ಶೀಘ್ರದಲ್ಲೇ ಸೀತಾರಾಮ್ 'ಮಹಾಪರ್ವ'ಕ್ಕೆ ಮಹಾತೆರೆ
ಟಿ.ಎನ್. ಸೀತಾರಾಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ದೈನಂದಿನ ಧಾರಾವಾಹಿ 'ಮಹಾಪರ್ವ'ಕ್ಕೆ ವಿದಾಯ ಹೇಳುವ ಸಮಯ ಹತ್ತಿರವಾಗುತ್ತಿದೆ. ಈ ಧಾರಾವಾಹಿಯನ್ನು ಶೀಘ್ರದಲ್ಲೇ ಮುಗಿಸಲು ಮುಂದಾಗಿದ್ದಾರೆ ಸೀತಾರಾಮ್ ಹಾಗೂ ಈಟಿವಿ ಕನ್ನಡ ವಾಹಿನಿ.
ಈ ಮೆಗಾ ಧಾರಾವಾಹಿ ಮುಗಿಸುತ್ತಿರುವ ಬಗ್ಗೆ ಸೀತಾರಾಮ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕೆಲವೇ ಕೆಲವು ಸಾಲುಗಳಲ್ಲಿ ಬರೆದುಕೊಂಡಿದ್ದು, "ಪರ್ವ ಮುಗಿಸಲು ಚಾನೆಲ್ ನವರು ಕೊನೆಗೂ ಒಪ್ಪಿದ್ದಾರೆ ... ಬಹುಶಃ ನವೆಂಬರ 14 ರಂದು ಮುಗಿಯುತ್ತಿದೆ ... ನನ್ನನ್ನು ಸಹಿಸಿಕೊಂಡ ವೀಕ್ಷಕರಿಗೆ ಕೃತಜ್ಞತೆಗಳು...... !! ಎಂದಿದ್ದಾರೆ. [ಟಿಎನ್ ಸೀತಾರಾಮ್ ಮಹಾಪರ್ವ ಸಂವಾದದಲ್ಲಿ ಸಿದ್ದು]
ಈ ಸುದ್ದಿಯನ್ನು ಓದಿರುವ ಅವರ ಅಪಾರ ಅಭಿಮಾನಿ ಬಳಗಕ್ಕೆ ದಿಕ್ಕು ತೋಚದಂತಾಗಿದೆ! ಕೆಲವರು ಗಲಿಬಿಲಿಯಾಗಿದ್ದರೆ, ಇನ್ನೂ ಕೆಲವರು ಸಂತಸ ವ್ಯಕ್ತಪಡಿಸಿದ್ದಾರೆ. ಧಾರಾವಾಹಿ ಮುಗಿಸುತ್ತಿದ್ದೇನೆ ಎಂದು ಹೇಳಿದ್ದಕ್ಕೆ ಆರುನೂರಕ್ಕೂ ಅಧಿಕ ಲೈಕ್ಸ್ ಬಂದಿವೆ ಎಂದರೆ ನೀವೇ ಯೋಚಿಸಿ.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಹೆಚ್ಚಾಗಿತ್ತು
ಇತ್ತೀಚಿನ ದಿನಗಳಲ್ಲಿ ಧಾರಾವಾಹಿಯಲ್ಲಿ ರಾಜಕೀಯ ಹೆಚ್ಚಾಗಿತ್ತು, ಆರಂಭದಲ್ಲಿ ಇದ್ದಂತಹ ಬಿಗಿತನ ಬರಬರುತ್ತಾ ಇರಲಿಲ್ಲ, ಚಿತ್ರಕಥೆ ನಿರ್ದೇಶನ ನೀವೇ ಮಾಡಿದ್ದರೆ ಚೆನ್ನಾಗಿತ್ತು, ಸಹಾಯಕರಿಗೆ ಸಂಚಿಕೆ ನಿರ್ದೇಶನ ಮಾಡಲು ಕೊಡಬಾರದಿತ್ತು, ಕಂತುಗಳು ನೀರಸವಾಗಿ ಎಲ್ಲೆಲ್ಲೋ ಹೋಗುತ್ತಿದ್ದವು ಎಂಬ ಅಭಿಪ್ರಾಯಗಳು ಕಿರುತೆರೆ ವೀಕ್ಷಕರಿಂದ ವ್ಯಕ್ತವಾಗಿದೆ.

ಮುಕ್ತ ಧಾರಾವಾಹಿ ನೆರಳು ಮಹಾಪರ್ವದಲ್ಲೂ ಇತ್ತು
'ಮುಕ್ತ' ಧಾರಾವಾಹಿಯ ನೆರಳು ಮಹಾಪರ್ವದಲ್ಲೂ ಇತ್ತು, ಅದೇ ರೀತಿಯ ಡೈಲಾಗ್ಸ್, ಪಾತ್ರಗಳು, ತಂತ್ರಗಾರಿಕೆ, ಹೊಸತನವಿರಲಿಲ್ಲ, old wine in a new bottle ಎಂದು ಕೆಲವರು ಧಾರಾವಾಹಿ ಬಗ್ಗೆ ಮೂಗು ಮುರಿದಿದ್ದಾರೆ.

