ರೇಣು ಮಹಾರಾಜನಾಗಿ ಕಿರುತೆರೆಗೆ ಮರಳಿದ ಕೊಡಗಿನ ಕುವರ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಭಕ್ತಿಪ್ರಧಾನ ಧಾರಾವಾಹಿ 'ಶ್ರೀಉಧೋ ಉಧೋ ರೇಣುಕ ಯಲ್ಲವ್ವ' ಧಾರಾವಾಹಿಯಲ್ಲಿ ರೇಣು ಮಹಾರಾಜ ಆಗಿ ನಟಿಸುತ್ತಿರುವ ತಾರಕ್ ಪೊನ್ನಪ್ಪ ಕೊಡಗಿನ ಕುವರ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ಧಾರಾವಾಹಿಯಲ್ಲಿ ಎಕ್ಸ್ ಆರ್ಮಿ ಆಫೀಸರ್ ಓಂಕಾರ್ ಈಗ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಪೌರಾಣಿಕ ಧಾರಾವಾಹಿಯಲ್ಲಿ ನಟಿಸುತ್ತಿರುವ ತಾರಕ್ ಪೊನ್ನಪ್ಪ ರೇಣು ಮಹಾರಾಜನಾಗಿ ವೀಕ್ಷಕರನ್ನು ರಂಜಿಸಲು ಬಂದಿದ್ದಾರೆ. ಶಕ್ತಿಶಾಲಿಯಾಗಿರುವ ರೇಣು ಮಹಾರಾಜ ಯುಕ್ತಿವಂತ. ಪರಶಿವನ ಪರಮಭಕ್ತ ಆಗಿರುವ ರೇಣು ಮಹಾರಾಜ ಪ್ರಜೆಗಳ ಹಿತಕ್ಕಾಗಿಯೇ ತನ್ನ ಬದುಕನ್ನು ಮೀಸಲಿಟ್ಟವನು. ಊರಿನ ಜನರ ಬೇಡಿಕೆಗಳನ್ನೆಲ್ಲಾ ಒಂದು ಬಿಡದೇ ಈಡೇರಿಸುವ ರೇಣು ಮಹಾರಾಜನಿಗೆ ಒಂದೇ ಕೊರಗು, ಅದು ಮಕ್ಕಳಿಲ್ಲ ಎಂಬುದು. ಜನರ ಒಳಿತಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ರೇಣು ಮಹಾರಾಜನಿಗೆ ಮಗುವಾಗುತ್ತಾ? ಅವನ ಕೊರಗು ದೂರವಾಗುತ್ತಾ ಎಂಬುದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಛಾಪನ್ನು ಪಸರಿಸುತ್ತಿರುವ ತಾರಕ್ ಪೊನ್ನಪ್ಪ ನಟನಾಗಬೇಕು ಎಂದು ಅಂದುಕೊಂಡವರಲ್ಲ. ಬದಲಿಗೆ ಅದು ಆಕಸ್ಮಿಕ.

ನಟನಾಗುವ ಕನಸಿರಲಿಲ್ಲ
ಹೌದು, ಓದಿನಲ್ಲಿ ಮುಂದಿದ್ದ ತಾರಕ್ ಪೊನ್ನಪ್ಪ ಇಂಜಿನಿಯರಿಂಗ್
ಮತ್ತು ಎಂಟೆಕ್ ಪದವೀಧರ. ಪದವಿ ಓದುತ್ತಿರುವಾಗಲೇ ಸ್ನೇಹಿತರು ತಾರಕ್ ಅವರನ್ನು ನೀನು ನಟನಾಗಬಹುದು ಎಂದು ಪ್ರೇರೇಪಿಸುತ್ತಿದ್ದರು. ಅದೇ ಮಾತು ಅವರಿಗೂ ಸರಿ ಎಂದೆನಿಸಿ ನಟನೆಯತ್ತ ಮುಖ ಮಾಡಿದರು.

ಕೈ ಬೀಸಿ ಕರೆಯಿತು ಮಾಡೆಲಿಂಗ್
ಪದವಿಯ ಬಳಿಕ ಮಾಡೆಲಿಂಗ್ ಲೋಕ ತಾರಕ್ ಅವರನ್ನು ಕೈ ಬೀಸಿ ಕರೆಯಿತು. ಒಂದಷ್ಟು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ ತಾರಕ್ ಪೊನ್ನಪ್ಪ ನಂತರ ಕೊಲಂಬೋ , ಹೈದರಾಬಾದ್ , ಚೆನ್ನೈ, ಬೆಂಗಳೂರು ಹೀಗೆ ಹಲವು ಇವೆಂಟ್ಗಳಲ್ಲಿ ಭಾಗವಹಿಸಿದ್ದರು. ಮಾಡೆಲಿಂಗ್ ಜಗತ್ತಿನಲ್ಲಿ ಮಿಂಚಿ ಸೈ ಎನಿಸಿಕೊಂಡ ತಾರಕ್ ಪೊನ್ನಪ್ಪ ನಂತರ ಕಾಣಿಸಿದ್ದು ಹಿರಿತೆರೆಯಲ್ಲಿ.

KGF ಚಿತ್ರದಲ್ಲೂ ನಟನೆ
'ಅಜರಾಮರ' ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ನಟನೆಗೆ ಕಾಲಿಟ್ಟ ತಾರಕ್ ನಂತರ 'ಬೃಹಸ್ಪತಿ' ಸಿನಿಮಾದಲ್ಲಿ ಖಳನಾಯಕನಾಗಿ ಬಣ್ಣ ಹಚ್ಚಿದರು. ಕನ್ನಡ ಸಿನಿಮಾ ರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದ 'ಕೆಜಿಎಫ್'ನಲ್ಲಿ ಗ್ಯಾಂಗ್ ಸ್ಟರ್ ಆಗಿ ಅಭಿನಯಿಸಿದ ತಾರಕ್ ಅವರು ಮುಂದೆ 'ಮೋಕ್ಷ' ಹಾಗೂ 'ಯುವರತ್ನ' ಸಿನಿಮಾಗಳಲ್ಲಿ ನಟಿಸಿದರು.

ತೆಲುಗು ಕಿರುತೆರೆಯಲ್ಲಿ ಮೋಡಿ
ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ನಂತರ ಕಿರುತೆರೆಗೆ ಕಾಲಿಟ್ಟ ತಾರಕ್ ಪೊನ್ನಪ್ಪ "ರಾಜ ರಾಣಿ" ಧಾರಾವಾಹಿಯ ಓಂಕಾರ್ ಆಗಿ ಮೋಡಿ ಮಾಡಿದರು. ನಂತರ ಪರಭಾಷೆಯ ಕಿರುತೆರೆಗೆ ಹಾರಿದ ತಾರಕ್ ಪೊನ್ನಪ್ಪ ಈಟಿವಿ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾವೋಯಿ ಚಂದಮಾಮ' ಧಾರಾವಾಹಿಯಲ್ಲಿ ಖಳನಾಯಕನಾಗಿ ಅಬ್ಬರಿಸಿದ ಹ್ಯಾಂಡ್ ಸಮ್ ಹುಡುಗ. ಇದೀಗ ರೇಣು ಮಹಾರಾಜನಾಗಿ ಕನ್ನಡ ಕಿರುತೆರೆಗೆ ಮರಳಿದ್ದು ಪೌರಾಣಿಕ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.


Click it and Unblock the Notifications











