ಅಮ್ಮನ ಮಗನಾಗಿದ್ದ ವಸಿಷ್ಠ ಸಿಂಹನಿಗೆ ಅಮ್ಮ ಇಲ್ಲ ಎಂದು ಗೊತ್ತಾದಾಗ..!
ಅಮ್ಮ ಅಮ್ಮನೇ.. ಯಾರೇ ಬಂದರೂ, ಎಷ್ಟೇ ಕೊಟ್ಟರೂ, ಏನೇ ಮಾಡಿದರೂ ಅಮ್ಮನ ಸ್ಥಾನ ತುಂಬುವುದಕ್ಕೆ ಎಂದಿಗೂ ಸಾಧ್ಯವಿಲ್ಲ. ಅಮ್ಮನ ಬಗ್ಗೆ ಮನತುಂಬಿ ಮಾತನಾಡಲು ಸಿಗುವ ಸಮಯ, ಜಾಗ ಕಡಿಮೆಯೇ. ಅದು ಸಿಕ್ಕಾಗ ಹೇಳುವ ಒಂದೊಂದು ಮಾತು ಅದೆಷ್ಟೋ ಮಕ್ಕಳಿಗೆ ಮಾಡಿದ ತಪ್ಪಿನ ಅರಿವಾಗುತ್ತೆ. ಇನ್ನು ಅದೆಷ್ಟೋ ಮಕ್ಕಳಿಗೆ ತನ್ನ ತಾಯಿಯ ಇಲ್ಲದಿರುವಿಕೆ ನೋವು ತರಿಸುತ್ತದೆ. ಸ್ಟಾರ್ ಸುವರ್ಣ ಮಕ್ಕಳ ಮನದಾಳದ ಮಾತು ಹೇಳಿಕೊಳ್ಳುವುದಕ್ಕೆ ವೇದಿಕೆಯೊಂದನ್ನು ಕಲ್ಪಿಸಿಕೊಟ್ಟಿದೆ.
ತಾಯಂದಿರ ದಿನಕ್ಕಾಗಿ ಸ್ಟಾರ್ ಸುವರ್ಣದಲ್ಲಿ ಅಮ್ಮ ಎಂಬ ಕಾರ್ಯಕ್ರಮ ಮಾಡಲಾಗಿದೆ. ಆ ವಿಶೇಷ ಕಾರ್ಯಕ್ರಮ ಇಂದು (ಮಾರ್ಚ್ 8) ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಸೆಲೆಬ್ರೆಟಿಗಳನ್ನು ಕರೆಸಿ, ಒಂದಷ್ಟು ನೆನಪುಗಳನ್ನು, ಸಿಹಿ - ಕಹಿ ಘಟನೆಯನ್ನು ಮೆಲುಕು ಹಾಕಲಾಗಿದೆ. ಅದರಲ್ಲಿ ವಸಿಷ್ಠ ಸಿಂಹ ಅವರ ತಾಯಿಯ ಜೊತೆಗಿನ ದಿನಗಳು ತುಂಬಾ ಅತ್ಯಮೂಲ್ಯವಾದದ್ದು ಎನಿಸಿದೆ. ಸಾಕಷ್ಟು ಮಕ್ಕಳಿಗೆ ವಸಿಷ್ಠ ಸಿಂಹ ಅವರ ಮಾತು ಹೃದಯವನ್ನು ಭಾರ ಮಾಡಿದೆ.
