ಮಾಂಗಲ್ಯ, ಕುಂಕುಮ ಧರಿಸುವ ಬಗ್ಗೆ ಸುಹಾನಾ ಸಯ್ಯದ್ ಅಭಿಪ್ರಾಯ ಏನು?
ಸರಿಗಮಪ ಕನ್ನಡ ಸೀಸನ್ 13ರ ಸ್ಪರ್ಧಿ ಸುಹಾನಾ ಸೈಯದ್ ಇತ್ತೀಚೆಗೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಪ್ರೀತಿಸಿದ ಹುಡುಗ ನಿತಿನ್ ಶಿವಾಂಶ್ ಜೊತೆ ಮಂತ್ರ ಮಾಂಗಲ್ಯ ಆಶಯದಂತೆ ಅಂತರ್ ಧರ್ಮೀಯ ವಿವಾಹವಾಗಿದ್ದಾರೆ. ಆಪ್ತರು, ಅಭಿಮಾನಿಗಳು ಜೋಡಿಗೆ ಅಭಿನಂದನೆ ತಿಳಿಸಿ ಶುಭ ಹಾರೈಸುತ್ತಿದ್ದಾರೆ. ಪತಿಯ ಜೊತೆಗೆ ಮೊದಲ ದೀಪಾವಳಿಯನ್ನು ಕೂಡ ಸುಹಾನಾ ಆಚರಿಸಿದ್ದಾರೆ.
ಮದುವೆ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅಭಿಮಾನಿಗಳ ಜೊತೆ ಸುಹಾನಾ ಚಿಟ್ಚಾಟ್ ಮಾಡಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. Ask me a Question ಎಂದು ಸೆಷನ್ ನಡೆಸಿದ್ದಾರೆ. ಅಭಿಮಾನಿಗಳು ಅನುಮಾನಗಳಿಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ಕೆಲ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ವೀಡಿಯೋ ಮಾಡಿ ಮಾತನಾಡುವುದಾಗಿ ಹೇಳಿದ್ದಾರೆ.

ಮದುವೆ ಬಳಿಕ ಜೀವನ ಹೇಗಿದೆ ಎನ್ನುವ ಅಭಿಮಾನಿಯೊಬ್ಬರ ಪ್ರಶ್ನೆಗೆ ಸುಹಾನಾ ಮಾತನಾಡಿ "ಅಂತಹ ಬದಲಾವಣೆ ಏನಿಲ್ಲ. ಯಾಕಂದರೆ ನಮ್ಮಿಬ್ಬರ ಬಹಳ ದಿನ ಪರಿಚಯ, ಬಹಳ ದಿನಗಳ ಒಡನಾಟ. ಇವತ್ತಿಗೂ ಸ್ನೇಹಿತರಾಗಿದ್ದೇವೆ ಎಂದಿದ್ದಾರೆ. ನಿಮ್ಮ ಪೋಷಕರನ್ನು ಹೇಗೆ ಒಪ್ಪಿಸಿದ್ರಿ ಎನ್ನುವ ಮತ್ತೊಬ್ಬರ ಪ್ರಶ್ನೆಗೆ "ಅದು ದೊಡ್ಡ ಸ್ಟೋರಿ. ಚಿಕ್ಕದಾಗಿ ಹೇಳುವುದು ಕಷ್ಟ. ಯೂಟ್ಯೂಬ್ನಲ್ಲಿ ವೀಡಿಯೋ ಮಾಡಿ ಹೇಳಬೇಕು ಎಂದುಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.
ಅಭಿಮಾನಿಗಳನ್ನು ಮದುವೆ ಕರೆದಿಲ್ಲ, ಫ್ಯಾನ್ಸ್ ಮೀಟ್ ಮಾಡಬಹುದಾ ಎಂದು ಮತ್ತೊಬ್ಬರು ಕೇಳಿದ್ದಾರೆ. "ಮಂತ್ರ ಮಾಂಗಲ್ಯ ಮದುವೆ ಪ್ರಕಾರ ಹೆಚ್ಚು ಜನರನ್ನು ಕರೆಯಲು ಆಗಲಿಲ್ಲ. ಫ್ಯಾನ್ ಮೀಟ್ ಬಗ್ಗೆ ಯೋಚಿಸಿಲ್ಲ ನೋಡೋಣ" ಎಂದು ಸುಹಾನಾ ಸಯ್ಯದ್ ಉತ್ತರಿಸಿದ್ದಾರೆ. "ಭಾರತೀಯ ಸಂಸ್ಕೃತಿಯಲ್ಲಿ ಮೊದಲ ದೀಪಾವಳಿಗೆ ವಧು ವರನಿಗೆ ಉಡುಗೊರೆ ನೀಡುವ ಸಂಪ್ರದಾಯವಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿ "ಹೌದಾ? ಹಾಗಿದ್ದರೆ ನನಗಿಂತ ದೊಡ್ಡ ಉಡುಗೊರೆ ಅವನಿಗೆ ಬೇಕಾ?" ಎಂದಿದ್ದಾರೆ.

