Shrirasthu Shubhamasthu: ತುಳಸಿ ಗರ್ಭಿಣಿ ವಿಚಾರಕ್ಕೆ ಟೀಕೆ; ಲೇಟ್ ಪ್ರೆಗ್ನೆನ್ಸಿ ಬಗ್ಗೆ ಅರಿವು ಮೂಡಿಸುತ್ತಿರುವ ಫ್ಯಾನ್ಸ್!
ಜೀ ಕನ್ನಡದಲ್ಲಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಆರಂಭವಾದಾಗಿನಿಂದ ಒಳ್ಳೆ ಸಂದೇಶದ ಜೊತೆ ಎಲ್ಲರ ಮನ ಗೆದ್ದಿದೆ. ಅದರಲ್ಲೂ ಮಹಿಳೆಯರ ಬಗೆಗಿನ ಕಾಳಜಿಗೇನೆ ಎಲ್ಲರಿಂದ ಪ್ರಶಂಸೆ ಪಡೆದುಕೊಂಢೂ ಬಂದಿದೆ. ಒಬ್ಬ ಮಹಿಳೆ ಮದುವೆಯಾದ ಮೇಲೆ, ಮಕ್ಕಳಾದ ಮೇಲೆ ಆಕೆಯ ಜೀವನ ಹೇಗೆ ಬದಲಾಗುತ್ತದೆ ಎಂಬುದನ್ನು ಆರಂಭದಲ್ಲಿ ತೋರಿಸಿದ್ದರು.
ಮದುವೆಯಾದ ತುಳಸಿಗೆ ಚಿಕ್ಕ ವಯಸ್ಸಿಗೇನೆ ಗಂಡ ಸತ್ತು ಹೋಗಿರುತ್ತಾನೆ. ಮನೆ, ಮಕ್ಕಳು ಇಷ್ಟೇ ಪ್ರಪಂಚ ಎಂದು ನಂಬಿದ್ದವಳ ಬದುಕು ಸೊಸೆ ಬಂದ ಮೇಲೆ ಬದಲಾಗುತ್ತದೆ. ಮಾಧವನ ಪರಿಚಯವಾದ ಮೇಲೆ ಖುಷಿಯ ಜಗತ್ತನ್ನು ನೋಡುತ್ತಾಳೆ.

ತನಗೂ ಒಬ್ಬ ಒಳ್ಳೆಯ ಗೆಳೆಯ ಸಿಕ್ಕ ಖುಷಿ ತುಳಸಿಗೆ ಅನುಭವವಾಗುತ್ತದೆ. ಅದರಲ್ಲೂ ದತ್ತನಂಥ ಮಾವ, ಸಿರಿಯಂಥ ಸೊಸೆ ಸಿಗಯವುದು ಸುಲಭವಲ್ಲ. ಸೊಸೆಯ ಜೀವನದ ಬಗ್ಗೆ ಯೋಚಿಸಿದ ದತ್ತ, ಮಾಧವನೊಟ್ಟಿಗೆ ಮದುವೆ ಮಾಡಿಸುತ್ತಾನೆ. ಅಂದಿನ ಮದುವೆ ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿತ್ತು.
ಸಮಾಜದ ನಿಜ ಮುಖ ತೆರೆದಿಟ್ಟ ಕಥೆ
ಮಾಧವನದ್ದು ಮೊಮ್ಮಕ್ಕಳನ್ನು ಆಡಿಸುವ ವಯಸ್ಸು. ಸಂಗಾತಿ ಸತ್ತು ಬಹಳ ವರ್ಷಗಳೇ ಕಳೆದಿತ್ತು. ಆದರೆ ಮಕ್ಕಳು ತಂದೆಯ ಯಾವ ಕಷ್ಟವನ್ನು ಕೇಳುತ್ತಿರಲಿಲ್ಲ, ಮನಸ್ಸಿನ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ. ಆ ಸಮಯಕ್ಕೆ ಮಾಧವನಿಗೆ ತನ್ನ ಮನಸ್ಸಿನ ಮಾತು ಕೇಳುವ, ಮನಸ್ಸನ್ನು ಹಗುರಾಗಿಸುವ ಮತ್ತೊಂದು ಮನಸ್ಸಿನ ಅನಿವಾರ್ಯತೆ ಖಂಡಿತ ಇತ್ತು. ಇದು ಧಾರಾವಾಹಿಯೇ ಆದರೂ ನಿಜಜೀವನದಲ್ಲೂ ಅದೆಷ್ಟೋ ಒಂಟಿ ಜೀವಗಳಿಗೆ ಇಂಥ ಮನಸ್ಸುಗಳ ಅನಿವಾರ್ಯತೆಯನ್ನು ಅಂದು ತೋರಿಸಿಕೊಟ್ಟಿದ್ದ ಧಾರಾವಾಹಿ ಇದು.

