24 ವರ್ಷಗಳ ಬಳಿಕ 'ಮಾಯಾಮೃಗ'ದಿಂದ 'ಮತ್ತೆ ಮಾಯಾಮೃಗ': ಹೇಗಿದೆ ಧಾರಾವಾಹಿ?
ಇತ್ತೀಚೆಗಿನ ದಿನಗಳಲ್ಲಿ ಸಿನಿಮಾವನ್ನು ಮೀರಿಸುವಂತ ಧಾರಾವಾಹಿಗಳು ಬರುತ್ತಿವೆ. ಶ್ರೀಮಂತಿಕೆಯಲ್ಲಿ, ಅದ್ದೂರಿತನದಲ್ಲಿ ಧಾರಾವಾಹಿಗಳು ತಯಾರಾಗುತ್ತಿವೆ. ಶ್ರೀಮಂತರ ಮನೆಯಲ್ಲಿ ಜೀವನ ಹೇಗಿರುತ್ತೆ..? ಬಡವರ ಮಕ್ಕಳು ಶ್ರೀಮಂತರ ಮನೆಗೆ ಸೊಸೆಯಾಗಿ ಹೋದಾಗ ಹೇಗಿರುತ್ತೆ..? ಇದೇ ಹಾದಿಯಲ್ಲಿ ಧಾರಾವಾಹಿಗಳು ಸಾಗುತ್ತಿವೆ. ಆದರೆ ಇದರ ನಡುವೆ ಗಟ್ಟಿ ಕಥೆ ಬಂದರೆ ಉಳಿಯುತ್ತಾ..? ಈ ಪ್ರಶ್ನೆ ಹೌದು ಎನ್ನದೆ ಬೇರೆ ದಾರಿಯಿಲ್ಲ. ಅದನ್ನು ಈಗಾಗಲೇ ಪ್ರೂವ್ ಮಾಡಿ ಆಗಿದೆ.
ಸದ್ಯ ಸಿರಿಕನ್ನಡ ಚಾನೆಲ್ನಲ್ಲಿ 'ಮತ್ತೆ ಮಾಯಾಮೃಗ' ಧಾರಾವಾಹಿ ಶುರುವಾಗಿದೆ. ಇದು ಟಿಎನ್ ಸೀತಾರಾಮ್, ಪಿ ಶೇಷಾದ್ರಿ, ನಾಗೇಂದ್ರ ಶಾ ಅವರ ಸಾರಥ್ಯ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ಧಾರಾವಾಹಿ.
24 ವರ್ಷದ ಹಿಂದೆ ಆರಂಭ ಆಗಿದ್ದ 'ಮಾಯಾಮೃಗ' ಧಾರಾವಾಹಿ ಈಗ ಮತ್ತೆ ಇಂದಿನ ಸನ್ನಿವೇಶವನ್ನು ಮುಂದಿಟ್ಟುಕೊಂಡು ತೆರೆಮೇಲೆ ಮೂಡುತ್ತಿದೆ. ಹಾಗಿದ್ರೆ 'ಮತ್ತೆ ಮಾಯಾಮೃಗ' ಧಾರಾವಾಹಿ ನೋಡಿ ಹೇಗಿದೆ? ಜನರ ಅಭಿಪ್ರಾಯವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಬದುಕನ್ನು ಬಿಡಿಸಿಡುವ ಟಿಎನ್ಎಸ್ ಧಾರಾವಾಹಿಗಳು
ಟಿಎನ್ ಸೀತಾರಾಮ್ ನಿರ್ದೇಶನದ ಧಾರಾವಾಹಿಗಳು ಬರುತ್ತಿವೆ ಎಂದರೆ ಅಲ್ಲೊಂದು ನಿರೀಕ್ಷೆ ಇದ್ದೆ ಇರುತ್ತದೆ. 80-90 ದಶಕದ ಜನರನ್ನು ಕಾಡುವಂತ ಧಾರಾವಾಹಿಯನ್ನು ಕೊಟ್ಟವರು ಟಿಎನ್ ಸೀತಾರಾಮ್. ಹಾಗಂತ ಈಗಿನ ಜನರೇಷನ್ಗೆ ಹೇಗೆ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಎಲ್ಲಾ ವರ್ಗದವರಿಗೂ, ಎಲ್ಲಾ ಜನರೇಷನ್ ಅನ್ನೂ ಹಿಡಿದು ಕೂರಿಸುವ ತಾಕತ್ತು, ಸೀತಾರಾಮ್ ಅವರ ಧಾರಾವಾಹಿಗಳಿಗೆ ಇದೆ. ಅದು ಈಗ 'ಮತ್ತೆ ಮಾಯಾಮೃಗ'ದಿಂದ ಪ್ರೂವ್ ಆಗಿದೆ. ಜೀವನದ ಏರಿಳಿತ, ಸಂಬಂಧ, ಕಲಹಗಳನ್ನೆಲ್ಲಾ ನಮ್ಮ ಮಧ್ಯೆಯೇ ನಡೆಯುತ್ತಿದೆಯೇನೋ ಎಂಬಂತೆ ಬಿಚ್ಚಿಡುತ್ತಾರೆ.

