ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಪವಾಡಕ್ಕೆ ಗಾಯಕಿ ಸುಹಾನಾ ಸೈಯದ್ ಧನ್ಯವಾದ
ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ಇತ್ತೀಚೆಗೆ ಪ್ರೀತಿಸಿದ ಹುಡುಗನ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ಮಂತ್ರ ಮಾಂಗಲ್ಯದ ಮೂಲಕ ಸುಹಾನಾ ಹಾಗೂ ನಿತಿನ್ ಮದುವೆ ನಡೆದಿತ್ತು. ಅಕ್ಟೋಬರ್ 17ರಂದು ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್ನಲ್ಲಿ ಇಬ್ಬರ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನೆರವೇರಿತ್ತು.
ಕೆಲ ವರ್ಷಗಳ ಹಿಂದೆ ಸರಿಗಮಪ ಕಾರ್ಯಕ್ರಮದಲ್ಲಿ ಹಿಜಬ್ ಧರಿಸಿ ಹಿಂದೂ ಭಜನೆ ಹಾಡುಗಳನ್ನು ಸುಹಾನಾ ಹಾಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೆ ಅದಕ್ಕೆ ಆಕೆ ತಲೆ ಕೆಡಿಸಿಕೊಂಡಿರಲಿಲ್ಲ. ಇನ್ನು 16 ವರ್ಷಗಳಿಂದ ಪ್ರೀತಿಸುತ್ತಿದ್ದ ಹಿಂದೂ ಯುವಕ ನಿತಿನ್ ಜೊತೆ ಪೋಷಕರ ಒಪ್ಪಿಗೆ ಪಡೆದು ಸುಹಾನಾ ಮದುವೆ ಆಗಿದ್ದರು. ಜೋಡಿ ಆಪ್ತರು, ಅಭಿಮಾನಿಗಳು ಶುಭ ಕೋರಿದ್ದರು.

ಸದ್ಯ ಪತಿ ನಿತಿನ್ ಶಿವಾಂಶ್ ಜೊತೆ ಸುಹಾನಾ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ ಕೂಡ ಅಲ್ಲಿಗೆ ತೆರಳಿ ತಮ್ಮ ಮದುವೆಗಾಗಿ ಪ್ರಾರ್ಥಿಸಿದ್ದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಮದುವೆ ಸುಗಮವಾಗಿ ನಡೆಯುವಂತೆ ಮಾಡಿದ ರಾಯರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುಹಾನಾ ಸಯ್ಯದ್ ಪೋಸ್ಟ್ ಮಾಡಿದ್ದಾರೆ.
"ನಾನು ಮಂತ್ರಾಲಯಕ್ಕೆ ಬಂದಾಗಲೆಲ್ಲಾ, ನಮ್ಮಿಬ್ಬರ ಕುಟುಂಬಗಳ ಆಶೀರ್ವಾದದೊಂದಿಗೆ ನಮ್ಮ ಮದುವೆಗಾಗಿ ಪ್ರಾರ್ಥಿಸುತ್ತಿದ್ದೆ. ಅದು ಸುಲಭವಲ್ಲ ಎಂದು ನನಗೆ ತಿಳಿದಿದ್ದರೂ, ನಾನು ರಾಯರಲ್ಲಿ ಒಂದು ಸಣ್ಣ ಪವಾಡವನ್ನು ಕೇಳುತ್ತಿದ್ದೆ. ಇವತ್ತು ನಾನು ನನ್ನ ನಿತಿನ್ ಜೊತೆ ಇದ್ದೀನಿ. ನಮ್ಮ ಮದುವೆಯಾಗಿದೆ. ನಮ್ಮ ಕುಟುಂಬಗಳು ಒಟ್ಟಿಗಿವೆ. ಸಂತೋಷವಾಗಿದ್ದೇನೆ. ಇದು ಪ್ರಾಮಾಣಿಕವಾಗಿ ಒಂದು ಕನಸು ನನಸಾದಂತೆ ಭಾಸವಾಗುತ್ತದೆ. ನನ್ನ ಹೃದಯವು ತುಂಬಾ ಕೃತಜ್ಞತೆಯಿಂದ ತುಂಬಿದೆ... ಇದು ನನ್ನ ಪ್ರಾರ್ಥನೆಗೆ ಉತ್ತರ" ಎಂದು ಮಂತ್ರಾಲಯ ದೇವಸ್ಥಾನದ ಮುಂದೆ ಪತಿ ಜೊತೆ ಕ್ಲಿಕ್ಕಿಸಿದ ಫೋಟೊವನ್ನು ಸುಹಾನಾ ಹಂಚಿಕೊಂಡಿದ್ದಾರೆ.

