ಕಣ್ಣಿಗೆ ಕಾಣುವುದೆಲ್ಲ ನಿಜವಲ್ಲ ; ನಿಗೂಢ ವ್ಯಕ್ತಿ ಜೊತೆ ನಿಶ್ಚಿತಾರ್ಥ - ಬಿಗ್ ಬಾಸ್ ಸ್ಫರ್ಧಿ ಸಿಡಿಮಿಡಿ
ಚಿತ್ರರಂಗದಲ್ಲಿ ಹಲವರಿಗೆ ಪ್ರಚಾರದ ಹುಚ್ಚಿದೆ, ಪ್ರಚಲಿತದಲ್ಲಿರಲು ಇವರು ಯಾವ ಕೆಲಸ ಮಾಡಲು ಕೂಡ ಹೇಸಲ್ಲ. ಸ್ಫರ್ಧಾತಕ ಯುಗದಲ್ಲಿ ಜನರನ್ನನು ತಮ್ಮತ್ತ ಸೆಳೆಯಲು ನಾನಾ ಕಸರತ್ತುಗಳನ್ನು ಇವರು ಮಾಡುತ್ತಲೇ ಇರುತ್ತಾರೆ. ಇವರ ಪಾಲಿಗೆ ವೈಯಕ್ತಿಕ ಬದುಕು ಕೂಡ ಪ್ರಚಾರದ ಸರಕು.
ಲೈಕ್ಸ್.. ಕಾಮೆಂಟ್ಸ್.. ಗುಂಗಿನಲ್ಲಿ ತಮ್ಮ ಕುರಿತು ತಾವೇ ಇವರು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಹರಡುವಂತೆ ನೋಡಿಕೊಳ್ಳುತ್ತಾರೆ. ಕೊನೆಗೆ ಆ ಸುದ್ದಿ ಎಲ್ಲೋ ತಲುಪಿ, ಇನ್ನೆಲ್ಲೋ ವ್ಯಾಪಕವಾಗಿ ಚರ್ಚೆ ಶುರುವಾದಾಗ, ಸಮಾಜವನ್ನೇ ಇವರು ದೂಷಿಸುತ್ತಾರೆ. ನೋಡುವ ದೃಷ್ಟಿಕೋನ ಮೊದಲು ಬದಲಿಸಿಕೊಳ್ಳಿ ಎಂದೆಲ್ಲಾ ಮಾತನಾಡುತ್ತಾರೆ. ಉದಾಹರಣೆಗೆ ಅಶು ರೆಡ್ಡಿ.

ಹೌದು, ಆಶು ರೆಡ್ಡಿ.. ಹೌದು, ಅಶು ರೆಡ್ಡಿ.. ಪಕ್ಕದ ಆಂಧ್ರದ ಚೆಲುವೆ. ಡಬ್ ಸ್ಮ್ಯಾಶ್ ಮಾಡುತ್ತಲೇ ಜನಪ್ರಿಯವಾದ ಅಶು ರೆಡ್ಡಿ ಅವರನ್ನು ಹಲವರು ಜ್ಯೂನಿಯರ್ ಸಮಂತಾ ಎಂದು ಕರೆಯುತ್ತಾರೆ. ಅಮೆರಿಕಾದ ಡಲ್ಲಾಸ್ ಬ್ಯಾಪಿಸ್ಟ್ ವಿಶ್ವ ವಿದ್ಯಾಲಯದಲ್ಲಿ ಎಂಬಿಎ ಪದವಿಯನ್ನು ಕೂಡ ಪಡೆದಿರುವ ಅಶು ರೆಡ್ಡಿ ''ಚಲ್ ಮೋಹನ್ ರಂಗ''.. ''ಫೋಕಸ್''.. ''ಯೆವಮ್''.. ''ಪದ್ಮವ್ಯೂಹಂ ಲೋ ಚಕ್ರಧಾರಿ'' ಸೇರಿ ಕೆಲ ಸಿನಿಮಾಗಳನ್ನು ಮಾಡಿದ್ದಾರೆ.
ಇನ್ನು 2019ರಲ್ಲಿ ತೆಲುಗಿನ ''ಬಿಗ್ ಬಾಸ್'' 3ನೇ ಸೀಸನ್ನಲ್ಲಿ ಭಾಗವಹಿಸಿದ್ದ ಅಶು ರೆಡ್ಡಿ ಆ ನಂತರ ಓಟಿಟಿಯಲ್ಲಿ ಪ್ರಸಾರವಾದ ''ಬಿಗ್ ಬಾಸ್ ನಾನ್-ಸ್ಟಾಪ್''ನಲ್ಲಿ ಕೂಡ ಭಾಗವಹಿಸಿದ್ದರು.
ಇಂಥಾ ಅಶು ರೆಡ್ಡಿ ಮೊನ್ನೆ ಮೊನ್ನೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದರು. ನಿಶ್ಚಿತಾರ್ಥ ಸಮಾರಂಭದ ಫೋಟೊಗಳವು. ಹಲವರು ಈ ಫೋಟೋಗಳನ್ನು ಕಂಡು ತಲೆ ಕೆಡಿಸಿಕೊಂಡಿದ್ದರು.
ಇನ್ನು ತಮ್ಮ ಈ ಫೋಟೊಗಳ ಕುರಿತು ಅಶು ಒಂದು ಅಕ್ಷರ ಕೂಡ ಬರೆದುಕೊಂಡಿರಲಿಲ್ಲ. ಹೀಗಾಗಿ ಜೂನಿಯರ್ ಸಮಂತಾ ಕೊನೆಗೂ ಮದುವೆಯಾಗುತ್ತಿದ್ದಾರಾ? ಎಂದೆಲ್ಲಾ ಜನ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದರು. ಆದರೆ. ವಾಸ್ತವವೇ ಬೇರೆ. ಇದೆಲ್ಲವೂ ಪ್ರಚಾರಕ್ಕಾಗಿ ಮಾಡಲಾದ ಸಣ್ಣ ಗಿಮಿಕ್ ಅಷ್ಟೇ.

