ಮತ್ತೊಂದು 'ಭಕ್ತಿಗೀತೆ' ಹಾಡಿ ವಿವಾದಕ್ಕೆ ತೆರೆ ಎಳೆದ ಸುಹಾನ ಸೈಯದ್!
ಹಿಂದೂ ಭಕ್ತಿಗೀತೆಯನ್ನ ಹಾಡಿದ್ದಕ್ಕೆ, ಕಳೆದ ಒಂದು ವಾರದಿಂದ ವಿವಾದದ ಕೇಂದ್ರ ಬಿಂದು ಆಗಿರುವ 'ಸುಹಾನ ಸೈಯದ್' ತಾವೇ ವಿವಾದಕ್ಕೆ ಅಂತ್ಯವಾಡಿದ್ದಾರೆ. 'ಸರಿಗಮಪ ಸೀಸನ್ 13'ರ ಮೆಗಾ ಆಡಿಷನ್ ನಲ್ಲಿ 'ಶ್ರೀಕಾರನೇ' ಹಾಡನ್ನ ಹಾಡಿದ್ದಕ್ಕೆ, ಕೆಲ ಸಂಘಟನೆಗಳು ವಿರೋಧಿಸಿದ್ದರು. ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಸುಹಾನ ಅವರ ಗಾಯನಕ್ಕಿಂತ ಧರ್ಮದ ಬಗ್ಗೆನೇ ಹೆಚ್ಚು ಚರ್ಚೆಯಾಗಿತ್ತು.['ಸರಿಗಮಪ' ಸುಹಾನಳಿಗೆ ಬೇಕಿರುವುದು ಪ್ರೋತ್ಸಾಹವೇ ಹೊರತು, ಪ್ರಚಾರವಲ್ಲ!]
ಈ ವಿವಾದ, ಟೀಕೆಗಳಿಗೆಲ್ಲ ಗಾಯಕಿ ಸುಹಾನ ಸೈಯದ್ ಅದೇ 'ಸರಿಗಮಪ' ವೇದಿಕೆಯಲ್ಲಿ ತೆರೆ ಎಳೆದಿದ್ದಾರೆ. ಅದು ಮತ್ತೊಂದು ಭಕ್ತಿ ಗೀತೆಯನ್ನ ಹಾಡುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

ಮತ್ತೊಂದು ಭಕ್ತಿಗೀತೆ ಹಾಡಿದ ಸುಹಾನ!
ಕಳೆದ ವಾರ 'ಸರಿಗಮಪ' ಆಡಿಷನ್ ನಲ್ಲಿ ಭಕ್ತಿಗೀತೆಯನ್ನ ಹಾಡಿ ವಿವಾದದ ಕೇಂದ್ರಬಿಂದು ವಾಗಿದ್ದ ಸುಹಾನ ಎರಡನೇ ವಾರ ಮತ್ತೊಂದು ಭಕ್ತಿ ಗೀತೆಯನ್ನ ಹಾಡುವ ಮೂಲಕ ಎಲ್ಲರಿಗೂ ಹಾಡಿನಲ್ಲೇ ಉತ್ತರ ಕೊಟ್ಟಿದ್ದಾರೆ.

ಮುಕುಂದಾ....ಮುರಾರಿ....ಹೇ ಅಲ್ಲಾ....ಹೇ ಯೇಸು.....!
ಉಪೇಂದ್ರ ಅಭಿನಯದ 'ಮುಕುಂದ ಮುರಾರಿ' ಚಿತ್ರದ ಭಕ್ತಿಗೀತೆಯನ್ನ ಸುಹಾನ ''ಸರಿಗಮಪ'' ವೇದಿಕೆಯಲ್ಲಿ ಹಾಡಿದರು. ಅಷ್ಟೇ ಅಲ್ಲದೇ, ಈ ಹಾಡಿನ ಸಾಹಿತ್ಯವನ್ನ ಕೂಡ ಬದಲಿಸಿ ಕೆಲವರಿಗೆ ಉತ್ತರ ನೀಡಿದರು.

