ಮೌನಕ್ಕೆ ಜಾರಿದ ದೂರದರ್ಶನದ ಪ್ರಸಿದ್ಧ ಧ್ವನಿ ; ಖ್ಯಾತ ನಿರೂಪಕಿ ಸರಳಾ ಮಹೇಶ್ವರಿ ನಿಧನ
ಇಂದು ಅಂಗೈಯಲ್ಲಿ ಮನರಂಜನೆ ಇದೆ. ಆದರೆ ಹಿಂದೆ ಮನರಂಜನೆಯ ಏಕೈಕ ತಾಣವಾದದ್ದು ದೂರದರ್ಶನ್ ಮಾತ್ರ. ಆ ಕಾಲದಲ್ಲಿ ಇಂದಿನಂತೆ 24 ಗಂಟೆಗಳ ನ್ಯೂಸ್ ಚಾನೆಲ್ ಅಬ್ಬರ ಇರಲಿಲ್ಲ. ಜಗತ್ತಿನ ಆಗು ಹೋಗುಗಳನ್ನು ನಿಗದಿತ ಸಮಯದಲ್ಲಿ ಪ್ರಸಾರವಾಗುತ್ತಿದ್ದ ವಾರ್ತೆಗಳಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತಿತ್ತು.
ಇನ್ನೂ ಕೆಲ ಒಮ್ಮೆ ವಾರ್ತೆಗಳು ಪ್ರಸಾರವಾಗಲು ಶುರುವಾದರೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾರ್ತೆಗಳಿಗಾಗಿ ಜನ ಅಷ್ಟರ ಮಟ್ಟಿಗೆ ಕಾಯುತ್ತ ಕುಳಿತಿರುತ್ತಿದ್ದರು. ಸಂಯಮ, ಘನತೆ ಮತ್ತು ಭಾಷಾ ಶುದ್ದತೆಯ ಸುವರ್ಣ ಯುಗ ಅದು. ಆ ಕಾಲದಲ್ಲಿ ಸುದ್ದಿ ಅಂದರೆ ಚರ್ಚೆಯಾಗಿರಲಿಲ್ಲ. ನಿರೂಪಣೆ ಅಂದರೆ ಅದು ಕೀರುಚಾಟವೂ ಆಗಿರಲಿಲ್ಲ. ಬದಲಿಗೆ ಮನೆ ಮತ್ತು ಮನಗಳನ್ನು ತಲುಪುವ ವಿಶ್ವಾಸಾರ್ಹ ಧ್ವನಿಯಾಗಿತ್ತು. ಆ ಪೈಕಿ ಒಂದಾಗಿದ್ದ ಸರಳಾ ಮಹೇಶ್ವರಿ ಅವರ ಧ್ವನಿ ಇಂದು (ಫೆಬ್ರವರಿ 12 ) ಮಾತು ನಿಲ್ಲಿಸಿದೆ. ಮೌನಕ್ಕೆ ಶರಣಾಗಿದೆ.

ಹೌದು, ಚೈತನ್ಯದ ಚಿಲುಮೆಯಂತಿದ್ದ, ಗಾಂಭೀರ್ಯದ ಸಂಕೇತದಂತೆಯೂ ಇದ್ದ ಸರಳಾ ಮಹೇಶ್ವರಿ ತಮ್ಮ 71ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ದೆಹಲಿಯ ನಿಗಮ್ ಬೋಧ್ ಘಾಟ್ ನಲ್ಲಿ ಇವರ ಅಂತಿಮ ಸಂಸ್ಕಾರಗಳನ್ನು ಮಾಡಲಾಗಿದೆ.
1954ರಲ್ಲಿ ದೆಹಲಿಯಲ್ಲಿ ಜನಿಸಿದ ಸರಳಾ ಅವರಿಗೆ ಅವರ ತಂದೆಯೇ ವಿಮರ್ಷಕರಾಗಿದ್ದರು. ತಂದೆಯ ಮಾರ್ಗದರ್ಶನದಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಬಂದ ಸರಳಾ 1976ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ವ್ಯಾಸಂಗ ಮಾಡುತ್ತಿದ್ದಾಗ ದೂರದರ್ಶನವನ್ನು ಸೇರಿಕೊಂಡರು.