ಬೈಕೊಂಡು ಬೈಕೊಂಡೇ ಎಲ್ಲಾ ಎಪಿಸೋಡ್ ನೋಡಿದೆವು
ಸೀತಾರಾಮ್ ಅವರ ಮಹಾಪರ್ವ ಧಾರಾವಾಹಿಯನ್ನು ಬೈದುಕೊಂಡು ಬೈದುಕೊಂಡು ಎಲ್ಲಾ ಎಪಿಸೋಡ್ ನೋಡುತ್ತಿದ್ದೇವೆ ಎಂದು ಕೆಲವರು ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದು ನಿಮ್ಮ ಕೊನೆ ಸಿರಿಯಲ್ ಎಂದೆ ಬಿಂಬಿತವಾಗಿತ್ತು ಅಲ್ಲವೆ ಸಾರ್ ...ಮತ್ತೆ ಮುಂದೆ? ಎಂದು ಕೆಲವರು ನೇರವಾಗಿ ಪ್ರಶ್ನಿಸಿದ್ದಾರೆ.

ಕೋರ್ಟ್ ಸೀನ್ಸ್ ಕಮ್ಮಿ, ಪೊಲಿಟಿಕ್ಸ್ ಜಾಸ್ತಿ
ಧಾರಾವಾಹಿಯಲ್ಲಿ ಕೋರ್ಟ್ ಸೀನ್ಸ್ ಕಮ್ಮಿ, ಪೊಲಿಟಿಕ್ಸ್ ಜಾಸ್ತಿ ಆಯಿತು. ಪರಿಣಿತ ಐಪಿಎಸ್ ಕಥೆ ಏನಾಯಿತು? ಎಂದು ಜಗತ್ತಿನ ಮೂಲೆ ಮೂಲೆಗಳಿಂದ 'ಮಹಾಪರ್ವ'ದಷ್ಟು ಪ್ರಶ್ನೆಗಳೂ ತೂರಿ ಬರುತ್ತಿವೆ.

ಫಿಲ್ಮಿಬೀಟ್ ಓದುಗರೇ ನೀವೇನಂತೀರಾ?
ಎಲ್ಲರ ಅಭಿಪ್ರಾಯ, ಟೀಕೆ ಟಿಪ್ಪಣಿಗಳನ್ನು ಮುಕ್ತವಾಗಿ ಸ್ವಾಗತಿಸಿರುವ ಸೀತಾರಾಮ್ ಅವರು ಯಾರಿಗೂ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಇಷ್ಟು ಬೇಗ ಮಹಾಪರ್ವಕ್ಕೆ ಶುಭಂ ಹೇಳಿರುವುದು ಹಲವರ ಅಸಹನೆಗೆ ಕಾರಣವಾಗಿದೆ. ಫಿಲ್ಮಿಬೀಟ್ ಓದುಗರೇ ನೀವೇನಂತೀರಾ?

ಮಧ್ಯಮವರ್ಗದವರ ನೋವು ನಲಿವುಗಳೇ ಕಥಾವಸ್ತು
ಈ ಹಿಂದೆ ಸೀತಾರಾಮ್ ಅವರು ಮಾಯಾಮೃಗ, ಮನ್ವಂತರ, ಮುಕ್ತ ಹಾಗೂ ಮುಕ್ತ ಮುಕ್ತ ಧಾರಾವಾಹಿಗಳ ಮೂಲಕ ಮನೆಮಾತಾದವರು. ಮಧ್ಯಮವರ್ಗದವರ ನೋವು ನಲಿವುಗಳೇ ಅವರ ಧಾರಾವಾಹಿಗಳ ಕಥಾವಸ್ತು. ಮುಕ್ತ ಮುಕ್ತ ಧಾರಾವಾಹಿಯಂತೂ ನಾಲ್ಕು ವರ್ಷಗಳ ಕಾಲ ಪ್ರಸಾರವಾಗಿದ್ದು ದಾಖಲೆ ಎಂದೇ ಹೇಳಬೇಕು.

ಧಾರಾವಾಹಿಯ ಪಾತ್ರವರ್ಗದ ಬಗ್ಗೆ ಒಂದಿಷ್ಟು
ಅಂದಹಾಗೆ ಮಹಾಪರ್ವ ಧಾರಾವಾಹಿ ಪಾತ್ರವರ್ಗದಲ್ಲಿ ಟಿ.ಎನ್.ಸೀತಾರಾಮ್, ಸುಂದರ್ ರಾಜ್, ಶ್ರೀನಿವಾಸ ಪ್ರಭು, ಸುಧಾ ಬೆಳವಾಡಿ, ಸುರೇಂದ್ರ ನಾಥ್, ಜಯಲಕ್ಷ್ಮಿ ಪಾಟೀಲ್, ನಾಗರಾಜ ಮೂರ್ತಿ, ರಶ್ಮಿ ಹರಿಪ್ರಸಾದ್, ಸುಷ್ಮಾ ಭಾರದ್ವಾಜ್, ನರೇಶ್, ಶಶಿಕುಮಾರ್, ಗೌರವ್, ದಿವ್ಯಾ, ಜಯದೇವ್, ವರ್ಷಾ, ಸುನಿಲ್, ರವಿಕಶ್ಯಪ್, ಸುರಭಿ ವಸಿಷ್ಠ, ಶಶಾಂಕ್ ಮುಂತಾದವರಿದ್ದಾರೆ.


Click it and Unblock the Notifications











