TRP Scam: ಟಿ ಆರ್ ಪಿ ಕಳ್ಳರ ಅಂಗಡಿ ಬಂದ್! ಕಿರುತೆರೆಯಲ್ಲಿ ಬದಲಾವಣೆಯ ಪರ್ವ!
ಕಳೆದ ವಾರ ಕಿರುತೆರೆ ನಟಿ ಹಂಸಾ ಪ್ರತಾಪ್ ನಾಗರಭಾವಿಯಲ್ಲಿರುವ ನಿರ್ಮಾಪಕರ ಟೀ ಅಂಗಡಿಯ ಎದುರಿಗೆ ಬಂದು, ಅಲ್ಲಿಗೆ ಒಂದಷ್ಟು ಸುದ್ದಿವಾಹಿನಿಯವರನ್ನೂ ಕರೆಸಿಕೊಂಡು 'ನಮ್ಮ ಪೇಮೆಂಟ್ ಕೊಡಿ...' ಎಂದು ಗರಂ ಆದ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಆದರೆ ಈ ಘಟನೆಯ ನಂತರ ಕಿರುತೆರೆಯ ಟಿ ಆರ್ ಪಿ ಕಳ್ಳರು ಮತ್ತು ವಾಹಿನಿಯ ಶಿಲ್ಪಿಗಳು ಗಾಬರಿಪಡುವಂತಹ ಸಂಗತಿಗಳು ಕೂಡಾ ನಡೆದಿದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.
ನಟಿ ಹಂಸಾ ತಮಗೆ ನಿರ್ಮಾಪಕರು ಹಣ ನೀಡಿಲ್ಲ ಎಂದು ಸಿಟ್ಟಿನಿಂದ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ-"ಮೋಸದಿಂದ ಟಿ ಆರ್ ಪಿ ತರುತ್ತಾರೆ ಎಂಬ ಕಾರಣಕ್ಕೆ ಈ ನಿರ್ಮಾಪಕರನ್ನು ಚಾನಲ್ನವರು ಬದಲಾಯಿಸಿದ್ದಾರೆ. ಆದರೆ, ಇವರ ಇನ್ನೊಂದು ಧಾರಾವಾಹಿ ಎಂದಿನಂತೆ ಅದೇ ವಾಹಿನಿಯಲ್ಲಿ ಟೆಲಿಕಾಸ್ಟ್ ಆಗುತ್ತಿದೆ. ನಮಗೆ ಮಾತ್ರ ಕೆಲಸ ಮಾಡಿದ ಹಣ ಕೊಟ್ಟಿಲ್ಲ. ಒಂದು ಧಾರಾವಾಹಿಯಲ್ಲಿ ಟಿ ಆರ್ ಪಿ ಕಳ್ಳಾಟ ಮಾಡಿದ್ದಾರೆ ಅಂದ ಮೇಲೆ ಅದೇ ನಿರ್ಮಾಪಕರಿಗೆ ಇನ್ನೊಂದು ಧಾರಾವಾಹಿಯನ್ನು ಮುಂದುವರೆಸಿಕೊಂಡು ಹೋಗಲು ಯಾಕೆ ಬಿಟ್ಟಿದ್ದಾರೆ ? ಅದನ್ನೂ ಕೂಡಾ ಬೇರೆ ನಿರ್ಮಾಪಕರಿಗೆ ಕೊಡಬಹುದಲ್ವಾ ..?" ಎಂದು ಪಕ್ಕಾ ಲಾಜಿಕ್ ಪ್ರಶ್ನೆಗಳನ್ನು ಸುದ್ದಿವಾಹಿನಿಗಳ ಎದುರು ಕೇಳಿದ್ದರು. ಕಿರುತೆರೆ ಇತಿಹಾಸದಲ್ಲೇ ಹೀಗೆ ಸುದ್ದಿವಾಹಿನಿಗಳ ಎದುರು ನಿಂತು ಟಿ ಆರ್ ಪಿ ಕಳ್ಳಾಟದ ಬಗ್ಗೆ ಧೈರ್ಯವಾಗಿ ಮಾತನಾಡಿದ ಮೊದಲ ನಟಿ ಎಂಬ ಹೆಗ್ಗಳಿಕೆ ಹಂಸಾ ಪ್ರತಾಪ್ ಅವರಿಗೆ ಸಲ್ಲಬೇಕು.

