ಧಾರಾವಾಹಿ ಅಲ್ಲ, ಹೊಸ ಪ್ರಯೋಗಕ್ಕೆ ಕೈಹಾಕಿದ ಟಿ.ಎನ್.ಸೀತಾರಾಮ್
ಜನಪ್ರಿಯ ಧಾರಾವಾಹಿ ನಿರ್ದೇಶಕ, ನಟ ಟಿ.ಎನ್.ಸೀತಾರಾಮ್ ಧಾರಾವಾಹಿ ಬದಲಿಗೆ ಇದೇ ಮೊದಲ ಬಾರಿಗೆ ವೆಬ್ ಸರಣಿ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.
ಈಗ ಟಿವಿ ಧಾರಾವಾಹಿಗಳಿಗಿಂತಲೂ ವೆಬ್ ಸರಣಿಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿವೆ ಹಾಗಾಗಿ ಟಿ.ಎನ್.ಸೀತಾರಾಮ್ ಸಹ ಇದೇ ಮೊದಲ ಬಾರಿಗೆ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ವೆಬ್ ಸರಣಿ ನಿರ್ಮಾಣಕ್ಕೆ ಮರ್ಡರ್ ಮಿಸ್ಟರಿ ಕತೆಯೊಂದನ್ನು ಟಿಎನ್ಎಸ್ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಲಾಕ್ಡೌನ್ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳ ಶಕ್ತಿಯನ್ನು ಅರಿತುಕೊಂಡಿರುವ, ಆ ಬಗ್ಗೆ ಸಂಶೋಧನೆ ನಡೆಸಿರುವ ಟಿ.ಎನ್.ಸೀತಾರಾಮ್ ವೆಬ್ ಸರಣಿಯನ್ನು ಟಿವಿಯ ಬದಲಿಗೆ ಸಾಮಾಜಿಕ ಜಾಲತಾಣಕ್ಕಾಗಿ ನಿರ್ಮಾಣ ಮಾಡಲಿರುವುದು ವಿಶೇಷ.

ಯೂಟ್ಯೂಬ್ನಲ್ಲಿ ಪ್ರಸಾರವಾಗಲಿದೆ ವೆಬ್ ಸರಣಿ
'ಮಾಯಾ ಮರ್ಡರ್ ಕೇಸ್' ಹೆಸರಿನ ವೆಬ್ ಸರಣಿಯನ್ನು ಟಿ.ಎನ್.ಸೀತಾರಾಮ್ ನಿರ್ದೇಶನ ಮಾಡಲಿದ್ದಾರೆ. ಈ ವೆಬ್ ಸರಣಿಗೆ ಕತೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನ ಟಿ.ಎನ್.ಎಸ್ ಅವರದ್ದೇ ಆಗಿರಲಿದೆ. ಈ ವೆಬ್ ಸರಣಿಯು ಯುಟ್ಯೂಬ್ನಲ್ಲಿ ಮಾತ್ರವೇ ಪ್ರಸಾರವಾಗುವುದು ವಿಶೇಷ. ಲಾಕ್ಡೌನ್ ಅವಧಿಯಲ್ಲಿ ತಮ್ಮ ಮಾಯಾಮೃಗ ಧಾರಾವಾಹಿಯನ್ನು ಯೂಟ್ಯೂಬ್ನಲ್ಲಿ ಪ್ರಸಾರ ಮಾಡಿದ್ದರು ಟಿ.ಎನ್.ಸೀತಾರಾಮ್ ಅದಕ್ಕೆ ದೊರೆತ ಬೆಂಬಲದಿಂದ ಪ್ರೇರಿತರಾಗಿ ಈಗ ಯೂಟ್ಯೂಬ್ಗಾಗಿಯೇ ಎಕ್ಸ್ಕ್ಲೂಸಿವ್ ವೆಬ್ ಸರಣಿ ನಿರ್ದೇಶನ ಮಾಡುತ್ತಿದ್ದಾರೆ.