'ಮಾಯಾಮೃಗ'ದಿಂದ 'ಮತ್ತೆ ಮಾಯಾಮೃಗ' ಕಡೆಗೆ
'ಮಾಯಾಮೃಗ' ತೀರಾ ಹಳೆಯ ಧಾರಾವಾಹಿ. 24 ವರ್ಷಗಳ ಹಿಂದೆ ಶುರುವಾದದ್ದು ಅಂದ್ರೆ ಲೆಕ್ಕ ಹಾಕಿ. ಇನ್ನು ಕಥೆ ನೆನೆಪಿಗೆ ಇರುತ್ತದಾ. ಜೊತೆಗೆ ಅದರದ್ದೇ ಮುಂದುವರೆದ ಭಾಗ ಮಾಡಿದರೆ, ಹೊಸದಾಗಿ ನೋಡುವವರಿಗೆ ಏನು ಅರ್ಥವಾದೀತು ಎಂಬ ಪ್ರಶ್ನೆ ಮತ್ತೆ ಮಾಯಾಮೃಗ ಬರುತ್ತಿದೆ ಎಂದಾಗಲೇ ಮೂಡಿತ್ತು. ಆದ್ರೆ ಟಿಎನ್ ಸೀತಾರಾಮ್ ಇಲ್ಲಿ ಆ ಒಂದು ಪ್ರಶ್ನೆಗೆ ಅವಕಾಶವನ್ನೇ ನೀಡಿಲ್ಲ. ಹೊಸದಾಗಿ ನೋಡುವವರಿಗೆ ಈ ಹಿಂದೆ ಇವರ ಜೀವನದಲ್ಲಿ ಇದಾಗಿತ್ತಾ ಎಂಬುದನ್ನು ಸಾರಿ ಸಾರಿ ಹೇಳಿದ್ದಾರೆ. ಮಾಳವಿಕ ಈಗ ಏನಾಗಿದ್ದಾರೆ. ವಿದೇಶಕ್ಕೆ ಹೋಗಿ ಎಷ್ಟು ವರ್ಷ ಆಯ್ತು..? ಪರಿಚಯದವರನ್ನು ಭೇಟಿಯಾಗಿ ಎಷ್ಟು ವರ್ಷ ಆಯ್ತು..? ಮಾವ ಮುನಿಸಿಕೊಂಡಿರುವುದು ಯಾಕೆ..? ಯಾವ ತಪ್ಪಿಗೆ ಮಾವನನ್ನು ಜೈಲಿಗೆ ಕಳುಹಿಸಿದ್ರು..? ಬೃಂದಾ ಯಾವ ಸಮಸ್ಯೆಯಲ್ಲಿದ್ದಾರೆ..? ಮಕ್ಕಳ ಕನಸುಗಳೇನು..? ಶಾಸ್ತ್ರಿಗಳ ಮನೆ ಮಕ್ಕಳಿಲ್ಲದೆ ಏನಾಗಿದೆ..? ಹೀಗೆ ಅನೇಕ ವಿಚಾರಗಳನ್ನು 'ಮತ್ತೆ ಮಾಯಾಮೃಗ'ದಲ್ಲಿ ಸೇರಿಸಿದ್ದಾರೆ. ಈ ಮೂಲಕ ಹಳೆ ಸಂಚಿಕೆಯನ್ನು ನೆನಪಿಸಿದ್ದಾರೆ.

