ಬಿಗ್ ಬಾಸ್ ಮನೆಯಲ್ಲಿ ಅಚ್ಚರಿ ಮೇಲೆ ಅಚ್ಚರಿ
ಬಿಗ್ ಬಾಸ್ ಮನೆಯಲ್ಲಿ ಆ ದಿನ ಬಾಯಾರಿದವನಿಗೆ ನೀರು ಸಿಕ್ಕಂತಾಗಿತ್ತು, ಬರದಿಂದ ಗರಬಡಿದವನಿಗೆ ಮಿಂಚಿನ ಸೆಳಕು ಕಂಡಂತಾಗಿತ್ತು ಹಸಿದವನಿಗೆ ಮೃಷ್ಟಾನ್ನ ಸಿಕ್ಕಂತಾಗಿತ್ತು, ಬಡಪಾಯಿಗೆ ಲಾಟರಿ ಹೊಡೆದಂತಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಇಷ್ಟವೋ ಕಷ್ಟವೋ, ಸುಖವೋ ದುಃಖವೋ ದಿನಗಳನ್ನು ತಳ್ಳುತ್ತಿರುವ ಐವರು ಸ್ಪರ್ಧಾಳುಗಳಿಗೆ ಅನಿರೀಕ್ಷಿತ ಅಚ್ಚರಿ ಕಾದಿತ್ತು. 78ನೇ ದಿನ ಬಿಗ್ ಬಾಸ್ ಮನೆಯಲ್ಲಿ ಸ್ವತಃ ಸುದೀಪ್ ಕಾಲಿಟ್ಟಿದ್ದರು.
ನರ್ತಿಸುತ್ತ ನಲಿಯುತ್ತ ಸುದೀಪ್ ಮುಖವಾಡ ಹೊತ್ತ ಕೆಲ ಯುವಕರು ಮನೆ ಹೊಕ್ಕು ತಂದಿಟ್ಟ ಚಹಾವನ್ನು ಸ್ವೀಕರಿಸುತ್ತಿದ್ದ ಹೊತ್ತಿನಲ್ಲಿ ಹಿಂಬಾಗಿಲಿನಿಂದ ಸುದೀಪ್ ಮನೆಹೊಕ್ಕಿದ್ದರು. ಅವರನ್ನು ಒಳಗಡೆ ಕಂಡತಕ್ಷಣವೆ ಎಲ್ಲರೂ ಕಿಟಾರನೆ ಕಿರಿಚುತ್ತ ಸುದೀಪ್ ಅವರನ್ನು ತಬ್ಬಿಕೊಂಡು ನಲಿದಾಡಿದರು. ಸುದೀಪ್ ಅವರನ್ನು ತೆರೆಯ ಮೇಲೆ ಮಾತ್ರ ನೋಡುತ್ತಿದ್ದ ಸ್ಪರ್ಧಾಳುಗಳಿಗೆ ಇದು ಹಿತಾಘಾತ ತರುವಂಥ ಅಚ್ಚರಿಯಾಗಿತ್ತು.
ಬರೀ ಬಿಗ್ ಬಾಸ್ ದನಿಯನ್ನೇ ಕೇಳುತ್ತ, ಕೊಟ್ಟ ಟಾಸ್ಕ್ ಗಳನ್ನು ಮಾಡುತ್ತ ಮಾಡುತ್ತ ಮಾಡುತ್ತ ಏಕತಾನತೆಯಿಂದ ಬಳಲುತ್ತಿದ್ದ ಸ್ಪರ್ಧಿಗಳನ್ನು ಸ್ವತಃ ಭೇಟಿ ಮಾಡಿ ಸುದೀಪ್ ಉಭಯಕುಶಲೋಪರಿ ವಿಚಾರಿಸಿದ್ದು ಮತ್ತು ಬಿಗ್ ಬಾಸ್ ಒಂದು ದಿನದ ರಜಾ ತೆಗೆದುಕೊಂಡು ಸುದೀಪ್ ಅವರಿಗೇ ಎಲ್ಲ ಅಧಿಕಾರವನ್ನು ಬಿಟ್ಟುಕೊಟ್ಟಿದ್ದು, ನೋಡುತ್ತಲೇ ಸುದೀಪ್ ಕಾಣೆಯಾಗಿದ್ದು ವಿಶೇಷವಾಗಿತ್ತು. ಹಾಗೆಯೆ, ದಿನದ ಕೊನೆಗೆ ಯಾರೂ ನಿರೀಕ್ಷಿಸದಿದ್ದ ಮತ್ತೊಂದು ಅಚ್ಚರಿಯೂ ಕಾದಿತ್ತು. ಅದೇನು ಮುಂದೆ ಓದಿರಿ. [ಬಿಗ್ ಬಾಸ್ ಸರಣಿಯ ಎಲ್ಲ ಲೇಖನಗಳು]

