಕದಿಯುತ್ತಿದೆ. ಇದರ ನಡುವೆ ಕುಕ್ಕಿ ಗ್ಯಾಂಗ್ ದಿಯಾ-ಶಶಾಂಕ್ ಇಬ್ಬರ ನಡುವೆ ಪ್ರೀತಿ ಬೆಸೆಯಲು ಪಟ್ಟ ಪಾಡಂತು ನೋಡುಗರಿಗೆ ಮಜ ಕೊಟ್ಟಿದೆ. ಇದೀಗ ಖುಷಿ ಖುಷಿಯಾಗಿದ್ದ ಧಾರಾವಾಹಿಯಲ್ಲಿ ಬೇಸರದ ಮುಖಗಳ ಪರಿಚಯವಾಗಿದೆ.
ದಿಯಾ-ಶಶಾಂಕ್ಗೆ ದುಶ್ಮನ್ಗಳು ಒಬ್ಬರು ಇಬ್ಬರಲ್ಲ. ಮೊದಲೇ ಒಲ್ಲದ ಮನಸ್ಸಿನಿಂದ ಮನೆಯವರ ಖುಷಿಗಾಗಿ ಈ ಮದುವೆಯಾಗಲು ಒಪ್ಪಿದ್ದಾರೆ. ಆ ಕಡೆ ಮಾಯಾ ಹೇಗಾದರೂ ಮಾಡಿ ದಿಯಾಳಿಂದ ಶಶಾಂಕ್ನನ್ನು ಕಿತ್ತುಕೊಳ್ಳಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ಶಶಾಂಕ್ನ ದೃಢ ನಿರ್ಧಾರ ಮಾಯಾಳಿಗೆ ಅರ್ಥ ಮಾಡಿಸಿದೆ. ಇದೀಗ ಮಾಯಾ ಕಿತಾಪತಿ ಜೊತೆಗೆ ದಿಯಾ ಅಮ್ಮನ ಧಿಮಾಕು ಮಿಕ್ಸ್ ಆಗಿ ದಿಯಾ-ಶಶಾಂಕ್ ಮದುವೆಗೆ ತೊಂದರೆಯಾಗುವ ಸಾಧ್ಯತೆ ಇದೆ.

ಮನೆಗೆ ಬರುತ್ತಲೇ ಸಾರಿಕಾ, ಶ್ರೀಧರ್ಗೆ ಅವಮಾನ
ಶುಭಾಂಗಿಗೆ ಪ್ರೈವೆಸಿ ಲೈಫ್ ಎಂದರೆ ಸಿಕ್ಕಾಪಟ್ಟೆ ಇಷ್ಟ. ಇದೇ ಕಾರಣಕ್ಕಾಗಿಯೇ ಮಗಳು ತುಂಬಾ ಚಿಕ್ಕವಳಿದ್ದರು ಆಕೆಯನ್ನು ನೋಡಿಕೊಳ್ಳುವ ಉಸಾಬರಿಗೆ ಹೋಗಿರಲಿಲ್ಲ. ಮಗು ಅಳುತ್ತಿದ್ದರೂ, ಆ ಶಬ್ಧವನ್ನು ಕಿವಿಗೂ ಹಾಕಿಕೊಂಡಿರಲಿಲ್ಲ. ಇದೇ ಕಾರಣಕ್ಕಾಗಿಯೇ ಡಾಕ್ಟರ್ ಶ್ರೀಧರ್ ತನ್ನ ಮಗಳನ್ನು ಕರೆದುಕೊಂಡು ಬಂದು ಶುಭಾಂಗಿಯಿಂದ ದೂರ ಕರೆದುಕೊಂಡು ಬಂದು ಬೆಳೆಸಿದ. ದಿಯಾಳಿಗಾಗಿ ಸಾರಿಕಾ ಕೂಡ ಜೀವನದಲ್ಲಿ ಸಾಕಷ್ಟು ತ್ಯಾಗ ಮಾಡಿದ್ದಾಳೆ. ಮಗಳಂತೆ ಕಾಳಜಿ ತೋರಿದ್ದಾಳೆ. ಆದರೆ ಈಗ ಅಮೆರಿಕದಿಂದ ಬಂದ ಶುಭಾಂಗಿ ತನ್ನ ಅವತಾರಗಳನ್ನು ತೋರಿಸುತ್ತಿದ್ದಾಳೆ. ಮನೆಗೆ ಬಂದ ಕೂಡಲೇ ತನ್ನ ವರಸೆ ತೆಗೆದ ಶುಭಾಂಗಿ, ಸಾರಿಕಾಳಿಗೆ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದಾಳೆ. ಶ್ರೀಧರ್ಗೆ ಹಳೇ ವಿಚಾರಗಳನ್ನು ತೆಗೆದು ನೋವು ಕೊಟ್ಟಿದ್ದಾಳೆ. ಇದು ದಿಯಾಳಿಗೆ ಕೊಂಚವೂ ಇಷ್ಟವಾಗಲಿಲ್ಲ.

ನಡುಕೋಟೆ ಮನೆಯಲ್ಲಿ ದಿಯಾ ಮಮ್ಮಿ ಹಾವಳಿ
ಡಾ.ಶ್ರೀಧರ್ಗೆ ಶುಭಾಂಗಿಯನ್ನು ನಡುಕೋಟೆ ಮನೆಗೆ ಕರೆದುಕೊಂಡು ಹೋಗುವುದು ಅಷ್ಟಾಗಿ ಇಷ್ಟವಿರಲಿಲ್ಲ. ಆದರೆ ವಿಧಿ ಇಲ್ಲದೆ ಕರೆದುಕೊಂಡು ಹೋದರು. ನಡುಕೋಟೆ ಮನೆಗೆ ಹೋಗುತ್ತಲೆ ಇದು ಒಂದು ಮನೆಯಾ ಎಂದು ಶುಭಾಂಗಿ ಅಸಹ್ಯಪಟ್ಟುಕೊಂಡಳು. ಒಳಗೆ ಎಂಟ್ರಿಯಾಗುತ್ತಲೇ ನಯನಾ, ಮಾಧವಿಯನ್ನು ನೋಡಿ ಮನೆಕೆಲಸದವರಂತೆ ಟ್ರೀಟ್ ಮಾಡಿದಳು. ಮನೆಯ ಒಳಗಿನ ಹಳೆ ಕಾಲದ ವಸ್ತುಗಳನ್ನು ನೋಡಿ ಹಿಯಾಳಿಸಿದಳು. ಹೆಚ್ಚು ಜನ ಇದ್ದಿದ್ದಕ್ಕೆ ದಿಯಾ ಈ ಮನೆಯಲ್ಲಿ ಹೇಗಿರುತ್ತಾಳೆಂದಳು. ಒಬ್ಬೊಬ್ಬರ ಕೆಲಸ ಕೇಳಿ ವ್ಯಂಗ್ಯ ಮಾಡಿದಳು. ಮನೆಯ ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗದಿರುವುದು ಸೋಮಾರಿ ಅಂದಳು. ಇದೆಲ್ಲದ್ದನ್ನು ಕೇಳಿಸಿಕೊಂಡ ಶಶಾಂಕ್ ಶುಭಾಂಗಿಗೆ ಸರಿಯಾಗಿಯೇ ಉತ್ತರ ಕೊಟ್ಟ. ನಮ್ಮ ಮನೆ ಹೆಣ್ಣು ಮಕ್ಕಳು ಓದಿರುವಷ್ಟು ನಿಮ್ಮ ಮನೆ ಮಗಳು ಓದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಟ್ಟ.

