'ಕಾವೇರಿ ಕನ್ನಡ ಮೀಡಿಯಂ' ಅಷ್ಟೇ.. ತಾಳಿಗೆ ಕೈ ಹಾಕಿದರೆ ಸಿಕ್ಕಿದ ಜಾಗಕ್ಕೆ ಒದೆಯೋದೆ..!
ಕಾವೇರಿ ಜೀವನದಲ್ಲಿ ಅಗಸ್ತ್ಯನೇ ಬರಬೇಕು ಎಂಬುದು ಅಜ್ಜಿಯ ಆಸೆಯಾಗಿತ್ತು. ಅದರಂತೆ ದೇವರ ಇಚ್ಚೆಯೂ ಆಗಿತ್ತು. ಎರಡು ಒಟ್ಟಿಗೆ ಕೂಡಿ ಬಂತು. ಮದುವೆಯೂ ಆಯಿತು. ಕಾವೇರಿ ಪರಿಸ್ಥಿತಿಯ ಕೈಗೊಂಬೆಯಾಗಿ ಇನ್ನೇನು ಬೇರೆಯವರ ಪಾಲಾಗಬೇಕಿತ್ತು. ಆದರೆ ಅಗಸ್ತ್ಯನೇ ಕಾಪಾಡಿದ. ಅಜ್ಜಿ ಎಂದರೆ ಪ್ರಾಣ ಬಿಡುವ ಮೊಮ್ಮಗ ಅಜ್ಜಿಯ ಮಾತನ್ನು ಮೀರಲೇ ಇಲ್ಲ. ಇಷ್ಟವಿಲ್ಲದೆ ಹೋದರು ತಾಳಿ ಕಟ್ಟಿದ.
ಕಾವೇರಿ ಕನ್ನಡ ಮೀಡಿಯಂ ಹುಡುಗಿಯಾದರೂ, ಕನ್ನಡಕ್ಕೆ ಎಷ್ಟು ಗೌರವ ಕೊಡುತ್ತಾಳೋ, ಅಷ್ಟೇ ಗೌರವವನ್ನು ಸಂಸ್ಕೃತಿ, ಸಂಪ್ರದಾಯಕ್ಕೂ ಕೊಡುತ್ತಾಳೆ. ಗಂಡ ನೀನು ಇಷ್ಟ ಇಲ್ಲ ಎಂದರೂ, ತಾಳಿಯನ್ನು ದೇವರೆಂದೇ ಪೂಜಿಸುತ್ತಾಳೆ. ತಾಳಿ ಕಟ್ಟಿದವನಿಗೆ ಸರ್ ಎಂದರೂ, ಗಂಡನಿಗೆ ಒಳ್ಳೆಯದ್ದನ್ನೇ ಮಾಡಪ್ಪ ಅಂತ ದೇವರಲ್ಲಿ ಬೇಡಿಕೊಳ್ಳುತ್ತಾಳೆ. ಇಷ್ಟೆಲ್ಲ ಗುಣವಿರುವ ಕಾವೇರಿಯ ತಾಳಿಗೆ ಕೈ ಹಾಕಿದರೆ ಸುಮ್ಮನೆ ಇರುತ್ತಾಳಾ..?

ಕಾವೇರಿಯನ್ನು ಅಡ್ಡಗಟ್ಟಿದ ದುಷ್ಟರು
ಕಾವೇರಿ, ತನ್ನ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಸಲುವಾಗಿ, ಸವಾಲು ಸ್ವೀಕರಿಸಿ, ಅಗಸ್ತ್ಯನ ಶಾಲೆಗೆ ಟೀಚರ್ ಆಗಿ ಬಂದಿದ್ದಾಳೆ. ಆದರೆ ವಿಧಿ ಇಬ್ಬರ ಬಾಳಲ್ಲಿ ಮದುವೆಯೆಂಬ ಬಂಧವನ್ನೇ ಬೆಸೆದು, ಜೀವನಪೂರ್ತಿ ಜೊತೆಗೆ ಇರುವಂತೆ ಮಾಡಿದೆ. ತಾಳಿ ಕಟ್ಟಿದ ಗಂಡನ ಶಾಲೆಯೇ ಆದರೂ ಕಾವೇರಿ ಆ ಅಧಿಕಾರವನ್ನು ಯಾವತ್ತಿಗೂ ತೋರಿಸಿಲ್ಲ. ಯಾರ ಮೇಲೂ ಅವಲಂಬಿತಳಾಗಿಲ್ಲ. ಶಾಲೆಗೂ ಒಬ್ಬಳೆ ಹೋಗುತ್ತಾಳೆ, ಬರುವಾಗಲೂ ಒಬ್ಬಳೇ ಬರುತ್ತಾಳೆ. ಈ ಮಧ್ಯೆ ದುಷ್ಟರು ಕಾವೇರಿಯನ್ನು ಅಡ್ಡಗಟ್ಟಿದ್ದಾರೆ. ಕಾವೇರಿ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಆದರೂ ನಿರ್ಲಕ್ಷ್ಯ ಮಾಡಿ ಕಾವೇರಿ ಮುಂದಕ್ಕೆ ಸಾಗುವುದಕ್ಕೆ ಪ್ರಯತ್ನಿಸಿದ್ದಾಳೆ.
ತಾಳಿ ಮುಟ್ಟಿದ ದುಷ್ಟನಿಗೆ ಒದ್ದ ಕಾವೇರಿ
ಆ ದುಷ್ಟರು ಕಾವೇರಿ ಬಳಿ ಕೆಟ್ಟದಾಗಿ ನಡೆದುಕೊಂಡರು. ಮೇಡಂ ಬನ್ನಿ ನಮ್ಮ ಜೊತೆಗೆ ಎಂದಾಗ ಕಾವೇರಿ, ಕೈ ತಳ್ಳಿ ಮುಂದಕ್ಕೆ ಹೋಗುವುದಕ್ಕೆ ಪ್ರಯತ್ನ ಪಟ್ಟಳು. ತಕ್ಷಣ ತಾಳಿಗೆ ಕೈ ಹಾಕಿದ ವ್ಯಕ್ತಿ, ಏನು ಮಾಡುವುದಕ್ಕೆ ಆಗುತ್ತೆ ಈಗ. ಹೊಡಿತಿಯಾ ಹೊಡಿ ನೋಡೋಣಾ ಎಂದ. ಕಾವೇರಿಗೆ ಅದೆಲ್ಲಿತ್ತೋ ಕೋಪ, ಮಂಡಿಯಿಂದ ಜಾಡಿಸಿ ಒದ್ದೆ ಬಿಟ್ಟಳು. ತಾಳಿ ಹಿಡಿದವ ನೆಲ ಕಚ್ಚಿದ. ಇನ್ನುಳಿದ ಪುಂಡರಿಗೂ ಹೆದರಿಕೊಳ್ಳದ ಕಾವೇರಿ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾಳೆ.