"ಮಾಂಗಲ್ಯ ಹಾಗೂ ಕುಂಕುಮ ಬೊಟ್ಟು ಮರೀಬೇಡಿ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಉತ್ತರಿಸಿರುವ ಸುಹಾನಾ ಸಯ್ಯದ್ "ಅದು ಬರೀ ಸಂಕೇತ ಅಷ್ಟೆ. ಪ್ರತಿದಿನ ಧರಿಸುವುದರಲ್ಲಿ ತಪ್ಪೇನಿಲ್ಲ. ಎಷ್ಟು ಪ್ರೀತಿ ಇದೆ. ಒಬ್ಬರನ್ನೊಬ್ಬರು ಎಷ್ಟು ಗೌರವಿಸುತ್ತೀವಿ. ಸಂಬಂಧವನ್ನು ಉಳಿಸಿಕೊಳ್ಳಲು ಎಷ್ಟು ಕಷ್ಟಪಡ್ತೀವಿ ಅನ್ನೋದು ಮುಖ್ಯ. ಇದು ನನ್ನ ವೈಯಕ್ತಿಕ ಅಭಿಪ್ರಾಯ" ಎಂದು ಸುಹಾನಾ ಹೇಳಿದ್ದಾರೆ. ನಿಮ್ಮ ಲವ್ ಸ್ಟೋರಿ ಬಗ್ಗೆ ಹೇಳಿ ಎಂದು ಮತ್ತೊಬ್ಬರು ಕೇಳಿದ್ದಕ್ಕೆ ಯೂಟ್ಯೂಬ್ನಲ್ಲಿ ವೀಡಿಯೋ ಮಾಡಿ ಮಾತನಾಡುತ್ತೇವೆ ಎಂದು ಸುಹಾನಾ ತಿಳಿಸಿದ್ದಾರೆ. ಮಂತ್ರ ಮಾಂಗಲ್ಯದ ಬಗ್ಗೆಯೂ ಮಾತನಾಡಿದ್ದಾರೆ. ಪತಿ ನಿತಿನ್ ಜೊತೆ ಸೇರಿ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಹೈಸ್ಕೂಲ್ ಓದುತ್ತಿದ್ದಾಗಲೇ ಸುಹಾನಾ ಹಾಗೂ ನಿತಿನ್ ಶಿವಾಂಶ್ ಪರಿಚಯ ಶುರುವಾಗಿತ್ತು. ಬಳಿಕ ಸ್ನೇಹಕ್ಕೆ ತಿರುಗಿ ಅದು ಪ್ರೀತಿಯಾಗಿತ್ತು ಎನ್ನಲಾಗಿತ್ತು. ತಮ್ಮಿಬ್ಬರ ಲವ್ ಸ್ಟೋರಿ ಬಗ್ಗೆ ವೀಡಿಯೋ ಮಾಡಿ ಹಂಚಿಕೊಳ್ಳಲು ಸುಹಾನಾ ಸಯ್ಯದ್ ನಿರ್ಧರಿಸಿದ್ದಾರೆ. ಸರಿಗಮಪ ಕನ್ನಡ ಸೀಸನ್ 13ರಲ್ಲಿ ತಮ್ಮ ಗಾಯನದ ಮೂಲಕ ಸುಹಾನಾ ಮೋಡಿ ಮಾಡಿದ್ದರು.
ಆಡಿಷನ್ ವೇಳೆಯೇ 'ಗಜ' ಚಿತ್ರದ 'ಶ್ರೀಕಾರನೇ ಶ್ರೀನಿವಾಸನೇ' ಹಾಡನ್ನು ಹಾಡಿದ್ದರು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಿಂದೂ ದೇವರ ಹಾಡನ್ನು ಹಾಡಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಆಕೆ ಹಾಡಿದ್ದ ಹಾಡಿಗಿಂತ ಧರ್ಮದ ಬಗ್ಗೆ ಹೆಚ್ಚು ಚರ್ಚೆ ಹುಟ್ಟಾಕ್ಕಿತ್ತು. ಬಳಿಕ 'ಮುಕುಂದ ಮುರಾರಿ' ಚಿತ್ರದ 'ನೀನೆ ರಾಮ ನೀನೇ ಶ್ಯಾಮ ನೀನೆ ಅಲ್ಲಾ' ಹಾಡು ಹಾಡಿ ವಿವಾದಕ್ಕೆ ತೆರೆ ಎಳೆದಿದ್ದರು.
ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದವರು ಸುಹಾನಾ ಸಯ್ಯದ್. ರಂಗಭೂಮಿ ಹಿನ್ನೆಲೆಯ ನಿತಿನ್ ಶಿವಾಂಶ್ ಜೊತೆಗಿನ ಪ್ರೀತಿಯ ವಿಚಾರವನ್ನು ಮೂರು ವಾರಗಳ ಹಿಂದೆ ಸುಹಾನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.


Click it and Unblock the Notifications











