ಅಂಬೇಡ್ಕರ್ ಕುರಿತ ಧಾರಾವಾಹಿ 'ಮಹಾನಾಯಕ' ನಿಲ್ಲಿಸುವಂತೆ ಬೆದರಿಕೆ
ಮಾನವತಾವಾದಿ, ಸಂವಿಧಾನಶಿಲ್ಪಿ ಅಂಬೇಡ್ಕರ್ ಜೀವನ ಕುರಿತು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಹಾನಾಯಕ' ಧಾರಾವಾಹಿಯನ್ನು ಸ್ಥಗಿತಗೊಳಿಸುವಂತೆ ಬೆದರಿಕೆ ಸಂದೇಶಗಳು ಬರುತ್ತಿವೆಯಂತೆ.
Recommended Video
'ಧಾರಾವಾಹಿಯನ್ನು ನಿಲ್ಲಿಸುವಂತೆ ಬೆದರಿಕೆ ಸಂದೇಶಗಳು, ಕರೆಗಳು ಬರುತ್ತಿವೆ' ಎಂದು ಜೀ ವಾಹಿನಿಯ ಬ್ಯುಜಿನೆಸ್ ಹೆಡ್ ರಾಘವೇಂದ್ರ ಹುಣಸೂರು, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
'ಮಹಾನಾಯಕ ಧಾರಾವಾಹಿ ನಿಲ್ಲಿಸುವಂತೆ ಮಧ್ಯರಾತ್ರಿಯಿಂದ ಕರೆಗಳು, ಬೆದರಿಕೆ ಸಂದೇಶಗಳು ಬರುತ್ತಿವೆ. ಆದರೆ ಇವನ್ನೆಲ್ಲಾ ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಧಾರಾವಾಹಿಯು ಎಂದಿನಂತೆ ಮುಂದುವರೆಯಲಿದೆ' ಎಂದಿದ್ದಾರೆ ರಾಘವೇಂದ್ರ ಹುಣಸೂರು.
'ಮಹಾನಾಯಕ' ಧಾರಾವಾಹಿಯು ನಮ್ಮ ಹೆಮ್ಮೆ ಮತ್ತು ನನಗೆ ವೈಯಕ್ತಿಕವಾಗಿ ಇಷ್ಟವಾದ ಧಾರಾವಾಹಿ. 'ಯಾರಿಗೆ ಈ ಧಾರಾವಾಹಿ ಸಮಾಜಕ್ಕೆ ಒಳಿತಲ್ಲ ಎನಿಸುತ್ತದೆಯೋ ಅವರೇ ನಿಜವಾಗಿಯೂ ಸಮಾಜಕ್ಕೆ ಒಳಿತಲ್ಲ, 'ಜೈ ಭೀಮ್' ಎಂದಿದ್ದಾರೆ ರಾಘವೇಂದ್ರ ಹುಣಸೂರು.

'ಮನುವಾದಿಗಳ ಷಡ್ಯಂತ್ರ್ಯ'
ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ ಬಂದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳಾಗುತ್ತಿದ್ದು, ಇದು ಮನುವಾದಿಗಳ ಷಡ್ಯಂತ್ರ, ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ ಧಾರಾವಾಹಿ ಮುಂದುವರೆಸಿ ಎಂದು ಹೇಳಿದ್ದಾರೆ.

'ಶ್ರೇಷ್ಠ ವ್ಯಕ್ತಿಯ ಬದುಕಿನ ಸಂಭ್ರಮ ಮಹಾನಾಯಕ ಧಾರಾವಾಹಿ'
ಬೆದರಿಕೆ ಸಂದೇಶಗಳ ಬಗ್ಗೆ ಮಾತನಾಡಿರುವ ರಾಘವೇಂದ್ರ ಹುಣಸೂರು, 'ಮಹಾನಾಯಕ ಧಾರಾವಾಹಿಯನ್ನು ಕೇವಲ ಧಾರಾವಾಹಿ ಎಂದು ನಾವು ಪರಿಗಣಿಸಿಲ್ಲ. ಬದಲಿಗೆ ಶ್ರೇಷ್ಠ ವ್ಯಕ್ತಿಯೊಬ್ಬರ ಬದುಕಿನ ಸಂಭ್ರಮ ಎಂದು ಪರಿಗಣಿಸಿದ್ದೇವೆ' ಎಂದಿದ್ದಾರೆ.

'ಇಂದಿಗೂ ಇಂಥಹಾ ಜನರಿರುವುದು ನೋವಿನ ಸಂಗತಿ'
'ಸಮಾಜದಲ್ಲಿ ಇಂದಿಗೂ ಇಂಥಹಾ ಜನ ಇರುವುದು ನೋವಿನ ಸಂಗತಿ. ಮಹಾನಾಯಕ ಧಾರಾವಾಹಿ ಜಾತಿಯನ್ನು ಮೀರಿದ ವಸ್ತು. ಬೆದರಿಕೆ ಹಾಕಿದವರಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿರಲಿಲ್ಲ. ಆದರೆ ಒಂದು ಸಂದೇಶ ನೀಡಬೇಕು ಎಂಬ ಕಾರಣಕ್ಕೆ ಟ್ವೀಟ್ ಮಾಡಿದೆ' ಎಂದಿದ್ದಾರೆ ರಾಘವೇಂದ್ರ ಹುಣಸೂರು.

ಪೊಲೀಸರಿಗೆ ಮಾಹಿತಿ ನೀಡಿದ್ದೇವೆ: ರಾಘವೇಂದ್ರ ಹುಣಸೂರು
ಬೆದರಿಕೆ ಸಂದೇಶ, ಕರೆಗಳ ಬಗ್ಗೆ ಈಗಾಗಲೇ ಅಶೋಕನಗರ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಚಾನೆಲ್ ಕಚೇರಿಗೆ ಭದ್ರತೆಯ ಅವಶ್ಯಕತೆ ಏನಿಲ್ಲವೆಂದು ಸಹ ತಿಳಿಸಿದ್ದೇವೆ. ಪ್ರಚಾರಕ್ಕಾಗಿ ಟ್ವೀಟ್ ಮಾಡಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಮಹಾನಾಯಕ ಧಾರಾವಾಹಿಗೆ ಪ್ರಚಾರದ ಅವಶ್ಯಕತೆಯೇ ಇಲ್ಲ, ಹಳ್ಳಿಗಳಲ್ಲಿ ಧಾರಾವಾಹಿಯ ಕಟೌಟ್ ಕಟ್ಟಿದ್ದಾರೆ ಅಭಿಮಾನಿಗಳು ಎಂದಿದ್ದಾರೆ ರಾಘವೇಂದ್ರ ಹುಣಸೂರು.


Click it and Unblock the Notifications











