BBK 12 Grand Finale:ಹನುಮಂತ ಲಮಾಣಿಯಂತೆ ವೈಲ್ಡ್ ಕಾರ್ಡ್ ಇತಿಹಾಸ ಬರೆಯುವಲ್ಲಿ ವಿಫಲವಾದ ರಘು- ಎಡವಿದ್ದೆಲ್ಲಿ?
''ಬಿಗ್ ಬಾಸ್'' ಮನೆಗೆ ಪ್ರತಿ ವರ್ಷ ಹಲವರು ಅತ್ಯುತ್ಸಾಹದಿಂದ ಹೋಗುತ್ತಾರೆ. ಮನೆಯೊಳಗೆ ತೆರಳುವ ಮುನ್ನ ವೇದಿಕೆಯಲ್ಲಿ ಮಾತನಾಡುವಾಗ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ನಡೆಯುವ ರಂಪ-ರಾಮಾಯಣದಲ್ಲಿ ಕೂಡ ಭಾಗವಹಿಸುತ್ತಾರೆ. ಮನೆಯಲ್ಲಿ ಸ್ಫರ್ಧಿಗಳ ನಡುವೆ ಬೆಂಕಿಯನ್ನು ಕೂಡ ಹಚ್ಚುವುದರಲ್ಲಿ ಮುಂದಿರುತ್ತಾರೆ. ಆದರೆ.. ಮನೆಯೊಳಗೆ ಹೋದ ಸ್ಫರ್ಧಿಗಳಲ್ಲಿ ಪ್ರತಿವಾರ ಯಾರಾದರೂ ಒಬ್ಬರು ಮನೆ ಹೊರಗಡೆ ಬರಲೇಬೇಕು. ಅದೇ ನಿಯಮ.
ಈ ನಿಯಮದಡಿಯಲ್ಲಿಯೇ ಪ್ರತಿ ವಾರ ಜೊಳ್ಳುಗಳನ್ನ ಉದುರಿಸಿ ಗಟ್ಟಿ ಕಾಳು ಉಳಿಸಿಕೊಳ್ಳಲು ''ಬಿಗ್ ಬಾಸ್'' ಜರಡಿ ಹಿಡಿಯುತ್ತೆ. ಒಬ್ಬರನ್ನು ಮನೆಯ ಹೊರಗೆ ದಬ್ಬಲಾಗುತ್ತೆ. ಆ ಪ್ರಕಾರ ಈ 112 ದಿನಗಳಲ್ಲಿ ಮಂಜು ಭಾಷಿಣಿ.. ಆರ್ಜೆ ಅಮಿತ್.. ಕರಿಬಸವಯ್ಯ.. ಅಶ್ವಿನಿ.. ಚಂದ್ರ ಪ್ರಭಾ.. ಡಾಗ್ ಸತೀಶ್..ಕಾಕ್ರೋಚ್ ಸುಧಿ..ಮಲ್ಲಮ್ಮ.. ಅಭಿಷೇಕ್.. ಜಾಹ್ನವಿ.. ಧ್ರುವಂತ್..ಮಾಳು ನಿಪನಾಳ್.. ಸ್ಪಂದನಾ ಸೋಮಣ್ಣ.. ರಾಶಿಕಾ.. ಅವರನ್ನು ಕಳುಹಿಸಲಾಗಿದೆ.

ಗ್ರ್ಯಾಂಡ್ ಫಿನಾಲೆಗೆ ಗಿಲ್ಲಿ.. ಅಶ್ವಿನಿ ಗೌಡ.. ರಕ್ಷಿತಾ.. ಕಾವ್ಯ.. ರಘು ಮತ್ತು ಧನುಷ್ ಅವರನ್ನು ಕಳುಹಿಸಲಾಗಿದೆ. ಆ ಪೈಕಿ ಸದ್ಯ ''ಬಿಗ್ ಬಾಸ್''ನ ಈ ಸೀಸನ್ನ ಟಾಸ್ಕ್ ಮಾಸ್ಟರ್ ಧನುಷ್ ಕೂಡ ಕೊನೆ ದಿನ ಹೊರ ಬಂದಿದ್ದು ಧನುಷ್ ಬೆನ್ನಲ್ಲೇ ಮ್ಯೂಟೆಂಟ್ ರಘು ಕೂಡ ಹೊರ ಬಂದಿದ್ದಾರೆ.