'ಮಾಯಾ ಮರ್ಡರ್ ಕೇಸ್'
ಟಿ.ಎನ್.ಸೀತಾರಾಮ್ ಅವರ ಭೂಮಿಕಾ ಟಾಕೀಸ್ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ 'ಮಾಯಾ ಮರ್ಡರ್ ಕೇಸ್' ಪ್ರಸಾರವಾಗಲಿದೆ. ಬೆಂಗಳೂರಿನ ರುದ್ರಾಕ್ಷಿಪುರದ ಗಲ್ಲಿಯೊಂದರ ಮನೆಯೊಂದರಲ್ಲಿ ಒಂದು ಮಧ್ಯರಾತ್ರಿ ಹಾರುವ ಗುಂಡು ಒಬ್ಬರನ್ನು ಕೊಲ್ಲುತ್ತದೆ. ಈ ಕೊಲೆಯ ಕತೆಯೇ ಈ 'ಮಾಯಾ ಮರ್ಡರ್ ಕೇಸ್'. ಇದೊಂದು ಕೋರ್ಟ್ ರೂಮ್ ಡ್ರಾಮಾ ಆಗಿರಲಿದೆ ಎಂದು ಟಿ.ಎನ್.ಸೀತಾರಾಮ್ ಹೇಳಿದ್ದಾರೆ. ಕೋರ್ಟ್ ರೂಮ್ ದೃಶ್ಯಗಳು ಟಿ.ಎನ್.ಸೀತಾರಾಮ್ ಅವರ ಟ್ರೇಡ್ ಮಾರ್ಕ್ ಎಂದೇ ಪರಿಗಣಿತವಾಗಿವೆ.

ಉಚಿತವಾಗಿರುತ್ತದೆಯೋ, ಶುಲ್ಕ ಪಾವತಿಸಬೇಕಾಗುತ್ತದೆಯೋ?
ಭೂಮಿಕಾ ಕ್ರಿಯೇಶನ್ಸ್ ಕಡೆಯಿಂದ ನಿರ್ಮಾಣ ಮಾಡಲಾಗುತ್ತಿರುವ ಈ ವೆಬ್ ಸರಣಿ ಭೂಮಿಕಾ ಕ್ರಿಯೇಶನ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಮಾತ್ರವೇ ಲಭ್ಯವಿರಲಿದೆ. ಯೂಟ್ಯೂಬ್ ಚಾನೆಲ್ನಲ್ಲಿ ವೆಬ್ ಸರಣಿಯನ್ನು ಉಚಿತವಾಗಿ ನೀಡುತ್ತಾರೆಯೇ ಅಥವಾ ಅದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆಯೋ ಕಾದು ನೋಡಬೇಕಿದೆ. ಈಗಾಗಲೇ ಭಾರತದಲ್ಲಿ ಹಲವರು ಯೂಟ್ಯೂಬ್ಗಾಗಿಯೇ ಧಾರಾವಾಹಿ, ವೆಬ್ ಸರಣಿಗಳನ್ನು ನಿರ್ಮಿಸಿ ಯಶಸ್ವಿಯೂ ಆಗಿದ್ದಾರೆ. ಕನ್ನಡದ 'ಲೂಸ್ ಕನೆಕ್ಷನ್' ಹಾಗೂ ಇನ್ನೂ ಕೆಲವು ಧಾರಾವಾಹಿಗಳು ಯೂಟ್ಯೂಬ್ಗಾಗಿಯೇ ನಿರ್ಮಿಸಿ, ಪ್ರಸಾರ ಮಾಡಲಾಗಿತ್ತು.

'ಮಗಳು ಜಾನಕಿ' ನಿಲ್ಲಿಸಿದ ಟಿ.ಎನ್.ಸೀತಾರಾಮ್
ಲಾಕ್ಡೌನ್ಗೆ ಮುನ್ನ ಟಿ.ಎನ್.ಸೀತಾರಾಮ್ 'ಮಗಳು ಜಾನಕಿ' ಧಾರಾವಾಹಿ ನಿರ್ದೇಶಿಸುತ್ತಿದ್ದರು. ಆದರೆ ಆ ಧಾರಾವಾಹಿಯನ್ನು ಹಠಾತ್ತನೆ ನಿಲ್ಲಿಸಿಬಿಟ್ಟರು. ಧಾರಾವಾಹಿ ಪಾತ್ರಗಳು ರಚನೆಕಾರನಾದ ನನ್ನ ಕೈ ಮೀರಿ ಸ್ವತಂತ್ರ್ಯಗೊಳ್ಳುತ್ತಾ ಸಾಗಿದವು. ನಾನು ಹೇಳಬೇಕೆಂದುದನ್ನು ಹೇಳಲಾಗದೆ, ಪಾತ್ರಗಳು ಹೇಳಬೇಕೆಂದುಕೊಂಡಿದ್ದನ್ನು ನಾನು ಬರೆಯುವಂತೆ ಆಗಿಬಿಟ್ಟಿತು. ಆ ಧಾರಾವಾಹಿಯ ಪಾತ್ರ, ಕತೆ ನನ್ನ ಹಿಡಿತ ತಪ್ಪಿದ್ದರಿಂದ ಧಾರಾವಾಹಿ ನಿಲ್ಲಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು ಟಿ.ಎನ್.ಸೀತಾರಾಮ್.


Click it and Unblock the Notifications











