ತೆಲುಗು ಧಾರಾವಾಹಿಗಳಲ್ಲಿ ಕನ್ನಡಿಗರ ಅಬ್ಬರ, ಕೆರಳಿ ಕೆಂಡವಾದ ತೆಲುಗು ಕಿರುತೆರೆ ನಾಯಕಿ...!
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಅದರಲ್ಲಿಯೂ ಕನ್ನಡದ ಕಿರುತೆರೆಯಿಂದ ಲಾಟ್ ಗಟ್ಟಲೆ ತಾರೆಯರು ಅಕ್ಕ-ಪಕ್ಕದ ರಾಜ್ಯಕ್ಕೆ ತೆರಳಿದ್ದಾರೆ. ಕೆಲವರು ಖಾಯಂ ಆಗಿ ಅಲ್ಲಿಯೇ ಠಿಕಾಣಿಯನ್ನೂ ಹೂಡಿದ್ದಾರೆ. ಆದರೆ .. ನಮ್ಮವರ ಈ ಬೆಳವಣಿಗೆ ಕೆಲವರಿಗೆ ಈಗ ಸಹಿಸಿಕೊಳ್ಳಲು ಆಗ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ತೆಲುಗು ನಟಿ ಚರಿಷ್ಮಾ ನಾಯ್ಡು ಕನ್ನಡ ಕಿರುತೆರೆಯ ಕಲಾವಿದರ ಮೇಲೆ ಕೆಂಡ ಕಾರಿದ್ದಾರೆ. ಕನ್ನಡಿಗರಿಂದ ನಮಗೆಲ್ಲ ಅನ್ಯಾಯವಾಗುತ್ತಿದೆ ಎಂದಿದ್ದಾರೆ.
ತೆಲುಗು ಕಿರುತೆರೆ ಜಗತ್ತು ಕನ್ನಡಿಗರಿಂದ ತುಂಬಿ ತುಳುಕುತ್ತಿದೆ ಎಂದಿರುವ ಚರಿಷ್ಮಾ, ನಮ್ಮ ನಿರ್ಮಾಪಕರು ಅವರ ಎಲ್ಲ ಬೇಕು-ಬೇಡಗಳನ್ನೂ ಪೂರೈಸುತ್ತಾರೆ ಎಂದಿದ್ದಾರೆ. ಅವರಿಗಾಗಿ ಬೆಂಗಳೂರು To ಹೈದ್ರಾಬಾದ್ ವಿಮಾನದ ವ್ಯವಸ್ಥೆ ಮಾಡುವುದಲ್ಲದೇ, ಒಳ್ಳೆಯ ಊಟ ಅವರು ಉಳಿದುಕೊಳ್ಳಲು ಸ್ಟಾರ್ ಹೊಟೇಲ್ ಎಲ್ಲವನ್ನೂ ತೆಲುಗು ನಿರ್ಮಾಪಕರೇ ನೋಡಿಕೊಳ್ಳುತ್ತಾರೆ. ಆದರೆ, ಹೈದ್ರಾಬಾದ್ನಲ್ಲಿರುವ, ತೆಲುಗು ಭಾಷೆ ಗೊತ್ತಿರುವ ನಮಗೆ.. ನಮ್ಮವರೇ ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ, ಕನ್ನಡದವರಿಗೆ ಕೊಡುವ ಸಂಭಾವನೆಯಲ್ಲಿ ಅರ್ಧದಷ್ಟು ನಮಗೆ ಕೊಡಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಚರಿಷ್ಮಾ ನಾಯ್ಡು.