ಮದುವೆ ಬಗ್ಗೆ ದಿಯಾಳ ನಿರ್ಧಾರವೇನು?
ದಿಯಾ ಮತ್ತು ಶಶಾಂಕ್ಗೆ ಮದುವೆಯಾಗುವುದು ಇಷ್ಟವಿಲ್ಲ. ಹೀಗಾಗಿ ಮದುವೆ ಮುರಿದು ಬಿದ್ದರೆ ಸಾಕು ಎಂದು ಕಾದು ಕುಳಿತಿದ್ದರು. ಇತ್ತೀಚೆಗೆ ಕುಕ್ಕಿಗೆ ಬಂದ ದೊಡ್ಡ ಸಮಸ್ಯೆಯಿಂದಾಗಿ ಶಶಾಂಕನೇ ಮದುವೆ ಮುರಿದುಕೊಂಡಿದ್ದ. ಇದನ್ನು ಕೇಳಿ ದಿಯಾ ತುಂಬಾನೇ ಖುಷಿ ಪಟ್ಟು ಕುಣಿದಿದ್ದಳು. ಆದರೆ ಸಮಸ್ಯೆ ಬಗೆಹರಿದ ಬಳಿಕ ಮತ್ತೆ ಮದುವೆ ಸಿದ್ಧತೆ ನಡೆದಿತ್ತು. ಕಾರ್ಡ್ ಕೂಡ ಹಂಚಿಕೆಯಾಗಿತ್ತು. ಆದರೆ ಈಗ ಮತ್ತೆ ಮದುವೆ ಮುರಿದು ಬೀಳುವ ಹಂತಕ್ಕೆ ಬಂದು ನಿಂತಿದೆ. ಶಶಾಂಕ್ ಈ ಮದುವೆ ಬೇಡವೆಂದು ದಿಯಾಳ ಬಳಿ ಹೇಳಿದಾಗ ದಿಯಾ ಅವನ ಗರ್ಲ್ ಫ್ರೆಂಡ್ನಿಂದಾಗಿ ಮದುವೆ ಮುರಿದು ಬಿದ್ದಿದೆ ಎಂದಿದ್ದಾಳೆ. ಆಗ ಶಶಾಂಕ್ ಮನೆಯಲ್ಲಿ ಶುಭಾಂಗಿ ಮಾಡಿದ ರಾದ್ಧಾಂತವನ್ನು ತಿಳಿಸಿ ಹೇಳಿದ್ದಾನೆ. ಈಗ ದಿಯಾ ಜವಾಬ್ದಾರಿ ತೆಗೆದುಕೊಂಡರೆ ಶುಭಾಂಗಿ ಗಪ್ ಚುಪ್ ಆಗುತ್ತಾಳೆ.

ಬೇಡವೆಂದವರೇ ಮನೆಗೆ ಬಂದು ಕೂತಿದ್ದಾರೆ
ಇಷ್ಟು ದಿನ ನಡುಕೋಟೆ ಮನೆಯಲ್ಲಿ ಬೇಸರ, ಅಸಮಾಧಾನ ಹೊಗೆಯಾಡುತ್ತಿತ್ತು. ವೀಣಾ ರೂಮಲ್ಲಿ ಕುಳಿತು ಯೋಚಿಸುತ್ತಲೆ ಇದ್ಧಳು. ಯಾರ ಜೊತೆಗೂ ಸೇರದೆ, ಊಟ ಸರಿಯಾಗಿ ಮಾಡದೆ ಕಣ್ಣೀರು ಹಾಕುತ್ತಿದ್ದಳು. ಅದಕ್ಕೆಲ್ಲ ಕಾರಣ ಭಾಸ್ಕರ ಎಂಬ ಹೆಸರು. ದಿಯಾಳಿಂದಾಗಿ ಈ ಎಲ್ಲಾ ಸಮಸ್ಯೆ ಬಗೆ ಹರಿದಿತ್ತು. ನಗು ಮತ್ತೆ ಕಾಣಿಸಿತ್ತು. ಇದೀಗ ಅದೇ ಭಾಸ್ಕರನ ಆಗಮನವಾಗಿದೆ. ಮನೆಯವರ ಮುಖದಲ್ಲೆಲ್ಲಾ ಆತಂಕ ಕಾಡುತ್ತಿದೆ. ವೀಣಾ ಈಗ ಧೈರ್ಯವಾಗಿ ನಿಂತು ಎಲ್ಲವನ್ನು ನಿಭಾಯಿಸುವ ಶಕ್ತಿ ತೆಗೆದುಕೊಳ್ಳಬೇಕಾಗಿದೆ.


Click it and Unblock the Notifications











