ಕಿರುತೆರೆಯಲ್ಲಿ ''ಕರ್ಣ''ನದ್ದೇ ಪಾರುಪಥ್ಯ, ನಾಲ್ಕನೇ ವಾರ ಕೂಡ ನಂಬರ್ 1 ; ಟಾಪ್ 5ದಲ್ಲಿ ಇರೋದು ಯಾರ್ಯಾರು ?
ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಫರ್ಧೆ ಇದ್ದೇ ಇರುತ್ತೆ. ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ. ಪ್ರತಿ ವಾರ ಇಲ್ಲಿಯೂ ಕೂಡ ಹಾವು ಏಣಿಯ ಆಟ ನಡೆಯುತ್ತಲೇ ಇರುತ್ತೆ. ಈ ವಾರ ಮೇಲೆ ಇರುವ ಧಾರಾವಾಹಿ ಮುಂದಿನ ವಾರ ಪ್ರೇಕ್ಷಕರ ಅವಕೃಪೆಗೆ ಪಾತ್ರವಾದರೆ, ನಿರಾಸೆ ಮಾಡಿದ ಧಾರಾವಾಹಿಯಲ್ಲಿ ಏಕಾಏಕಿ ಬದಲಾವಣೆಯಾಗುತ್ತೆ. ಪ್ರತಿ ವಾರ ಹೀಗೆ ಇರುತ್ತೆ ಎಂದು ಹೇಳಲು ಸಾಧ್ಯ ಇಲ್ಲ.
ಈ ಧಾರಾವಾಹಿಯೇ ಮೊದಲ ಸ್ಥಾನ ಬರಬಹುದು ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಹಿಂದೆಯೆಲ್ಲ ಪ್ರೇಕ್ಷಕರಿಂದ ಕಡೆಗಣಿಸಲಾದ ಧಾರಾವಾಹಿ ಕೆಲವೊಮ್ಮೆ ಅಚ್ಚರಿ ಎಂಬಂತೆ ಅದೇ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತೆ. ಮೊದಲನೇ ಸ್ಥಾನವನ್ನು ಕೂಡ ಅಲಂಕರಿಸುತ್ತೆ. ಇನ್ನೂ ಕೆಲ ಒಮ್ಮೆ ಸತತವಾಗಿ ಟಿಆರ್ಪಿ ರೇಸ್ನಲ್ಲಿ ನಂಬರ್ 1 ಸ್ಥಾನದಲ್ಲಿಯೇ ಧಾರಾವಾಹಿ ಬಿಡಾರ ಹೂಡಿರುತ್ತೆ. ಇದಕ್ಕೆ ''ಕರ್ಣ'' ಸದ್ಯದ ಉದಾಹರಣೆ.

ಹೌದು, ಕಿರಣ್ ರಾಜ್ ಅಭಿನಯದ ''ಕರ್ಣ'' ಸದ್ಯ ಕನ್ನಡಿಗರ ಹೃದಯ ಗೆದ್ದಿದ್ದಾನೆ. ಒಂದಲ್ಲ.. ಎರಡಲ್ಲ.. ಮೂರಲ್ಲ.. ಬದಲಿಗೆ ಸತತವಾಗಿ ನಾಲ್ಕನೇ ಬಾರಿ ಕಿರುತೆರೆಯ ಅಧಿಪತಿ ಎಂದು ಕರೆಸಿಕೊಂಡಿದ್ದಾನೆ. ಕನ್ನಡಿಗರ ಹೃದಯವನ್ನು ಗೆದ್ದಿದ್ದಾನೆ.
ಮೊದಲ ವಾರದಿಂದಲೇ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾದ ''ಕರ್ಣ'' ಸದ್ಯ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಪ್ರತಿಸ್ಫರ್ಧಿಗಳ ನಿದ್ದೆಯನ್ನು ಕೆಡಿಸಿದ್ದಾನೆ. ನಿಜಾ.. ಮೊದಲ ವಾರಕ್ಕೆ ಹೋಲಿಸಿದರೆ ನಾಲ್ಕನೇ ವಾರ ''ಕರ್ಣ''ನ ಹವಾ ಚೂರು ಕಡಿಮೆಯಾಗಿದೆಯಾದರೂ ಅರ್ಬನ್ + ರೂರಲ್ ಮಾರ್ಕೆಟ್ನಲ್ಲಿ 9.6 ಟಿವಿಆರ್ ಪಡೆಯುವಲ್ಲಿ ಈ ಧಾರಾವಾಹಿ ಯಶಸ್ವಿಯಾಗಿದೆ.
9.6 ಟಿವಿಆರ್ನೊಂದಿಗೆ ''ಕರ್ಣ'' ಧಾರಾವಾಹಿ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನ ''ಲಕ್ಷ್ಮೀ ನಿವಾಸ''ದ ಪಾಲಾಗಿದೆ. 8.9 ಟಿವಿಆರ್ ಈ ಧಾರಾವಾಹಿಗೆ ಸಿಕ್ಕಿದೆ. ಪಾತ್ರಧಾರಿಗಳು ಬದಲಾದರು ಈ ಧಾರಾವಾಹಿಯ ಕ್ರೇಜ್ ಹಾಗೇ ಉಳಿದಿರುವುದು ವಿಶೇಷ.
