ಜೇನುಗೂಡು: ದಿಯಾಗೆ ಲವ್ ಆಗೋಗಿದೆ: ಡಿವೋರ್ಸ್ ಒಪ್ಪಂದ ಏನಾಗುತ್ತೆ?
ಸದ್ಯ ನಡುಕೋಟೆ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿನ ಮದುವೆಯನ್ನು 'ಜೇನುಗೂಡು' ಟೀಂನಿಂದ ಕಣ್ಣು ತುಂಬಿಕೊಳ್ಳಬಹುದಾಗಿದೆ. ಒಂದೊಂದು ಶಾಸ್ತ್ರದ ಮೂಲಕವೂ ಹಿರಿಯ ನಟ-ನಟಿಯರು ಮನರಂಜಿಸುವ ಭರವಸೆ ಇದೆ. ಈಗಾಗಲೇ ಬಳೆ ಶಾಸ್ತ್ರಕ್ಕೆ ಉಮೇಶ್ ಆಗಮನವಾಗಿದೆ. ಸ್ಟಾರ್ ಸುವರ್ಣ ಅಧಿಕೃತ ಅಕೌಂಟ್ನಲ್ಲಿ ಹಾಕಿರುವ ಪ್ರೋಮೊ ಮದುವೆ ಹೇಗಿರಲಿದೆ ಎಂಬುದನ್ನು ತೋರಿಸುತ್ತಿದೆ.
ಮದುವೆ ಸಂಭ್ರಮದ ಜೊತೆ ಜೊತೆಗೆ ಪ್ರೀತಿಯ ಪಕ್ಷಿಗಳ ಕಲರವವೂ ಕೇಳಲಿದೆ. ಅದು ಬೇರೆ ಯಾರು ಅಲ್ಲ. ಶಶಾಂಕ್ ಮತ್ತು ದಿಯಾ. ಇಷ್ಟು ದಿನ ಮಾತೆತ್ತಿದರೆ ಜಗಳವಾಡುತ್ತಿದ್ದ ಹಕ್ಕಿಗಳು ಈಗ ಲವ್ ಬರ್ಡ್ಸ್ ಆಗಲು ಹೊರಟಿದ್ದಾರೆ. ದಿಯಾಳಿಗೆ ಶಶಾಂಕ್ ಮೇಲೆ ಪ್ರೀತಿ ಶುರುವಾಗಿದ್ದು, ಒಳಗೊಳಗೆ ನಸು ನಗುತ್ತಿದ್ದಾಳೆ.

ಶಶಾಂಕ್ ಮೇಲೆ ಪ್ರೀತಿ ಹುಟ್ಟಲು ಕಾರಣ ಕ್ರಿಶ್
ದಿಯಾ ಮತ್ತು ಶಶಾಂಕ್ ಒಂದು ಕಡೆ ಸೇರಿದರು ಎಂದರೆ ಅಲ್ಲಿ ಜಗಳ ಗ್ಯಾರಂಟಿ. ಇವರಿಬ್ಬರೂ ಒಂದು ಕ್ಷಣ ಸುಮ್ಮನೆ ಇರಲಾರರು. ಕುಕ್ಕಿ ಅಂಡ್ ಗ್ಯಾಂಗ್ ಅಂತು ಇವರಿಬ್ಬರ ಜಗಳ ಬಿಡಿಸಿ, ಒಟ್ಟುಗೂಡಿಸುವುದಕ್ಕೆ ಸಾಕಷ್ಟು ಅವಿರತ ಶ್ರಮವಹಿಸುತ್ತಿದ್ದರು. ಆದರೆ ಕ್ರಿಶ್ ಹೇಳಿದ ಆ ಮಾತು ಇಬ್ಬರ ನಡುವಿನ ಮನಸ್ತಾಪವನ್ನೇ ದೂರ ಮಾಡಿಬಿಟ್ಟಿದೆ. ನೀನು ಮದುವೆಯಾಗುತ್ತಿರುವವನಿಂದ ನಿನಗೆ ಪ್ರೀತಿ ಸಿಗಲ್ಲ ಎಂದು ಹೇಳಿದ ಆ ಮಾತು ದಿಯಾಳ ಮನಸ್ಸನ್ನು ಬದಲಾಯಿಸಿದೆ. ಶಶಾಂಕ್ ಮೇಲೆ ಪ್ರೀತಿಯ ಮಳೆಯನ್ನೇ ಸುರಿಸುವಂತೆ ಮಾಡಿದೆ. ಇದಕ್ಕೆಲ್ಲಾ ನೇರ ಕಾರಣ ಕ್ರಿಶ್ ಮತ್ತು ಮಾಯಾ. ಹಳೇ ಫ್ಲ್ಯಾನ್ ಉಪಯೋಗಿಸಿ ಇಬ್ಬರನ್ನು ದೂರ ಮಾಡಲು ಹೊರಟಿದ್ದವರಿಂದಲೇ ಜಗಳವಾಡುತ್ತಿದ್ದವರು ಪ್ರೇಮಿಗಳಾಗಿದ್ದಾರೆ.

