ಜೀ ಕನ್ನಡಕ್ಕೆ ಹೊರಳಿದ ಗೌರಿಬಿದನೂರು ಸೀತಾರಾಂ

ಇಷ್ಟು ದಿನ ಜೀ ಕನ್ನಡ ವಾಹಿನಿಯ ಕ್ರಿಯಾಶೀಲ ತಂಡದಲ್ಲಿದ್ದ ಪ್ರತಿಭಾವಂತರ ತಂಡ ಈಟಿವಿ ಕನ್ನಡ ಬಳಗ ಸೇರಿದ್ದಾಯಿತು. ಈಗ ಜೀ ಕನ್ನಡ ವಾಹಿನಿಯಲ್ಲೂ ಇದೇ ರೀತಿಯ ಬದಲಾವಣೆಯ ಪರ್ವ ಶುರುವಾಗಿದೆ.
ಈಟಿವಿ ಕನ್ನಡ ವಾಹಿನಿಯಲ್ಲಿ ಹೊಸ ಮೈನವಿರೇಳಿಸುವ ರಿಯಾಲಿಟಿ ಶೋಗಳಿಗೆ ಹಾಗೂ ಮನೆಮಂದಿಯನ್ನು ಸೆಳೆಯುವಂತಹ ದೈನಿಕ ಧಾರಾವಾಹಿಗಳಿಗೆ ವೇದಿಕೆ ಸಿದ್ಧವಾಗುತ್ತಿದೆ. ಅತ್ತ ಜೀ ಕನ್ನಡ ವಾಹಿನಿಯಲ್ಲೂ ಹೊಸ ಹೊಸ ಕಾರ್ಯಕ್ರಮಗಳಿಗೆ ಶ್ರೀಕಾರ ಹಾಕಲಾಗಿದೆ.
ಇಷ್ಟು ದಿನಗಳ ಕಾಲ ಮುಕ್ತ, ಮುಕ್ತಮುಕ್ತ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಟಿ.ಎನ್. ಸೀತಾರಾಂ (ಗೌರಿಬಿದನೂರು ಸೀತಾರಾಂ) ಜೀ ಕನ್ನಡ ವಾಹಿನಿಗೆ ಹೊರಳಿದ್ದಾರೆ. ಇನ್ನು ಮುಂದೆ ಅವರ ಹೊಸ ಧಾರಾವಾಹಿಗಳಿಗೆ ಜೀ ಕನ್ನಡ ವಾಹಿನಿ ವೇದಿಕೆಯಾಗಲಿದೆ.
ಇದಿಷ್ಟೇ ಅಲ್ಲದೆ ತಮ್ಮದೇ ಶೈಲಿಯ ಧಾರಾವಾಹಿಗಳಿಗೆ ಹೆಸರಾಗಿದ್ದ ಎಸ್.ಎನ್. ಸೇತುರಾಂ ಅವರೂ ಜೀ ಕನ್ನಡದ ಸೀರಿಯಲ್ ಗಳನ್ನು ನಿರ್ದೇಶಿಸುವ ಸಾಧ್ಯತೆಗಳಿವೆ ಎನ್ನುತ್ತವೆ ಜೀ ಕನ್ನಡ ವಾಹಿನಿ ಮೂಲಗಳು. ಮಂಥನ' ದ ಮೂಲಕ ಕಿರುತೆರೆಯ ಧಾರಾವಾಹಿ ಲೋಕದಲ್ಲಿ ಒಂದು ಹೊಸ ಟ್ರೆಂಡ್ ಹುಟ್ಟುಹಾಕಿದವರು ಸೇತುರಾಂ.
ಅವರ ಹರಿತವಾದ ಸಂಭಾಷಣೆಗೆ ಬೆರಗಾಗದವರಿರಲಿಲ್ಲ; ಪಾತ್ರಚಿತ್ರಣ, ನಿರೂಪಣೆಯಲ್ಲಿಯೂ ಆಗಲೇ ಪ್ರಸಾರವಾಗುತ್ತಿದ್ದ ಧಾರಾವಾಹಿಗಳಿಗಿಂತ ಭಿನ್ನವಾಗಿದ್ದು, ತನ್ನದೇ ಆದ ಒಂದು ದೊಡ್ಡ ವೀಕ್ಷಕ ವರ್ಗವನ್ನೇ ಸೃಷ್ಟಿಸಿಕೊಂಡಿದ್ದ ಧಾರಾವಾಹಿ ಮಂಥನ. ಈಗವರ ಚಿಂತನೆ ಜೀ ಕನ್ನಡದ ಕಡೆ ಹೊರಳಿದೆ.
ಗೌರಿಬಿದನೂರು ಸೀತಾರಾಂ ಅವರು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಈಟಿವಿ ಕನ್ನಡ ವಾಹಿನಿಯಲ್ಲಿ ಗುರುತಿಸಿಕೊಂಡವರು. ಅವರ ಬಹುತೇಕ ಸೀರಿಯಲ್ ಗಳು ಈಟಿವಿಯಲ್ಲಿ ಪ್ರಸಾರವಾಗಿವೆ. ಮಾಯಾಮೃಗ (ಚಂದನ ವಾಹಿನಿಯಲ್ಲಿ ಪ್ರಸಾರವಾದ ಧಾರಾವಾಹಿ), ಮನ್ವಂತರ, ಮಿಂಚು, ಮಳೆಬಿಲ್ಲು ಧಾರಾವಾಹಿಗಳನ್ನು ಪ್ರಮುಖವಾಗಿ ಹೆಸರಿಸಬಹುದು. (ಒನ್ಇಂಡಿಯಾ ಕನ್ನಡ)


Click it and Unblock the Notifications











