ಥಟ್ ಅಂತ ಹೇಳಿ ಶೋನ ವಿಶೇಷ ಸಂಚಿಕೆ ಪ್ರಸಾರ

ಇಂದು ಪ್ರಸಾರವಾಗಲಿರುವ ಥಟ್ ಅಂತ ಹೇಳಿ ವಿಶೇಷ ಸಂಚಿಕೆಯಲ್ಲಿ 'ರೇವತಿ' ಹಾಗೂ 'ಸುಮತಿ' ಎಂಬಿಬ್ಬರು ಭಾಗವಹಿಸಲಿದ್ದಾರೆ. ಇವರಿಬ್ಬರೂ ಯಾವ ಕಾರಣಕ್ಕೆ ವಿಶೇಷ ಹಾಗೂ ಇಂದಿನ ಶೋದಲ್ಲಿ ಅವರಿಬ್ಬರೂ ಹೇಗೆ ಯಶಸ್ವಿಯಾಗಿದ್ದಾರೆ ಎಂಬುದನ್ನು ನೋಡಬಹುದು. ಇಂದಿನ ಶೋ ತೀರಾ ವಿಭಿನ್ನ ಹಾಗೂ ಕುತೂಹಲಕರ ಎಂಬ ಮಾಹಿತಿ ಥಟ್ ಅಂತ ಹೇಳಿ ತಂಡದಿಂದ ಲಭ್ಯವಾಗಿದೆ.
ಈ ಜನಪ್ರಿಯ ಕಾರ್ಯಕ್ರಮದ 2000ದ ಸಂಚಿಕೆ ನಾಳೆ, ಅಂದರೆ ದಿನಾಂಕ 27 ಜೂನ್ 2012 ರಂದು ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ. ಈ ವಿಶೇಷ (2000 ದ) ಸಂಚಿಕೆಯನ್ನು, ಬೆಂಗಳೂರು ದೂರದರ್ಶನ ಕೇಂದ್ರ, ಆಕಾಶವಾಣಿ ಮೈಸೂರು, ಮೈಸೂರಿನ ಅವದೂತ ದತ್ತಪೀಠದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಚಿತ್ರೀಕರಿಸಲಾಗಿದೆ.
ಈ ವಿಶೇಷ ಸಂಚಿಕೆ ಕಳೆದ ಜೂ.17, 2012ರಂದು ಮೈಸೂರಿನ ಸಚ್ಚಿದಾನಂದ ಗಣಪತಿ ಆಶ್ರಮ, ಮೈಸೂರಿನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ 'ಥಟ್ ಅಂತ ಹೇಳಿ' ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ಧವಾಗಿ ನಡೆಸುಕೊಂಡು ಬರುತ್ತಿರುವ ಡಾ.ನಾ. ಸೋಮೇಶ್ವರ ಹಾಗೂ ಅವರ ತಂಡವನ್ನು ಗೌರವಿಸಲಾಗಿದೆ. ಈ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ನಾಡೋಜ ದೇ.ಜವರೇಗೌಡ ಉದ್ಘಾಟಿಸಿದ್ದಾರೆ.
ಥಟ್ ಅಂತ ಹೇಳಿ ಕಾರ್ಯಕ್ರಮದ ವಿಶೇಷತೆಯೆಂದರೆ, ಕನ್ನಡನಾಡಿನ ಸಾಹಿತ್ಯ, ಜನಪದ ಪರಂಪರೆಯನ್ನು ಚೆನ್ನಾಗಿ ಅರ್ಥೈಸಿಕೊಂಡು ಜನರಿಗೆ ಮಾಹಿತಿ ನೀಡಿ ಅದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬರಹಗಾರ ಹಾಗೂ ಸೃಜನಶೀಲ ಕನ್ನಡಿಗರೊಬ್ಬರು ಹೇಗೆ ಚೆನ್ನಾಗಿ ನಿರ್ವಹಿಸಬಹುದು ಎನ್ನುವುದನ್ನು ಎಲ್ಲರಿಗೂ ತೋರಿಸಿಕೊಟ್ಟಿದ್ದಾರೆ.
ಈಗಾಗಲೇ ಹಿಂದಿ, ಇಂಗ್ಲೀಷ್, ಮುಂತಾದ ಭಾಷೆಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮಗಳು ಅದೆಷ್ಟೋ ಬಂದು ಹೋಗಿವೆ. ಆದರೆ ಕನ್ನಡದಲ್ಲಿ ಅದು ನಿರಂತರವಾಗಿ ಸಾಗಿದೆ ಎಂಬ ಹೆಗ್ಗಳಿಕೆ ಈ ಕಾರ್ಯಕ್ರಮದ ಮೂಲಕ ದಕ್ಕಿದೆ. ಡಾ. ನಾ. ಸೋಮೇಶ್ವರ ತುಂಬಾ ಅಚ್ಚುಕಟ್ಟಾಗಿ ಇದನ್ನು ನಡೆಸಿಕೊಡುತ್ತಿದ್ದಾರೆ, ಜನರಿಗೆ ಮಾಹಿತಿ ಖಜಾನೆಯನ್ನೇ ತೆರೆದಿಟ್ಟಿದ್ದಾರೆ.
ಚಂದನ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ 'ಥಟ್ ಅಂತ ಹೇಳಿ' ಕಾರ್ಯಕ್ರಮ ರಾತ್ರಿ 10.30ರಿಂದ 11ರವರೆಗೆ ಪ್ರಸಾರವಾಗುತ್ತದೆ. ಈ ಕಾರ್ಯಕ್ರಮ ಪ್ರೇಕ್ಷಕರನ್ನು ಸೆಳೆದಿದ್ದು ಮಾತ್ರವಲ್ಲದೇ ತೀರಾ ವಿಭಿನ್ನ ಎಂಬ ಹೆಗ್ಗಳಿಕೆ ಗಳಿಸಿದೆ. ರಾತ್ರಿ ಪ್ರಸಾರದ ನಂತರ ಮಾರನೆ ದಿನ ಬೆಳಗ್ಗೆ 11ಕ್ಕೆ ಇದೇ ಕಾರ್ಯಕ್ರಮ ಮರುಪ್ರಸಾರವಾಗುತ್ತದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











