ಸುದೀಪ್ ಸಾರಥ್ಯದ ಬಿಗ್ ಬಾಸ್ ಮನೆಗೆ ತೆರಳಿದ ಈ ನಾಲ್ವರಿಗೆ ದರ್ಶನ್ ಅಂದರೆ ಅಚ್ಚು-ಮೆಚ್ಚು...!
ಬಿಗ್ ಬಾಸ್ ಕಲರವ ಮತ್ತೊಮ್ಮೆ ಆರಂಭವಾಗಿದೆ. ಮನೆಗೆ 17 ಜನ ಹೋಗಿಯಾಗಿದೆ. ಇನ್ನೂ ಪ್ರತಿ ವರ್ಷ ಬಿಗ್ ಬಾಸ್ ಮನೆಯಲ್ಲಿ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಈ ಸೀಸನ್ ಕೂಡಾ ಅದಕ್ಕೆ ಹೊರತಾಗಿಲ್ಲ. ಮೈ ತುಂಬಾ ಚಿನ್ನವನ್ನು ಹಾಕಿಕೊಂಡ ಗೋಲ್ಡ್ ಸುರೇಶ್, ಫೇಸ್ಬುಕ್ ಲಾಯರ್ ಜಗದೀಶ್, ಹಿಂದುತ್ವವಾದಿ ಚೈತ್ರಾ ಕುಂದಾಪುರ, ಹೀಗೆ ಭಿನ್ನ-ವಿಭಿನ್ನ ವ್ಯಕ್ತಿತ್ವದರವನ್ನು ಮನೆಯೊಳಗೆ ಬಿಟ್ಟುಕೊಳ್ಳಲಾಗಿದೆ. ಆದರೆ ಹೀಗೆ ಮನೆಗೆ ಹೋದ 17 ಜನರಲ್ಲಿ 04 ಜನಕ್ಕೆ ದರ್ಶನ್ ಅವರ ಜೊತೆ ಅತ್ಯಂತ ಆಪ್ತ ಸಂಬಂಧ ಇದೆ ಅನ್ನುವುದು ವಿಶೇಷ
ಹೌದು, ಯಮುನಾ ಶ್ರೀನಿಧಿ.. ಕಿರುತೆರೆಯ ಖ್ಯಾತ ಹೆಸರು. ಅಶ್ವಿನಿ ನಕ್ಷತ್ರ.. ಅಮೃತ ವರ್ಷಿಣಿ, ರಾಜಾ ರಾಣಿ, ಮದುಮಗಳು, ನಾಗಕನ್ನಿಕೆ, ಮನಸಾರೆ, ಕನ್ಯಾ ಕುಮಾರಿ, ಹೀಗೆ ಹತ್ತಾರು ಧಾರಾವಾಹಿಯ ಮೂಲಕ ಜನ ಮನ ಗೆದ್ದ ಯಮುನಾ ಶ್ರೀನಿಧಿ ಈ ಹಿಂದೆ ನಿಮ್ಮ ಮೇಲಿನ ನನ್ನ ಭಾವನೆಗಳು ಎಂದಿಗೂ ಬದಲಾಗುವುದಿಲ್ಲ ಎಂದು ದರ್ಶನ್ ಜೈಲು ಪಾಲಾದ ಬೆನ್ನಲ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ಜಗತ್ತಿನಲ್ಲಿ ಪ್ರೀತಿ, ವಿಶ್ವಾಸ ಮತ್ತು ನಿಷ್ಠೆ ಇಲ್ಲದೇ ಇದ್ದರೆ ನಾವು ಬದುಕಲು ಸಾಧ್ಯ ಆಗುತ್ತಿರಲಿಲ್ಲ. ನಾನು ಇಲ್ಲಿ ಪ್ರಕರಣದ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ, ಯಾರು ಕಾನೂನಿಗಿಂತ ಮೇಲಲ್ಲ, ಮಾಧ್ಯಮದ ವಿಚಾರಣೆಗಿಂತ ನಾನು ನ್ಯಾಯಾಲಯದ ವಿಚಾರಣೆಯನ್ನು ನಂಬುತ್ತೇನೆ ಎಂದು ಹೇಳಿದ್ದರು.