ಹೌದು, ಅಸಲಿಗೆ ಈ ಬಾರಿ 19 ಜನರ ಜೊತೆ ವೈಲ್ಡ್ ಕಾರ್ಡ್ ಮೂಲಕ 3 ಜನರನ್ನು ಹೊರಗಡೆ ಕಳುಹಿಸಲಾಗಿತ್ತು. ಆ ಪೈಕಿ ರಿಶಾ ಮತ್ತು ಸೂರಜ್ ಕೊನೆಯ ಹಂತದವರೆಗೆ ಬರುವಲ್ಲಿ ವಿಫಲರಾದರು. ರಘು ಈ ಅಸಾಧ್ಯವನ್ನು ಸಾಧ್ಯವನ್ನಾಗಿಸಿದರು. ಕೊನೆಯ ಆರರಲ್ಲಿ ಸ್ಥಾನ ಪಡೆದರು. ಈ ಹಿನ್ನೆಲೆ ಕೆಲವರಿಗೆ ಈ ಬಾರಿ ರಘು ಮತ್ತೊಮ್ಮೆ ಇತಿಹಾಸ ಸೃಷ್ಟಿಸುವ ವಿಶ್ವಾಸ ಇತ್ತು. ಯಾಕೆಂದರೆ.. ಇಲ್ಲಿಯವರೆಗೆ ಹನುಮಂತು ಅವರನ್ನು ಹೊರತುಪಡಿಸಿದರೆ ''ಬಿಗ್ ಬಾಸ್'' ಟ್ರೋಫಿಯನ್ನು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಮಾಡಿರುವ ಯಾರೊಬ್ಬರು ಕೂಡ ಗೆದ್ದಿಲ್ಲ. ಆದರೆ ಆ ನಂಬಿಕೆ ಮತ್ತೊಮ್ಮೆ ಹುಸಿಯಾಗಿದೆ. ರಘು ಮನೆಯಿಂದ ಹೊರಗಡೆ ಬಂದಿದ್ದಾರೆ.
ರಘು ಅವರನ್ನು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬಂದಿದ್ದ, ''ಬಿಗ್ ಬಾಸ್'' ಗೆದ್ದ ಏಕೈಕ ಮಹಿಳಾ ಸ್ಫರ್ಧಿ ಶ್ರುತಿ ಮೊದಲಿಗೆ ಮನೆಯಲ್ಲಿದ್ದ 5 ಸ್ಫರ್ಧಿಗಳ ಕುಶಲೋಪರಿ ವಿಚಾರಿಸಿದರು. ಯಾರು ಗೆಲ್ತಾರೆ ಅವರಿಗೆ ನನ್ನ ಅಭಿನಂದನೆ ಎಂದು ಹೇಳಿದ ಶ್ರುತಿ ಯಾರೇ ಹೋದರೂ ಕೂಡ ಬೇಜಾರಾಗುತ್ತೆ, ಬೇಜಾರು ಮಾಡ್ಕೋಬೇಡಿ ಎಂದು ಹೇಳಿದರು. ನೀವು ಎಲ್ಲರೂ ವಿನ್ನರ್ಸ್ ಎಂದು ಹುರಿದುಂಬಿಸಿ ರಘು ಅವರನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಬಂದರು.
ಸಹಜವಾಗಿ ರಘು ತಾವು ಎಲಿಮಿನೇಟ್ ಆಗುವುದನ್ನು ನಿರೀಕ್ಷೆ ಮಾಡಿರಲಿಲ್ಲ. ಮನೆಯಾಚೆ ಬರುವಾಗ ರಘು ಭಾವುಕಗೊಂಡಿದ್ದರು. ಮನೆಯ ಸ್ಫರ್ಧಿಗಳನ್ನು ಅಪ್ಪಿಕೊಂಡು, ''ಬಿಗ್ ಬಾಸ್'' ಮನೆಯನ್ನೊಮ್ಮೆ ಸುತ್ತು ಹಾಕಿ ಹೊರಗಡೆ ಬಂದರು.
