ಮಾಲ್ಗುಡಿಯನ್ನು ತೆರೆಗೆ ತಂದ ನರಸಿಂಹನ್ ಇನ್ನಿಲ್ಲ
ಬೆಂಗಳೂರು, ಜು.28: ಶಂಕರ್ ನಾಗ್ ನಿರ್ದೇಶಿಸಿ ಜನಪ್ರಿಯ ಧಾರಾವಾಹಿ 'ಮಾಲ್ಗುಡಿ ಡೇಸ್' ನಿರ್ಮಾಪಕ ಟಿ.ಎನ್.ನರಸಿಂಹನ್ (86) ಶನಿವಾರ ಅವರ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಸುಮಾರು ಎಂಟು ವರ್ಷಗಳ ಹಿಂದೆ ಬೆನ್ನು ಶಸ್ತ್ರಕ್ರಿಯೆಗೆ ಒಳಗಾಗಿದ್ದ ನರಸಿಂಹನ್ ಅವರ ಅವರ ದೇಹಾರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರಲಿಲ್ಲ. ಇತ್ತೀಚೆಗೆ ತೀವ್ರ ಅಸ್ವಸ್ಥಗೊಂಡಿದ್ದ ಅವರು ಶನಿವಾರ ಮುಂಜಾನೆ ನಿಧನ ಹೊಂದಿದ್ದಾರೆ. ಅವರಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ.
ಕನ್ನಡ ಚಲನ ಚಿತ್ರ,ಮಕ್ಕಳ ಚಿತ್ರ, ಧಾರಾವಾಹಿಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ನರಸಿಂಹನ್ ತೆಗೆದುಕೊಂಡು ಹೋಗಿದ್ದರು. 1986 ರಲ್ಲಿ ದೂರದರ್ಶನಕ್ಕೆ 39 ಕಂತುಗಳ 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ನಿರ್ಮಾಣ ಮಾಡಿದರು. ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿ ಬಂದ ಈ ದೃಶ್ಯ ಕಾವ್ಯ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಕರ್ನಾಟಕದ ಆಗುಂಬೆ ಸುತ್ತಾ ಮುತ್ತಾ ಚಿತ್ರೀಕರಣ ಕಂಡಿದ್ದ ಧಾರವಾಹಿ ದೇಶದ ಮನೆಮಾತಾಗಿದ್ದು ಈಗ ಇತಿಹಾಸ.

ಇದಲ್ಲದೆ ಲೋಕೇಶ್ ನಟನೆಯ ಆರ್.ಕೆ. ನಾರಾಯಣ್ ಅವರ ಕೃತಿ(Financial Expert)ಯನ್ನೇ ಆಧರಿಸಿದ್ದ 'ಬ್ಯಾಂಕರ್ ಮಾರ್ಗಯ್ಯ' , ಮಿನುಗು ತಾರೆ ಕಲ್ಪನಾ ಪ್ರಧಾನ ಪಾತ್ರ ವಹಿಸಿದ್ದ 'ಕೆಸರಿನ ಕಮಲ' ಹಾಗೂ ವಿಷ್ಣುವರ್ಧನ್ ಅಭಿನಯದ 'ಬಂಗಾರದ ಜಿಂಕೆ' ಯಂಥ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ್ದರು.
ಚಿಲ್ಡ್ರನ್ ಸೊಸೈಟಿ ಆಫ್ ಇಂಡಿಯಾದ ಸದಸ್ಯರೂ ಆಗಿದ್ದ ನರಸಿಂಹನ್, ಬೆಂಗಳೂರಿನಲ್ಲಿ ಮಕ್ಕಳ ಚಲನಚಿತ್ರೋತ್ಸವ ಪ್ರಾರಂಭವಾಗಲು ಕಾರಣಕರ್ತರೂ ಆಗಿದ್ದರು. ಕೇಂದ್ರ ಸೆನ್ಸಾರ್ ಬೋರ್ಡ್, ನ್ಯಾಷನ್ಲ್ ಫಿಲಂ ಡೆವಲಪ್ಮೆಂಟ್ ಕಾರ್ಪೊರೇಷನ್, ಫಿಲಂ ಹಾಗೂ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಜ್ಯೋತಿ ಎಡಿಟಿಂಗ್ ಲ್ಯಾಬ್ ಹುಟ್ಟುಹಾಕಿದ್ದರು. ಬೆಂಗಳೂರಿನಲ್ಲಿನರಸಿಂಹನ್ ಅವರ ಅಂತ್ಯಕ್ರಿಯೆಯನ್ನು ಶನಿವಾರ ನೆರವೇರಿಸಲಾಯಿತು.


Click it and Unblock the Notifications