ತುಳಸಿ ಈಗ ಗರ್ಭಿಣಿ
ಧಾರಾವಾಹಿಯಲ್ಲಿ ಕಥೆ ಈಗೀಗ ಅದ್ಬುತವಾಗಿ ಸಾಗುತ್ತಿದೆ. ತುಳಸಿಯ ಒಳ್ಳೆಯತನ ಎಲ್ಲರಿಗೂ ಇಷ್ಟವಾಗುತ್ತಿದೆ. ದ್ವೇಷಿಸುತ್ತಿದ್ದ ಮಕ್ಕಳು ತುಳಸಿ ಕಡೆಗೆ ವಾಲುತ್ತಿದ್ದಾರೆ. ಅವಿನಾಶ್ ಸಂಪೂರ್ಣ ಅಮ್ಮನ ಪರವೇ ಆಗಿದ್ದ. ಅಭಿ ಈಗೀಗ ಅಮ್ಮ ಎಂದು ಒಪ್ಪಿಕೊಳ್ಳುತ್ತಿದ್ದಾನೆ. ಇದರ ನಡುವೆ ತುಳಸಿಗೆ ತಾನು ಗರ್ಭಿಣಿ ಎಂದು ತಿಳಿದು ಶಾಕ್ ಆಗಿದೆ. ಹೇಳಿಕೊಳ್ಳುವುದಕ್ಕೆ ಮುಜುಗರ ಪಡುತ್ತಿದ್ದಾಳೆ.
ತುಳಸಿ ಗರ್ಭಿಣಿ ಆಗಿದ್ದಕ್ಕೆ ಟೀಕೆ
ತುಳಸಿಯನ್ನು ಗರ್ಭಿಣಿ ಎಂದು ತೋರಿಸಿದ್ದಕ್ಕೆ ವೀಕ್ಷಕರಿಗೆ ಬೇಸರವಾಗಿದೆ. ಎಷ್ಟೋ ಜನ ವಯಸ್ಸಾದ ಮೇಲೆ ಮದುವೆಯಾದರೆ ಅದನ್ನು ಖಂಡಿಸುತ್ತಿದ್ದರು. ಆದರೆ ಈ ಧಾರಾವಾಹಿಯಿಂದ ವಯಸ್ಸಾದರೂ ಜೊತೆಗೊಬ್ಬ ಸಂಗಾತಿ ಯಾಕಿರಬೇಕು ಎಂಬುದನ್ನು ಅರ್ಥ ಮಾಡಿಸಿದ್ರಿ. ಆದರೆ ಈಗ ಆ ಸಂಗಾತಿಯ ಅರ್ಥವನ್ನೇ ಬೇರೆ ಮಾಡಲು ಹೊರಟು ಬಿಟ್ರಿ. ಈಗಲೂ ಕಾಲ ಮಿಂಚಿಲ್ಲ. ಮೊದಲ ಬಾಂಧವ್ಯ ಹಾಗೇ ಇರಲಿ. ಪ್ರೆಗ್ನೆಂಟ್ ಅನ್ನೋ ಕಥೆಯನ್ನ ಸುಳ್ಳು ಮಾಡಿ ಎಂದೇ ವೀಕ್ಷಕರು ಮನವಿ ಮಾಡುತ್ತಿದ್ದಾರೆ.
ತುಳಸಿ ಪಾತ್ರದ ಬಗ್ಗೆ ಫ್ಯಾನ್ಸ್ ಮೆಚ್ಚುಗೆ
ಸೋಷಿಯಲ್ ಮೀಡಿಯಾದಲ್ಲಿ ಸುಧಾರಾಣಿ ಅವರ ಅಭಿಮಾನಿ ಬಳಗ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸುಧಾರಾಣಿ ಅವರ ಬಗ್ಗೆ ಗೊತ್ತಿಲ್ಲದೆ ಇರುವ ವಿಚಾರಗಳನ್ನು ಪೇಜ್ ಮೂಲಕ ತಿಳಿಸುತ್ತಾ ಇರುತ್ತಾರೆ. ಇದೀಗ ಸುಧಾರಾಣಿ ಅವರು ತುಳಸಿ ಪಾತ್ರದ ಮೂಲಕ ಲೇಟ್ ಪ್ರೆಗ್ನೆನ್ಸಿ ಬಗ್ಗೆ ಅರಿವು ಮೂಡಿಸುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ತುಳಸಿ ಮಾಧವ ಈಗ ತಂದೆ ತಾಯಿ ಆಗುತ್ತಿರುವುದು ಕೆಲವರ ಅಭಿಪ್ರಾಯದ ಹಾಗೆ ಅಸಹ್ಯವು ಅಲ್ಲ, ಅವರಿಬ್ಬರು ಸ್ನೇಹಕ್ಕೆ ಮಾಡಿರುವ ಅವಮಾನವು ಅಲ್ಲ. ಪ್ರೀತಿ ಇದ್ದ ಕಡೆ ಸ್ನೇಹ, ಸ್ನೇಹ ಇದ್ದ ಕಡೆ ಪ್ರೀತಿ ಇದ್ದೇ ಇರುತ್ತದೆ.. ಹಾಗೆಯೇ ಇವರಿಬ್ಬರಿಗೂ ಮಕ್ಕಳೇ ನಿಂತು ಮತ್ತೊಮ್ಮೆ ಮದುವೆ ಮಾಡಿದ್ದಾರೆ ಅನ್ನೋದನ್ನು ಇಲ್ಲಿ ಮರೆಯುವ ಹಾಗಿಲ್ಲ.