ಆರಂಭದಲ್ಲಿ ಮಕ್ಕಳ ಕಾರ್ಯಕ್ರಮಕ್ಕೆ ಸ್ಕ್ರಿಪ್ಟ್ ಬರೆಯುತ್ತಿದ್ದ ಸರಳಾ ಅವರ ಬದುಕು 1982ರ ಸಮಯದಲ್ಲಿ ಮಹತ್ತರ ತಿರುವು ಪಡೆಯಿತು.ಬ್ಲ್ಯಾಕ್ & ವೈಟ್ ದಿಂದ ಕಲರ್ಸ್ ಗೆ ಮಾಧ್ಯಮ ಕ್ಷೇತ್ರ ರೂಪಾಂತರಗೊಳ್ಳುತ್ತಿದ್ದ ಸಮಯದಲ್ಲಿ ಸುದ್ದಿ ವಾಚಕಿಯಾಗಿ ಪರದೆಯನ್ನು ಆವರಿಸಿಕೊಂಡ ಸರಳಾ ಮಹೇಶ್ವರಿ ಏಷ್ಯನ್ ಗೇಮ್ಸ್ ಸುದ್ದಿಗಳನ್ನು ನಿರೂಪಣೆ ಮಾಡಿದರು.
ಇಷ್ಟೇ ಅಲ್ಲ1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ಸುದ್ದಿಯನ್ನು ಇಡೀ ಭಾರತಕ್ಕೆ ಮೊದಲು ಹೇಳಿದ ಧ್ವನಿ ಸರಳ ಮಹೇಶ್ವರಿ ಅವರದ್ದಾಗಿತ್ತು. ಇನ್ನೂ 1997ರಲ್ಲಿ ಅವರು ಮದರ್ ತೆರೇಸಾ ಅವರ ಅಂತ್ಯಕ್ರಿಯೆಯ ಸುದ್ದಿಯನ್ನು ಕೂಡ ಓದಿದ್ದರು ಸರಳಾ ಮಹೇಶ್ವರಿ. ಪಂಜಾಬ್ ದಂಗೆಯ ಸಮಯದಲ್ಲಿ ಉಗ್ರಗಾಮಿಗಳಿಂದ ಬೆದರಿಕೆ ಬಂದರೂ ಹೆದರೆ ಬೆದರದೆ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ಇವರದ್ದು.
ಇವೆಲ್ಲಾ ಘಟನೆಗಳು ಸರಳಾ ಮಹೇಶ್ವರಿ ಅವರ ವೃತ್ತಿ ಜೀವನದಲ್ಲಿ ಬಹುಮುಖ್ಯ ಮತ್ತು ಮಹತ್ವದ ಪಾತ್ರ ವಹಿಸಿದ್ದವು. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಈಗ ಟೆಲಿಪ್ರಾಂಪ್ಟರ್ಗಳ ಕಾಲ. ಆದರೆ ಆ ಕಾಲದಲ್ಲಿ ಟೆಲಿಪ್ರಾಂಪ್ಟರ್ ಇಲ್ಲದೇ ಕೇವಲ ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನಷ್ಟೇ ನಂಬಿಕೊಂಡು ಸುದ್ದಿ ಓದಬೇಕಿತ್ತು. ಅಲ್ಲಿ ತಪ್ಪುಗಳಿಗೆ ಅವಕಾಶವಿರಲಿಲ್ಲ. ನೇರ ಪ್ರಸಾರದ ಸಮಯದಲ್ಲಿ ಕೆಮ್ಮಿದರೆ ಅದೇ ದೊಡ್ಡ ತಪ್ಪು ಎಂದು ಪರಿಗಣಿಸಲಾಗುತ್ತಿದ್ದ ಕಾಲವದು. ಅಂತಹ ಒತ್ತಡದ ನಡುವೆಯೂ ಸರಳಾ ಮಹೇಶ್ವರಿ ಶಾಂತವಾಗಿರುತ್ತಿದ್ದರು. ಸುದ್ದಿಯನ್ನು ಸಮಚಿತ್ತದಿಂದ ಓದುತ್ತಿದ್ದರು.