ಇನ್ನೂ ಕನ್ನಡದವರಿಗೆ ತೆಲುಗು ಅರ್ಥವಾಗಲ್ಲ. ಮಾತನಾಡಲು ಕೂಡ ಬರಲ್ಲ. ಆದರೂ.. ತೆಲುಗು ಕಿರುತೆರೆ ಉದ್ಯಮ ಅವರಿಗೆ ಬಹುಪರಾಕ್ ಹಾಕುತ್ತೆ, ಅವರ ಅಭಿನಯವನ್ನೂ ಕೊಂಡಾಡುತ್ತೆ ಆದರೆ ಅದೇ ತೆಲುಗಿನವರು ಎಷ್ಟೇ ಚೆನ್ನಾಗಿ ನಟಿಸಿದ್ರೂ ನಿಮಗೆ ಆಕ್ಟಿಂಗೇ ಬರಲ್ಲ ಅಂತ ಹೇಳ್ತಾರೆ ಎಂದಿರುವ ಚರಿಷ್ಮಾ, ಕನ್ನಡ ಕಲಾವಿದರ ಮೇಲೆ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಇರುವ ಈ ಪ್ರೇಮದಿಂದ ಆಂಧ್ರದಲ್ಲಿಯೇ ಹುಟ್ಟಿ ಬೆಳೆದ ನಮಗೆ ಅವಕಾಶಗಳು ಕೈ ತಪ್ಪಿ ಹೋಗುತ್ತಿವೆ ಎಂದಿದ್ಧಾರೆ. ತೆಲುಗಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದ ಕಲಾವಿದರಿಗೆ ತೆಲುಗಿನಲ್ಲಿ ಅವಕಾಶ ಸಿಗುತ್ತದೆ. ತೆಲುಗಿನವರಾದ ನಾವು ಏನು ಮಾಡಬೇಕು? ಎಂಬ ಪ್ರಶ್ನೆಯನ್ನೂ ಮಾಡಿದ್ದಾರೆ
ಮುಂದುವರೆದು, ತೆಲುಗು ಧಾರಾವಾಹಿಗಳಿಗೆ ಕನ್ನಡದ ಕಲಾವಿದರು ಬಣ್ಣ ಹಚ್ಚುವುದು ತಪ್ಪಲ್ಲ. ಆದರೆ.. ಧಾರಾವಾಹಿಯಲ್ಲಿರುವ ಎಲ್ಲ ಪಾತ್ರಕ್ಕೂ ಕನ್ನಡದವರೇ ಬೇಕು ಎಂದರೆ ಹೇಗೆ..? ಎಂದು ಕೇಳಿರುವ ಚರಿಷ್ಮಾ ತೆಲುಗಿನಲ್ಲಿ ಕಲಾವಿದರಾಗಿ ನಾವಿರೋದೇ ತಪ್ಪಾ ಹಾಗಿದ್ದರೆ ಎಂದು ತಮ್ಮ ಅಳಲನ್ನೂ ತೋಡಿಕೊಂಡಿದ್ದಾರೆ.

ಇನ್ನೂ ತೆಲುಗು ಧಾರಾವಾಹಿಯಲ್ಲಿ ದುರ್ಬಿನ್ ಹಾಕಿ ನೋಡಿದರೂ ಕೂಡ ಕಾಣಿಸುವುದು ಅಲ್ಲೊಬ್ಬರು.. ಇಲ್ಲೊಬ್ಬರು..ತೆಲುಗಿನವರು ಮಾತ್ರ, ಅವರನ್ನು ಹೊರತು ಪಡಿಸಿದರೆ ಮಿಕ್ಕಂತೆ ಎಲ್ಲವೂ ಕನ್ನಡಿಗರದ್ದೇ ಅಬ್ಬರ ಎಂದು ತಮ್ಮ ಬೇಸರವನ್ನೂ ಚರಿಷ್ಮಾ ನಾಯ್ಡು ಹೊರ ಹಾಕಿದ್ದಾರೆ. ನಮ್ಮನ್ನು ಆಡಿಷನ್ ಗೆ ಕರೆದು, ಪಾತ್ರಕ್ಕೆ ನಮ್ಮ ಲುಕ್ ಟೆಸ್ಟ್ ಮಾಡಿ.. ಸಂಭಾವನೆಯನ್ನೂ ಕೂಡ ನಮ್ಮ ಜೊತೆ ಮಾತನಾಡಿ ಕೊನೆ ಘಳಿಗೆಯಲ್ಲಿ ಬೆಂಗಳೂರಿನ ಕಲಾವಿದರನ್ನು ಕರೆದುಕೊಂಡು ಬರುತ್ತಾರೆ ಇದ್ಯಾವ ನ್ಯಾಯ ನೀವೇ ಹೇಳಿ ಎಂದು ಕೂಡ ಪ್ರಶ್ನೆ ಮಾಡಿದ್ದಾರೆ ಚರಿಷ್ಮಾ ನಾಯ್ಡು.


Click it and Unblock the Notifications