ಸಾಕಷ್ಟು ಮಕ್ಕಳಲ್ಲಿ ಈ ಗುಣವಿರುತ್ತದೆ. ಆ ಮಕ್ಕಳನ್ನು ತಾಯಿ ಸಿಕ್ಕಾಪಟ್ಟೆ ಪ್ಯಾಂಪರ್ ಮಾಡಿರುತ್ತಾಳೆ ಎಂಬಂತಲ್ಲ. ಅಮ್ಮ ಬೆಸ್ಟ್ ಫ್ರೆಂಡ್ ಆಗಿ ಹೋಗಿರುತ್ತಾಳೆ. ಸುತ್ತ ಮುತ್ತ ತನ್ನ ವಯಸ್ಸಿನ ಮಕ್ಕಳು ಕಂಡರು ಅಮ್ಮನಿಗಿಂತ ಬೆಸ್ಟ್ ಫ್ರೆಂಡ್ ಎಂಬಂತೆ ಫೀಲ್ ಆಗುವುದಿಲ್ಲ. ಅಮ್ಮನ ತೋಳು ಧೈರ್ಯ, ಅಮ್ಮ ಜೊತೆಗಿದ್ದರೆ ಭಯವಿಲ್ಲ. ಎಲ್ಲಿಯೇ ಹೋದರು ಅಮ್ಮನ ಸೆರಗನ್ನು ಹಿಡಿದೆ ನಡೆಯುತ್ತಾರೆ. ಸಾಕಷ್ಟು ಜನ ಅಮ್ಮನ ಬಾಲ, ಅಮ್ಮನ ಬೆಳ್ಳುಳ್ಳಿ ಎಂದೇ ಟೀಕಿಸಿರುವುದು ಉಂಟು. ಇದೇ ರೀತಿ ಬೆಳೆದವರು ನಟ ವಸಿಷ್ಠ ಸಿಂಹ. ಅಮ್ಮನನ್ನು ಬಿಟ್ಟರೆ ಇನ್ನು ಪ್ರಪಂಚವೇ ಇಲ್ಲ ಎಂಬಂತಿದ್ದ ಸಮಯದಲ್ಲಿ ವಸಿಷ್ಠ ಅವರಿಗೆ ಅಮ್ಮ ಬಾರದ ಲೋಕಕ್ಕೆ ಪಯಣಿಸಿದರೆ ಏನಾಗಬೇಡ. ಆ ಸ್ಥಿತಿ, ಅದರಿಂದ ಹೊರಗೆ ಬಂದ ನೋವಿನ ಬಗ್ಗೆ ಸ್ಟಾರ್ ಸುವರ್ಣದಲ್ಲಿ ಹಂಚಿಕೊಂಡಿದ್ದಾರೆ.

ಐದು ದಿನ ಅಮ್ಮ ಹೇಗಿದ್ದಾರೆ ಎಂಬುದೇ ಗೊತ್ತಿರಲಿಲ್ಲ
ಬೆಳಗ್ಗೆ ಎದ್ದಾಗಲೂ ಅಮ್ಮ ಕಣ್ಣೆದುರು ಇರಬೇಕಿತ್ತು. ನನಗೆ ಬರೆಯುವುದಕ್ಕೆ ಬರುತ್ತಾ ಇರಲಿಲ್ಲ ಅಂತ ಅಲ್ಲ. ಅಮ್ಮನೇ ಬರೆಸಬೇಕಿತ್ತು. ನಾನು 6 ನೇ ತರಗತಿಯಲ್ಲಿದ್ದಾಗ ಅಮ್ಮ ತೀರಿಕೊಂಡರು. ಅಮ್ಮನ ಸೆರಗಿಟ್ಟುಕೊಂಡೆ ಓಡಾಡುತ್ತಿದ್ದವನು. ಅವರು ಇನ್ನಿಲ್ಲ ಎಂದಾಗ. ಪ್ರಪಂಚವೇ ಅಮ್ಮ ಆಗಿದ್ದರು. ಅವರು ಬಿಟ್ಟರೆ ಬೇರೆ ಯಾರು, ಏನು ಗೊತ್ತಿಲ್ಲ. ಅಮ್ಮ ನಾಳೆಯಿಂದ ಬರುವುದಿಲ್ಲ ಎಂದಾಗ ಅದನ್ನು ಅರಗಿಸಿಕೊಳ್ಳುವುದಕ್ಕೆ ಒಂದಷ್ಟು ದಿನ ಸಮಯ ಹಿಡಿಯಿತು. ಅಮ್ಮನನ್ನು ಹಾಸ್ಪಿಟಲ್ಗೆ ಕರೆದುಕೊಂಡು ಹೋಗಿದ್ದರು. ಯಾಕೆ..? ಏನಾಯ್ತು ಗೊತ್ತಿಲ್ಲ. ಐದು ದಿನ ಅಮ್ಮನನ್ನು ನೋಡಿಯೇ ಇರಲಿಲ್ಲ. ಬರುತ್ತಾರೆ ಬರುತ್ತಾರೆ ಅಂತಾನೇ ಹೇಳುತ್ತಿದ್ದರು. ನಾನು ತುಂಬಾ ಹಠ ಮಾಡಿದಾಗ ಆರನೇ ದಿನಕ್ಕೆ ಕರೆದುಕೊಂಡು ಹೋದರು. ಅಷ್ಟು ದಿನ ಸನ್ನೆಯನ್ನಾದರೂ ಮಾಡುತ್ತಿದ್ದ ಅಮ್ಮ ನಾನು ಹೋಗಿ ನೋಡುವಷ್ಟರಲ್ಲಿ ಪ್ರಜ್ಞೆ ಇಲ್ಲದೆ ಮಲಗಿದ್ದರು ಎಂದು ತಾಯಿ ಕಳೆದುಕೊಂಡಾಗಿನ ನೋವು ಹಂಚಿಕೊಂಡಿದ್ದಾರೆ.
ಊರೇನೆ ಎಂದರು ನೀನು ನನ್ನ ದೇವರು ಎಂದ ವಸಿಷ್ಠ
ಎಂಥವರಿಗೆ ಆಗಲಿ ತಾಯಿಯನ್ನು ಕಳೆದುಕೊಳ್ಳುವ ವಿಚಾರ ಸುಲಭದ ವಿಚಾರ ಅಲ್ಲ. ಪ್ರಪಂಚದಲ್ಲಿ ಎಲ್ಲಾ ಮಕ್ಕಳು ದೇವರಲ್ಲಿ ಬೇಡಿಕೊಳ್ಳುವಾಗ ನನ್ನ ಆಯಸ್ಸು ಕಡಿಮೆಯಾದರೂ ಪರವಾಗಿಲ್ಲ ನನ್ನ ತಾಯಿಯ ಆಯಸ್ಸು ಹೆಚ್ಚು ಮಾಡು ಎಂದೇ ಬೇಡಿಕೊಳ್ಳುತ್ತಾರೆ. ವಸಿಷ್ಠ ಸಿಂಹ ಅವರು ಕೂಡ ಅದನ್ನೇ ಬಯಸುತ್ತಿದ್ದರು. ಆದರೆ ಬೇಡಿಕೆಗೂ ಮೀರಿದ್ದು ವಿಧಿಯಾಟ. ಒಮ್ಮೆ ತೀರ್ಮಾನಿಸಿದರೆ ತನ್ನ ಜೊತೆ ಕರೆದುಕೊಂಡು ಹೋಗಿ ಬಿಡುತ್ತದೆ. ವಸಿಷ್ಠ ಸಿಂಹ ಅವರ ತಾಯಿಯೂ ತುಂಬಾ ಬೇಗನೆ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಸ್ಟಾರ್ ಸುವರ್ಣದ ಅಮ್ಮ ವೇದಿಕೆಯಲ್ಲಿ ವಸಿಷ್ಠ ಸಿಂಹ ಅವರು ಹಾಡನ್ನು ಹಾಡುವ ಮೂಲಕ ತಾಯಂದಿರ ದಿನಾಚರಣೆಗೆ ಶುಭ ಕೋರಿದ್ದಾರೆ. ಅಮ್ಮ ಊರೇನೆ ಎಂದರು ನೀನು ನನ್ನ ದೇವರು ಹಾಡು ಹಾಡಿದ್ದಾರೆ.
