ನಾಗಲೋಕದ ಸೇಡಿನ ಕಥೆ ಹೇಳಿದ ಧಾರಾವಾಹಿಗಳು ಯಾವುವು? ನೀವು ಇಷ್ಟ ಪಟ್ಟಿದ್ಯಾವುದು?
ಕಿರುತೆರೆಯಲ್ಲಿ ವಿಭಿನ್ನವಾದ ಧಾರಾವಾಹಿಗಳು ಬಂದಿವೆ. ಕೌಟುಂಬಿಕ ಧಾರಾವಾಹಿಗಳು, ಹಾಸ್ಯ, ಐತಿಹಾಸಿಕ, ಪೌರಾಣಿಕ ಧಾರಾವಾಹಿಗಳು ವೀಕ್ಷಕರ ಮನಸ್ಸು ಮನಸೂರೆಗೊಳಿಸಿವೆ. ಕೆಲವು ಧಾರಾವಾಹಿಗಳಂತೂ ವರ್ಷಾನುಗಟ್ಟಲೆ ಕಿರುತೆರೆಯಲ್ಲಿ ಪ್ರಸಾರ ಆಗಿದ್ದು ಇದೆ.
ಇವುಗಳಲ್ಲಿ ನಾಗಲೋಕದ ಹಿನ್ನೆಲೆಯನ್ನು ಇಟ್ಟುಕೊಂಡು ಹೆಣೆದ ಕಥೆ ಯಶಸ್ಸು ಕಂಡಿವೆ. ಕಿರುತೆರೆ ವೀಕ್ಷಕರು ಒಂದೇ ಒಂದು ದಿನ ಮಿಸ್ ಮಾಡದೇ ಈ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದ ಉದಾಹರಣೆಗಳು ಇವೆ. ಇಂತಹ ಧಾರಾವಾಹಿಗಳ ಲಿಸ್ಟ್ ಇಲ್ಲಿದೆ.

ನಾಗಿಣಿ
ಎಂಟು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ' ವೀಕ್ಷಕರ ಗಮನ ಸೆಳೆದಿತ್ತು. ನಾಗ ಲೋಕದಿಂದ ಭೂಲೋಕಕ್ಕೆ ಬರುವ ನಾಗಿಣಿ ತನ್ನ ತಂದೆ ತಾಯಿಯ ಕೊಲೆಗಾರರ ವಿರುದ್ಧ ಸೇಡು ತೀರಿಸಿಕೊಳ್ಳುವ ಪಣತೊಡುತ್ತಾಳೆ. ನಾಗಮಣಿಯ ಹುಡುಕಾಟದಲ್ಲಿರುವ ನಾಗಿಣಿಯ ಕಥೆ ಇದಾಗಿತ್ತು. ನಟಿ ದೀಪಿಕಾ ದಾಸ್ ಅಮೃತಾ ಎಂಬ ಪಾತ್ರದ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು. ಇದರ ಜೊತೆಗೆ ನಾಯಕ ಅರ್ಜುನ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟಿಸಿದ್ದು ತಮ್ಮ ನಟನೆಯ ಮೂಲಕ ಅವರು ವೀಕ್ಷಕರನ್ನು ರಂಜಿಸಿದ್ದರು.
ನಾಗಿಣಿ 2
ನಟಿ ನಮೃತಾ ಗೌಡ ಅವರ ಮುಖ್ಯ ಭೂಮಿಕೆಯಲ್ಲಿ ಪ್ರಸಾರವಾದ 'ನಾಗಿಣಿ 2' ಧಾರಾವಾಹಿ ಬಹಳಷ್ಟು ಖ್ಯಾತಿ ಗಳಿಸಿತು. ಒಂದಷ್ಟು ಕೆಟ್ಟ ಮನುಷ್ಯರು ನಾಗಮಣಿಯ ಆಸೆಗಾಗಿ ಆದಿಶೇಷ ಎಂಬ ಹಾವನ್ನು ಕೊಲ್ಲುತ್ತಾರೆ. ಪತಿಯ ಕೊಲೆಗಾರರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾಗಲೋಕದಿಂದ ನಾಗಿಣಿ ಭೂಲೋಕಕ್ಕೆ ಬರುತ್ತಾಳೆ. ಈ ರೀತಿಯ ಕಥಾಂದರದ ಈ ಧಾರಾವಾಹಿ ಬಹುದೊಡ್ಡ ವೀಕ್ಷಕರನ್ನು ವೃಂದವನ್ನು ಹೊಂದಿತ್ತು. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಆಸೆ' ಧಾರಾವಾಹಿಯಲ್ಲಿ ನಾಯಕ ಸೂರ್ಯ ಪಾತ್ರದಲ್ಲಿ ನಟಿಸುತ್ತಿರುವ ನಿನಾದ್ ಹರಿತ್ಸ 'ನಾಗಿಣಿ' ಧಾರಾವಾಹಿಯಲ್ಲಿ ನಾಯಕ ತ್ರಿಶೂಲ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು.
