Sushma Nanaiah: ಮರಳಿ ಧಾರಾವಾಹಿಗೆ ಕಾಲಿಟ್ಟ ಮಲ್ಟಿ ಟ್ಯಾಲೆಂಟೆಡ್ ನಟಿ ಸುಷ್ಮಾ ನಾಣಯ್ಯ!!
ಚಿಕ್ಕ ವಯಸ್ಸಿನಿಂದಲೂ ಸಂಗೀತ, ನೃತ್ಯ, ರಂಗಭೂಮಿ, ಮೇಕಪ್ ಇತ್ಯಾದಿ ಬಹಳಷ್ಟು ಆಸಕ್ತಿಗಳನ್ನು ಇಟ್ಟುಕೊಂಡ ನಟಿ ಸುಷ್ಮಾ ನಾಣಯ್ಯ. ಈ ನಟಿ ಕನ್ನಡ ಕಿರುತೆರೆಯ ಖ್ಯಾತ ನಟಿಯರಲ್ಲೊಬ್ಬರು. 'ಅಶ್ವಿನಿ ನಕ್ಷತ್ರ', 'ಗುಂಡ್ಯಾನ ಹೆಂಡತಿ', 'ಗಾಳಿಪಟ', 'ಭಾಗ್ಯವತಿ', 'ಕಾವ್ಯ ಕಸ್ತೂರಿ', 'ಮಹಾಭಾರತ', 'ರಥಸಪ್ತಮಿ', 'ದೀಪವು ನಿನ್ನದೇ', 'ಕಾರ್ತಿಕ ದೀಪ' ಇತ್ಯಾದಿ ಧಾರಾವಾಹಿಗಳಲ್ಲಿ ಅದ್ಬುತವಾಗಿ ನಟಿಸಿದ ಈಕೆ ಕೆಲ ಸಮಯದ ಕಾಲ ಬ್ರೇಕ್ ತೆಗೆದುಕೊಂಡಿದ್ದರು.
6 ವರ್ಷಗಳ ಬ್ರೇಕ್ ನಂತರ ಮತ್ತೆ ಕಿರುತೆರೆಗೆ ಮರಳಿರುವ ನಟಿ ಸುಷ್ಮಾ ನಾಣಯ್ಯ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಕಾವೇರಿ ಎಂಬ ತಾಯಿ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ಈ ಪಾತ್ರ ಅವರ ವಯಸ್ಸಿಗೂ ಮೀರಿದ್ದು. ತಾಯಿ ಪಾತ್ರದ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಸುಷ್ಮಾ ಈ ಪಾತ್ರದ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.