ಪ್ರೀತಿ ನಿಷ್ಕಲ್ಮಶವಾದದ್ದು
ದಂಪತಿಗಳ ನಡುವೆ ಸ್ನೇಹ, ಪ್ರೀತಿ, ನಂಬಿಕೆ, ವಿಶ್ವಾಸ ಇದ್ದರೆ ಇವರ ಹಾಗಿರಬೇಕು ಎಂದು ಎನ್ನಿಸುವ ಹಾಗೆ ಮಾಡಿರುವ ಜೋಡಿ.. ಒಬ್ಬರಿಗೊಬ್ಬರು ಜೊತೆಗಿದ್ದು, ಪ್ರೀತಿ ಕಾಳಜಿಯಿಂದ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿರುವಾಗ ಬೇರೆ ವಿಷಯಗಳು ಯಾಕೆ? ಹಾಗೆಯೇ ಮಧ್ಯವಯಸ್ಸಿನಲ್ಲಿ ಮದುವೆ ಆಗುವುದು ತಪ್ಪಲ್ಲ, ಆ ವಯಸ್ಸಿನಲ್ಲಿ ಜೊತೆಗಾರರು ಇರಬೇಕು ಎನ್ನುವುದನ್ನು ತಿಳಿಸಿ, ಪ್ರೀತಿಯ, ಸ್ನೇಹದ ನಿಜವಾದ ಅರ್ಥ ತಿಳಿಸಿಕೊಟ್ಟ ಪಾತ್ರ ತುಳಸಿ. ಮಕ್ಕಳಿಗೆ ಆಕೆ ತೋರುವ ಪ್ರೀತಿಯಾಗಲಿ, ಪತಿಯ ಜೊತೆಗಿರುವಾಗ ಅವರ ಮೇಲಿರುವ ಪ್ರೀತಿ ಆತ್ಮೀಯತೆಯೇ ಆಗಲಿ ನಿಸ್ವಾರ್ಥವಾದದ್ದು, ನಿಷ್ಕಲ್ಮಶವಾದದ್ದು.
ಚಾಲೆಂಜಿಂಗ್ ಕಾನ್ಸೆಪ್ಟ್
ಈಗ ಬಂದಿರೋ ಹೊಸ ತಾಯ್ತನದ ಟ್ರ್ಯಾಕ್ ಕೂಡ ಅದೇ ರೀತಿ... ಸಂದೇಶ ಕೊಡುತ್ತಿರುವ ವಿಚಾರವೇ... ಜನರಿಗೆ ಶುರುವಿನಲ್ಲಿ ಒಪ್ಪಲು ಕಷ್ಟವೆನ್ನಿಸಬಹುದು.. ಆದರೆ ಈ ವಿಷಯದ ಹಿಂದಿನ ವಿಚಾರಪರತೆಯನ್ನು ಕೂಲಂಕುಶವಾಗಿ ಗಮನಿಸಿದರೆ, ಅರ್ಥ ಮಾಡಿಕೊಂಡರೆ ಈ ಅದ್ವಿತೀಯ ಕಲಾವಿದೆಗೆ ನಮಸ್ಕರಿಸಬೇಕು ಅನಿಸದೇ ಅನ್ನಿಸದೇ ಇರದು...50ರ ಆಸುಪಾಸಿನಲ್ಲಿ ಮಹಿಳೆ ಗರ್ಭಿಣಿ ಆಗುವುದು ಅಪರೂಪ, ಈ ಥರದ ಟ್ರ್ಯಾಕ್ ಬಂದರೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕೂಡ ಅವರಿಗೆ ಅರಿವಿರುತ್ತದೆ.. ಎಲ್ಲವೂ ತಿಳಿದಿದ್ದರೂ, ಲೇಟ್ ಪ್ರೆಗ್ನೆನ್ಸಿ ಹಾಗೂ ಚಾಲೆಂಜಿಂಗ್ ಕಾನ್ಸೆಪ್ಟ್ ನಿರ್ವಹಣೆ ಮಾಡುತ್ತಿರುವುದಕ್ಕೆ ನಮ್ಮ ಸುಧಾರಾಣಿ ಮೇಡಂ ಅವರನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ' ಎಂದು ಪೋಸ್ಟರ್ ಹಂಚಿದ್ದಾರೆ.


Click it and Unblock the Notifications