ಅರುಣ್ ಸಾಗರ್ಗೆ ಸುದೀಪ್ ಪಾಠ
ಕನ್ನಡ ಕಲಿಕೆಯ ವಿಷಯದಲ್ಲಿ ನಿಖಿತಾ ಜೊತೆ ಜಗಳವಾಡಿಕೊಂಡಿದ್ದ ಅರುಣ್ ಸಾಗರ್ ಅವರಿಗೆ ಸುದೀಪ್ ಎಚ್ಚರಿಕೆಯ ಮಾತುಗಳನ್ನು ಹೇಳಿದರು. ಇಲ್ಲಿಯವರೆಗೆ ಚೆನ್ನಾಗಿ ಆಡುತ್ತಿದ್ದರೂ ಒಂದು ಕೆಟ್ಟ ಘಟನೆಯಿಂದಾಗಿ ಜನರು ನಿಮ್ಮನ್ನು ಎಲಿಮಿನೇಟ್ ಮಾಡುವಂತಾದರೆ ಹೇಗಿರತ್ತೆ? ಎಂದು ಪ್ರಶ್ನಿಸಿದರು. ಅರುಣ್ ಕೂಡ ಈ ವಾದಕ್ಕೆ ತಲೆದೂಗಿದರು.

ಬತ್ತಿದ ವಿಜಯ್ಗೆ ಸುದೀಪ್ ಕಿವಿಮಾತು
ಬಿಗ್ ಬಾಸ್ ಮನೆಯಲ್ಲಿ ಕಳೆದುಹೋದಂತೆ ಮಾತನಾಡುತ್ತಿರುವ, ಏನೋ ಮಾತಾಡಲು ಹೋಗಿ ಗೊಂದಲಕ್ಕೆ ಸಿಲುಕಿಕೊಳ್ಳುತ್ತಿರುವ ವಿಜಯ್ ರಾಘವೇಂದ್ರ ಅವರಿಗೆ ಸುದೀಪ್ ಮಾತುಗಳು ಸ್ಫೂರ್ತಿ ತುಂಬಿದವು. "ನೀನೇ ನೀನಾಗಿರು, ಹುಮ್ಮಸ್ಸು ಕಳೆದುಕೊಳ್ಳಬೇಡ" ಎನ್ನುವ ಸುದೀಪ್ ಮಾತುಗಳಿಗೆ ಕಿವಿಯಾದ ವಿಜಯ್ ಮೊದಲಿನ ಹುರುಪನ್ನು ಪಡೆದವರಂತೆ ಕಂಡುಬಂದರು.