ಟೀಕೆ ಮಾಡೋರಿಗೆ ಸುಹಾನ ಹೇಳಿದ್ದೇನು?
''ನಾನು ಈ ವೇದಿಕೆಗೆ ಬಂದಿರುವುದು ಹಾಡುವುದಕ್ಕೆ ಮಾತ್ರ, ನನಗೆ ಪ್ರತಿಭೆ ಇದೆ. ನಾನು ಹಾಡ್ತಿನಿ. ಹಾಡುತ್ತಾ ಹಾಡುತ್ತಾ ಕಲಿಬೇಕು ಎಂಬ ಉದ್ದೇಶದಿಂದ ಮಾತ್ರ ನಾನು ಇಲ್ಲಿ ಬಂದೆ. ಅದನ್ನ ಬಿಟ್ಟು ನನಗೆ ಯಾವುದೇ ಉದ್ದೇಶವಿಲ್ಲ''- ಸುಹಾನ ಸೈಯದ್

ಮನಸ್ಸಿಗೆ ಹಿಂಸೆ ಎನಿಸಿದೆ!
''ನನ್ನ ಈ ಹೆಜ್ಜೆಯಿಂದ ನನ್ನ ಕುಟುಂಬ, ಸಂಬಂಧಿಕರಿಂದ ಮೆಚ್ಚುಗೆ ಸಿಕ್ಕಿದೆ. ಅದರ ಜೊತೆಗೆ ಕೆಲವು ವಿವಾದಗಳು ಕೂಡ ಸುತ್ತಿದೆ. ಅದಕ್ಕೆ ಬೇಜಾರು ಆಗಿದೆ. ಯಾಕಂದ್ರೆ, ನಾನು ಅಲ್ಲದನ್ನ ಜನ ನನ್ನದು ಭಾವನೆ ಎಂದು ಹೇಳುತ್ತಿರುವುದು ಹಿಂಸೆ ಎನಿಸುತ್ತೆ''- ಸುಹಾನ ಸೈಯದ್

ಕೊನೆಯವರೆಗೂ ಹಾಡುತ್ತೇನೆ!
''ನಾನು ಪ್ರೂವ್ ಮಾಡೋಕೆ ಹೋಗ್ತಿರುವುದು ಬೇರೆ. ಆದ್ರೆ, ಇಲ್ಲಿ ಆಗ್ತಿರುವುದೇ ಬೇರೆ. ಹಾಡುವುದು ನನ್ನ ಕೆಲಸ. ನನ್ನ ಕೊನೆಯುಸಿರು ಇರೋವರೆಗೂ ನಾನು ಹಾಡುತ್ತೇನೆ. ನಿಮ್ಮ ಆಲೋಚನೆಗಳಿಗೆ, ಸುಹಾನಳ ಆಲೋಚನೆ ಎಂದು ಬಣ್ಣ ಬಳಿದು ಮನಸ್ಸಿಗೆ ಬಂದ ಹಾಗೆ ಮಾತನಾಡಬೇಡಿ.''- ಸುಹಾನ ಸೈಯದ್

ನನ್ನನ್ನು ಭಾರತೀಯಳಾಗಿ ನೋಡಿ....!
''ನನ್ನನ್ನ ಒಬ್ಬ ಗಾಯಕಿಯಾಗಿ ನೋಡಿ, ಒಬ್ಬ ಭಾರತೀಯಳಾಗಿ ನೋಡಿ, ಅದಕ್ಕಿಂತ ಹೆಚ್ಚಾಗಿ ಒಬ್ಬ ಮನುಷ್ಯಳಾಗಿ ನೋಡಿ. ನನಗೆ ಅಷ್ಟೇ ಸಾಕು, ಬೇರೇನೂ ಬೇಡ''-ಸುಹಾನ ಸೈಯದ್

ವಿವಾದ ಏನು?
'ಸರಿಗಮಪ ಸೀಸನ್ 13' ಕಾರ್ಯಕ್ರಮದ 'ಮೆಗಾ ಆಡಿಷನ್'ನಲ್ಲಿ 'ಶ್ರೀಕಾರನೇ' ಎಂಬ ಭಕ್ತಿಗೀತೆಯನ್ನು ಸುಹಾನ ಭಕ್ತಿಯಿಂದ ಹಾಡಿದಳು. ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಭಕ್ತಿಗೀತೆ ಹಾಡಿದ್ದನ್ನ ಕೆಲವು ವರ್ಗದ ಜನರು ವಿರೋಧಿಸಿದ್ದರು.


Click it and Unblock the Notifications











