ಮದುವೆಯ 5 ವರ್ಷದ ನಂತರ ದಾಂಪತ್ಯ ಅಂತ್ಯ ; ಡಿವೋರ್ಸ್ ಘೋಷಿಸಿದ ಖ್ಯಾತ ಕಿರುತೆರೆ ಜೋಡಿ
ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಬಹುತೇಕರ ವೈಯಕ್ತಿಕ ಜೀವನದಲ್ಲಿ ಪ್ರೀತಿ-ಪ್ರೇಮ-ಪ್ರಣಯ-ಮದುವೆ ಮತ್ತು ವಿಚ್ಛೇದನ ಮಾಮೂಲು. ಇಲ್ಲಿ ಮದುವೆಯಾದ ಆರಂಭದಲ್ಲಿ ಬದುಕು ತುಂಬಾನೇ ಸಂತೋಷಮಯವಾಗಿರುತ್ತೆ. ಆದರೆ ದಾಂಪತ್ಯ ಜೀವನ ನಡೆಸುತ್ತಾ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುವ ಅನೇಕರು ಆ ನಂತರ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿ ಹೊರ ಬರುತ್ತಾರೆ.
ಇಷ್ಟೇ ಅಲ್ಲ ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ.. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಈ ಸಾಲಿಗೆ ಈಗ ''ತನ್ವಿ ಠಕ್ಕರ್ ಮತ್ತು ಆದಿತ್ಯ ಕಪಾಡಿಯಾ'' ಜೋಡಿ ಅಧಿಕೃತವಾಗಿ ಸೇರಿಕೊಂಡಿದೆ.

ಹೌದು, ''ತನ್ವಿ ಠಕ್ಕರ್ ಮತ್ತು ಆದಿತ್ಯ ಕಪಾಡಿಯಾ'' ಹಿಂದಿ ಕಿರುತೆರೆಯ ಪ್ರಖ್ಯಾತ ಜೋಡಿ. ''ಏಕ್ ದೂಸ್ರೆ ಸೇ ಕರ್ತೆ ಹೈ ಪ್ಯಾರ್'' ಧಾರಾವಾಹಿಯಲ್ಲಿ ಜೊತೆಯಲ್ಲಿ ಅಭಿನಯಿಸಿದ್ದ ಇವರು ಇಬ್ಬರು ಆ ನಂತರ ಪ್ರೀತಿಯ ಬಲೆಯಲ್ಲಿ ಸಿಲುಕಿಕೊಂಡರು. ಒಂದಲ್ಲ, ಎರಡಲ್ಲ, ಬರೋಬ್ಬರಿ 7 ವರ್ಷ ಪ್ರೇಮ ಗೀತೆಯನ್ನು ಹಾಡಿದರು. 2020ರಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡರು.
ಇನ್ನು ಎಲ್ಲರಿಗೆ ಗೊತ್ತಿರುವಂತೆ ಕೊರೊನಾ ಕಾಲ ಅದು. ಈ ಹಿನ್ನೆಲೆ ಅದ್ಧೂರಿಯಾಗಿ ಮದುವೆಯಾಗದ ಇಬ್ಬರು ತಮ್ಮ ಅತ್ಯಾಪ್ತರ ಸಮ್ಮುಖದಲ್ಲಿ ಫೆಬ್ರವರಿ 16-2021ರಲ್ಲಿ ರಿಜಿಸ್ಟರ್ ಮದುವೆ ಮಾಡಿಕೊಂಡು ಹೊಸ ಬದುಕಿಗೆ ಮುನ್ನುಡಿ ಬರೆದರು.
ತನ್ವಿ ಠಕ್ಕರ್ ಅವರ ಕೆಲ ಜನಪ್ರಿಯ ಧಾರಾವಾಹಿಗಳಿವು
* ''ಏಕ್ ದೂಸ್ರೆ ಸೇ ಕರ್ತೆ ಹೈ ಪ್ಯಾರ್''
* ''ಘುಮ್ ಹೈ ಕಿಸಿ ಕೇ ಪ್ಯಾರ್ ಮೇ''
* ''ಪವಿತ್ರ ರಿಶ್ತಾ''
* ''ಬೇಹದ್''
* ''ಬಹು ಹಮಾರಿ ರಜನಿಕಾಂತ್''
* ''ಕವಚ್''
ಆದಿತ್ಯ ಕಪಾಡಿಯಾ ಅವರ ಕೆಲ ಜನಪ್ರಿಯ ಧಾರಾವಾಹಿಗಳಿವು
* ''ಏಕ್ ದೂಸ್ರೆ ಸೇ ಕರ್ತೆ ಹೈ ಪ್ಯಾರ್''
* ''ಜಸ್ಟ್ ಮೊಹಬ್ಬತ್''
* ''ಶಕಲಕ ಬೂಮ್ ಬೂಮ್''
* ''ಸೋನ್ ಪರಿ''
* ''ಅದಾಲತ್''

