Bigg Boss: ದೊಡ್ಮನೆಯಿಂದ ಹೊರಬರ್ತಿದ್ದಂತೆ 'ಬೆಂಕಿ' ರಿಯಾಕ್ಷನ್ ಕೊಟ್ಟ ತನಿಷಾ ಕುಪ್ಪಂಡ!
ವಾರದ ಮಧ್ಯದಲ್ಲೇ ತನಿಷಾ ಕುಪ್ಪಂಡ ಬಿಗ್ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದು ಹಲವರಿಗೆ ಅಚ್ಚರಿ ಮೂಡಿಸಿದೆ. ಬಿಗ್ಬಾಸ್ ಟ್ರೋಫಿ ಗೆಲ್ಲದಿದ್ದರೂ ತನಿಷಾ ವೀಕ್ಷಕರ ಮನಗೆದ್ದಿದ್ದಾರೆ. ಆಕೆಯ ದಿಢೀರ್ ಎಲಿಮಿನೇಷನ್ ಹಲವರಿಗೆ ಅಚ್ಚರಿ ಮೂಡಿಸಿದೆ. ಕೆಲವರು ತನಿಷಾ ಇನ್ನು ಹೊರಬಂದಿಲ್ಲ. ಸೀಕ್ರೆಟ್ ರೂಮ್ಗೆ ಹೋಗಿದ್ದಾರೆ ಎಂದೇ ಭಾವಿಸಿದ್ದಾರೆ.
ತನಿಷಾ ಕುಪ್ಪಂಡ ಬಿಗ್ಬಾಸ್ ಮನೆಯಿಂದ ಹೊರಬಂದಿರುವುದು ಇದೀಗ ಖಚಿತವಾಗಿದೆ. ಸ್ವತಃ ವಿಡಿಯೋ ಮಾಡಿ ಈ ಬಗ್ಗೆ ಆಕೆ ಪ್ರತಿಕ್ರಿಯಿಸಿದ್ದಾರೆ. ಬೇಸರದಿಂದ ಹೊರ ಬಂದ ನನಗೆ ಅಚ್ಚರಿ ಕಾದಿತ್ತು ಎಂದಿದ್ದಾರೆ. ಸದ್ಯ ತನಿಷಾ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. 3 ತಿಂಗಳ ಹಿಂದೆ ಬಿಗ್ಬಾಸ್ ಕನ್ನಡ ಸೀಸನ್ 10ರ ಮನೆಗೆ 19 ಜನ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು.

ಗ್ರ್ಯಾಂಡ್ ಓಪನಿಂಗ್ ದಿನ ವೇದಿಕೆಗೆ 21 ಜನ ಸ್ಪರ್ಧಿಗಳು ಬಂದಿದ್ದರು. ವೇದಿಕೆಯಲ್ಲಿ ಲೈವ್ ಆಡಿಯನ್ಸ್ ಪೋಲ್ನಲ್ಲಿ 13 ಜನ ಮನೆಯೊಳಗೆ ಹೋಗಲು ಅರ್ಹತೆ ಪಡೆದಿದ್ದರು. ಇಬ್ಬರಿಗೆ ಬಹಳ ಕಡಿಮೆ ಅಂಕಗಳು ಸಿಕ್ಕಿ ಅವಕಾಶ ವಂಚಿತರಾಗಿದ್ದರು. ಆದರೆ ಅರ್ಧಂಬರ್ಧ ಮತಗಳನ್ನು ಪಡೆದ 6 ಜನರ ಸ್ಥಿತಿ ಅತಂತ್ರವಾಗಿತ್ತು. ಅವರೆಲ್ಲಾ ಬಿಗ್ಬಾಸ್ ಮನೆಗೆ ಹೋಗುವುದು ಅನುಮಾನ ಎನ್ನಲಾಗಿತ್ತು. ಆದರೆ ಕೊನೆಗೆ ಅವರನ್ನು ಸುದೀಪ್ ಮನೆಯೊಳಗೆ ಕಳುಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಮನೆಯಲ್ಲಿ ಜಾಗ ಮಾಡಿಕೊಳ್ಳುವಂತೆ ಹೇಳಿದ್ದರು. ಈ ಪಟ್ಟಿಯಲ್ಲಿ ತನಿಷಾ ಕುಪ್ಪಂಡ ಸಹ ಇದ್ದರು.
ಬಿಗ್ಬಾಸ್ ಮನೆಯೊಳಗೆ ಹೋಗಲು ಮೊದಲಿಗೆ ಅರ್ಹತೆ ಪಡೆಯದ ತನಿಷಾ ಹೆಚ್ಚು ಕಡಿಮೆ 100 ದಿನಗಳ ಕಾಲ ದೊಡ್ಮನೆಯಲ್ಲಿದ್ದರು. ಟ್ರೋಫಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದರು. ಒಂದು ವೇಳೆ ಈ ಬಾರಿ ಮಹಿಳಾ ಸ್ಪರ್ಧಿಗ ಗೆದ್ದರೆ ಅದು ತನಿಷಾ ಆಗುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ತಮ್ಮ ನೇರ ನಡೆನುಡಿಯಿಂದ ತನಿಷಾ ವೀಕ್ಷಕರ ಮನಗೆದ್ದಿದ್ದರು. ಸ್ನೇಹ, ಸಮರ ಎಲ್ಲದ್ದಕ್ಕೂ ಸಿದ್ಧ ಎಂದು ಪುರುಷ ಸ್ಪರ್ಧಿಗಳಿಗೂ ಟಫ್ ಕಾಂಪಿಟೇಷನ್ ಕೊಡುತ್ತಾ ಬಂದಿದ್ದರು.