ಖದೀಮರಿಗೆ ಹಿಗ್ಗಾಮುಗ್ಗಾ ಜಾಡಿಸಿದ ಕಾವೇರಿ
ತಾಳಿಯನ್ನು ಮುಟ್ಟಿದವನಿಗೆ ಮಾತ್ರವಲ್ಲ, ಅವನ ಜೊತೆಗೆ ಬಂದಿದ್ದವರಿಗೂ ಕಾವೇರಿ ಬಿಸಿ ಮುಟ್ಟಿಸಿದ್ದಾಳೆ. ಅದು ಒಂದೆರಡು ಒದೆಯಲ್ಲ, ಇನ್ಯಾವತ್ತು ಅವರು ಏಳಲೇ ಬಾರದು ಹಂಗೆ ರುಬ್ಬಾಕಿದ್ದಾಳೆ. ಕಾವೇರಿಯ ಫೈಟ್ ನೋಡಿದರೆ ಯಾವ ಹೀರೋಗೂ ಕಡಿಮೆಯಿರಲಿಲ್ಲ. ದೊಣ್ಣೆ, ಕೈ ಬಳಸಿ ಹೊಡೆದಿದ್ದಾಳೆ. ಹೆಗರಿಸಿ ಎದೆಗೆ ಒದ್ದಿದ್ದಾಳೆ. ಅಷ್ಟೇ ಯಾಕೆ ಹೆಗರಿ ಬಂದವನಿಗೆ ಕಾರಿನ ಡಿಕ್ಕಿಗೆ ಹಾಕಿ ರುಬ್ಬಿದ್ದಾಳೆ.
ಕಾವೇರಿಗೆ ಕೋಪ ಬಂದರೆ ಕಥೆ ಮುಗೀತು
ಕಾವೇರಿ ಬಂದ ದುಷ್ಟರನ್ನು ಸಂಹರಿಸಲು ಕಾಳಿಯ ಅವತಾರವನ್ನೇ ಎತ್ತಿದ್ದಳು. ಮಹಿಷಾಸುರನನ್ನು ಚಾಮುಂಡಿ ತನ್ನ ತ್ರಿಶೂಲದಲ್ಲಿ ಕೊಲ್ಲುವಂತೆ, ಕಾವೇರಿ ದೊಣ್ಣೆ ಹಿಡಿದು ನಿಂತಿದ್ದಳು. ಅದೇ ಸಮಯಕ್ಕೆ ಅಲ್ಲಿಗೆ ಅಗಸ್ತ್ಯ ಬಂದಿದ್ದಾನೆ. ಕಾವೇರಿಯ ಕಾಳಿ ಅವತಾರ ನೋಡಿ ಶಾಕ್ ಆಗಿದ್ದಾನೆ. ಗರ ಬಡಿದವನಂತೆ ನಿಂತಿದ್ದಾನೆ. ಮಗುವಿನಂತೆ ಇದ್ದ ಕಾವೇರಿಯಲ್ಲೂ ಇಷ್ಟೊಂದು ಕ್ರೌರ್ಯವಿದೆಯಾ ಎಂಬ ಆಶ್ಚರ್ಯದಿಂದ ನೋಡಿದ್ದಾನೆ. ತಾಳಿಯ ವಿಚಾರಕ್ಕೆ ಕಾವೇರಿ, ಈ ವೇಷ ತೊಟ್ಟಿದ್ದಾಳೆ ಎಂದು ಗೊತ್ತಾದರೆ ಅಗಸ್ತ್ಯ ತಣ್ಣಗಾಗಬಹುದು.


Click it and Unblock the Notifications