ಮನೆಯಿಂದ ಹೊರಗಡೆ ಬಂದು ವೇದಿಕೆ ಮೇಲೆ ಮಾತನಾಡಿದ ರಘು, ಒಳ್ಳೆಯ ಅನುಭವ ನಿಮಗೆ ಧನ್ಯವಾದಗಳು ಎಂದು ಸುದೀಪ್ ಅವರಿಗೆ ಹೇಳಿದರು. ''ಬಿಗ್ ಬಾಸ್'' ಮತ್ತು ''ಕಲರ್ಸ್ ಕನ್ನಡ''ಗೆ ಕೂಡ ಧನ್ಯವಾದ ಹೇಳಿದರು. ಈ ಅನುಭವದಿಂದ ಮುಂದೆ ಇನ್ನೂ ಬೆಳೆಯಬೇಕು ಎನ್ನುವುದು ನನ್ನ ಉದ್ದೇಶ ಎಂದು ಹೇಳಿದ ರಘು ''ಬಿಗ್ ಬಾಸ್'' ಮನೆಯಲ್ಲಿನ ತಮ್ಮ ಪ್ರಯಾಣದ ವಿಡಿಯೋವನ್ನು ನೋಡಿ ಭಾವುಕರಾದರು. ರಘು ಅವರ ಪತ್ನಿ ಕೂಡ ಕಣ್ಣೀರು ಹಾಕಿದರು. ಪತ್ನಿಯ ಬಗ್ಗೆ ಮಾತನಾಡುತ್ತಾ ರಘು ಕೂಡ ಕಣ್ಣೀರಾದರು.
ರಘು ಅವರಿಗೆ 2 ಲಕ್ಷ ಬಹುಮಾನವನ್ನು ನೀಡಲಾಯ್ತು. ಇದಲ್ಲದೇ ಒಂದೂವರೆ ಲಕ್ಷ ಹಣವನ್ನು ಕೂಡ ನೀಡಲಾಯ್ತು. ಈ ಸಮಯದಲ್ಲಿ ನಿಮ್ಮೆಲ್ಲರ ಪ್ರೀತಿಯನ್ನು ಸಾಯುವವರೆಗೆ ನಾನು ಎದೆಯಲ್ಲಿ ಇಟ್ಕೊಳ್ತೀನಿ ಎಂದು ರಘು ಹೇಳಿದರು.
ಅಂದ್ಹಾಗೇ ''ಬಿಗ್ ಬಾಸ್'' ಮನೆಯಲ್ಲಿ ಇಲ್ಲಿಯವರೆಗೆ ಹನುಮಂತ ಅವರನ್ನು ಹೊರತು ಪಡಿಸಿದರೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ ಯಾರೊಬ್ಬರು ಕೂಡ ಗೆದ್ದಿಲ್ಲ. ದೈತ್ಯ ದೇಹ, ಫಿಟ್ ಬಾಡಿ ಮತ್ತು ಅಬ್ಬರದ ಧ್ವನಿಯಿಂದ ಪ್ರೇಕ್ಷಕರ ಗಮನ ಸೆಳೆದ ರಘುಗೆ ಇದೇ ವೈಲ್ಡ್ ಕಾರ್ಡ್ ಮುಳುವಾಗಿದ್ದರು ಆಗಿರಬಹುದು. ಇನ್ನು ವೇದಿಕೆಯ ಮೇಲೆ ಖುದ್ದು ರಘು ಹೇಳಿದಂತೆ ''ಬಿಗ್ ಬಾಸ್''ಗೆ ಕೆಲ ವರ್ಷಗಳ ಹಿಂದೆ ಬಂದಿದ್ದರೆ ಕಥೆ ಬೇರೆ ಇರುತ್ತಿತ್ತು. ಇದಕ್ಕೆ ಪೂರಕವಾಗಿ ಆರಂಭದಲ್ಲಿ ಅಬ್ಬರಿಸಿದ್ದ ರಘು ಆ ನಂತರ ಮೆತ್ತಗಾದರು. ಇದು ಕೂಡ ರಘು ಅವರ ಹಿನ್ನೆಡೆಗೆ ಕಾರಣವಾಗಿದ್ದರು ಆಗಿರಬಹುದು.


Click it and Unblock the Notifications