ಶಶಾಂಕ್ ಪ್ರೀತಿಗೆ ಮನಸೋತ ದಿಯಾ
ದಿಯಾ ಕಂಠಪೂರ್ತಿ ಕುಡಿದಿದ್ದರು ಒಂದು ಪ್ರಶ್ನೆಗೆ ಉತ್ತರ ಸಿಗದೆ ಸಮಧಾನವೇ ಆಗಲಿಲ್ಲ. ಅದು ಶಶಾಂಕ್ಗೆ ತನ್ನ ಮೇಲೆ ಪ್ರೀತಿ ಇದೆಯೋ ಇಲ್ಲವೋ ಎಂಬುದು. ನನ್ನ ಮೇಲೆ ಪ್ರೀತಿ ಇದೆಯಾ ಇಲ್ಲವ ಎಂಬುದನ್ನು ದಿಯಾ ಪದೇ ಪದೇ ಕೇಳುತ್ತಿದ್ದಳು. ಕುಡಿದಾಗಲೂ, ಕುಡಿದ ಮತ್ತಿನಿಂದ ಹೊರ ಬಂದಾಗಲೂ. ಇದಕ್ಕೆ ಶಶಾಂಕ್ ಕೂಡ ಅಷ್ಟೇ ಅಚ್ಚುಕಟ್ಟಾಗಿ ಉತ್ತರ ಕೊಟ್ಟಿದ್ದಾನೆ. ಮೊದಲು ನಿನ್ನೊಳಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ ಎಂಬುದು ಅರ್ಥ ಮಾಡಿಕೋ. ಆಮೇಲೆ ಆ ಪ್ರಶ್ನೆಗೆ ಉತ್ತರ ಸಿಗುತ್ತೆ. ನಮ್ಮ ಮನೆಯವರೆಲ್ಲರೂ ನಿನ್ನ ಪ್ರೀತಿ ಮಾಡುತ್ತಾರೆ ಎಂದಾಗ ದಿಯಾ ಒಂದಷ್ಟು ತಲೆಗೆ ಹುಳ ಬಿಟ್ಟುಕೊಂಡಳು. ಮನೆಯವರೆಲ್ಲಾ ಎಂದರೆ ಆ ಮನೆಯಲ್ಲಿಯೇ ಏಲಿಯನ್ ಕೂಡ ಇರುವುದು. ಅಂದರೆ ಏಲಿಯನ್ ಕೂಡ ನನ್ನ ಪ್ರೀತಿ ಮಾಡುತ್ತಾನೆ ಎಂಬ ಒಗಟನ್ನು ಬಿಡಿಸಿಯೇ ಬಿಟ್ಟಳು.

ಶಶಾಂಕ್ ಕಾಳಜಿಯ ಮುಂದೆ ದಿಯಾ ಸೋಲದೆ ಇರುವಳೆ
ಕ್ರಿಶ್ ಮೋಸ ಮಾಡಿ ದಿಯಾಗೆ ಜ್ಯೂಸ್ನಲ್ಲಿ ಹಾಲ್ಕೋಹಾಲ್ ಕುಡಿಸಿದ್ದ. ಈ ಮಧ್ಯೆ ನಿನ್ನ ಏಲಿಯನ್ ಇಲ್ಲಿಗೆ ಬರುವುದಕ್ಕೆ ಸಾಧ್ಯವೇ ಇಲ್ಲ ಎನ್ನಲಾಗಿತ್ತು. ಅದಕ್ಕೆ ದಿಯಾಳೆ ಕರೆ ಮಾಡಿದ್ದಳು. ಮೊದ ಮೊದಲಿಗೆ ಹೋಗುವುದಕ್ಕೆ ಒಪ್ಪದ ಶಶಾಂಕ್ ಬಳಿಕ ಕುಕ್ಕಿ ಹೇಳಿದ ವಿಚಾರ ಗಂಭೀರ ಎನಿಸಿ ಹೊರಟಿದ್ದ. ಪಾರ್ಟಿಯಲ್ಲಿ ಊಹಿಸಿದಂತೆಯೇ ನಡೆದಿತ್ತು. ಆದರೆ ಸರಿಯಾದ ಸಮಯಕ್ಕೆ ಬಂದ ಶಶಾಂಕ್, ಕ್ರಿಶ್ಗೆ ಕಪಾಳಮೋಕ್ಷ ಮಾಡಿ ದಿಯಾಳನ್ನು ಕರೆದುಕೊಂಡು ಹೋದ. ಅಲ್ಲಿಂದ ಇಲ್ಲಿಯವವರೆಗೂ ದಿಯಾಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ. ಆಕೆಯ ಮನಸ್ಸಿನ ನೋವನ್ನೆಲ್ಲಾ ಕೇಳಿಸಿಕೊಂಡ, ಹಸಿವು ಎಂದಾಗ ಕೈಯ್ಯಾರೆ ಪಾನಿಪೂರಿ ತಿನ್ನಿಸಿದ. ಈ ಎಲ್ಲಾ ಕಾಳಜಿ ದಿಯಾಳ ಕಣ್ಣಿಗೆ ಪ್ರೀತಿಯಾಗಿಯೇ ಕಂಡಿತ್ತು. ಅದಕ್ಕೆ ಹಿಂದೆ ಮುಂದೆ ನೋಡದೆ ಗಟ್ಟಿಯಾಗಿ ತಬ್ಬಿದ್ದಳು. ಗಾಡಿಯಲ್ಲಿಯೂ ಶಶಾಂಕ್ನನ್ನು ಪ್ರೀತಿಯಿಂದ ಆಲಂಗಿಸಿದಳು. ಮನೆಯಲ್ಲೂ ಆತನ ಕೈ ಬಿಡುತ್ತಲೇ ಇರಲಿಲ್ಲ. ಇದು ಮನೆಯವರಿಗೆ ಒಂದು ರೀತಿಯ ಖುಷಿಕೊಟ್ಟರೂ, ಸತ್ಯವನ್ನು ತಿಳಿಯಲು ಯತ್ನಿಸಿದ್ದಾರೆ. ಕ್ರಿಶ್ ಮಾಡಿ ದೊಡ್ಡ ತಪ್ಪಿನಿಂದ ಅಳಿಯನಾಗುವ ಶಶಾಂಕ್ ನಡವಳಿಕೆಗೆ ಡಾಕ್ಟರ್ ಶ್ರೀಧರ್ ಮತ್ತಷ್ಟು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಪ್ರೀತಿಗಾಗಿ ದಿಯಾ ಡಿಗ್ರಿ ಪಾಸ್ ಮಾಡೋದಿಲ್ವಾ?
ದಿಯಾ ಮತ್ತು ಶಶಾಂಕ್ ಈ ಹಿಂದೆ ಇಷ್ಟವಿಲ್ಲದೆ ಮದುವೆಯಾಗಲು ಹೊರಟವರು. ಮನೆಯವರಿಗೆ ನೋವಾಗಬಾರದು ಎಂಬ ಕಾರಣಕ್ಕೆ ಒಪ್ಪಿಕೊಂಡರು. ಹಲವು ಸಮಸ್ಯೆಗಳು ಬಂದರು ಅದನ್ನೆಲ್ಲಾ ಮೀರಿ ಮದುವೆ ಸಂಭ್ರಮ ಶುರುವಾಗಿದೆ. ಆದರೆ ದಿಯಾ ಮತ್ತು ಶಶಾಂಕ್ ಈ ಮುಂಚೆ ಒಂದು ಒಪ್ಪಂದ ಮಾಡಿಕೊಂಡಿದ್ದರು. ಅದು ಮನೆಯವರಿಗೂ ಗೊತ್ತಿರುವ ವಿಚಾರವೇ. ದಿಯಾ ಡಿಗ್ರಿಯನ್ನು ಫಸ್ಟ್ ಕ್ಲಾಸ್ನಲ್ಲಿ ಪಾಸ್ ಮಾಡಿದರೆ ಡಿವೋರ್ಸ್ ಪಡೆಯುವುದು ಎಂದು. ಒಂದು ವರ್ಷಕ್ಕೆ ಮಾತ್ರ ಇದು ಅಧಿಕೃತ ಮದುವೆಯಾಗಿ ಉಳಿಯುವುದು ಎಂಬುದಾಗಿತ್ತು. ಆದರೆ ಈಗ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಪ್ರೀತಿಗಾಗಿ ದಿಯಾ ಡಿಗ್ರಿ ಬಿಡುತ್ತಾಳಾ ಅಥವಾ ಡಿಗ್ರಿಗಾಗಿ ಪ್ರೀತಿ ತೊರೆಯುತ್ತಾಳಾ ನೋಡಬೇಕಿದೆ.


Click it and Unblock the Notifications