ಅಮ್ಮನ ಬಗ್ಗೆ ಅನುಪ್ರಭಾಕರ್ ಮಾತು
ಕಷ್ಟದ ದಿನಗಳಲ್ಲಿ ನೆರೆಹೊರೆಯವರು, ಸಂಬಂಧಿಕರು, ಸ್ನೇಹಿತರು ಜೊತೆ ನಿಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಅಮ್ಮ ಎನ್ನುವ ದೊಡ್ಡ ಶಕ್ತಿ ಮಕ್ಕಳ ಜೊತೆಗೆ ನಿಲ್ಲುತ್ತಾರೆ. ಜಗತ್ತೆ ಮಕ್ಕಳನ್ನು ದೂಷಿಸಿದರು ತನ್ನ ಮಕ್ಕಳಿಗಾಗಿ ಆಕೆ ಕಾವಲಾಗುತ್ತಾಳೆ. ಹಲವರ ಬಳಿ ನಿಂದನೆಯನ್ನು ಮಾಡಿಸಿಕೊಳ್ಳುತ್ತಾಳೆ. ಸೆಲೆಬ್ರೆಟಿಗಳ ಜೀವನದಲ್ಲೂ ತಾಯಿ ತುಂಬಾ ಮುಖ್ಯ ಪಾತ್ರ ವಹಿಸುತ್ತಾರೆ. ನಟಿ ಅನುಪ್ರಭಾಕರ್ ಕೂಡ ತನ್ನ ತಾಯಿಯ ತ್ಯಾಗ ನೆನೆದು, ಧನ್ಯವಾದ ತಿಳಿಸಿದ್ದಾರೆ. ಅನುಪ್ರಭಾಕರ್ ಕಷ್ಟದ ದಿನಗಳು, ನಟನೆಗೆ ಬೆಂಬಲ, ಈಗ ಮೊಮ್ಮಗಳ ಕೇರಿಂಗ್ವರೆಗೂ ಗಾಯತ್ರಿ ಪ್ರಭಾಕರ್ ತುಂಬಾನೇ ಪ್ರಾಮುಖ್ಯತೆ ವಹಿಸಿದ್ದಾರೆ. ಅದೇ ವಿಚಾರವನ್ನು ಅನುಪ್ರಭಾಕರ್ ಅಮ್ಮ ವೇದಿಕೆಯಲ್ಲಿ ಹಂಚಿಕೊಂಡಿದ್ದು, ಅಮ್ಮ ಎಂದರೆ ನನ್ನ ಅಸ್ತಿತ್ವ ಎಂದಿದ್ದಾರೆ. ಗಾಯತ್ರಿ ಪ್ರಭಾಕರ್ ಕೂಡ ಅನು ನನ್ನ ಮಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಅಮ್ಮ ವೇದಿಕೆಯಲ್ಲಿ ಅಳಿಸಿದವರು ಯಾರು?
ಇಂದು ನಡೆಯುವ ಅಮ್ಮ ವೇದಿಕೆಗೆ ಹಲವು ಸೆಲೆಬ್ರೆಟಿಗಳು ಬಂದಿದ್ದಾರೆ. ಭವ್ಯ, ಶರಣ್, ಸಿಂಪಲ್ ಸುನಿ, ಅನುಪ್ರಭಾಕರ್-ಗಾಯತ್ರಿ ಪ್ರಭಾಕರ್, ಸಂಜನಾ ಆನಂದ್ ಅವರ ತಾಯಿ, ವಸಿಷ್ಠ ಸಿಂಹ, ದಿಯಾ ಖುಷಿ ಮತ್ತು ಮಗಳು. ಈ ಎಲ್ಲಾ ತಾರೆಯರು ತಮ್ಮ ತಾಯಂದಿರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಅಮ್ಮನ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟೇ ಅಲ್ಲ ನಿರೂಪಕಿ ಸುಷ್ಮಾ ರಾವ್ ಅವರ ಕಣ್ಣಲ್ಲೂ ನೀರು ತರಿಸಿದ್ದಾರೆ. ಅದ್ದೂರಿ ವೇದಿಕೆಯಲ್ಲಿ ಅದ್ದೂರಿ ಕಾರ್ಯಕ್ರಮ ಅಂದವಾಗಿ ಮೂಡಿ ಬಂದಿದೆ.


Click it and Unblock the Notifications