ನಾಗಕನ್ನಿಕೆ
ನಟಿ ಅದಿತಿ ಪ್ರಭುದೇವ ಅವರ ಅಭಿನಯದಲ್ಲಿ ಮೂಡಿ ಬಂದ 'ನಾಗಕನ್ನಿಕೆ' ಧಾರಾವಾಹಿ ಇಚ್ಛಾಧಾರಿ ನಾಗ ಕನ್ನಿಕೆಯ ಕಥೆಯ ಸುತ್ತ ಸುತ್ತುತ್ತದೆ. 2015ರಲ್ಲಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾದ ಈ ಧಾರಾವಾಹಿ ವಿಭಿನ್ನ ಕಥಾ ಹಂದರಕ್ಕೆ ಗಮನ ಸೆಳೆದಿತ್ತು. ತನ್ನ ತಂದೆ ತಾಯಿಯನ್ನು ಕೊಂದ ಕೊಲೆಗಾರರ ವಿರುದ್ಧ ಸೇಡು ತೀರಿಸಿಕೊಳ್ಳಲು ಕೊಲೆಗಾರರ ಮಗನನ್ನೇ ಮದುವೆಯಾಗುವ ನಾಗಕನ್ನಿಕೆ ಯಾವೆಲ್ಲಾ ರೀತಿಯಲ್ಲಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾಳೆ ಎಂಬುದೇ ಈ ಕಥೆಯ ಮುಖ್ಯ ಹಂದರ.
ಸರ್ಪ ಸಂಬಂಧ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ಪಸಂಬಂಧ' ಧಾರಾವಾಹಿ ವಿಭಿನ್ನ ಕಥೆ ಮೂಲಕ ವೀಕ್ಷಕರಿಗೆ ಮನ ಸೆಳೆದಿತ್ತು. ರಾಗಿಣಿ ಎಂಬ ಹುಡುಗಿಗೆ ಪ್ರತಿ ರಾತ್ರಿ ಹಾವಿನ ಕನಸುಗಳು ಬೀಳುತ್ತಿರುತ್ತವೆ. ಅಂಥದ್ದೇ ಒಂದು ಕನಸಿನಲ್ಲಿ ಆಕೆಯ ಭರಣನನ್ನು ನೋಡುತ್ತಾಳೆ. ಹಾಗಾಗಿ ಭರಣನನ್ನು ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾಳೆ. ಭರಣನನ್ನು ಮದುವೆಯಾದ ನಂತರ ರಾಗಿಣಿಗೊಂದು ಭಯಾನಕ ಸತ್ಯ ಗೊತ್ತಾಗುತ್ತದೆ. ತನ್ನ ಗಂಡ ಭರಣ ಪ್ರತಿ ಹುಣ್ಣಿಮೆಯಲ್ಲಿ ಹಾವಿನ ರೂಪ ತಾಳುತ್ತಾನೆ ಎಂಬ ವಿಚಾರ ಗೊತ್ತಾಗಿ ರಾಗಿಣಿಯ ಜೀವನವೇ ಬುಡ ಮೇಲಾಗುತ್ತದೆ. ಎಲ್ಲದರ ಹಿಂದಿನ ರಹಸ್ಯವನ್ನು ತಿಳಿಯುವ ಪಣತೊಡುತ್ತಾಳೆ. ಈ ರೀತಿಯ ವಿಭಿನ್ನ ಕಥಾ ಹಂದರ ಹೊಂದಿದ್ದ ಈ ಧಾರಾವಾಹಿ ಬಹಳಷ್ಟು ಪಾಪ್ಯುಲಾರಿಟಿ ಗಳಿಸಿತ್ತು. ಸದ್ಯ ಜಿಯೋ ಸಿನೆಮಾ ಆಪ್ನಲ್ಲಿ ವೀಕ್ಷಿಸಲು ಸಾಧ್ಯವಿದೆ.