ದರ್ಶನ್ ಸರ್ ಬಗ್ಗೆ ನನ್ನ ಗೌರವಕ್ಕೆ ಕಾರಣ ಅವರು ನಮ್ಮನ್ನು ನಡೆಸಿಕೊಳ್ಳುವ ರೀತಿ ನಮ್ಮ ಮಕ್ಕಳು ತಪ್ಪು ಮಾಡಿದಾಗ ನಾವು ಅವರಿಗೆ ಮಾರ್ಗದರ್ಶನ ನೀಡುತ್ತೇವೆ, ನಾವು ಅವರನ್ನು ಶಿಕ್ಷಿಸುತ್ತೇವೆ ಆದರೆ ನಾವು ಅವರನ್ನು ತಿರಸ್ಕರಿಸುವುದಿಲ್ಲ, ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದರು. ದರ್ಶನ್ ಅವರ ಅಭಿಮಾನಿಗಳಲ್ಲಿ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ಎಂಬ ಮನವಿಯನ್ನು ಕೂಡ ಮಾಡಿಕೊಂಡಿದ್ದರು.
ಇನ್ನೂ ಯಮುನಾ ಶ್ರೀನಿಧಿ ಅವರಂತೆಯೇ ಅನುಷಾ ರೈ ಕೂಡ ಮೈಸೂರಿನ ಆರಡಿ ವ್ಯಕ್ತಿಯಿಂದ ಇಂತಹ ತಪ್ಪಾಗಿದೆ ಎಂದರೆ ನಂಬಲು ಅಸಾಧ್ಯ ಎಂದಿದ್ದರು. ಮೈಮೇಲೆ ನನ್ನ ಹೆಸರಿನ ಹಚ್ಚೆ ಹಾಕಿಸಿಕೊಳ್ಳಬೇಡಿ ನಿಮ್ಮ ಅಪ್ಪ ಅಮ್ಮನ ಹೆಸರು ಹಾಕಿಸಿಕೊಳ್ಳಿ ಎಂದು ತಾವೇ ತಮ್ಮ ಎದೆಯ ಮೇಲೆ ಸೆಲೆಬ್ರಿಟೀಸ್ ಎಂದು ಹಚ್ಚೆ ಹಾಕಿಸಿಕೊಂಡ ಅಭಿಮಾನಿಗಳ ದಾಸ ಎಂದಿದ್ದ ಅನುಷಾ,ಕಾನೂನು ಇದೆ ನೋಡಿಕೊಳ್ಳುತ್ತೆ, ತಪ್ಪು ಮಾಡಿಲ್ಲವಾದರೆ ಅವರ ದಾನಧರ್ಮಗಳೇ ಅವರನ್ನು ಕಾಪಾಡುತ್ತೆ, ಕಾನೂನಿನ ಮುಂದೆ ನಾವೆಲ್ಲರೂ ಚಿಕ್ಕವರು, ಸದ್ಯಕ್ಕಿನ್ನು ಆರೋಪಿಯಷ್ಟೇ ಅಪರಾಧಿಯಲ್ಲ ಎಂದು ಹೇಳಿದ್ದರು.