ನಿಖಿತಾಗೂ ವಿಶ್ವಾಸ ತುಂಬಿದ ಸುದೀಪ್
"ನೀನೇ ನಿನ್ನ ಶತ್ರುವಾಗಬೇಡ. ಯಾರಾದರೂ ತಾವು ಇಲ್ಲಿ ಉಳಿಯುವ ವಿಶ್ವಾಸ ಕಳೆದುಕೊಳ್ಳುವವರೆಗೆ ಯಾರೂ ನಿನ್ನನ್ನು ಮನೆಯಿಂದ ಹೊರಹಾಕುವುದು ಸಾಧ್ಯವಿಲ್ಲ" ಎಂದು ಕನ್ನಡ ಮಾತಾಡಲು, ಕಲಿಯಲು ಹೋರಾಟ ನಡೆಸಿರುವ ನಟಿ ನಿಖಿತಾಗೆ ಸುದೀಪ್ ಕಿವಿಮಾತು ಹೇಳಿದರು. ಕನ್ನಡ ಅಂದ ಕೂಡಲೆ ಕಣ್ಣೀರಾಗುವ ನಿಖಿತಾ ಅರುಣ್ ಜೊತೆಗಿನ ಭಿನ್ನಾಭಿಪ್ರಾಯಗಳು ನಿವಾರಣೆಯಾಗಿವೆ ಎಂದು ಕನ್ನಡದಲ್ಲೇ ಹೇಳಿದರು.

ಎಲಿಮಿನೇಷನ್ಗೆ ನಾಮಿನೇಟ್ ಆದವರು ಯಾರು
ಬಿಗ್ ಬಾಸ್ ಅನುಪಸ್ಥಿತಿಯಲ್ಲಿ ಈ ಬಾರಿ ಎಲಿಮಿನೇಷನ್ ನಾಮಿನೇಷನ್ ನಡೆಸಿದವರು ಸುದೀಪ್. ಎಂದಿನಂತೆ ಟಾಸ್ಕ್ ಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳದ ನರೇಂದ್ರ ಬಾಬು ಶರ್ಮಾ ಮತ್ತು ಕನ್ನಡ ಮಾತಾಡಲು ತಡಕಾಡುತ್ತಿರುವ ನಿಖಿತಾಗೆ ಹೆಚ್ಚಿನ ಮತಗಳು ಬಿದ್ದಿವೆ. ಇವರಿಬ್ಬರಲ್ಲಿ ಯಾರು ಈ ವಾರ ಎಲಿಮಿನೇಟ್ ಆಗುತ್ತಾರೆ?

ಬಿಗ್ ಬಾಸ್ ಮನದಲ್ಲೇನಿದೆ ಬಲ್ಲವರಾರು?
ಈ ವಾರ ವೀಕ್ಷಕರು ಕೂಡ ಊಹಿಸದಿದ್ದ ಮಾಸ್ಟರ್ ಪ್ಲಾನ್ ಬಿಗ್ ಬಾಸ್ ಮಾಡಿದ್ದಾರೆ. ನಿಖಿತಾ ಮತ್ತು ನರೇಂದ್ರ ಬಾಬು ಶರ್ಮಾ ಅವರಿಗೆ ಹೆಚ್ಚಿನ ಮತಗಳು ಬಿದ್ದಿದ್ದರೂ, ಕಡಿಮೆ ಮತಗಳನ್ನು ಗಳಿಸಿರುವ ಮತ್ತು ಸ್ಟ್ರಾಂಗ್ ಸ್ಪರ್ಧಿಗಳಾಗಿರುವ ಅರುಣ್ ಸಾಗರ್, ಚಂದ್ರಿಕಾ ಮತ್ತು ವಿಜಯ್ ರಾಘವೇಂದ್ರ ಅವರು ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದಾರೆ ಎಂದು ಘೋಷಿಸಿ ಬಿಗ್ ಬಾಸ್ ಮನೆಯನ್ನೇ ಉಲ್ಟಾಪುಲ್ಟಾ ಮಾಡಿದ್ದಾರೆ. ಮುಂದೆ ಏನಾಗಲಿದೆ, ಶುಕ್ರವಾರದವರೆಗೆ ಕಾಯಿರಿ.


Click it and Unblock the Notifications