ಇಂಥಾ ತನ್ವಿ ಠಕ್ಕರ್ ಮತ್ತು ಆದಿತ್ಯ ಕಪಾಡಿಯ ಅವರ ದಾಂಪತ್ಯ ಮದುವೆಯ 5 ವರ್ಷದ ನಂತರ ಈಗ ಮುರಿದು ಬಿದ್ದಿದೆ. ಖುದ್ದು ತನ್ವಿ ಠಕ್ಕರ್ ಈ ವಿಚಾರವನ್ನು ಅಧಿಕೃತವಾಗಿ ಹೇಳಿದ್ಧಾರೆ. ತಮ್ಮ ಸಾಮಾಜಿಕ ಜಾಲತಾಣದ ಮೂಲಕ ನಾವು ಇಬ್ಬರು ದೂರ ಆಗುತ್ತಿದ್ದೇವೆ ಎಂದಿದ್ದಾರೆ. ನಮ್ಮ ಖಾಸಗಿತನಕ್ಕೆ ಧಕ್ಕೆ ತರಬೇಡಿ, ನಮಗೆ ಸ್ವಲ್ಪ ಸಮಯ ಕೊಡಿ ಎಂದು ಕೂಡ ಮನವಿಯನ್ನು ಮಾಡಿಕೊಂಡಿದ್ದಾರೆ.
ತನ್ವಿ ಠಕ್ಕರ್ ಬರೆದುಕೊಂಡಿರುವ ಭಾವುಕ ಪತ್ರ
ಕಳೆದ ಕೆಲವು ತಿಂಗಳುಗಳಿಂದ, ಸಾಕಷ್ಟು ಜನ ನನ್ನ ವೈಯಕ್ತಿಕ ಜೀವನದ ಬಗ್ಗೆ ಕಾಳಜಿಯಿಂದ ಮತ್ತು ಕುತೂಹಲದಿಂದ ವಿಚಾರಿಸುತ್ತಿದ್ದಾರೆ. ತುಂಬಾ ಯೋಚನೆ ಮಾಡಿ, ಕೊನೆಗೆ ನಾನು ಮತ್ತು ಆದಿತ್ಯ ಬೇರೆ ಬೇರೆಯಾಗಿ ಮುಂದೆ ಸಾಗಲು ನಿರ್ಧರಿಸಿದ್ದೇವೆ.
ಇದು ನಮ್ಮಿಬ್ಬರಿಗೂ ಭಾವನಾತ್ಮಕವಾಗಿ ತುಂಬಾ ಕಷ್ಟದ ನಿರ್ಧಾರವಾಗಿತ್ತು. ಒಬ್ಬರಿಗೊಬ್ಬರು ಗೌರವ ಕೊಡುತ್ತಾ, ನಮ್ಮ ನಮ್ಮ ಕುಟುಂಬಗಳ ಬಗ್ಗೆ ಯೋಚಿಸಿ, ತುಂಬಾನೇ ಜಾಗರೂಕತೆಯಿಂದ ಈ ತೀರ್ಮಾನಕ್ಕೆ ಬಂದಿದ್ದೇವೆ.
ನಮ್ಮ ಮಧ್ಯೆ ಯಾವುದೇ ಕಹಿ ನೆನಪುಗಳಾಗಲಿ ಅಥವಾ ಮನಸ್ತಾಪಗಳಾಗಲಿ ಇಲ್ಲ. ಸಂಬಂಧಪಟ್ಟವರೆಲ್ಲರಿಗೂ ನೆಮ್ಮದಿ ಸಿಗಲಿ ಮತ್ತು ಅವರೆಲ್ಲರೂ ಇದರಿಂದ ಹೊರಬರಲಿ ಎನ್ನುವುದಷ್ಟೇ ನಮ್ಮ ಆಶಯ.
ಈ ಸಮಯದಲ್ಲಿ ಮೀಡಿಯಾದವರು, ಇಂಡಸ್ಟ್ರಿಯ ಸ್ನೇಹಿತರು ಮತ್ತು ನಮ್ಮ ಹಿತೈಷಿಗಳಲ್ಲಿ ಒಂದು ವಿನಂತಿ-ದಯವಿಟ್ಟು ನಮ್ಮ ಪ್ರೈವೆಸಿಗೆ ಧಕ್ಕೆ ತರಬೇಡಿ, ನಮಗೆ ಸ್ವಲ್ಪ ಸಮಯ ಕೊಡಿ. ಈ ವಿಷಯದ ಬಗ್ಗೆ ಬರುವ ಯಾವುದೇ ಫೋನ್ ಕರೆಗಳಿಗಾಗಲಿ ಅಥವಾ ಪ್ರಶ್ನೆಗಳಿಗಾಗಲಿ ನಾನು ಉತ್ತರಿಸುವುದಿಲ್ಲ. ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ನಮಗೆ ಬೆಂಬಲವಾಗಿ ನಿಂತಿದ್ದಕ್ಕೆ ಧನ್ಯವಾದಗಳು.
ಅಂದ್ಹಾಗೇ ತನ್ವಿ ಠಕ್ಕರ್ ಮತ್ತು ಆದಿತ್ಯ ಕಪಾಡಿಯಾ ಅವರ ಪ್ರೀತಿಯ ಸಂಕೇತವಾಗಿ ಇವರಿಗೆ ಮುದ್ದಾದ ಗಂಡು ಮಗ ಇದ್ದಾನೆ. ಮದುವೆಯ ಎರಡು ವರ್ಷದ ನಂತರ ಜನಿಸಿದ ಮಗನಿಗೆ ಇಬ್ಬರು ಕಬೀರ್ ಕಪಾಡಿಯಾ ಎಂದು ನಾಮಕರಣ ಮಾಡಿದ್ಧಾರೆ. ಈಗ ಇಬ್ಬರು ವಿಚ್ಚೇದನ ಘೋಷಿಸಿದ್ದಾರೆ. ಈ ಹಿನ್ನೆಲೆ ಮಗುವಿನ ಲಾಲನೆ ಪಾಲನೆ ಇಬ್ಬರಲ್ಲಿ ಯಾರು ಮಾಡ್ತಾರೆ ಎನ್ನುವ ಕುತೂಹಲ ಈಗ ಇವರ ಅಭಿಮಾನಿಗಳಲ್ಲಿದೆ.


Click it and Unblock the Notifications