ಧರ್ಮ ಕೀರ್ತಿರಾಜ್, ದರ್ಶನ್ ಅವರ ಮತ್ತೊಬ್ಬ ಅತ್ಯಾಪ್ತ. ಇವತ್ತು ಕೂಡ ಕಣ್ ಕಣ್ಣ ಸಲಿಗೆಯ ಹೀರೋ ಎಂದೇ ಧರ್ಮ ಫೇಮಸ್. ದರ್ಶನ್ ಅವರಿಂದ ಹೇ ಕ್ಯಾಡ್ಬರಿ ಎಂದು ಕರೆಸಿಕೊಳ್ಳುವ ಧರ್ಮ ಕೀರ್ತಿರಾಜ್ ಕೂಡ ಬಿಗ್ ಬಾಸ್ ಮನೆಗೆ ಈ ಬಾರಿ ತೆರಳಿದ್ದಾರೆ. ಮನೆಯೊಳಗೆ ಹೋಗುವ ಮುನ್ನ ಸುದೀಪ್ ಎದುರು ದರ್ಶನ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
ಇನ್ನೂ ಲಾಯರ್ ಜಗದೀಶ್ ಬಗ್ಗೆ ನಿಮಗೆ ಗೊತ್ತು. ಮೊನ್ನೆಯವರೆಗೆ ದರ್ಶನ್ ಅವರ ಪ್ರಕರಣದ ಕುರಿತು ಮಾತನಾಡುತ್ತಾನೇ ಇದ್ದ ವಕೀಲ್ ಸಾಬ್ ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪವನ್ನು ಜಗದೀಶ್ ಮಾಡಿದರು. ಪರಪ್ಪನ ಅಗ್ರಹಾರದಲ್ಲಿ ದರ್ಶನ್ಗೆ ಸಿಕ್ಕ ರಾಜಾತಿಥ್ಯದ ಫೋಟೋ ತೆಗೆದಿದ್ದು ಯಾರು ಎನ್ನುವ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದ್ದರು. ದರ್ಶನ್ ಫೋಟೋ ತೆಗೆದವರು ಯಾರು, ಆ ವ್ಯಕ್ತಿಯ ಹಿನ್ನೆಲೆ ಏನು ಎನ್ನುವ ಕುರಿತು ಮಾಹಿತಿಯನ್ನು ನೀಡಬೇಕು. ನೀವು ಮಾಹಿತಿ ನೀಡದಿದ್ದರೆ ಆ ವ್ಯಕ್ತಿಯ ಕುರಿತು ನಾನೇ ಎಲ್ಲ ವಿವರವನ್ನೂ ಹಂಚಿಕೊಳ್ಳುತ್ತೇನೆ ಎಂದು ಎಚ್ಚರಿಕೆಯನ್ನು ಕೂಡ ಕೆ.ಎನ್.ಜಗದೀಶ್ ನೀಡಿದ್ದರು. ಆದರೆ ಈಗ ಇವರು ಕೂಡ ಸುದೀಪ್ ಸಾರಥ್ಯದ ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ.
ಹೀಗೆ ದರ್ಶನ್ ಅವರ ಹೆಸರನ್ನು ಹಗಲಿರುಳು ಜಪ ಮಾಡುವ ನಾಲ್ಕು ಜನ, ಸುದೀಪ್ ಸಾರಥ್ಯದಲ್ಲಿ ಮೂಡಿ ಬರುವ ಬಿಗ್ ಬಾಸ್ ಮನೆಗೆ ಈ ಬಾರಿ ತೆರಳಿದ್ದಾರೆ. ಬಹುಶಃ ಹಿಂದೆಂದೂ ಈ ತರಹದ ಕಾಕತಾಳೀಯ ಬಿಗ್ ಬಾಸ್ನಲ್ಲಿ ಆಗಿರಲಿಲ್ಲ. ಆದರೆ ಈ ಬಾರಿ ಇದಾಗಿದೆ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ದಿನನಿತ್ಯ ದರ್ಶನ್ ಅವರ ಕುರಿತು ಹಲವು ವಿಚಾರಗಳು ಮುಂದಿನ ನೂರು ದಿನಗಳವರೆಗೆ ಕೇಳಿ ಬಂದರೆ ಅದರಲ್ಲಿ ಅಚ್ಚರಿ ಇಲ್ಲ. ರೇಣುಕಾ ಸ್ವಾಮಿ ಪ್ರಕರಣದ ಕುರಿತು ಬಿಗ್ ಬಾಸ್ ಮನೆಯಲ್ಲಿ ಚರ್ಚೆ ನಡೆದು ಆ ಚರ್ಚೆಯನ್ನು ಸುದೀಪ್ ಅವರು ಗಮನಿಸಿ ವಾರಾಂತ್ಯದಲ್ಲಿ ಪ್ರಸ್ತಾಪವಾದ ರೇಣುಕಾಸ್ವಾಮಿ ಮತ್ತು ದರ್ಶನ್ ವಿಚಾರ ಕುರಿತು ಮಾತನಾಡಿದರು ಆಶ್ವರ್ಯ ಇಲ್ಲ.


Click it and Unblock the Notifications