ಹೌದು, ಅಶು ''ವಿಕ್ರಮ್ ಆನ್ ಡ್ಯೂಟಿ'' ಎಂಬ ವೆಬ್ ಸರಣಿಯೊಂದನ್ನು ಮಾಡುತ್ತಿದ್ದಾರೆ. ಈ ಸರಣಿಯ ದೃಶ್ಯಾವಳಿಯ ಚಿತ್ರಣವನ್ನು ಈಗ ಹಂಚಿಕೊಂಡಿರುವ ಅಶು, ನಮ್ಮ ಕಣ್ಣಿಗೆ ಕಾಣುವ ಅಥವಾ ಕಿವಿಗಳಿಗೆ ಕೇಳುವ ಪ್ರತಿಯೊಂದು ವಿಷಯವೂ ನಿಜವಾಗಿರಲಿಕ್ಕಿಲ್ಲ. ವಾಸ್ತವವಾಗಿ ಕಾಣುವ ಪ್ರತಿಯೊಂದೂ ಅಸಲಿಯಲ್ಲ. ಯಾವುದನ್ನಾದರೂ ನಂಬುವ ಮೊದಲು ಯೋಚಿಸಿ ಎಂಬ ಬುದ್ದಿ ಮಾತನ್ನು ಹೇಳಿದ್ದಾರೆ. ಈ ಮೂಲಕ ನಿಶ್ಚಿತಾರ್ಥವಾಯ್ತು ಎಂದುಕೊಂಡವರ ವಿರುದ್ಧ ಕಿಡಿ ಕಾರಿದ್ದಾರೆ. ಇನ್ನು ಅಶು ಕೈ ಹಿಡಿದಿದ್ದ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ನಟ ನಿಖಿಲ್ ಮಲಯಕ್ಕಲ್.
ಸದ್ಯ ಅಶು ಅವರ ಈ ನಡೆ ಮತ್ತು ಬುದ್ದಿ ಮಾತು ಹಲವರನ್ನು ಕೆರಳಿಸಿದೆ. ಇವರ ಈ ಪಬ್ಲಿಸಿಟಿ ಸ್ಟಂಟ್ ಕುರಿತು ಚರ್ಚೆ ನಡೆಯುತ್ತಿದೆ. ಯಾಕೆಂದರೆ.. ಅಶು ರೆಡ್ಡಿ ಮೇಲೆ ಪ್ರೀತಿ ಪ್ರೇಮ ಮದುವೆಯ ಹೆಸರಿನಲ್ಲಿ ಅನಿವಾಸಿ ಭಾರತೀಯನಿಗೆ 9.35 ಕೋಟಿ ಪಂಗನಾಮ ಹಾಕಿರುವ ಆರೋಪ ಇದೆ.
ಅಶು ರೆಡ್ಡಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ತಮ್ಮ ಮೇಲಿನ ಎಫ್ಐಆರ್ ರದ್ದು ಮಾಡುವಂತೆ ತೆಲಂಗಾಣ ಹೈಕೋರ್ಟ್ನ ಮೊರೆ ಹೋದರೂ ಕೂಡ ಅಶು ರೆಡ್ಡಿಗೆ ಹಿನ್ನೆಡೆಯಾಗಿದೆ. ಮುಂಬರುವ ಜೂನ್ 9ರಂದು ಈ ವಂಚನೆ ಪ್ರಕರಣದ ವಿಚಾರಣೆ ಇದೆ.
ಇಂತಹ ಸಮಯದಲ್ಲಿ ನೆಗೆಟಿವ್ ಪ್ರಚಾರದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಅಶು ಈ ರೀತಿ ''ಎಂಗೇಜ್ಮೆಂಟ್'' ನಾಟಕವಾಡಿದ್ದಾರೆ ಎಂಬ ಅಭಿಪ್ರಾಯ ಈಗ ತೆಲುಗು ನಾಡಿನಲ್ಲಿ ವ್ಯಕ್ತವಾಗುತ್ತಿದೆ. ನಿಶ್ಚಿತಾರ್ಥದಂತಹ ಸುಂದರ ಸುಮಧುರ ಕ್ಷಣವನ್ನು ಕೂಡ ಅಶು ತಮ್ಮ ಪ್ರಚಾರಕ್ಕೆ ಬಳಸಿಕೊಂಡರು ಎಂಬ ಮಾತು ಸಾರ್ವತ್ರಿಕ ವಲಯದಲ್ಲಿ ಕೇಳಿ ಬರುತ್ತಿದೆ.


Click it and Unblock the Notifications