ಟಾಸ್ಕ್ಗಳಲ್ಲಿ ಮಾತ್ರವಲ್ಲ, ಮನರಂಜನೆಯಲ್ಲೂ ತನಿಷಾ ಮುಂದಿದ್ದರು. ಬುಧವಾರ ರಾತ್ರಿ ದಿಢೀರನೇ ತನಿಷಾ ಎಲಿಮಿನೇಟ್ ಆಗಿದ್ದಾರೆ ಎಂದಾಗ ಕೆಲವರಿಗೆ ಶಾಕ್ ಆಗಿತ್ತು. ಆಕೆ ಕೂಡ ನಿರೀಕ್ಷೆ ಮಾಡಿರಲಿಲ್ಲ. ಕೊನೆ ಪಕ್ಷ ಫೈನಲಿಸ್ಟ್ ಆಗಿ ಗ್ರ್ಯಾಂಡ್ ಫಿನಾಲೆ ವೇದಿಕೆ ಏರುತ್ತಾರೆ ಎಂದುಕೊಂಡಿದ್ದರು. ಬಿಗ್ಬಾಸ್ ಮನೆಯಿಂದ ಹೊರ ಬರಬೇಕು ಎನ್ನುತ್ತಿದ್ದಂತೆ ಭಾವುಕರಾಗಿ ಅತ್ತಿದ್ದರು.
ಬಿಗ್ಬಾಸ್ ಮನೆಯಿಂದ ಹೊರ ಬಂದ ತನಿಷಾ ಪ್ರತಿಕ್ರಿಯಿಸಿದ್ದಾರೆ. ಆದರೆ ಬಿಗ್ಬಾಸ್ ಜರ್ನಿ ಬಗ್ಗೆ ಮಾತನಾಡಿಲ್ಲ. ಅಭಿಮಾನಿಗಳಿಂದ ಸಿಕ್ಕ ರೆಸ್ಪಾನ್ಸ್ ಬಗ್ಗೆ ಸ್ಪಂದಿಸಿದ್ದಾರೆ. ತನಿಷಾ ಬಿಗ್ಬಾಸ್ ಮನೆಯಲ್ಲಿದ್ದಾಗ ಆಕೆಯ ಆಟವನ್ನು ನೋಡಿ 'ಬೆಂಕಿ ಬಂತೋ' ಎನ್ನುವ ಆಲ್ಬಮ್ ಸಾಂಗ್ ರಿಲೀಸ್ ಆಗಿತ್ತು. ಶಶಾಂಕ್ ಶೇಷಗಿರಿ ಮ್ಯೂಸಿಕ್ ಮಾಡಿ ಹಾಡಿದ್ದರು. ಶಮಂತ್ ನಾಗರಾಜ್ ಸಾಹಿತ್ಯ ಬರೆದಿದ್ದರು. ಈ ಹಾಡು ಕೇಳಿ ತನಿಷಾ ಖುಷಿ ವ್ಯಕ್ತಪಡಿಸಿದ್ದಾರೆ.
"ಶಮಂತ್ ನಾಗರಾಜ್ ತುಂಬಾ ಚೆನ್ನಾಗಿ 'ಬೆಂಕಿ ಬಂತೋ' ಹಾಡು ಬರೆದಿದ್ದಾರೆ. ನನಗೆ ಹಾಡು ಕೇಳಿ ಬಹಳ ಖುಷಿ ಆಯಿತು. ಎಲಿಮಿನೇಷ್ ಆದೆ ಎನ್ನುವ ಬೇಸರದಲ್ಲಿ ಬಂದೆ ಆದರೆ ಹಾಡು ಕೇಳಿ ಬಹಳ ಖುಷಿಪಟ್ಟೆ. ನನ್ನನ್ನು ಇಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡು ಹಾಡು ಬರೆದಿದ್ದು ಸಂತೋಷ ಆಗುತ್ತಿದೆ. ನೀವು ನನ್ನ ಅಭಿಮಾನಿ ಅಂತ ಗೊತ್ತಾಯ್ತು, ಆದಷ್ಟು ಬೇಗ ಭೇಟಿ ಆಗೋಣ" ಎಂದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಇನ್ನು ಜಿಯೋ ಸಿನಿಮಾದಲ್ಲಿ ಬಿಗ್ಬಾಸ್ ಶೋ 24 ಗಂಟೆ ಉಚಿತವಾಗಿ ನೋಡುವ ಅವಕಾಶ ಇದೆ.


Click it and Unblock the Notifications