ಹಂಸಾ ಈ ಪ್ರಶ್ನೆ ಕೇಳಿದ ಕೆಲಹೊತ್ತಿನಲ್ಲೇ ಕಿರುತೆರೆಯ ಕೆಲವು ಟಿ ಆರ್ ಪಿ ಕಳ್ಳರು ಕತ್ತಲಲ್ಲಿ ಹಾವು ತುಳಿದವರ ಹಾಗೇ ಗಾಬರಿಯಾದರೆ, ಇನ್ನೂ ಕೆಲವರು "ಬುಡಕ್ಕೆ ಬರುತ್ತಲ್ಲಪ್ಪ ಈಯಮ್ಮನಿಂದ.." ಎಂದು ಗೊಣಗಿಕೊಂಡರು. ವಾಹಿನಿಯ ಶಿಲ್ಪಿಯೊಂದು ಮಾತ್ರ ಕೆಲ ವರ್ಷಗಳ ಹಿಂದೆ ವೈಷ್ಣವಿ ಎಂಬುವವರು ETV ಆಫೀಸಿನಲ್ಲೇ ಎಲ್ಲರ ಎದುರು ಕಪಾಳಕ್ಕೆ ಬಾರಿಸಿದ್ದು ಕಣ್ಣ ಮುಂದೆ ಬಂದಂತಾಗಿ, ಚಾನಲ್ನ ಕ್ಯಾಂಟಿನಿಗೆ ಹೋಗಿ ಕೆಲಹೊತ್ತು ಕುಳಿತುಕೊಂಡರಂತೆ.
ಇಷ್ಟೆಲ್ಲ ಆದ ಮೇಲೆ ನಾಗರಭಾವಿಯ ನಿರ್ಮಾಪಕರೂ ಕೂಡಾ ಟಿ.ವಿ ಮಾಧ್ಯಮದ ಎದುರಿಗೆ ಬಂದು "ಇವತ್ತು ಧಾರಾವಾಹಿ ನಿರ್ಮಾಪಕರ ಜೀವನ ಎಷ್ಟು ಕಷ್ಟ ಇದೆ, ನಾನು ಸಾಲದಲ್ಲಿ ಇದ್ದೇನೆ,ಚಾನಲ್ ನವರು ಹಣ ಕೊಟ್ಟಿಲ್ಲ, ಇಲ್ಲಿ ನೋಡಿ ನಾನು ಟೀ ಅಂಗಡಿ ಇಟ್ಟು ಲೋಟ ತೊಳೆಯುತ್ತಿದ್ದೇನೆ ..." ಅಂತೆಲ್ಲ ಮಾತನಾಡಿದರು.ಅದೇ ದಿನ ಸಂಜೆ ಸುದ್ದಿವಾಹಿನಿಯೊಂದರಲ್ಲಿ ಇದೇ ವಿಚಾರದ ಬಗ್ಗೆ ಚರ್ಚೆ ನಡೆಯುವಾಗ ನಟಿ ಹಂಸಾ ಆ ನಿರ್ಮಾಪಕರಿಗೆ "ಮುಚ್ಚಿಕೊಂಡು ಹಾಕ್ ಬೇಕ್ ಪೇಮೆಂಟ್ ನಾ" ಎಂದು ಹೇಳುವ ಮೂಲಕ ಎಲ್ಲ ನಿರ್ಮಾಪಕರ ಕೋಪಕ್ಕೆ ಗುರಿಯಾದರು.

ಈ ವಿವಾದಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಇದರ ಆಳಕ್ಕೆ ಇಳಿದರೆ, ಪ್ರಸ್ತುತ ಕಿರುತೆರೆ ರೇಟಿಂಗ್ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆ,ನಿರ್ಮಾಪಕರ ಸಂಕಟಗಳು, ಟಿ ಆರ್ ಪಿ ಕಳ್ಳರ ಪರಚಾಟಗಳು ಜೊತೆಗೆ ಚಾನಲ್ ಗಳಲ್ಲಿ ಅಸ್ತಿತ್ವಕ್ಕಾಗಿ ಅರಚಾಡುತ್ತಿರುವ ಕೆಲ ಅಡ್ಡ ಕಸುಬಿ ಶಿಲ್ಪಿಗಳ ಅಸಲಿಯತ್ತುಗಳು ಬಟಾಬಯಲಾಗುತ್ತಿವೆ.
ಅನಿಲ್ ಪ್ರತಿಭಾವಂತ
ಕೆಲ ವರ್ಷಗಳ ಹಿಂದಷ್ಟೇ ಕನ್ನಡ ಕಿರುತೆರೆಯ ಅತ್ಯುತ್ತಮ ನಿರ್ದೇಶಕ ಎಂದು ಗುರುತಿಸಿಕೊಂಡಿದ್ದ ಈ ನಾಗರಭಾವಿ ನಿರ್ಮಾಪಕರು ಯಾಕೆ ಈಗ ಟೀ ಅಂಗಡಿ ಇಟ್ಟು ಜೀವನ ಸಾಗಿಸುವ ನಿರ್ಧಾರ ಮಾಡಿದರು? ವಾಹಿನಿಯವರು ಇವರ ಧಾರಾವಾಹಿಯನ್ನು ಬೇರೆ ನಿರ್ಮಾಪಕರಿಗೆ ವರ್ಗಾವಣೆ ಮಾಡಿದ್ದು ಯಾಕೆ ? ಈ ಧಾರಾವಾಹಿಯಲ್ಲಿ ಕೆಲಸ ಮಾಡಿದ ತಂತ್ರಜ್ಞರು ಹಾಗೂ ನಟ-ನಟಿಯರಿಗೆ ಯಾಕೆ ಹಣ ಕೊಡಲು ಸಾಧ್ಯವಾಗಲಿಲ್ಲ ? ಈ ಪ್ರಶ್ನೆಗಳನ್ನು ಕಿರುತರೆ ಮಂದಿಯ ಬಳಿ ತೆಗದುಕೊಂಡು ಹೋದಾಗ ಅವರು ಕೊಟ್ಟ ಉತ್ತರ ನಿಜಕ್ಕೂ ಆತಂಕಕಾರಿಯಾಗಿತ್ತು.


Click it and Unblock the Notifications