ಇನ್ನೂ ಜೂನ್ನಲ್ಲಿ ಮೊದಲ ಸ್ಥಾನದಲ್ಲಿ ಮಿಂಚಿದ್ದ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ''ಅಣ್ಣಯ್ಯ'' ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ''ಅಣ್ಣಯ್ಯ''ಗೆ 8.4 ಟಿವಿಆರ್ ಸಿಕ್ಕಿದೆ. ''ಅಣ್ಣಯ್ಯ''ಗೆ ''ಶ್ರಾವಣಿ ಸುಬ್ರಹ್ಮಣ್ಯ'' ಸೀರಿಯಲ್ ತೀವೃ ಪೈಪೋಟಿಯನ್ನು ನೀಡಿದ್ದು ಈ ಧಾರಾವಾಹಿ 8.3 ಟಿವಿಆರ್ನೊಂದಿಗೆ ನಾಲ್ಕನೇ ಸ್ಥಾನ ಅಲಂಕರಿಸಿದೆ. ಶರತ್ ಪದ್ಮನಾಭ್ ಮತ್ತು ನೀತಾ ಅಶೋಕ್ ಅಭಿನಯದ ''ನಾ ನಿನ್ನ ಬಿಡಲಾರೆ'' ಧಾರಾವಾಹಿ 8.0 ಟಿವಿಆರ್ನೊಂದಿಗೆ ಐದನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಉಳಿದಂತೆ ಎಲ್ಲರಿಗೆ ಗೊತ್ತಿರುವಂತೆ ''ಅಮೃತಧಾರೆ'' ಧಾರಾವಾಹಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಭಾಗ್ಯಮ್ಮ ಮತ್ತು ಭೂಮಿಕಾ ಹಾಗೂ ಗೌತಮ್ ವಿರುದ್ಧ ಶಕುಂತಲಾ ಮಸಲತ್ತು ನಡೆಸಿದ್ದಾಳೆ. ಈ ಹಿನ್ನೆಲೆ ಈ ಕಾರ್ಯಕ್ರಮದ ಟಿಆರ್ಪಿಯಲ್ಲಿ ಜಿಗಿತ ಕಾಣುವ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದ್ದು ''ಅಮೃತಧಾರೆ'' ಧಾರಾವಾಹಿ 7.7 ಟಿವಿಆರ್ ಪಡೆಯುವ ಮೂಲಕ ಆರನೇ ಸ್ಥಾನಕ್ಕೆ ಕುಸಿದಿದೆ.
ಆ ನಂತರ ಸ್ಥಾನಗಳಲ್ಲಿ ಪ್ರೀತಿ ಶ್ರೀನಿವಾಸ್, ರೋಹಿತ್ ಶ್ರೀನಾಥ್, ಶ್ವೇತಾ ರಾವ್, ಭುವನ್, ದಿಯಾ, ಕಾವ್ಯಾ, ಮುಂತಾದವರು ಅಭಿನಯದ ''ಬ್ರಹ್ಮಗಂಟು'' ಸೀರಿಯಲ್ 6.3 ಟಿವಿಆರ್ ಗಳಿಸುವ ಮೂಲಕ 7ನೇ ಸ್ಥಾನದಲ್ಲಿದ್ದು, ಉಮಾಶ್ರೀ ಅಭಿನಯದ ''ಪುಟ್ಟಕ್ಕನ ಮಕ್ಕಳು'' ಧಾರಾವಾಹಿ 5.4 ಟಿವಿಆರ್ ಪಡೆಯುವ ಮೂಲಕ 8ನೇ ಸ್ಥಾನದಲ್ಲಿದೆ. ಇನ್ನು ಸುಧಾರಾಣಿ ಮತ್ತು ಅಜಿತ್ ಹಂದೆ ಅಭಿನಯದ ''ಶ್ರೀರಸ್ತು ಶುಭಮಸ್ತು'' ಧಾರಾವಾಹಿ 3.2 ಟಿವಿಆರ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಎಲ್ಲಾ ಧಾರಾವಾಹಿಗಳು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ.
ಇನ್ನು ಕಲರ್ಸ್ ಕನ್ನಡ ವಿಚಾರಕ್ಕೆ ಬರುವುದಾದರೆ ಸುಷ್ಮಾ ಕೆ ರಾವ್, ಸುದರ್ಶನ್ ರಂಗಪ್ರಸಾದ್, ಪದ್ಮಜಾ ರಾವ್, ಮುಂತಾದವರು ಅಭಿನಯಿಸಿರುವ ''ಭಾಗ್ಯಲಕ್ಷ್ಮೀ'' ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ಏಪ್ರಿಲ್ 14ರಿಂದ ಆರಂಭವಾದ 'ಮುದ್ದು ಸೊಸೆ' ಇದೆ. ಮೂರನೇ ಸ್ಥಾನದಲ್ಲಿ ರಾಧಾ ಭಾಗವತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ''ಭಾರ್ಗವಿ ಎಲ್ಎಲ್ಬಿ'' ಇದೆ.


Click it and Unblock the Notifications