ಭಾವಲೋಕದಲ್ಲಿ ತೇಲಿಸಿದ ಕಥೆ
ಟಿಎನ್ ಸೀತಾರಾಮ್ ಅವರ ಧಾರಾವಾಹಿಗಳು ಗಂಭೀರ ಕಥೆಯೊಂದಿಗೆ ಭಾವನೆಗಳ ಜೊತೆಗೆ ಸಾಗುತ್ತದೆ. ಟೀಚರ್ ಆಗಿರುವ ಬೃಂದಾ ಮಗಳ ಭವಿಷ್ಯಕ್ಕಾಗಿ ಎಷ್ಟು ಕಷ್ಟಪಡುತ್ತಾಳೆ ಎಂಬುದನ್ನು ನೋಡಿದಾಗ ಮಧ್ಯಮ ವರ್ಗದ ಟೀಚರ್ಗೆ ತಮ್ಮ ಜೀವನ ನೆನೆಪಾಗುತ್ತದೆ. ಇನ್ನು ಶಾಸ್ತ್ರಿಗಳ ಸಂಸಾರದ ಕಥೆ ಬಂದಾಗ ಯಾರ ಗಮನವೂ ಅತ್ತಿಂದಿತ್ತ ಹೋಗುವುದಿಲ್ಲ. ಓ ಮಕ್ಕಳೆಲ್ಲಾ ಬಿಟ್ಟು ಹೋಗಿದ್ದರಲ್ಲ. ಈಗ ಅವರಿಗೆ ವಯಸ್ಸಾಗಿದೆ. ಮಕ್ಕಳನ್ನು ಸ್ವೀಕರಿಸುತ್ತಾರಾ ಎಂಬೆಲ್ಲಾ ಪ್ರಶ್ನೆಗಳನ್ನು ನೋಡುಗರು ತಮ್ಮಲ್ಲಿಯೇ ಕೇಳಿಕೊಳ್ಳುವಂತ ಸನ್ನಿವೇಶ ನಿರ್ಮಾಣ ಮಾಡಿದ್ದಾರೆ.

ಮಕ್ಕಳ ಕನಸಿನ ನಡುವೆ ಗುದ್ದಾಡುವ ಪೋಷಕರು
ಸದ್ಯ 'ಮತ್ತೆ ಮಾಯಾಮೃಗ' ಧಾರಾವಾಹಿಯನ್ನು ನೋಡುವುದಕ್ಕೂ ಮುನ್ನ ಹಲವು ಮಂದಿ ಹಳೆ ಧಾರಾವಾಹಿಯನ್ನು ನೋಡಿದ್ದಾರೆ. ಅದೇ ಮುಖಗಳು ಈಗ ದೊಡ್ಡವರಾಗಿರುವುದನ್ನು ಕಂಡು ಖುಷಿಯಾಗಿದ್ದಾರೆ. ಆದ್ರೆ ಮಕ್ಕಳ ಭವಿಷ್ಯ ರೂಪಿಸುವಾಗ ಪೋಷಕರು ಮತ್ತು ಮಕ್ಕಳ ನಡುವೆ ಮನಸ್ತಾಪ, ಜಗಳಕ್ಕೆ ಕಾರಣವಾಗುತ್ತಿದೆ. ಇಂದಿನ ಜೀವನ ಶೈಲಿಯಲ್ಲಿ ಅದೆಷ್ಟೋ ಮನೆಯಲ್ಲಿ ಇದು ರಿಯಲ್ ಸಮಸ್ಯೆಯಾಗಿ ಕಾಡುತ್ತಿದೆ. ಮಕ್ಕಳು ಬದುಕು ಕಟ್ಟಿಕೊಳ್ಳಬೇಕು ಎಂದರೆ, ಪೋಷಕರು ಮದುವೆ ಆಗು ಅಂತಾರೆ. ಮಕ್ಕಳು ದೊಡ್ಡ ಯೂನಿವರ್ಸಿಟಿಯಲ್ಲಿ ಓದಬೇಕು ಎಂದರೆ, ನಮಗೆಲ್ಲಿದೆ ಆ ಸಾಮರ್ಥ್ಯ ಎಂದು ಕನಸನ್ನು ಕಮರಿ ಹೋಗುವ ಪರಿಸ್ಥಿತಿ ಇದೆ. ನಮ್ಮ ನಿಮ್ಮ ನಡುವೆ ನಡೆದ ಎಲ್ಲಾ ಸಮಸ್ಯೆಗಳು ಈಗ ತೆರೆ ಮೇಲೆ ಬರುತ್ತಿದೆ. ಜನರೇಷನ್ ಗ್ಯಾಪ್ ಅಲ್ಲ. ಈಗಲೂ ಸೀತರಾಮ್ ಧಾರಾವಾಹಿಯದ್ದೇ ಎಲ್ಲರ ಬಾಯಲ್ಲೂ ಚರ್ಚೆ.


Click it and Unblock the Notifications











