ಹೈದರಾಬಾದ್ ರೇಪ್ ಕೇಸ್: ಹಳೇಕಾಲದ ಯೋಚನೆಗಳೇ ಸರಿ ಎಂದ ಶ್ರುತಿ ನಾಯ್ಡು
ಹೈದರಾಬಾದ್ ನಲ್ಲಿ ಪಶು ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿದೆ. ದೇಶದ ಮೂಲೆ ಮೂಲೆಯಲ್ಲೂ ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕುರಿತು ಒತ್ತಡ ಹೆಚ್ಚಾಗುತ್ತಿದೆ.
ಹೀಗಿರುವಾಗಲೇ, ''ಹಳೇಕಾಲದ ಯೋಚನೆಗಳೇ ಸರಿ'' ಎಂದು ಕಿರುತೆರೆ ನಟಿ, ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡು ಅಭಿಪ್ರಾಯ ಪಟ್ಟಿದ್ದಾರೆ. ''ನಮ್ಮ ರಕ್ಷಣೆ, ನಮ್ಮ ಹಕ್ಕು, ನಮ್ಮ ಸುಂದರ ಭವಿಷ್ಯ ಕ್ರಾಂತಿಕಾರಿ ಆಲೋಚನೆಗಳಿಗಿಂತ ದೊಡ್ಡದು'' ಎಂದು ಶ್ರುತಿ ನಾಯ್ಡು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
''ಹೈದರಾಬಾದ್ ನಲ್ಲಿ ನಡೆದ ದುರ್ಘಟನೆ ಬಗ್ಗೆ ತಿಳಿದಾಗಿನಿಂದಲೂ ಮನಸ್ಸಿಗೆ ಬಹಳ ನೋವಾಗಿದೆ. ನನ್ನ ಗೆಳತಿಯರಲ್ಲಿ ನನ್ನ ವಿನಂತಿ ಏನೆಂದರೆ ನೀವು ಯಾವಾಗಲೂ ಎಚ್ಚರದಿಂದಿರಿ ಮತ್ತು ಯಾವ ಸಂದರ್ಭವನ್ನು ಲಘುವಾಗಿ ಪರಿಗಣಿಸ ಬೇಡಿ. ನನ್ನದು ಹಳೇಕಾಲದ ಯೋಚನೆಗಳು ಅನಿಸಬಹುದು. ಇತ್ತೀಚೆಗೆ ನನ್ನ ಹಲವಾರು ಸ್ನೇಹಿತೆಯರು 'ಸೋಲೋ ಟ್ರಿಪ್'ಗಳಲ್ಲಿ ಆಸಕ್ತಿ ತೋರಿಸುತ್ತಿರುವುದನ್ನು ಕಾಣುತ್ತಿದ್ದೇನೆ. ಹೌದು, ಎಲ್ಲ ಮಹಿಳೆಯರಿಗೂ ನಾವು ಸ್ವತಂತ್ರರು, ಪುರುಷರಿಗಿಂತ ನಾವು ಯಾವುದರಲ್ಲೂ ಕಮ್ಮಿ ಇಲ್ಲ ಅನ್ನೋ ಭಾವನೆ ಇದೆ. ಅದು ತಪ್ಪು ಎಂದು ನಾನು ಹೇಳುತ್ತಿಲ್ಲಾ. ಆದರೆ ನಮ್ಮ ರಕ್ಷಣೆ ನಮ್ಮ ಹಕ್ಕು. ನಮ್ಮ ಒಳಿತನ್ನೇ ಬಯಸುವ ನಮ್ಮ ಪೋಷಕರು, ನಮ್ಮ ಮಕ್ಕಳು, ನಮ್ಮ ಸುಂದರ ಭವಿಷ್ಯ ಈ ಕ್ರಾಂತಿಕಾರಿ ಆಲೋಚನೆ ಗಿಂತ ದೊಡ್ಡದು ಎಂದು ನಾನು ನಂಬಿರುವೆ. ದಯವಿಟ್ಟು ಸದಾ ಎಚ್ಚರದಿಂದಿರಿ'' ಎಂದು ಮನವಿ ಮಾಡಿದ್ದಾರೆ ಶ್ರುತಿ ನಾಯ್ಡು.

ಮಹಿಳೆಯರ ಸುರಕ್ಷತೆ ಬಗ್ಗೆ ದನಿ ಎತ್ತುವ ಶ್ರುತಿ ನಾಯ್ಡು, ತಮ್ಮ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುವ ಮಹಿಳೆಯರ ಸೇಫ್ಟಿ ಬಗ್ಗೆ ಕಾಳಜಿ ವಹಿಸುತ್ತಾರೆ. ಅಪ್ಪಿ-ತಪ್ಪಿ ಚಿತ್ರೀಕರಣ ತಡವಾದರೆ, ತಮ್ಮ ಕುಟುಂಬದ ಸದಸ್ಯರನ್ನು ಬರಹೇಳುವಂತೆ ಮಹಿಳಾ ಆರ್ಟಿಸ್ಟ್ ಗಳಲ್ಲಿ ಶ್ರುತಿ ನಾಯ್ಡು ಕೇಳಿಕೊಳ್ಳುತ್ತಾರಂತೆ.
''ಸದಾ ಎಚ್ಚರದಿಂದಿರಿ.. ಹಳೇಕಾಲದ ಯೋಚನೆಗಳನ್ನು ಅನುಸರಿಸಿ'' ಎಂದಿರುವ ಶ್ರುತಿ ನಾಯ್ಡು ಅಭಿಪ್ರಾಯ ಸರಿ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