ಶಾಲಾ ದಿನಗಳಲ್ಲಿ ಶುರುವಾದ ನಿತಿನ್, ಸುಹಾನಾ ಸ್ನೇಹ ಬಳಿಕ ಪ್ರೀತಿಸಿ ತಿರುಗಿತ್ತು. 16 ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗ್ತಿದೆ. ತಮ್ಮಿಬ್ಬರ ಪ್ರೀತಿಯ ಬಗ್ಗೆ ವೀಡಿಯೋ ಮಾಡಿ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳುತ್ತಾ ಬರ್ತಿದ್ದಾರೆ. ಇನ್ನು ಸುಹಾನಾ ಕೈ ಹಿಡಿದಿರುವ ನಿತಿನ್ ರಂಗಭೂಮಿ ಕಲಾವಿದರು. ಸಹಾನಾ ಸಾಕಷ್ಟು ವೇದಿಕೆಗಳಲ್ಲಿ ಹಾಡು ಹಾಡುತ್ತಿರುತ್ತಾರೆ. ಸರಿಗಮಪ ಸೀಸನ್ 13ರಲ್ಲಿ ಸ್ಪರ್ಧಿಯಾಗಿದ್ದರು.
ಶೋನಲ್ಲಿ 'ಗಜ' ಚಿತ್ರದ 'ಶ್ರೀಕಾರನೇ' ಹಾಡನ್ನು ಸುಹಾನಾ ಮೊದಲಿಗೆ ಹಾಡಿದ್ದರು. ಬಳಿಕ ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮರು ವಾರ 'ಮುಕುಂದ ಮುರಾರಿ' ಚಿತ್ರದ 'ನೀನೆ ರಾಮ ನೀನೆ ಶ್ಯಾಮ ನೀನೆ ಅಲ್ಲ ನೀನೆ ಏಸು' ಹಾಡನ್ನು ಸುಹಾನಾ ಹಾಡಿದ್ದರು. ತಮ್ಮ ಹಾಡಿನ ಮೂಲಕವೇ ಎಲ್ಲದ್ದಕ್ಕೂ ಉತ್ತರ ನೀಡಿದ್ದರು. ಆ ಸೀಸನ್ನಲ್ಲಿ ಸುನಿಲ್ ವಿನ್ನರ್ ಆಗಿದ್ದರು. ಮೆಹಬೂಬ್ ಸಾಬ್ ಮೊದಲ ರನ್ನರ್ ಅಪ್ ಹಾಗೂ ಶ್ರೀಹರ್ಷ ಎರಡನೇ ರನ್ನರ್ ಅಪ್ ಆಗಿದ್ದರು. ಸೆಮಿಫೈನಲ್ನಲ್ಲಿ ಸುಹಾನಾ ಎಲಿಮಿನೇಟ್ ಆಗಿದ್ದರು.
ಇತ್ತೀಚೆಗೆ ದುಬೈನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ವೇದಿಕೆಯಲ್ಲಿ ಕೂಡ ಸುಹಾನಾ ಸಯ್ಯದ್ ಹಾಡು ಹಾಡಿದ್ದರು. ದುಬೈ ಕರ್ನಾಟಕ ಸಂಘ ಈ ಕಾರ್ಯಕ್ರಮ ಆಯೋಜಿಸಿತ್ತು. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಹುಡುಗಿ ಸುಹಾನಾ. ಸುಹಾನಾ ಕೈ ಹಿಡಿದ ನಿತಿನ್ ಕೂಡ ಸಾಗರದವರು. ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ಮದುವೆಗೂ ಮುನ್ನ ತಮ್ಮಿಬ್ಬರ ಪ್ರೀತಿ ಬಗ್ಗೆ ಸುಹಾನಾ ಪೋಸ್ಟ್ ಮಾಡಿದ್ದರು.
"ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ, ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ.. ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು.. ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ" ಎಂದು ಬರೆದುಕೊಂಡಿದ್ದರು.


Click it and Unblock the Notifications