ಸರಳಾ ಮಹೇಶ್ವರಿ ಅವರ ಸುದ್ದಿ ಓದುವ ಶೈಲಿ ಎಷ್ಟು ಜನಪ್ರಿಯವಾಗಿತ್ತೆಂದರೆ, ಆ ಕಾಲದಲ್ಲಿ ಜನ ಕೇವಲ ಸುದ್ದಿಗಾಗಿ ಅಲ್ಲದೆ ಸುದ್ದಿ ಓದುವಾಗ ಅವರಲ್ಲಿದ್ದ ಗಾಂಭೀರ್ಯ ಮತ್ತು ಶಿಸ್ತನ್ನು ಮೆಚ್ಚಿಕೊಂಡು ಹಲವರು ದೂರದರ್ಶನಕ್ಕೆ ಪತ್ರ ಬರೆಯುತ್ತಿದ್ದರು.
1984ರಲ್ಲಿ ಪವನ್ ಮಹೇಶ್ವರಿ ಅವರನ್ನು ವಿವಾಹವಾದ ನಂತರ ಸರಳಾ ಇಂಗ್ಲೆಂಡ್ಗೆ ತೆರಳಿದರು. ಈ ಸಮಯದಲ್ಲಿ ಪ್ರತಿಷ್ಠಿತ ''ಬಿಬಿಸಿ''ಯಲ್ಲಿ ಕೆಲಸ ಮಾಡಿದ ಸರಳಾ 1988ರಲ್ಲಿ ಮತ್ತೆ ದೂರದರ್ಶನಕ್ಕೆ ಮರಳಿದರು.
ಇನ್ನೂ ಸರಳಾ ಮಹೇಶ್ವರಿ ಕೇವಲ ನಿರೂಪಕಿಯಾಗಿರಲಿಲ್ಲ. ಬದಲಿಗೆ ಉಪನ್ಯಾಸಕಿ ಕೂಡ ಆಗಿದ್ದರು. ದೆಹಲಿ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಹಂಸರಾಜ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸರಳಾ ಮಹೇಶ್ವರಿ ಬೆಳಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಿದರೆ ಮಧ್ಯಾಹ್ನ ಅಥವಾ ಸಂಜೆಯ ನಂತರ ದೇಶ ಮತ್ತು ವಿದೇಶದ ಸುದ್ದಿಗಳನ್ನು ಭಾರತದೆಲ್ಲೆಡೆ ತಮ್ಮ ನಿರೂಪಣೆಯ ಮೂಲಕ ತಲುಪಿಸುತ್ತಿದ್ದರು.
ಇಂತಹ ಸರಳಾ ಮಹೇಶ್ವರಿ ಇಂದು (ಫೆಬ್ರವರಿ 12 ) ಕೊನೆಯುಸಿರೆಳೆದಿದ್ದಾರೆ. ಬಾರದ ಲೋಕಕ್ಕೆ ತೆರಳಿದ್ದಾರೆ. ಸರಳಾ ಮಹೇಶ್ವರಿ ಅವರ ನಿಧನಕ್ಕೆ ಶಮ್ಮಿ ನಾರಂಗ್ ಸೇರಿ ಹಲವು ದಿಗ್ಗಜರು ಮತ್ತು ರಾಜಕಾರಣಿಗಳು ಕಂಬಿನಿಯನ್ನು ಮಿಡಿದಿದ್ದು ಸರಳಾ ಅವರ ಸರಳ ಜೀವನ ಮತ್ತು ನಿರೂಪಣೆ ಇಂದಿನ ಪೀಳಿಗೆಯ ಪತ್ರಕರ್ತರಿಗೆ ಸ್ಪೂರ್ತಿಯಾಗಬೇಕಿದೆ.


Click it and Unblock the Notifications