ನಂದಿನಿ
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಂದಿನಿ ಎಂಬ ಮೆಗಾ ಸೀರಿಯಲ್ ಕಥೆ ಒಂದು ಹಾವಿನ ಸೇಡಿನ ಸುತ್ತ ಸುತ್ತುತ್ತದೆ. ನಟಿ ನಿತ್ಯ ರಾಮ್ ಅವರ ಅಭಿನಯದಲ್ಲಿ ಮೂಡಿ ಬಂದ 'ನಂದಿನಿ' ಧಾರಾವಾಹಿ ಹಲವು ಭಾಷೆಗಳಲ್ಲಿ ಡಬ್ ಕೂಡ ಆಗಿತ್ತು. ಬಹುದೊಡ್ಡ ವೀಕ್ಷಕ ವೃಂದವನ್ನು ಹೊಂದಿತ್ತು.
ನಾಗಪಂಚಮಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ವಾಗುತ್ತಿದ್ದ 'ನಾಗಪಂಚಮಿ' ಧಾರಾವಾಹಿಯು ವಿಶೇಷವಾಗಿ ಜನ ಗಮನ ಸೆಳೆದಿತ್ತು. ದೇವಸ್ಥಾನದಲ್ಲಿ ಹುಟ್ಟಿರುವ ಪಂಚಮಿಯೆಂಬ ಹುಡುಗಿಗೆ ನಾಗಗಳೊಂದಿಗೆ ಸಂಭಾಷಿಸುವ ವಿಶಿಷ್ಟ ಶಕ್ತಿ ಇರುತ್ತದೆ. ಹೀಗಿರುವಾಗಲೇ ಆಕೆ ಒಬ್ಬ ಬಿಸ್ನೆಸ್ ಮ್ಯಾನ್ ಅನ್ನು ಭೇಟಿಯಾಗುತ್ತಾಳೆ. ಕ್ರಮೇಣ ತಿಳಿಯುತ್ತದೆ ಆತ ಹಾವಿನ ವಿಷದಿಂದ ಮಾಡಬಹುದಾದ ಔಷಧಗಳನ್ನು ತಯಾರಿಸಲು ಹೊರಟಿರುತ್ತಾನೆ ಎಂದು. ಯಾವ ರೀತಿ ಪಂಚಮಿ ತನ್ನ ಪತಿಯ ಈ ಹೊಸ ಯೋಜನೆಯನ್ನು ತಡೆಯುತ್ತಾಳೆ ಎಂಬುದೇ ಕಥೆ.
ನಾಗಮಂಡಲ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಅನಿರುದ್ಧ ಹಾಗೂ ಪುಣ್ಯ ಎಂಬ ಜೋಡಿಯ ಸುತ್ತ ಸುತ್ತುತ್ತದೆ. ನಾಗ ಹಾಗೂ ಗರುಡ ಎಂಬ ತದ್ವಿರುದ್ಧ ಕುಟುಂಬಕ್ಕೆ ಸೇರಿದವರಾದ ಅನಿರುದ್ಧ ಹಾಗೂ ಪುಣ್ಯ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಅನಿರುದ್ಧನ ತಂದೆ ನಾಗಮಣಿಯ ಹಿಂದೆ ಬಿದ್ದಿರುವ ವಿಚಾರ ಪುಣ್ಯಾಳಿಗೆ ಇನ್ನು ತಿಳಿದಿಲ್ಲ. ಇಂಥ ಸಂದರ್ಭದಲ್ಲಿ ಈ ಜೋಡಿಯ ಪ್ರೀತಿ ಏನಾಗುತ್ತದೆ ಎಂಬುದೇ ಧಾರಾವಾಹಿಯ ಮುಖ್ಯ ಕಥಾ ಹಂದರ.


Click it and Unblock the Notifications