6 ವರ್ಷಗಳ ಕಾಲ ಬ್ರೇಕ್ ಬಳಿಕ ವಾಪಾಸ್
ಕಾಲೇಜು ದಿನಗಳಿಂದಲೂ ಕಲೆಯ ವಿವಿಧ ಪ್ರಕಾರಗಳಾದ ಸಂಗೀತ, ನೃತ್ಯದ ಜೊಯೆಗೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಾಲೇಜಿನ ಪ್ರತಿನಿಧಿಯಾಗಿ ಸುಷ್ಮಾ ಭಾಗವಹಿಸುತ್ತಿದ್ದರು. ಇದರ ಜೊತೆಗೆ ಮೊದಲಿನಿಂದಲೂ ಅಭಿನಯದತ್ತ ವಿಶೇಷ ಒಲವು ಈಕೆಗಿತ್ತು. ಆದರೆ, ಹೇಗೆ ನಟನೆಯನ್ನು ಶುರು ಮಾಡಬೇಕೆಂಬುದು ಸರಿಯಾಗಿ ಗೊತ್ತಿರಲಿಲ್ಲ. ಸಮಯ ಸಿಕ್ಕಾಗಲೆಲ್ಲಾ ರಂಗಾಯಣದ ಕೆಲ ಶಿಬಿರಗಳಲ್ಲಿ ಸುಷ್ಮಾ ಭಾಗವಹಿಸುತ್ತಿದ್ದರು. ಅಲ್ಲಿಂದ ಈಕೆಯ ನಟನಾ ಜರ್ನಿ ಆರಂಭವಾಯಿತು.
ಬರೋಬ್ಬರಿ ಆರು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರೂ ನಟನೆಯಿಂದ ಪೂರ್ತಿ ವಿಮುಖಳಾಗಿರಲಿಲ್ಲ. ಬದಲಿಗೆ ರಂಗಭೂಮಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲವು ನಾಟಕಗಳಲ್ಲಿ ನಟಿಸುತ್ತಿದ್ದರು. ಕೆಲವು ವೈಯಕ್ತಿಕ ಕಾರಣಗಳಿಂದ ಆರು ವರ್ಷ ಬ್ರೇಕ್ ತೆಗೆದುಕೊಂಡರೂ, ಈಗ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಕಾವೇರಿ ಎಂಬ ಅದ್ಭುತ ಪಾತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಜೊತೆಗೆ ಈ ಪಾತ್ರ ತುಂಬಾ ಕಡಿಮೆ ಅವಧಿಯಲ್ಲಿ ಬಹಳ ಪಾಪ್ಯುಲರ್ ಆಗಿದ್ದು ಕೂಡ ಸುಷ್ಮಾಗೆ ಸಂತಸ ತಂದಿದೆ.
ಕಿರುತೆರೆ ಆದರೂ ಸೈ, ಹಿರಿತೆರೆ ಅದರೂ ಸೈ
ಪೋಷಕ ಪಾತ್ರದಲ್ಲಿ ಅದರಲ್ಲೂ ತಾಯಿ ಪಾತ್ರಗಳಲ್ಲಿ ಇಂದು ಚಿಕ್ಕ ವಯಸ್ಸಿನ ನಟಿಯರು ಕಾಣಿಸಿಕೊಳ್ಳುತ್ತಿರುವುದು ತೀರ ಸಾಮಾನ್ಯವಾಗಿದೆ. ಇನ್ನು ಕಿರುತೆರೆಯಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಬಹಳಷ್ಟು ನಟಿಯರು ತೀರ ಸಾಮಾನ್ಯವಾಗುತ್ತಾ ಹೋದರು. ಪ್ರತಿ ಧಾರಾವಾಹಿಯಲ್ಲೂ ಇದ್ದ ಒಂದಷ್ಟು ಜನರೇ ಪೋಷಕ ಪಾತ್ರವನ್ನು ಮಾಡುತ್ತಿದ್ದರಿಂದ ಬಹುಶಃ ವೀಕ್ಷಕರಿಗೂ ನಿರ್ದೇಶಕರಿಗೂ ಇದರಲ್ಲಿ ಒಂದು ಬದಲಾವಣೆ ತರಬೇಕೆಂದು ಕೊಂಡಿರಬಹುದು. ಈ ಕಾರಣಕ್ಕಾಗಿ ಹೊಸ ನಟಿಯರನ್ನು ಹಾಕುವ ಸಲುವಾಗಿ ಚಿಕ್ಕ ವಯಸ್ಸಿನ ನಟಿಯರಿಗೂ ಪೋಷಕ ಪಾತ್ರವನ್ನು ಕೊಡುತ್ತಿದ್ದಾರೆ. ಪಾತ್ರ ಯಾವುದೇ ಆದರೂ ಅದನ್ನು ಅದ್ಭುತವಾಗಿ ನಟಿಸಿ ಅದಕ್ಕೆ ಜೀವ ತುಂಬುವುದು ನಿಜವಾದ ಕಲಾವಿದರ ತಾಕತ್ತು. ಹಾಗಾಗಿ ಕಾವೇರಿ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಸಂತಸದಿಂದ ಒಪ್ಪಿಕೊಂಡರು.

ಮೈಕ್ರೋ ಬಯಾಲಜಿಯಲ್ಲಿ ಎಂ ಎಸ್ ಸಿ ಪದವಿ ಪಡೆದಿರುವ ಸುಷ್ಮಾ ಮುಂದೆ ಕೆಲಸವನ್ನು ಕೂಡಾ ಗಿಟ್ಟಿಸಿಕೊಂಡಿದ್ದರು. ಕ್ರಮೇಣ ದಿನ ಕಳೆದಂತೆ ಕೆಲಸ ಬೋರ್ ಆಗುತ್ತಾ ಬಂತು. ಹಾಗಾಗಿ ಸುಷ್ಮಾ ರಂಗಭೂಮಿಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಾ ಬಂದರು. ಅದರಿಂದ ಮುಂದೆ ಅವರಿಗೆ ಕಿರುತೆರೆಯಲ್ಲಿ ಅವಕಾಶವೂ ಕೂಡಾ ದೊರೆಯಿತು. "ನಟಿಸಲು ಹಿರಿತೆರೆಯಾಗಲೀ, ಕಿರುತೆರೆಯಾಗಲೀ ಎಂಬ ಯಾವುದೇ ಭೇದ ಭಾವ ಇಲ್ಲ. ಬದಲಿಗೆ ಪಾತ್ರಗಳು ಚೆನ್ನಾಗಿರಬೇಕು. ಜೊತೆಗೆ ಅದರಲ್ಲಿ ಗಟ್ಟಿತನವೂ ಇದ್ದರೆ ಎಂತಹ ಪಾತ್ರಕ್ಕೂ ಜೀವ ತುಂಬಲು ಸೈ ಅನ್ನುವ ಮೈಂಡ್ ಸೆಟ್ನಲ್ಲಿ ಸುಷ್ಮಾ ನಾಣಯ್ಯ ಇದ್ದಾರೆ.


Click it and Unblock the Notifications











